Advertisement

ಯಾರ ಹೆಗಲಿಗೆ ಯಾವ ಜವಾಬ್ಧಾರಿ?

01:34 PM Dec 11, 2019 | Naveen |

ಬೆಳಗಾವಿ: ಉಪ ಚುನಾವಣೆ ಮುಗಿದು ಫಲಿತಾಂಶ ಬಂದ ಬೆನ್ನಲ್ಲೇ ಯಾರು ಉಪ ಮುಖ್ಯಮಂತ್ರಿ, ಯಾರಿಗೆ ಸಚಿವ ಸ್ಥಾನ, ಜಿಲ್ಲಾ ಉಸ್ತುವಾರಿ ಯಾರಿಗೆ ಎಂಬ ಚರ್ಚೆ ಜಿಲ್ಲೆಯಲ್ಲಿ ಜೋರಾಗಿ ನಡೆದಿದೆ.

Advertisement

ಉಪ ಚುನಾವಣೆಯಲ್ಲಿ ಗೆದ್ದು ಬಂದ ಎಲ್ಲ ಶಾಸಕರಿಗೆ ಸಚಿವ ಸ್ಥಾನ ಖಚಿತ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಾಕಷ್ಟು ಸಲ ಹೇಳಿರುವುದು ಜಿಲ್ಲೆಯಲ್ಲಿ ಎಷ್ಟು ಜನ ಸಚಿವರಾಗಬಹುದು ಎಂಬ ಕುತೂಹಲ ಮೂಡಿದೆ. ಉಪಚುನಾವಣೆಯಲ್ಲಿ ಆಯ್ಕೆಯಾಗಿ ಬಂದ ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ ಹಾಗೂ ಶ್ರೀಮಂತ ಪಾಟೀಲ ಹಾಗೂ ಅತ್ಯಂತ ಹಿರಿಯ ನಾಯಕ ಉಮೇಶ ಕತ್ತಿ ಸೇರಿದಂತೆ ಜಿಲ್ಲೆಯಲ್ಲಿ ಈಗ 13 ಜನ ಬಿಜೆಪಿ ಶಾಸಕರಿದ್ದಾರೆ. ಇದರಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು. ಯಾರಿಗೆ ಉಸ್ತುವಾರಿ ಜವಾಬ್ದಾರಿ ನೀಡಬೇಕು ಎಂಬ ಸವಾಲು ಮುಖ್ಯಮಂತ್ರಿಯ ಮುಂದಿದೆ. ಈಗ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಶಶಿಕಲಾ ಜೊಲ್ಲೆ ಸಚಿವರಾಗಿದ್ದಾರೆ. ಇವರನ್ನು ಮುಂದುವರಿಸುವುದರೊಂದಿಗೆ ಇನ್ನೂ ನಾಲ್ವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಯಡಿಯೂರಪ್ಪ ಅವರೇ ಭರವಸೆ ನೀಡಿರುವಂತೆ ಈಗ ಇರುವ ಶಶಿಕಲಾ ಜೊಲ್ಲೆ ಹಾಗೂ ಸವದಿ ಅವರ ಜೊತೆಗೆ ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು. ಇವರಲ್ಲದೇ ಎರಡನೇ ಕಂತಿನ ರೇಸ್‌ನಲ್ಲಿರುವ ಉಮೇಶ ಕತ್ತಿ ಸಚಿವರಾಗಲು ನಿರಂತರ ಪ್ರಯತ್ನ ಮುಂದುವರಿಸಿದ್ದಾರೆ.

