Advertisement

ಬೆಳಗಾವಿ: ಮಳೆ ಸಾಕಷ್ಟಾದರೂ ತುಂಬಿಲ್ಲ ಕೆರೆಗಳು

06:49 PM Aug 04, 2023 | Team Udayavani |

ಬೆಳಗಾವಿ: ಕೆರೆಗಳು ಗ್ರಾಮೀಣ ಜನರ ಬದುಕಿನ ಎಲ್ಲ ರೀತಿಯ ಚಟುವಟಿಕೆಗಳ ಕೇಂದ್ರ. ಕೆರೆಗಳು ನೀರು ನಿಲ್ಲುವ ಸ್ಥಳ ಮಾತ್ರವಲ್ಲ. ರೈತರ ಬದುಕಿನ ಜೀವನಾಡಿಗಳು. ಆದರೆ ನಮ್ಮ ಜೀವನಾಡಿಗಳ ರಕ್ಷಣೆ ಸರಿಯಾದ ದಾರಿಯಲ್ಲಿ ನಡೆಯುತ್ತಿಲ್ಲ. ಕೋಟಿಗಟ್ಟಲೇ ಹಣ ವ್ಯಯವಾದರೂ ಅದರ ಸಾರ್ಥಕತೆ ಆಗುತ್ತಿಲ್ಲ ಎಂಬ ಕೊರಗು ವ್ಯಾಪಕವಾಗಿದೆ.

Advertisement

ಗ್ರಾಮೀಣ ಪ್ರದೇಶಗಳಲ್ಲಿ ಮೊದಲಿಂದಲೂ ಜನ ಹಾಗೂ ಜಾನುವಾರುಗಳಿಗೆ ಕೆರೆಗಳೇ ಆಧಾರ. ದಶಕಗಳ ಹಿಂದೆ ಸಮೃದ್ಧವಾಗಿದ್ದ ಈ ಕರೆಗಳಿಂದ ಜನರ ಆತಂಕವೇ ದೂರವಾಗಿತ್ತು. ಮಳೆ ಬರದಿದ್ದರೂ ನೀರಿಗಾಗಿ ಹಾಹಾಕಾರ
ಉಂಟಾಗುತ್ತಿರಲಿಲ್ಲ. ಆದರೆ ಈಗ ಎಲ್ಲವೂ ಬದಲಾಗಿದೆ. ಒಂದು ಕಡೆ ಅತಿಕ್ರಮಣ ಹಾಗೂ ಕೆರೆಗಳ ಅಚ್ಚುಕಟ್ಟು ಪ್ರದೇಶ ಒತ್ತುವರಿಯಾಗಿ ಕಟ್ಟಡಗಳು ತಲೆಎತ್ತಿ ನಿಂತಿವೆ. ಕೆರೆಗಳಿಗೆ ಹರಿದು ಬರುವ ನೀರಿನ ಮೂಲಗಳು ಮುಚ್ಚಿಹೋಗಿವೆ. ಹೀಗಾಗಿ ಬೇಸಿಗೆ ಬಂತೆಂದರೆ ಸಾಕು, ಗ್ರಾಮಗಳಲ್ಲಿ ನೀರಿನ ಆತಂಕ ಕಾಣುತ್ತದೆ. ಇದಕ್ಕೆ ಬೆಳಗಾವಿ ಜಿಲ್ಲೆ ಹೊರತಾಗಿಲ್ಲ.

