Advertisement

ಕಾಡುಪ್ರಾಣಿಗಳು ನಾಡಿಗೆ ಬರದಂತೆ ಕ್ರಮವಹಿಸಿ

08:55 PM Jul 21, 2019 | Team Udayavani |

ಕೊಳ್ಳೇಗಾಲ: ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಆನೆ ದಾಳಿ ಮಾಡಿ ಒಂದು ವಾರದಲ್ಲಿ ಮೂವರನ್ನು ಸಾಯಿಸಿದ್ದು, ಕೂಡಲೇ ಆನೆಗಳು ಮತ್ತು ಕಾಡುಪ್ರಾಣಿಗಳು ಗ್ರಾಮಗಳಿಗೆ ಬರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಅವರಿಗೆ ಹನೂರು ಶಾಸಕ ಆರ್‌.ನರೇಂದ್ರ ಸೂಚಿಸಿದರು.

Advertisement

ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿ ಗಣ್ಯರ ಕೊಠಡಿಯಲ್ಲಿ ಅರಣ್ಯಾಧಿಕಾರಿಗಳೊಂದಿಗೆ ಮಾತನಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿ, ಈಗಾಗಲೇ ಮೂವರು ಆನೆ ತುಳಿತಕ್ಕೆ ಒಳಗಾಗಿ ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ಕೂಡಲೇ ಒಂದು ಲಕ್ಷ ರೂ. ಪರಿಹಾರವನ್ನು ವಿತರಿಸಬೇಕೆಂದು ಸೂಚನೆ ನೀಡಿದರು.

ಪರಿಹಾರ ಶ್ರೀಘ್ರ ಮಂಜೂರಿಗೆ ಸೂಚನೆ: ಆನೆ ತುಳಿತಕ್ಕೆ ಒಳಗಾಗಿ ಮೃತಪಟ್ಟಿವರಿಗೆ ಸರ್ಕಾರ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದು, ಅದರ ಪೈಕಿ ಒಂದು ಲಕ್ಷ ರೂ. ಪರಿಹಾರವನ್ನು ತುರ್ತಾಗಿ ನೀಡಬೇಕು. ಉಳಿದ ನಾಲ್ಕು ಲಕ್ಷವನ್ನು ಸರ್ಕಾರದಿಂದ ಶೀಘ್ರದಲ್ಲಿ ಮಂಜೂರು ಮಾಡಿಸಿಕೊಡಬೇಕೆಂದು ಸಲಹೆ ನೀಡಿರುವುದಾಗಿ ಹೇಳಿದರು.

ಪ್ರಾಮಾಣಿಕ ಪ್ರಯತ್ನ: ಮಲೆ ಮಹದೇಶ್ವರ ಬೆಟ್ಟದ ಹಳೆಯೂರು ಗ್ರಾಮದ ಗೌರಮ್ಮ, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಾಬು, ಗೆಜ್ಜಲಗೆರೆ ಗ್ರಾಮದ ಭ್ರಮಮೂರ್ತಿ ಅವರು ಆನೆ ತುಳಿತಕ್ಕೆ ಒಳಗಾಗಿ ಮೃತಪಟ್ಟವರು. ಮೃತರ ಕುಟುಂಬಕ್ಕೆ ಕೂಡಲೇ ಸರ್ಕಾರದಿಂದ ಬರಬೇಕಾಗಿರುವ ಪರಿಹಾರ ಮತ್ತು ಸೌಲಭ್ಯವನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಆನೆಯನ್ನು ಕಾಡಿಗೆ ಓಡಿಸಿ: ಒಂದು ವಾರದಲ್ಲಿ ಮೂವರನ್ನು ಬಲಿಪಡೆದಿರುವ ಒಂದೇ ಆನೆಯನ್ನು ಕೂಡಲೇ ಕಾಡಿಗೆ ಓಡಿಸಬೇಕು ಎಂದು ಸೂಚನೆ ಯ ಮೇರೆಗೆ ಒಂಟಿ ಆನೆ ಮೂವರನ್ನು ಸಾಯಿಸಿಲ್ಲ. ಪ್ರತ್ಯೇಕ ಘಟನೆಗಳಲ್ಲಿ ಗ್ರಾಮಸ್ಥರನ್ನು ತುಳಿದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದು, ಮುಂದೆ ಈ ರೀತಿಯ ಘಟನೆಗಳು ಮರುಕುಳಿಸದಂತೆ ಮುಂಜಾಗ್ರತಾ ಕ್ರಮಕೈಗೊಳ್ಳ ಬೇಕೆಂದು ಸಲಹೆ ನೀಡಿರುವುದಾಗಿ ತಿಳಿಸಿದರು.

