Advertisement

ಬೀಚ್‌ ದತ್ತು ಪಡೆಯುವ ಅವಕಾಶ: ಕರಾವಳಿ ಕಾವಲು ಪೊಲೀಸ್‌ ಪಡೆಯ ವಿಭಿನ್ನ ಕಲ್ಪನೆ

12:34 AM Dec 14, 2022 | Team Udayavani |

ಉಡುಪಿ : ಸಮುದ್ರ ತೀರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಬಯಸುವ ಸಂಘ-ಸಂಸ್ಥೆಗಳು ಯಾವುದೇ ಬೀಚ್‌ ಅನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಿ ಕೊಡಲಾಗಿದೆ.

Advertisement

ಆಸಕ್ತರು ಕರಾವಳಿ ಕಾವಲು ಪಡೆಯ ಮೂಲಕ ದತ್ತು ಪಡೆದುಕೊಂಡು ನಿರ್ದಿಷ್ಟ ಕಾಲಮಿತಿಯ ವರೆಗೆ ಆ ಭಾಗದ ಸ್ವಚ್ಛತೆಯನ್ನು ನೋಡಿಕೊಳ್ಳಬೇಕಾಗುತ್ತದೆ. ಎಲ್ಲ ಬೀಚ್‌ಗಳ ಸಮೀಪದ ಊರುಗಳು ಅಥವಾ ಇತರ ಭಾಗದ ಸಂಸ್ಥೆಗಳೂ ಇದರಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ ಇದೆ.

ಪ್ಲಾಸ್ಟಿಕ್‌ ಮುಕ್ತ ಕಡಲತೀರ
ಕಡಲತೀರವನ್ನು ಪ್ಲಾಸ್ಟಿಕ್‌ ಮುಕ್ತ ಗೊಳಿಸುವ ನಿಟ್ಟಿನಲ್ಲಿ ಕರಾವಳಿ ಕಾವಲು ಪೊಲೀಸ್‌ ಪಡೆ ವತಿಯಿಂದ ಆಗಸ್ಟ್‌ನಿಂದ ಆರಂಭಗೊಂಡಿರುವ ದ.ಕ. ಜಿಲ್ಲೆಯಿಂದ ಕಾರವಾರ ವರೆಗಿನ ಸುಮಾರು 324 ಕಿ.ಮೀ. ಕಡಲತೀರದ ಸ್ವತ್ಛತೆ ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆ ಭರದಿಂದ ಸಾಗುತ್ತಿದೆ. ಡಿ. 27ರಿಂದ 31ರ ವರೆಗೆ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ.

ವಿವಿಧ ಚಟುವಟಿಕೆ
ಡಿ. 27ರಿಂದ ಆರಂಭಗೊಳ್ಳಲಿರುವ ನಿರಂತರ ಬೀಚ್‌ ಸ್ವತ್ಛತೆ ಕಾರ್ಯಕ್ರಮ ಪ್ರತೀ ದಿನ ಬೆಳಗ್ಗೆ 7ರಿಂದ ಬೆಳಗ್ಗೆ 10ರವರೆಗೆ ನಡೆಸಲು ಉದ್ದೇಶಿಸಲಾಗಿದೆ. ಡಿ. 31ರಂದು ಕೊನೆಯ ದಿನ ಬೆಳಗ್ಗಿ
ನಿಂದ ತಡರಾತ್ರಿವರೆಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಯಲಿದೆ. ಇದರಲ್ಲಿ ಮರಳು ಕಲಾಕೃತಿ, ಕಲೆ, ಸಂಸ್ಕೃತಿಕ ಚಟು ವಟಿಕೆಗಳೂ ಇರಲಿವೆ.

ಯಾಕಾಗಿ ಬೀಚ್‌ ಶುಚಿತ್ವ ?
ಸಮುದ್ರ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಾಗರದಲ್ಲಿನ ಕಸ ಮತ್ತು ಪ್ಲಾಸ್ಟಿಕ್‌ ಅನ್ನು ಕಡಿಮೆ ಮಾಡಲು ಕೊಡುಗೆ ನೀಡುವುದು ಬೀಚ್‌ ಸ್ವತ್ಛತೆಯ ಗುರಿಯಾಗಿದೆ. ಸಮುದ್ರ ತೀರದಲ್ಲಿ ಶೇಖರಣೆಯಾಗುವ ಪ್ಲಾಸ್ಟಿಕ್‌ಗಳು ಕ್ರಮೇಣ ಪುಡಿಯಾಗಿ ಮೀನುಗಳಿಗೆ ಆಹಾರವಾಗುತ್ತಿವೆ. ಅವುಗಳನ್ನು ಸೇವಿಸುವ ಮನುಷ್ಯರೂ ಆರೋಗ್ಯ ಸಮಸ್ಯೆಗೆ ಈಡಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕರಾವಳಿ ಕಾವಲು ಪೊಲೀಸ್‌ ಪಡೆಯು ಬೀಚ್‌ಗಳ ಸ್ವತ್ಛತೆಗೆ ಮುಂದಾಗಿದೆ. ಈಗಾಗಲೇ ದ.ಕ., ಉಡುಪಿ, ಕಾರವಾರ ಜಿಲ್ಲೆಗಳಲ್ಲಿ ಈ ಅಭಿಯಾನ ತಿಂಗಳಿಗೊಂದು ಬಾರಿ ನಡೆಯುತ್ತಿದೆ.

Advertisement

ಸಮುದ್ರ ತೀರವನ್ನು ಪ್ಲಾಸ್ಟಿಕ್‌ ಮುಕ್ತವನ್ನಾಗಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಮಾಸಿಕವಾಗಿ ಇಲಾಖೆ ವತಿಯಿಂದ ಹಾಗೂ ಇತರ ಸಂಘ-ಸಂಸ್ಥೆಗಳು ಶುಚಿತ್ವ ಮಾಡುತ್ತಿದ್ದಾರೆ. ಮುಂದಿನ ದಿನದಲ್ಲಿ ಇದರ ಜತೆಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಸಾರ್ವಜನಿಕರು ಸ್ವಯಂ ಆಸಕ್ತಿಯಿಂದ ಪಾಲ್ಗೊಳ್ಳಬೇಕಿದೆ.
– ಅಬ್ದುಲ್‌ ಅಹದ್‌, ವರಿಷ್ಠಾಧಿಕಾರಿಗಳು, ಕರಾವಳಿ ಕಾವಲು ಪೊಲೀಸ್‌ ಪಡೆ

Advertisement

Udayavani is now on Telegram. Click here to join our channel and stay updated with the latest news.

Next