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಒಟ್ಟು 288 ಕೆರೆಗಳಿದ್ದು ಎಲ್ಲವೂ ಬಳಕೆಯಲ್ಲಿವೆ. ನೀರಾವರಿ
ಸೌಲಭ್ಯಕ್ಕಾಗಿ ಈ ಕೆರೆಗಳನ್ನು ಬಳಕೆ ಮಾಡುತ್ತಿಲ್ಲ. ಬದಲಾಗಿ ಜಾನುವಾರುಗಳಿಗೆ ಕುಡಿಯಲು ಮತ್ತು ಹಳ್ಳಿಗಳ ಜನರು
ಬಟ್ಟೆ ಒಗೆಯಲು ಬಳಕೆಯಾಗುತ್ತಿದೆ. ಇದಕ್ಕಿಂತ ಮುಖ್ಯವಾಗಿ ಈ ಕೆರೆಗಳು ಸುತ್ತಲಿನ ಪ್ರದೇಶದಲ್ಲಿ ಕೊಳವೆಭಾವಿ ಮತ್ತು ಅಂತರ್ಜಲ ಮಟ್ಟ ಹೆಚ್ಚಲು ಉಪಯೋಗವಾಗುತ್ತಿವೆ. ಈ 288 ಕೆರೆಗಳು ಒಟ್ಟು 3198 ಎಂ ಸಿ ಎಫ್‌ ಟಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು ಈ ಎಲ್ಲ ಕೆರೆಗಳ ವಿಸ್ತೀರ್ಣ 30698 ಹೆಕ್ಟೇರ್‌ ಪ್ರದೇಶದಷ್ಟಿದೆ.

ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಮೊದಲು 220 ಕೆರೆಗಳಿದ್ದವು. ನಂತರ ಗ್ರಾಮದ ಜನರ ಸಹಕಾರ ಹಾಗೂ ಬೇಡಿಕೆಗೆ ಅನುಗುಣವಾಗಿ 2015 ರವರೆಗೆ ಹೊಸದಾಗಿ 50 ಕೆರೆಗಳ ನಿರ್ಮಾಣ ಮಾಡಲಾಯಿತು. ಈಗ ಈ ಸಂಖ್ಯೆ 288 ಕ್ಕೆ ತಲುಪಿದೆ. 40 ಹೆಕ್ಟೇರ್‌ ಪ್ರದೇಶದಿಂದ 4000 ಸಾವಿರ ಹೆಕ್ಟೇರ್‌ವರೆಗಿನ ಕೆರೆಗಳು ಈ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತವೆ. ಈ ಇಲಾಖೆ ವ್ಯಾಪ್ತಿಯಲ್ಲಿನ ಎಲ್ಲ ಕೆರೆಗಳು ಬಳಕೆಯಲ್ಲಿವೆ. 288 ಕೆರೆಗಳ ಪೈಕಿ ಇದುವರೆಗೆ 180 ಕ್ಕೂ ಹೆಚ್ಚು ಕೆರೆಗಳ ಪುನರುಜ್ಜೀವನಗೊಳಿಸಲಾಗಿದೆ. ಅಥಣಿ ತಾಲೂಕಿನ ಕೋಹಳ್ಳಿ ಕೆರೆ ಜಿಲ್ಲೆಯಲ್ಲೇ ಅತೀ ದೊಡ್ಡ ಕೆರೆಯಾಗಿದ್ದು ಇದು 96 ಹೆಕ್ಟೇರ್‌
(244 ಎಕರೆ) ವಿಸ್ತೀರ್ಣ ಹೊಂದಿದೆ. ಹುಕ್ಕೇರಿ ತಾಲೂಕಿನ ಕೇಸ್ತಿ ಕೆರೆ ಜಿಲ್ಲೆಯ ಅತೀ ಸಣ್ಣ ಕೆರೆಯಾಗಿದ್ದು ಇದು 0.10 ಎಂ
ಸಿ ಎಫ್‌ ಟಿ (ದಶಲಕ್ಷ ಘನಅಡಿ) ವಿಸ್ತೀರ್ಣ ಹೊಂದಿದೆ.

ತುಂಬದ ಕೆರೆಗಳು: ಆತಂಕದ ಸಂಗತಿ ಎಂದರೆ ಮುಂಗಾರು ಮಳೆಯ ವಿಳಂಬ ಈ ಕೆರೆಗಳನ್ನು ಕಾಡದೇ ಬಿಟ್ಟಿಲ್ಲ. ಇದುವರೆಗೆ
288 ಕೆರೆಗಳ ಪೈಕಿ ಕೇವಲ 10 ಕೆರೆಗಳು ಮಾತ್ರ ಸಂಪೂರ್ಣ ತುಂಬಿರುವುದೇ ಇದಕ್ಕೆ ಸಾಕ್ಷಿ. 30 ಕೆರೆಗಳು ಪ್ರತಿಶತ 51 ರಿಂದ 99
ರಷ್ಟು ತುಂಬಿದ್ದರೆ 119 ಕೆರೆಗಳು ಈಗಲೂ ಖಾಲಿ ಇವೆ. 102 ಕೆರೆಗಳು ಪ್ರತಿಶತ 30 ರಷ್ಟು ಮಾತ್ರ ಭರ್ತಿಯಾಗಿವೆ. ಇದಕ್ಕೆ
ಮಳೆಯ ವೈಫಲ್ಯದ ಜೊತೆಗೆ ಕೆರೆಗಳ ಮೂಲ ಕಣ್ಮರೆಯಾಗಿರುವುದು ಸಹ ಮುಖ್ಯ ಕಾರಣ.

