Advertisement

ಸಂವಿಧಾನದ ಆಶಯ ಈಡೇರಿಸಲು ಮುಂದಾಗಿ

03:46 PM Jan 27, 2018 | Team Udayavani |

ಚಿಕ್ಕಮಗಳೂರು: ಸರ್ವ ಧರ್ಮಗಳನ್ನು ಗೌರವಿಸಿ ಯಾವುದೇ ಕೋಮು ಗಲಭೆಗಳಿಗೆ ಅವಕಾಶ ನೀಡದೇ ಸರ್ವ ಧರ್ಮ ಸಮನ್ವಯ
ಭಾವ ಬೆಳೆಸಿಕೊಂಡು ಹೋಗುವ ಮೂಲಕ ಸಂವಿಧಾನದ ಆಶಯಗಳನ್ನು ಈಡೇರಿಸಲು ಮುಂದಾಗುವಂತೆ ಜಿಲ್ಲಾ ಉಸ್ತುವಾರಿ
ಸಚಿವ ಆರ್‌.ರೋಷನ್‌ ಬೇಗ್‌ ಜನತೆಗೆ ಕರೆ ನೀಡಿದರು.

Advertisement

ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ
ಧ್ವಜಾರೋಹಣ ನೆರವೇರಿಸಿ ಅವರು ಜನತೆಗೆ ಸಂದೇಶ ನೀಡಿದರು. ನಾವೆಲ್ಲರೂ ಜಾತಿ, ಭಾಷೆ, ಪಂಗಡ, ಸಂಕುಚಿತ ಭಾವನೆಯಿಂದ ಹೊರಬಂದು, ಸ್ನೇಹ ಹಾಗೂ ಸೌಹಾರ್ದತೆಯ ವಾತಾವರಣ ನಿರ್ಮಿಸಿ ದೇಶದ ಒಗ್ಗಟ್ಟು ಮತ್ತು ಐಕ್ಯತೆ ಕಾಪಾಡಲು ಒಟ್ಟಾಗಿ ಸೇರಿ ಶ್ರಮಿಸೋಣ ಎಂದು ಹೇಳಿದರು.

ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ತಮ್ಮ ಅನುಭವ ಅಧ್ಯಯನ, ಮುಂದಿನ ಯೋಚನೆಯಿಂದ ಸಮಾಜದ ಎಲ್ಲಾ ನೊಂದ 
ಜನ ಸಮುದಾಯದ ಅಭಿವೃದ್ಧಿಗೆ ಹಾಗೂ ಎಲ್ಲರೂ ಮುಖ್ಯವಾಹಿನಿಗೆ ಬಂದು ಒಂದಾಗಿ ಬದುಕುವ ಅವಕಾಶಗಳನ್ನು ನೀಡಲು
ಸಂವಿಧಾನವನ್ನು ರಚಿಸಿದ್ದಾರೆ. ಆ ಮೂಲಕ ಮಾನವತೆಯ ಉಳಿವು ಹಾಗೂ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ ಎಂದರು.
ನಾವು ಒಗ್ಗಟ್ಟಿನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರೂ ಇಂದಿಗೂ ಸಹ ನಮ್ಮ ದೇಶದ ರಾಜ್ಯ ರಾಜ್ಯಗಳ ನಡುವೆ ಅನೇಕ
ಕಲಹಗಳು ಹಾಗೇ ಉಳಿದುಕೊಂಡಿವೆ. ಅದು ಗಡಿ ವಿವಾದ ಇರಬಹುದು, ಜಲವಿವಾದ ಇರಬಹುದು ಅಥವಾ ಅಭಿವೃದ್ಧಿಯ
ಅಸಮಧಾನ ಇರಬಹುದು. ಈ ಎಲ್ಲವನ್ನು ಮೆಟ್ಟಿ ನಿಲ್ಲುವ ಶಕ್ತಿ ಭಾರತಕ್ಕಿದೆ. ನಾವು ಭಾರತೀಯರು ಎನ್ನುವ ಬಗ್ಗೆ ನನಗೆ ಹೆಚ್ಚು
ಸಂತೋಷ ಇದೆ ಎಂದು ತಿಳಿಸಿದರು. 

