Advertisement

ಚೆಲುವಿನ ಹಾದಿಯಲ್ಲಿ ಇರಲಿ ಎಚ್ಚರದ ಹೆಜ್ಜೆ

08:48 AM Sep 19, 2019 | mahesh |

ಸುಬ್ರಹ್ಮಣ್ಯ: ಚಾರಣ ಕಾಲ್ನಡಿಗೆ ತಿರುಗಾಟವಷ್ಟೇ ಅಲ್ಲ, ನಿಸರ್ಗ ಒಡ್ಡುವ ಅನಿರೀಕ್ಷಿತ ಸವಾಲುಗಳ ಎದುರು ಸೆಣಸಾಟವೂ ಹೌದು. ತುಸು ಎಚ್ಚರಿಕೆ ತಪ್ಪಿದರೂ ಅಪಾಯ ಕಾದಿರುತ್ತದೆ. ಇದು ರವಿವಾರ ಸುಬ್ರಹ್ಮಣ್ಯದ ಕುಮಾರ ಪರ್ವತದಲ್ಲಿ ನಡೆದ ಬೆಂಗಳೂರು ಯುವಕನ ನಾಪತ್ತೆ ಪ್ರಕರಣದಿಂದ ಮತ್ತೆ ಸಾಬೀತಾಗಿದೆ.

Advertisement

ಕುಮಾರ ಪರ್ವತಕ್ಕೆ ಗೆಳೆಯರ ಬಳಗದೊಂದಿಗೆ ಚಾರಣ ತೆರಳಿದ್ದ ಸಂತೋಷ್‌ (25) ರವಿವಾರ ವಾಪಸಾಗುವ ವೇಳೆ ನಾಪತ್ತೆಯಾಗಿದ್ದ. ತನ್ನ ಜಾಣ್ಮೆ ಬಳಸಿ ಪವಾಡಸದೃಶವಾಗಿ ಪಾರಾಗಿದ್ದಾನೆ. ದಟ್ಟ ಕಾಡಿನಲ್ಲಿ ಹೊರಜಗತ್ತನ್ನು ಕಾಣುವ ಬೆಳಕಿಂಡಿಯಾಗಿ ದೇವಾಲಯಕ್ಕೆ ನೀರು ಸಾಗಿಸುವ ಕೊಳವೆ ಮಾರ್ಗ ಕಾಣಿಸಿದ್ದು ಅದೃಷ್ಟವೇ.

ಹಿಂದೆಯೂ ನಡೆದಿತ್ತು
ಹಿಂದೆಯೂ ಇಂಥದ್ದೇ ಘಟನೆ ನಡೆದಿತ್ತು. ಚಾರಣಿಗನೋರ್ವ ದಾರಿತಪ್ಪಿ ಮೂರು ದಿನಗಳ ಬಳಿಕ ಅದೃಷ್ಟವಶಾತ್‌ ಸುರಕ್ಷಿತವಾಗಿ ಪತ್ತೆಯಾಗಿದ್ದ. 2016ರ ಮೇಯಲ್ಲಿ 12 ಮಂದಿ ಪ್ರವಾಸಿಗರ ಪೈಕಿ ಹರೀಶ್‌ ಎಂಬಾತ ಪರ್ವತದ ಮೇಲೆ ಸಿಡಿಲು ಬಡಿದು ಮೃತಪಟ್ಟಿದ್ದ. ಪ್ರಕೃತಿಯ ದೃಶ್ಯಗಳನ್ನು ಮೊಬೈಲ್‌ ಕೆಮರಾದಲ್ಲಿ ಸೆರೆ ಹಿಡಿಯುತ್ತಿದ್ದಾಗ ಸಿಡಿಲು ಎರಗಿತ್ತು. ಈ ಎಲ್ಲ ಘಟನೆಗಳ ನೆನಪು ಮಾಸುವ ಮುನ್ನವೇ ಇನ್ನೊಂದು ನಾಪತ್ತೆ ಪ್ರಕರಣ ಆತಂಕ ಹುಟ್ಟಿಸಿ ಈಗ ಸುಖಾಂತ್ಯವಾಗಿದೆ.

ಕ್ಷಣ ಕ್ಷಣಕ್ಕೂ ಅಪಾಯ
ಚಾರಣದ ಸಮಯವಿದಲ್ಲ ಪುಷ್ಪಗಿರಿ ಬೆಟ್ಟದ ಇನ್ನೊಂದು ಮಗ್ಗುಲಲ್ಲಿ ಕುಮಾರಪರ್ವತವಿದೆ. ಇದರ ಬುಡದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನಾಗಾರಾಧನೆಗೆ ಪ್ರಸಿದ್ಧ. ಇಲ್ಲಿಗೆ ದೇವರ ದರ್ಶನಕ್ಕೆಂದು ಬರುವ ಭಕ್ತರು ಹಲವರಾದರೆ ಕುಮಾರಪರ್ವತ ಚಾರಣಕ್ಕೆ ಬರುವವರು ಹಲವರು. ಪುಷ್ಪಗಿರಿಗೆ ಮಳೆಗಾಲದ ಮೂರು ತಿಂಗಳು ಚಾರಣ ಕಷ್ಟ. ಅಕಾಲಿಕ ಗುಡುಗು ಸಹಿತ ಭಾರೀ ಮಳೆ ಇರುತ್ತದೆ. ಜತೆಗೆ ಆಗಾಗ್ಗೆ ದಟ್ಟ ಮಂಜು ಮುಸುಕುತ್ತದೆ.