ಈ ಎಲ್ಲ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ಬೆಳಗಾವಿಗೆ ಆರು ಸ್ಥಾನ ಸಿಕ್ಕಂತಾಗುತ್ತದೆ. ಇದುವರೆಗೆ ಬಂದ ಸರ್ಕಾರಗಳಲ್ಲಿ ಬೆಳಗಾವಿ ಜಿಲ್ಲೆಗೆ ಮೂರು ಸಚಿವ ಸ್ಥಾನ ಸಿಕ್ಕಿದ್ದವು. ಜನತಾದಳ ಸರ್ಕಾರದಲ್ಲಿ ಎ.ಬಿ. ಪಾಟೀಲ, ಉಮೇಶ ಕತ್ತಿ ಹಾಗೂ ಲೀಲಾದೇವಿ ಪ್ರಸಾದ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಉಸ್ತುವಾರಿ ಯಾರು? ಸಚಿವ ಸ್ಥಾನದ ಜೊತೆಗೆ ಜಿಲ್ಲಾ ಉಸ್ತುವಾರಿ ಯಾರ ಹೆಗಲಿಗೆ ಬರಲಿದೆ ಎಂಬ ಕುತೂಹಲ ಜಿಲ್ಲೆಯಲ್ಲಿ ಮನೆಮಾಡಿದೆ. ಈಗಿನ ಮಾಹಿತಿ ಪ್ರಕಾರ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಸಿಗಲಿದೆ. ಉಪಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಹ ಇದೇ ಭರವಸೆ ನೀಡಿದ್ದರು. ಅದೀಗ ಯಡಿಯೂರಪ್ಪ ಅವರ ನಿರ್ಧಾರದ ಮೇಲೆ ನಿಂತಿದೆ. ಆದರೆ ಇನ್ನೊಂದೆಡೆ ಉಪಚುನಾವಣೆಗೆ ಮೊದಲೇ ಉಪಮುಖ್ಯಮಂತ್ರಿ ಸ್ಥಾನದ ಜೊತೆಗೆ ನೀರಾವರಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ರಮೇಶ ಜಾರಕಿಹೊಳಿ ಸಹ ಜಿಲ್ಲಾ ಉಸ್ತುವಾರಿ ಪಡೆಯಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.

Advertisement

ಜೊಲ್ಲೆ ಸ್ಥಾನಕ್ಕೆ ಕುತ್ತು ಬರುವುದೇ ?: ಒಂದು ಮೂಲದ ಪ್ರಕಾರ ಈಗ ಉಪಚುನಾವಣೆಯಲ್ಲಿ ಗೆದ್ದು ಬಂದ ಶಾಸಕರು ಸೇರಿದಂತೆ ನಾಲ್ವರಿಗೆ ಹೊಸದಾಗಿ ಸಚಿವ ಸ್ಥಾನ ನೀಡಿದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸ್ಥಾನಕ್ಕೆ ಸಂಚಕಾರ ಬರಲಿದೆ ಎನ್ನಲಾಗುತ್ತಿದೆ. ಇದೇ ಕಾರಣದಿಂದ ಶಶಿಕಲಾ ಜೊಲ್ಲೆ ಹಾಗೂ ಅವರ ಪತಿ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಕಳೆದ ಐದಾರು ದಿನಗಳಿಂದ ದೆಹಲಿಯಲ್ಲೇ ಬೀಡುಬಿಟ್ಟಿದ್ದು ತಮ್ಮ ಸಚಿವ ಹುದ್ದೆಗೆ ಸಂಚಕಾರ ಬರದಂತೆ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.

ರಮೇಶ ಜಾರಕಿಹೊಳಿ ಅವರಿಗೂ ಜೊಲ್ಲೆ ದಂಪತಿಗೂ ಈಗ ಮೊದಲಿನ ಉತ್ತಮ ಬಾಂಧವ್ಯ ಇಲ್ಲ. ಜೊಲ್ಲೆ ಅವರು ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ಹಾಗೂ ಟಿಕೆಟ್‌ ಕೊಡಿಸಲು ಪ್ರಯತ್ನ ಮಾಡಿದ್ದರು ಎಂಬ ಸಂಗತಿ ರಮೇಶ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ನೆಪದಲ್ಲಿ ರಮೇಶ ಅವರು ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಿ ಶಶಿಕಲಾ ಜೊಲ್ಲೆ ಅವರ ಸಚಿವ ಸ್ಥಾನಕ್ಕೆ ಕುತ್ತು ತರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ದೆಹಲಿ ಮಟ್ಟದಲ್ಲಿ ಬಹಳ ಪ್ರಭಾವಿ ಲಾಬಿ ಹೊಂದಿರುವುದರಿಂದ ಜೊಲ್ಲೆ ಅವರನ್ನು ಅಲುಗಾಡಿಸುವದು ಅಷ್ಟು ಸುಲಭದ ಮಾತಲ್ಲ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next