Advertisement

ಗ್ರಾಮಸ್ಥರು ಆತಂಕಕ್ಕೆ ಒಳಗಾಗಬೇಡಿ: ತಾಲೂಕಿನ ಸಿಂಗಾನಲ್ಲೂರು, ಮತ್ತೀಪುರ, ಗುಂಡಾಪುರ ಗ್ರಾಮಗಳಲ್ಲಿ ಆನೆಗಳು ಗ್ರಾಮಕ್ಕೆ ನುಗ್ಗಿ ಬೆಳೆ ನಾಶ ಮಾಡಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗುವಂತೆ ಮಾಡಿದ್ದು, ಕೂಡಲೇ ಗ್ರಾಮಸ್ಥರು ಆತಂಕಕ್ಕೆ ಒಳಗಾಗಬಾರದೆಂದು ಮನವಿ ಮಾಡಿದ ಶಾಸಕರು, ಗ್ರಾಮದ ಬಳಿ ಆನೆ ಮತ್ತು ಕಾಡು ಪ್ರಾಣಿಗಳು ಸುಳಿಯದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳುವರು ಎಂದು ಹೇಳಿದರು.

ತಂತಿ ಬೇಲಿ ನಿರ್ಮಿಸಿ: ಕಾಡಿನಿಂದ ನಾಡಿಗೆ ಬರದಂತೆ ಹಳ್ಳ ಕೊರೆಯಬೇಕು ಮತ್ತು ತಂತಿ ಬೇಲಿಗಳನ್ನು ಅಳವಡಿಸಿ ಯಾವುದೇ ಪ್ರಾಣಿಗಳು ತಂತಿಯನ್ನು ಸ್ಪರ್ಶ ಮಾಡಿದ ಕೂಡಲೇ ಬೆಲ್‌ ಹೊಡೆಯುವ ನೂತನ ತಂತ್ರಜ್ಞಾನದ ಯಂತ್ರಗಳನ್ನು ಅಳವಡಿಸಿ ಕಾಡು ಪ್ರಾಣಿಗಳು ನಾಡಿಗೆ ಬರದಂತೆ ಕಟ್ಟೆಚ್ಚರ ವಹಿಸಬೇಕು ಎಂದರು.

ಕಾವಲು ಕಡ್ಡಾಯ: ಕಾಡಂಚಿನ ಗ್ರಾಮಗಳಲ್ಲಿ ಸದಾ ಅರಣ್ಯ ಸಿಬ್ಬಂದಿ ಕಡ್ಡಾಯವಾಗಿ ಕಾವಲು ಕಾಯಬೇಕು. ನೂತನ ತಂತ್ರಜ್ಞಾನದ ಬೆಲ್‌ ಶಬ್ದವಾದ ಕೂಡಲೇ ಕಾವಲಿರುವ ನೌಕರರು ಎಚ್ಚರವಹಿಸಬೇಕು. ಇಂತಹ ನೂತನ ಯಂತ್ರೋಪಕರಣಗಳನ್ನು ಅಳವಡಿಸಿದ ಬಳಿಕ ಇದೇ ರೀತಿ ಗ್ರಾಮಸ್ಥರ ಮೇಲೆ ಪ್ರಾಣಿಗಳ ದಾಳಿ ಸಂಭವಿಸಿದರೇ ಗಸ್ತುವಿನಲ್ಲಿರುವ ಸಿಬ್ಬಂದಿ ಹೊಣೆಗಾರರನ್ನಾಗಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಬಹುಮತ ಸಾಬೀತು ಪಕ್ಕ: ರಾಜ್ಯ ಸಮ್ಮಿಶ್ರ ಸರ್ಕಾರದ ಬಹುಮತ ಸಾಬೀತುಪಡಿಸಲು ಜು.22ರಂದು ನಿಗದಿಯಾಗಿದ್ದು, ರಾಜ್ಯದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ದಿನೇಶ್‌ ಗುಂಡೂರಾವ್‌  ಅವರ ಪರಿಶ್ರಮದಿಂದ ಬಹುಮತ ಸಾಬೀತು ಮಾಡುವರು ಎಂದು ನರೇಂದ್ರ ಭವಿಷ್ಯ ನುಡಿದರು.

ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಸಮ್ಮಿಶ್ರ ಸರ್ಕಾರ ಸಾಕಷ್ಟು ಅವಕಾಶವನ್ನು ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮ್ಯಾಜಿಕ್‌ ಸಂಖ್ಯೆಯನ್ನು ಮುಖ್ಯಮಂತ್ರಿಗಳು ಮಂಡಿಸಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next