ರಾಜ್ಯ ಸರ್ಕಾರ ನಾಲ್ಕು ವರ್ಷ ಎಂಟು ತಿಂಗಳುಗಳನ್ನು ಪೂರೈಸಿ ಪೂರ್ಣಾವಧಿಯತ್ತ ತೆರಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ
ನೇತೃತ್ವದ ಸರ್ಕಾರ ನುಡಿದಂತೆ ನಡೆಯುವ ಮೂಲಕ ತನ್ನ ವಿಶ್ವಾಸವನ್ನು ಉಳಿಸಿಕೊಂಡು ನಡೆಯುತ್ತಿದೆ. ರಾಜ್ಯದ ಐದು ಕೋಟಿಗೂ ಹೆಚ್ಚು ಜನರಿಗೆ ನಮ್ಮ ಸರ್ಕಾರ ಒಂದಲ್ಲ ಒಂದು ರೀತಿಯಲ್ಲಿ ನೆರವಾಗುತ್ತಿದೆ. ಎಲ್ಲಾ ವರ್ಗದ, ಎಲ್ಲಾ ಸಮುದಾಯದ, ಎಲ್ಲಾ ವಲಯದಲ್ಲೂ ಫಲಾನುಭವಿಗಳು ಇದ್ದಾರೆ ಎಂದರು. ನಮ್ಮದು ಜನಪರ ಮತ್ತು ಜನಮುಖೀ ಸರ್ಕಾರ. ಅಭಿವೃದ್ಧಿಯೇ ನಮ್ಮ ಮಂತ್ರ. ಜನಪರ ನಿಲುವುಗಳಿಗೆ ಹೆಚ್ಚಿನ ಮನ್ನಣೆ ನೀಡುವ ಸರ್ಕಾರ ನಮ್ಮದು. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಮನಸ್ವಿನಿ, ಮೈತ್ರಿ, ಋಣಮುಕ್ತ, ವಿದ್ಯಾಸಿರಿ, ಕ್ಷೀರಧಾರೆ, ನಿರ್ಮಲಭಾಗ್ಯ, ವಸತಿಭಾಗ್ಯ, ಪಶುಭಾಗ್ಯ ಮಾತೃಪೂರ್ಣ, ಇಂದಿರಾ ಕ್ಯಾಂಟೀನ್‌
ಇನ್ನೂ ಮುಂತಾದ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಎಲ್ಲಾ ಜನರ ನೆಮ್ಮದಿ ಬದುಕಿಗೆ 
ಸಹಕಾರಿ ಆಗಿವೆ ಎಂದು ಹೇಳಿದರು.

ನಮ್ಮ ಸರ್ಕಾರ ಸಾಮಾಜಿಕ ನ್ಯಾಯ, ಕೋಮು ಸೌಹಾರ್ದತೆ, ಗ್ರಾಮೀಣಾಭಿವೃದ್ಧಿ ಹಾಗೂ ರೈತರು, ಮತ್ತು ಮಹಿಳಾ ಪರ
ಸಮಗ್ರ ಬೆಳವಣಿಗೆಗೆ ಶ್ರಮಿಸುತ್ತಿದೆ. ನಾವು ಜನತೆಗೆ ನೀಡಿದ 165 ಭರವಸೆಗಳಲ್ಲಿ 160 ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದುಕೊಂಡಿದ್ದೇವೆ ಎಂದರು. 

Advertisement

ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ನಾವು ದೇಶಕ್ಕೆ ಮಾದರಿಯಾಗಿದ್ದೇವೆ. 9300 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲಾಗಿದೆ. ನಮ್ಮ ಸರ್ಕಾರದಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್‌ಗಳನ್ನು ತಾಲೂಕು ಮತ್ತು ಜಿಲ್ಲಾ ಕೇಂದ್ರಗಳ ನಗರ ಸ್ಥಳೀಯ ಸಂಸ್ಥೆಗಳಲ್ಲು ನಿರ್ಮಿಸಲು ಉದ್ದೇಶಿಸಿದೆ. ಅದರಂತೆ 
ಚಿಕ್ಕಮಗಳೂರಿನಲ್ಲಿ 2, ಕಡೂರು, ತರೀಕೆರೆ, ಕೊಪ್ಪ, ಮೂಡಿಗೆರೆ, ಎನ್‌.ಆರ್‌. ಪುರ, ಶೃಂಗೇರಿಗಳಲ್ಲಿ ತಲಾ ಒಂದರಂತೆ ಒಟ್ಟು-8
ಇಂದಿರಾ ಕ್ಯಾಂಟೀನ್‌ಗಳಿಗೆ ಅನುಮೋದನೆ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next