Advertisement

ಒಳಚರಂಡಿ ಕಾಮಗಾರಿ ಪರಿಶೀಲಿಸಿದ ಸಚಿವ ಬೇಗ್‌

01:00 PM Sep 15, 2017 | Team Udayavani |

ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವ ರೋಷನ್‌ ಬೇಗ್‌ ಗುರುವಾರ ನಗರದ ವಿವಿಧೆಡೆಗಳಲ್ಲಿ ಸಂಚರಿಸಿ ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯನ್ನು ಪರಿಶೀಲಿಸಿದರು.

Advertisement

ನಗರದ ಮಾರ್ಕೆಟ್‌ ರಸ್ತೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಒಳಚರಂಡಿ ಯೋಜನೆಗೆ ನಿರ್ಮಿಸಿರುವ ಮ್ಯಾನ್‌ಹೋಲ್‌ ಕ್ಯಾಪ್‌ ಹಾಳಾಗಿರುವುದು ಕಂಡು ಬಂದಿತು. ಈ ಬಗ್ಗೆ ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಒಳಚರಂಡಿ ಕಾಮಗಾರಿಗೆ ಒಟ್ಟಾರೆ 4400 ಮ್ಯಾನ್‌ಹೋಲ್‌ಗ‌ಳನ್ನು ನಿರ್ಮಿಸಬೇಕಿದ್ದು, ಈವರೆಗೂ 3250 ಮ್ಯಾನ್‌ಹೋಲ್‌ಗ‌ಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಒಂದು ಮ್ಯಾನ್‌ಹೋಲ್‌ ಎಷ್ಟು ವರ್ಷ ಬಾಳಿಕೆ ಬರುತ್ತದೆ ಎಂದು ಸಚಿವರು ಗುತ್ತಿಗೆದಾರರನ್ನು ಪ್ರಶ್ನಿಸಿದಾಗ, ಆತ 30 ವರ್ಷ ಬಾಳಿಕೆ ಬರುತ್ತದೆ ಎಂಬ ಉತ್ತರ ನೀಡಿದರು. ಈ ಮ್ಯಾನ್‌ಹೋಲ್‌ ನಿರ್ಮಿಸಿ ಎಷ್ಟು ವರ್ಷವಾಗಿದೆ ಎಂಬ ಪ್ರಶ್ನೆಗೆ 4 ವರ್ಷಗಳಾಗಿವೆ ಎಂಬ ಉತ್ತರ ಬಂದಿತು. 30 ವರ್ಷ ಬಾಳಿಕೆ ಬರಬೇಕಾದ ಮ್ಯಾನ್‌ಹೋಲ್‌ ಕೇವಲ 4 ವರ್ಷಗಳಿಗೆ ಹಾಳಾಗಿದೆ ಎಂದರೆ ಇದರ ಗುಣಮಟ್ಟ ಹೇಗಿದೆ ಎಂಬುದು ತಿಳಿಯುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಮ್ಯಾನ್‌ಹೋಲ್‌ ನಿರ್ಮಿಸಿ ಕೇವಲ 4 ವರ್ಷಗಳಾಗಿವೆ. ಇನ್ನೂ ಯೋಜನೆ ಚಾಲನೆಯೇ ಆಗಿಲ್ಲ. ಆಗಲೆ ಇದು ಹಾಳಾಗಿದೆ. ನಗರದೆಲ್ಲೆಡೆ ಇದೇ ಪರಿಸ್ಥಿತಿ ಇದೆ ಎಂದು ಸಚಿವರ ಗಮನಸೆಳೆದರು.

ನಂತರ ಉಪ್ಪಳ್ಳಿ ಬಡಾವಣೆಗೆ ಭೇಟಿ ನೀಡಿದಾಗ ಅಲ್ಲಿ ರಿಸೀವಿಂಗ್‌ ಚೇಂಬರ್‌ ಹಾಳಾಗಿರುವುದು ಕಂಡು ಬಂದಿತು. ಒಳಚರಂಡಿ ಕಾಮಗಾರಿಗೆ ಒಟ್ಟಾರೆ 7000 ರಿಸೀವಿಂಗ್‌ ಚೇಂಬರ್‌ ಮಾಡಬೇಕಿದ್ದು, ಈವರೆಗೂ 4 ಸಾವಿರ ಮಾಡಲಾಗಿದೆ ಎಂಬ ಉತ್ತರ ಅಧಿಕಾರಿಗಳಿಂದ ಬಂದಿತು.