Advertisement

ಬಹಳ ವರ್ಷಗಳ ಹಿಂದೆಯೇ ಅನೇಕ ಕಡೆಗಳಲ್ಲಿ ಅತೀ ಸಣ್ಣ ಕೆರೆಗಳು ಕಣ್ಮರೆಯಾಗಿ ಅಲ್ಲಿ ಮನೆ ಹಾಗೂ ನಿವೇಶನ ಮಾಡಲಾಗಿದೆ. ಶಾಲೆ ಹಾಗೂ  ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದ್ದಾರೆ. ಕೆಲವು ಕಡೆ ಕೆರೆಗಳಿಗೆ ಹರಿದು ಬರುವ ನೀರಿನ ಮೂಲಗಳನ್ನೇ ಮುಚ್ಚಿ ನಂತರ ಕೆರೆಗಳು ಇಲ್ಲದಂತೆ ಮಾಡಲಾಗಿದೆ. ಈಗ ಉಳಿದಿರುವ ಕೆರೆಗಳಿಗೂ ಅದೇ ಸ್ಥಿತಿ ಬರಬಾರದು ಎಂಬುದು ಗ್ರಾಮಸ್ಥರ ಮತ್ತು ರೈತ ಸಮುದಾಯದ ಕಳಕಳಿ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಪ್ರಕಾರ ಜಿಲ್ಲೆಯಲ್ಲಿ ಯಾವುದೇ ಕೆರೆಗಳು ಒತ್ತುವರಿಯಾಗಿಲ್ಲ. ಈ ಹಿಂದೆ ಸುಮಾರು ಆರು ಕೆರೆಗಳು ಒತ್ತುವರಿಯಾಗಿದ್ದು ಅತಿಕ್ರಮಣ ಮಾಡಿದ್ದನ್ನು
ತೆರವುಗೊಳಿಸಲಾಗಿದೆ.

ಕೆರೆಗಳ ಒತ್ತುವರಿ ತೆರವುಗೊಳಿಸಿದ ನಂತರ ಈ ಕರೆಗಳಿಗೆ ಗಡಿ ಗುರುತು ಮಾಡಬೇಕು. ಕೆರೆಯ ಅಂಚಿಗೆ ಗಿಡಗಳನ್ನು ಬೆಳೆಸಿ ಅದರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಕೆರೆಗಳ ಒತ್ತುವರಿಯಾಗಿದ್ದರೆ ತಕ್ಷಣ ಅದರ ತೆರವಿಗೆ ಮುಂದಾಗಬೇಕು ಎಂಬುದು ಸರಕಾರದ ಸ್ಪಷ್ಟ ನಿರ್ದೇಶನವಿದೆ. ಆದರೆ ಈ ಆದೇಶ ಬಹುತೇಕ ಕಡೆ ಸರಿಯಾಗಿ ಪಾಲನೆಯಾಗುತ್ತಿಲ್ಲ. ಅಧಿಕಾರಿಗಳು ನೀಡುವ ಹೇಳಿಕೆಗೂ ಮತ್ತು ರೈತ ಮುಖಂಡರು ನೀಡುವ ಮಾಹಿತಿಯಲ್ಲಿ ಅಜಗಜಾಂತರ ವ್ಯತ್ಯಾಸ ಕಾಣುತ್ತದೆ.

