Advertisement

ಆರ್ಥಿಕ ಸಂಕಷ್ಟದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ-ಸಂಪನ್ಮೂಲ ಮೀರಿ ಖರ್ಚು!

06:05 PM Aug 26, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಗಡಿ ಮತ್ತು ಭಾಷಾ ವಿವಾದಗಳ ಮೂಲಕ ಸುದ್ದಿಯಲ್ಲಿರುತ್ತಿದ್ದ ಬೆಳಗಾವಿ ಮಹಾನಗರ ಪಾಲಿಕೆ ಈಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಈ ಬಾರಿ ಯಾವುದೇ ವಿವಾದಗಳು ಸುದ್ದಿಗೆ ಕಾರಣವಾಗಿಲ್ಲ. ಬದಲಾಗಿ ಅಧಿಕಾರಿಗಳೇ ಮಾಡಿರುವ ಯಡವಟ್ಟುಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸುದ್ದಿ ಮಾಡಿದೆ.

Advertisement

ಸರಕಾರದ ಮೇಲೆ ಅವಲಂಬನೆಯಾಗದೆ ತನ್ನ ಸಂಪನ್ಮೂಲಗಳಿಂದಲೇ ಹೇಗೆ ನಿರ್ವಹಣೆ ಮಾಡಬಹುದು ಎಂಬುದನ್ನು ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು ಮರೆತಿದ್ದಾರೆ. ಒಂದು ವೇಳೆ ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಮೌನವಾಗಿದ್ದಾರೆಂಬ ಅಭಿಪ್ರಾಯಗಳು ಕೇಳಿ ಬರುತ್ತಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲ ಇಡೀ ಪಾಲಿಕೆಯನ್ನೇ ಅನುಮಾನದಿಂದ ನೋಡುವಂತೆ ಮಾಡಿದೆ.

ಮಹಾನಗರ ಪಾಲಿಕೆಗಳಿಗೆ ಸರಕಾರದಿಂದ ಅನುದಾನ ನೀಡಲ್ಲ. ಬದಲಾಗಿ ತನ್ನಸಂಪನ್ಮೂಲಗಳಿಂದಲೇ ಪಾಲಿಕೆಯನ್ನು ನಿರ್ವಹಣೆ ಮಾಡಬೇಕು, ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದು ಸರಕಾರ ಸ್ಪಷ್ಟವಾಗಿ ತಿಳಿಸಿ ಕೈತೊಳೆದುಕೊಂಡಿದೆ. ಸರಕಾರದ ಐದು ಗ್ಯಾರಂಟಿ ಯೋಜನೆಗಳು ಪಾಲಿಕೆಯ ಅನುದಾನದ ಮೇಲೆ ಪರಿಣಾಮ ಬೀರಿವೆ. ತನ್ನ ಮೂಲ ಆದಾಯಗಳನ್ನೇ ಮರೆತಂತಿರುವ ಪಾಲಿಕೆಗೆ ಸರಕಾರದ ಈ ಕ್ರಮ ಇಕ್ಕಟ್ಟಿಗೆ ಸಿಲುಕಿಸಿದೆ.

ಅಧಿಕಾರಿಗಳ ಸುದೀರ್ಘ‌ ಆಡಳಿತ: ಚುನಾವಣೆ ನಡೆದರೂ ಬಹಳ ಸಮಯದ ನಂತರ ಚುನಾಯಿತ ಸದಸ್ಯರು ಅಧಿಕಾರ ವಹಿಸಿಕೊಂಡಿದ್ದು, ಇದುವರೆಗೆ ಅಧಿಕಾರಿಗಳೇ ತಮ್ಮ ಮನಸ್ಸಿಗೆ ಬಂದಂತೆ ಅಧಿಕಾರ ನಡೆಸಿದ್ದು ಪಾಲಿಕೆಯ ಇಂದಿನ ಸಂಕಷ್ಟಕ್ಕೆ ಕಾರಣ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇದರ ನಡುವೆ ಮಹಾನಗರ ಪಾಲಿಕೆಗೆ ಪ್ರತಿ ವರ್ಷ ಬರುತ್ತಿದ್ದ ನಗರೋತ್ಥಾನ ಅನುದಾನ ಸ್ಥಗಿತವಾಗಿದೆ. ಅದನ್ನು ತರುವ ಪ್ರಯತ್ನ ನಡೆದಿಲ್ಲ. ನಮ್ಮಲ್ಲಿ ಒಳ್ಳೆಯ ಸಂಪನ್ಮೂಲ ಇದೆ. ಅದರ ಸದ್ಬಳಕೆ ಆಗುತ್ತಿಲ್ಲ. ಬದಲಾಗಿ ಸಂಪನ್ಮೂಲಗಳನ್ನು ಮೀರಿ ಖರ್ಚು ಮಾಡಲಾಗುತ್ತಿದೆ ಎಂಬುದು ಹಿರಿಯ ಅಧಿಕಾರಿಗಳ ಅಭಿಪ್ರಾಯ.