Advertisement

ಶಾಸಕ ಸಿ.ಟಿ.ರವಿ ಮಾತನಾಡಿ, 2012ರಲ್ಲಿಯೇ ರಿಸೀವಿಂಗ್‌ ಚೇಂಬರ್‌ ನಿರ್ಮಾಣದ ಬಗ್ಗೆ ತಾವು ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳ ಗಮನಕ್ಕೆ ತಂದಿದೆ. ಆಗ ಕೇವಲ 800 ರಿಸೀವಿಂಗ್‌ ಚೇಂಬರ್‌ ಮಾಡಲಾಗಿತ್ತು. ಈಗ ನಿರ್ಮಿಸುತ್ತಿರುವ ರಿಸೀವಿಂಗ್‌ ಚೇಂಬರ್‌ ಗುಣಮಟ್ಟ ಸರಿ ಇಲ್ಲ. ಇದು ವೈಜ್ಞಾನಿಕವಾಗಿಯೂ ಇಲ್ಲ. ಇದನ್ನು ಬದಲಿಸಿ ಎಂಬ ಸೂಚನೆ ನೀಡಿದ್ದೆ. ತಾವು ಸೂಚನೆ ನೀಡಿದ ನಂತರವೂ ಪುನಃ ಅದೇ ಮಾದರಿಯಲ್ಲಿ ಮಾಡಲಾಗುತ್ತಿದೆ ಎಂದು ಸಚಿವರಿಗೆ ತಿಳಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಚಿವರು ಸಹ ಕೂಡಲೇ ರಿಸೀವಿಂಗ್‌ ಚೇಂಬರ್‌ಗಳನ್ನು ವೈಜ್ಞಾನಿಕ ರೀತಿಯಲ್ಲಿ ಮಾಡುವಂತೆ ಸೂಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರೋಷನ್‌ ಬೇಗ್‌, ಒಳಚರಂಡಿ ಕಾಮಗಾರಿಯ ಗುಣಮಟ್ಟದಲ್ಲಿ ಸಾಕಷ್ಟು ಲೋಪಗಳಿವೆ ಎಂಬ ಬಗ್ಗೆ ಶಾಸಕ ಸಿ.ಟಿ.ರವಿ, ಕಾಂಗ್ರೆಸ್‌ ಪಕ್ಷದ ಮುಖಂಡರು ಹಾಗೂ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಇಂದು ವಿವಿದೆಡೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಮ್ಯಾನ್‌ಹೋಲ್‌, ರಿಸೀವಿಂಗ್‌ ಚೇಂಬರ್‌ಗಳಲ್ಲಿ ಲೋಪವಿರುವುದು ಕಂಡು ಬಂದಿದೆ ಎಂದರು.

ನಗರಸಭೆ ಅಧ್ಯಕ್ಷೆ ಕವಿತಾಶೇಖರ್‌, ಉಪಾಧ್ಯಕ್ಷ ರವೀಂದ್ರ ಪ್ರಭು, ಮಾಜಿ ಶಾಸಕಿ ಎ.ವಿ.ಗಾಯತ್ರಿಶಾಂತೇಗೌಡ, ಸಿಡಿಎ ಅಧ್ಯಕ್ಷ ಸೈಯ್ಯದ್‌ ಹನೀಫ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಡಿ.ಎಲ್‌.ವಿಜಯ್‌ಕುಮಾರ್‌, ಜಿಲ್ಲಾಧಿಕಾರಿ
ಜಿ.ಸತ್ಯವತಿ, ಜಿಲ್ಲಾ ರಕ್ಷಣಾಧಿಕಾರಿ ಕೆ.ಅಣ್ಣಾಮಲೈ, ನಗರಸಭೆ ಆಯುಕ್ತೆ ತುಷಾರಮಣಿ, ಒಳಚರಂಡಿ ಮಂಡಳಿಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next