ಕೆರೆಗಳ ಸ್ಥಿತಿಯಲ್ಲಿ ಮೊದಲಿಗಿಂತ ಹೆಚ್ಚು ಸುಧಾರಣೆಯಾಗಿದೆ. ಗ್ರಾಮೀಣ ಪ್ರದೇಶದ ಜನರು ಸಹಕಾರ ನೀಡಿದರೆ ಕೆರೆಗಳನ್ನು
ಇನ್ನೂ ಹೆಚ್ಚಿನ ರೀತಿಯಲ್ಲಿ ಸಂರಕ್ಷಣೆ ಮಾಡಬಹುದು. ಗ್ರಾಮದ ಸುತ್ತಲಿನ ಪರಿಸರದಲ್ಲಿ ಅಂತರ್ಜಲಮಟ್ಟವನ್ನು
ಹೆಚ್ಚಿಸಬಹುದು. ಜೊತೆಗೆ ಅತಿಕ್ರಮಣದ ಆತಂಕವನ್ನು ಶಾಶ್ವತವಾಗಿ ತಪ್ಪಿಸಬಹುದು ಎಂಬುದು ಸಣ್ಣ ನೀರಾವರಿ ಇಲಾಖೆ
ಅಧಿಕಾರಿಗಳ ಅಭಿಪ್ರಾಯ.

ಸಣ್ಣ ನೀರಾವರಿ ಇಲಾಖೆಯ ಕೆರೆಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಸಮರ್ಪಕವಾಗಿಲ್ಲ. ದುರಸ್ತಿ ಕಾಮಗಾರಿಗಳಲ್ಲಿ ಸಾಕಷ್ಟು ಕಳಪೆ ಗುಣಮಟ್ಟದ ಕಾಮಗಾರಿ ನಡೆದಿವೆ. ಸರಕಾರ ಪ್ರತಿವರ್ಷ ಕೆರೆಗಳ ಅಭಿವೃದ್ಧಿಗೆ ಕೋಟಿಗಟ್ಟಲೇ ಹಣ ವೆಚ್ಚ ಮಾಡುತ್ತಿದೆ. ಆದರೆ ಇದು ಸದ್ಬಳಕೆಯಾಗುತ್ತಿಲ್ಲ. ಮುಖ್ಯವಾಗಿ ಕೆರೆಗಳ ಗಡಿ ಗುರುತು ಬಹಳ ಗೊಂದಲಕ್ಕೆ ಕಾರಣವಾಗಿದೆ. ಬಹುತೇಕ ಕೆರೆಗಳು ಒತ್ತುವರಿಯಾಗಿವೆ. ಹೀಗಾಗಿ ಸರಕಾರ ವಿಳಂಬ ಮಾಡದೆ ಕೆರೆಗಳ ಮರು ಸಮೀಕ್ಷೆ ಕಾರ್ಯ ನಡೆಸಬೇಕು.
*ಸಿದಗೌಡ ಮೋದಗಿ, ಅಧ್ಯಕ್ಷ, ಭಾರತೀಯ ಕೃಷಿಕ ಸಮಾಜ

ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿಯಾಗಿಲ್ಲ. ಅತಿಕ್ರಮಣ ಮಾಡಿದ್ದನ್ನು ಈಗಾಗಲೇ  ತೆರವುಗೊಳಿಸಲಾಗಿದೆ. ಎಲ್ಲ ಕೆರೆಗಳು ಬಳಕೆಯಲ್ಲಿವೆ. ಈ ಕೆರೆಗಳನ್ನು ಬೋರ್‌ ವೆಲ್‌, ಭಾವಿಗಳ ಅಂತರ್ಜಲ ಮಟ್ಟ ಹೆಚ್ಚಿಸಲು ಮತ್ತು ಜಾನುವಾರುಗಳಿಗೆ ಕುಡಿಯಲು
ಬಳಕೆ ಮಾಡಲಾಗುತ್ತಿದೆ. ಕೆರೆಗಳ ಆಧುನೀಕರಣಕ್ಕೆ ಲಭ್ಯವಿರುವ ಅನುದಾನದಲ್ಲಿ ದುರಸ್ತಿ, ಬದು ನಿರ್ಮಾಣ, ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
*ಗುರುಬಸವಯ್ಯ ಬಿ ಎಂ, ಕಾರ್ಯನಿರ್ವಾಹಕ ಎಂಜನಿಯರ್‌,
ಸಣ್ಣ ನೀರಾವರಿ ಇಲಾಖೆ.

*ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next