ಮುಖ್ಯವಾಗಿ ಮಹಾನಗರ ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ಸಂಪೂರ್ಣ ಮಾಯವಾಗಿದೆ. ಪಾಲಿಕೆಗೆ ಎಷ್ಟು ಆದಾಯ ಬರುತ್ತದೆ. ಎಲ್ಲಿಂದ ಎಷ್ಟು ಆದಾಯ ಬರುತ್ತದೆ ಎಂಬುದು ಅಲ್ಲಿನ ಅಧಿಕಾರಿಗಳು, ಸದಸ್ಯರಿಗೆ ಗೊತ್ತಿಲ್ಲ. ಅದರ ಬಗ್ಗೆ ಆಸಕ್ತಿಯೂ ಕಾಣಿಸುತ್ತಿಲ್ಲ.

Advertisement

ಪಾಲಿಕೆಯ ಆದಾಯ ಮೂಲಗಳನ್ನು ಗುರುತಿಸಿ ಅದನ್ನು ಕಟ್ಟುನಿಟ್ಟಾಗಿ ಸಂಗ್ರಹ ಮಾಡಿದರೆ ಕನಿಷ್ಠ 200 ಕೋಟಿ ರೂ. ಆದಾಯ ಗಳಿಸಬಹುದು ಎಂಬುದು ಪಾಲಿಕೆಯ ನಿವೃತ್ತ ಅಧಿಕಾರಿಗಳ ಅಭಿಪ್ರಾಯ. ಇದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದರೆ ಸರಕಾರದ ಮುಂದೆ ಪ್ರತಿವರ್ಷ ಅನುದಾನಕ್ಕಾಗಿ ಕೈ ಚಾಚುವುದು ತಪ್ಪುತ್ತದೆ. ಆದರೆ ಅಧಿಕಾರಿಗಳು, ಸದಸ್ಯರು, ಶಾಸಕರು ಇದರ ಬಗ್ಗೆ ಇಚ್ಛಾಶಕ್ತಿಯನ್ನೇ ಹೊಂದಿಲ್ಲ. ಇದು ಅವರಿಗೆ ಬೇಕಾಗಿಯೂ ಇಲ್ಲ.

ಕೋಟಿಗಟ್ಟಲೇ ಬಾಕಿ
ಮೂಲಗಳ ಪ್ರಕಾರ ಮಹಾನಗರ ಪಾಲಿಕೆಗೆ ವಿವಿಧ ಸರಕಾರಿ ಇಲಾಖೆ ಮತ್ತು ಖಾಸಗಿ ಸಂಸ್ಥೆಗಳಿಂದ 200 ಕೋಟಿಗೂ ಹೆಚ್ಚು ಬಾಕಿ ಬರಬೇಕಿದೆ. ಸರಕಾರದಿಂದಲೇ ಸುಮಾರು 40 ಕೋಟಿ ರೂ.ಬರಬೇಕಿದೆ. ಹೆಸ್ಕಾಂದಿಂದ ಅಂದಾಜು 17 ಕೋಟಿ ರೂ.ಬಾಕಿ ಇದೆ. ಜಲಮಂಡಳಿಯಿಂದ ಕೋಟ್ಯಂತರ ಬಾಕಿ ಇದೆ.

ಈಗ ಅದನ್ನು ನಿರಂತರ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕೆ ಸರಿದೂಗಿಸಿಕೊಳ್ಳಲಾಗಿದೆ. ಕೇಬಲ್‌ ಕಂಪನಿಗಳಿಂದ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ, ಪ್ರಭಾವಿ ವ್ಯಕ್ತಿಗಳಿಂದ ಲಕ್ಷಾಂತರ ರೂ. ಬಾಕಿ ಬರಬೇಕಿದೆ. ಇದರ ವಸೂಲಾತಿಗೆ ಮಹಾನಗರ ಪಾಲಿಕೆಯ ಯಾವ ಅಧಿಕಾರಿಗಳು ಮತ್ತು ಆಡಳಿತ ಪಕ್ಷ ಧೈರ್ಯ ಮಾಡುತ್ತಿಲ್ಲ. ಇದು ಪಾಲಿಕೆಯ ಅಧೋಗತಿಗೆ ಮುಖ್ಯ ಕಾರಣವಾಗಿದೆ. ಇನ್ನೊಂದು ಕಡೆ ತೆರಿಗೆ ವಸೂಲಾತಿ ಸಹ ಶೋಚನೀಯವಾಗಿದೆ. ಅಧಿಕಾರಿಗಳು ಮತ್ತು ಸದಸ್ಯರೇ ಹೇಳುವಂತೆ ಪ್ರತಿಶತ 50 ರಿಂದ 60 ಮಾತ್ರ ತೆರಿಗೆ ವಸೂಲು ಆಗುತ್ತಿದೆ. ಹೀಗಾದರೆ ಪಾಲಿಕೆಯ ಹಣಕಾಸು ಸ್ಥಿತಿ ಸುಧಾರಿಸುವುದು ಯಾವಾಗ ಎಂಬುದು ಎಲ್ಲರ ಪ್ರಶ್ನೆ.

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next