ಮೈಸೂರು: ಮಹಿಳೆಯರು ಸಲಿಗೆಯಿಂದ ತಮ್ಮ ಅತ್ಯಂತ ಖಾಸಗಿ ವಿಚಾರಗಳನ್ನು ಅಪರಿಚಿತರಲ್ಲಿ ಹಂಚಿಕೊಂಡು ಬ್ಲಾಕ್ಮೇಲ್ಗಳಿಗೆ ಒಳಗಾಗಬಾರದು ಎಂದು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಕಿವಿಮಾತು ಹೇಳಿದರು.
ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರ ಸಂಘ ಹಾಗೂ ಮಾನವೀಯ ಮಹಿಳಾ ಸೇವಾ ಟ್ರಸ್ಟ್ಗಳ ಸಹಯೋಗದಲ್ಲಿ ಮಹಿಳಾ ಸಬಲೀಕರಣಕ್ಕೆ ಪ್ರಸ್ತುತ ರಾಜ್ಯ ಸರ್ಕಾರದ ಕೊಡುಗೆ ಕುರಿತು ನಡೆದ ಅಂತರ ಕಾಲೇಜು ಭಾಷಣ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಮಾಂಸ ಮಾರಾಟ ದಂಧೆಗೆ ಜಗತ್ತಿನಾದ್ಯಂತ ಬಳಕೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಮಹಿಳೆಯರು ಮೊದಲು ಮಹಿಳಾ ಸಬಲೀಕರಣದ ಕಾನೂನು ಅರಿಯಬೇಕಾಗಿದೆ. ಪ್ರಸ್ತುತ ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಸದುಪಯೋಗವನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಕೀಳರಿಮೆ ಬಿಟ್ಟು ವಿದ್ಯಾವಂತರಾಗಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಚನ್ನಬಸವೇಗೌಡ ಮಾತನಾಡಿ, ವಿದ್ಯಾರ್ಥಿನಿಯರು ತಮ್ಮ ಅಜಾnನ, ಮೌಡ್ಯ, ಕೀಳರಿಮೆ ಬಿಟ್ಟು ವೈಚಾರಿಕವಾಗಿ ವಿದ್ಯಾವಂತರಾಗಬೇಕು. ಕಾಲೇಜಿನಲ್ಲಿ ನೀಡುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಸರ್ಕಾರದ ಎಲ್ಲಾ ಸವಲತ್ತುಗಳನ್ನು ಬಳಸಿಕೊಂಡು ತಿಳಿಯದವರಿಗೂ ತಿಳಿಸಿ ಎಂದು ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡ ಮಂಜುನಾಥ್, ಮಾನವೀಯ ಮಹಿಳಾ ಸೇವಾ ಟ್ರಸ್ಟ್ನ ಶೋಭಾ ಮೋಹನ್, ವಸಂತಕುಮಾರಿ, ಪಿ.ಭಾರತಿ, ಸುಲೋಚನಾ, ಶೋಭಾ ರಮೇಶ್ ಮೊದಲಾದವರು ಉಪಸ್ಥಿತರಿದ್ದರು.