ಮಳೆಗಾಲದ ಆರಂಭ ಮತ್ತು ಮುಕ್ತಾಯದ ವೇಳೆಗೆ ಚಾರಣ ಅಪಾಯ ಎಂದು ಗೊತ್ತಿದ್ದರೂ ಚಾರಣಿಗರು ಈ ಸಮಯದಲ್ಲೂ ಕುಮಾರಪರ್ವತಕ್ಕೆ ತೆರಳುತ್ತಿರುತ್ತಾರೆ. ಚಾರಣ ಆರಂಭವಾಗುವ ದೇವರಗದ್ದೆಯಲ್ಲಿ ತಪಾಸಣೆ ಕೇಂದ್ರಗಳು ಇಲ್ಲ. ಮಾರ್ಗದರ್ಶಕರೂ ಇರುವುದಿಲ್ಲ. ಅಲ್ಲಿಂದ ಪರ್ವತದ ತುತ್ತತುದಿಗೆ 12 ಕಿ.ಮೀ. ದೂರವಿದೆ. ಆರಂಭದ ನಾಲ್ಕೈದು ಕಿ. ಮೀ. ಸುಬ್ರಹ್ಮಣ್ಯ ಅರಣ್ಯ ವಿಭಾಗದ ವ್ಯಾಪ್ತಿಗೆ ಬರುತ್ತದೆ. ಅನಂತರದ ಆರೇಳು ಕಿ.ಮೀ. ಪುಷ್ಪಗಿರಿ ವನ್ಯಧಾಮದ ವ್ಯಾಪ್ತಿಯದು.

Advertisement

ಚಾರಣದ ಪ್ರತಿ ಹೆಜ್ಜೆಯೂ ಹೊಸದಾಗಿರುತ್ತದೆ. ಇಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕು. ಪ್ರಪಾತವಿರ ಬಹುದು. ಪಕ್ಕದಲ್ಲೇ ಅಪಾಯ ಕಾದಿರಬಹುದು. ಕಾಡು ಒಂದೇ ಕ್ಷಣದಲ್ಲಿ ದಿಕ್ಕು ತಪ್ಪಿಸಬಹುದು. ಬೆಳೆದು ನಿಂತ ಎತ್ತರವಾದ ಆನೆಹುಲ್ಲು ಕೂಡ ಅಪಾಯಕಾರಿ. ಕಾಡುಪ್ರಾಣಿಗಳೂ ಎದುರಾಗುತ್ತವೆ.

ಎಚ್ಚರ ತಪ್ಪಿದರೆ ಕಾದಿದೆ ಅಪಾಯ
ಮನೋರಮಣೀಯ ಸೌಂದರ್ಯ ಹೊಂದಿರುವ ಕುಮಾರ ಪರ್ವತ ಚಾರಣಿಗರಿಗೆ ಸವಾಲನ್ನು ಒಡ್ಡುತ್ತದೆ. ಮನಸ್ಸಿಗೆ ಎಷ್ಟು ಮುದ ನೀಡುತ್ತದೆಯೋ ಅಷ್ಟೇ ಅಪಾಯಗಳೂ ಇಲ್ಲಿವೆ. ಇಲ್ಲಿ ನಡೆದ ಅನೇಕ ಘಟನೆಗಳು ಇದಕ್ಕೆ ಸಾಕ್ಷಿ.

ಕೆಲವು ವರ್ಷಗಳ ಹಿಂದೆ ಚಾರಣಿಗನೋರ್ವ ನಾಪತ್ತೆಯಾದ ಬಳಿಕ ಪರ್ವತದ ಎಲ್ಲೆಡೆ ಭಾರೀ ಹುಡುಕಾಟ ನಡೆಸಲಾಗಿತ್ತು. ಪ್ರಭಾವೀ ಕುಟುಂಬದ ಹಿನ್ನೆಲೆಯವನಾದ ಕಾರಣ ಶೋಧಕ್ಕೆ ಹೆಲಿಕಾಪ್ಟರ್‌ ಬಳಸಲಾಗಿತ್ತು. ಮಾರ್ಗ ಮತ್ತು ಮಾರ್ಗದರ್ಶನ – ಎರಡರ ಕೊರತೆ ಮತ್ತು ಅಜಾಗರೂಕತೆಯಿಂದ ಕುಮಾರಪರ್ವತವೇರುವ ಸಾಹಸಾಸಕ್ತರು ಇಕ್ಕಟ್ಟಿಗೆ ಸಿಲುಕುತ್ತಾರೆ. ಸಕಲೇಶಪುರ ಭಾಗದಿಂದಲೂ ಹಿಂದೆ ಚಾರಣಿಗರು ನಾಪತ್ತೆಯಾದ ಘಟನೆ ನಡೆದಿತ್ತು.

ಪುಷ್ಪಗಿರಿ ವನ್ಯಧಾಮದ ಗಿರಿಗದ್ದೆಯಲ್ಲಿ ಅಧಿಕಾರಿಗಳ ತಪಾಸಣ ಕೇಂದ್ರ, ಶುಲ್ಕ ಪಾವತಿ ವ್ಯವಸ್ಥೆ ಇದೆ. ಹೀಗಾಗಿ ದೇವರಗದ್ದೆಯಲ್ಲಿ ತಪಾಸಣ ಕೇಂದ್ರ ತೆರೆದಿಲ್ಲ. ಎರಡೆರಡು ಕಡೆ ಶುಲ್ಕ ಪಾವತಿ ಆದರೆ ಚಾರಣಿಗರಿಗೆ ಹೊರೆಯಾಗುತ್ತದೆ.
-ತ್ಯಾಗರಾಜ್‌, ಆರ್‌ಎಫ್ಒ, ಸುಬ್ರಹ್ಮಣ್ಯ ವಿಭಾಗ

ಬಾಲಕೃಷ್ಣ  ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next