Advertisement

ಬಿ.ಸಿ.ರೋಡ್‌: ಶರತ್‌ ಅಂತಿಮ ಯಾತ್ರೆ ಲಾಠೀಚಾರ್ಜ್‌

04:30 AM Jul 09, 2017 | Team Udayavani |

ಮಂಗಳೂರು/ಬಂಟ್ವಾಳ: ದುಷ್ಕರ್ಮಿ ಗಳಿಂದ ಹಲ್ಲೆಗೊಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಆರ್‌ಎಸ್‌ಎಸ್‌ ಕಾರ್ಯಕರ್ತ ಸಜಿಪಮುನ್ನೂರು ಕಂದೂರಿನ ಶರತ್‌ ಪಾರ್ಥಿವ ಶರೀರವನ್ನು ಶನಿವಾರ ಭಾರೀ ಜನಸ್ತೋಮದೊಂದಿಗೆ ಅವರ ಹುಟ್ಟೂರಿಗೆ ಕೊಂಡೊಯ್ಯಲಾಯಿತು. ಈ ಸಂದರ್ಭ ಬಿ.ಸಿ. ರೋಡ್‌ ಪರಿಸರದಲ್ಲಿ ಶವಯಾತ್ರೆಯ ಮೇಲೆ ಕಲ್ಲುತೂರಾಟ, ವಾಹನಗಳಿಗೆ ಹಾನಿ, ಲಾಠೀ ಚಾರ್ಜ್‌ ಮೊದಲಾದ ಘಟನೆಗಳು ಸಂಭವಿಸಿ ಪರಿಸ್ಥಿತಿ ಉದ್ವಿಗ್ನಗೊಂಡಿತು. 

Advertisement

ಬಿಗು ಪೊಲೀಸ್‌ ಬಂದೋಬಸ್ತ್ ಏರ್ಪಡಿಸಿದ್ದರೂ ಶವಯಾತ್ರೆಯು ಕೈಕಂಬ ತಲುಪುತ್ತಿದ್ದಂತೆ ದುಷ್ಕರ್ಮಿಗಳು ಕಲ್ಲೆಸೆದುದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಕಲ್ಲೆಸೆತ ಪ್ರಶ್ನಿಸಿ ಕೆಲವರು ಅಲ್ಲಿಯೇ ನಿಂತಾಗ ಪೊಲೀಸರು ಲಾಠೀಚಾರ್ಜ್‌ ನಡೆಸಿದರು. ಅನಂತರ ಜನ ಸೇರಿದಲ್ಲೆಲ್ಲ ಲಾಠಿ ಬೀಸಿ ಜನರನ್ನು ಚದುರಿಸಲಾಯಿತು. ಕೈಕಂಬ, ಬಿ.ಸಿ.ರೋಡ್‌, ಬಿ.ಸಿ. ರೋಡ್‌ ಜಂಕ್ಷನ್‌, ಬಿ.ಸಿ. ರೋಡ್‌ ಸರ್ಕಲ್‌ ಪರಿಸರದಲ್ಲಿ ಆಗಾಗ ಲಾಠೀಚಾರ್ಜ್‌ ನಡೆದು ಸಂಜೆತನಕವೂ ಜನ ಸೇರದಂತೆ ಪೊಲೀಸರು ನೋಡಿಕೊಂಡರು.

ಪ್ರಸ್ತುತ ಬಿ.ಸಿ. ರೋಡ್‌ನ‌ಲ್ಲಿ ಪರಿಸ್ಥಿತಿ ಶಾಂತ ವಾಗಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. ಸಾವಿರಕ್ಕೂ ಹೆಚ್ಚು ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಐಜಿಪಿ ಸಹಿತ ಉನ್ನತ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ದ್ದಾರೆ. ಒಟ್ಟಾರೆ ಬೂದಿ ಮುಚ್ಚಿದ ಕೆಂಡದಂತಿದೆ.

ಬಿ.ಸಿ.ರೋಡ್‌ ಬಂದ್‌: ಮೆರವಣಿಗೆ ವೇಳೆ ಬಿ.ಸಿ. ರೋಡ್‌, ಕೈಕಂಬದಲ್ಲಿ ಕಲ್ಲು ತೂರಾಟ ದಂತಹ ಅಹಿತಕರ ಘಟನೆಯ ಬಳಿಕ ಪೊಲೀಸ್‌ ಅಧಿಕಾರಿ ವಿಷ್ಣುವರ್ಧನ್‌ ನೇತೃತ್ವದಲ್ಲಿ ಬಿಗು ಬಂದೋಬಸ್ತ್ ಕೈಗೊಳ್ಳಲಾಯಿತು. 

ಬಿ.ಸಿ. ರೋಡ್‌ನ‌ಲ್ಲಿ ಜಮಾಯಿಸಿದ ಕೆಎಸ್‌ಆರ್‌ಪಿ ಹಾಗೂ ಇತರ ಪೊಲೀಸರು ಅಲ್ಲಲ್ಲಿ ಜಮಾಯಿಸುತ್ತಿದ್ದ ಯುವಕರನ್ನು ಲಾಠಿ ಬೀಸಿ ಅಟ್ಟಾಡಿಸಿಕೊಂಡು ಓಡಿಸಿದರು. ಈ ವೇಳೆ ತೆರೆದಿದ್ದ ಕೆಲವು ಅಂಗಡಿಗಳನ್ನು ಕೂಡ ಬಂದ್‌ ಮಾಡಲಾಯಿತು. ಪೊಲೀಸರ ಬಿಗಿ ಗಸ್ತು ಕಾರ್ಯಾಚರಣೆ ಮುಂದುವರಿದಿದೆ. ಬಿ.ಸಿ. ರೋಡ್‌ ವ್ಯಾಪ್ತಿಯಲ್ಲಿ ಗಲಾಟೆ ನಡೆದ ಬಳಿಕ ಮೆಲ್ಕಾರ್‌ ಕಡೆಯಿಂದ ಯಾವುದೇ ವಾಹನಗಳನ್ನು ಬಿ.ಸಿ.ರೋಡ್‌ನ‌ತ್ತ ಸಾಗಲು ಪೊಲೀಸರು ಅವಕಾಶ ನೀಡುತ್ತಿರಲಿಲ್ಲ. 

Advertisement

ಸಾವಿರಾರು ಜನರಿಂದ ಕಂಬನಿ
ಬೆಳಗ್ಗಿನಿಂದಲೇ ಮಳೆ ಸುರಿಯು ತ್ತಿದ್ದರೂ ಅದನ್ನು ಲೆಕ್ಕಿಸದೇ ಸಾವಿರಾರು ಮಂದಿ ಪಾರ್ಥೀವ ಶರೀರವನ್ನು ಕೊಂಡೊಯ್ಯುವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಂತಿಮ ನಮನ ಸಲ್ಲಿಸಿದರು. 

ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಬೆಳಗ್ಗೆ 10 ಗಂಟೆಯ ಅಂದಾಜಿಗೆ ಮೃತ ಶರೀರದ ಮೇಲೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಮುಖಂಡರು ಹೂ ಹಾರ ಹಾಕಿದ ಬಳಿಕ ಆ್ಯಂಬುಲೆನ್ಸ್‌ ಮೂಲಕ ಪಾರ್ಥೀವ ಶರೀರವನ್ನು ಅವರ
ಹುಟ್ಟೂರಿಗೆ ಕೊಂಡೊಯ್ಯಲಾಯಿತು. ಮುಖಂ ಡರ ವಾಹನದೊಂದಿಗೆ ಸಾವಿರಾರು ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೈಕ್‌ ಹಾಗೂ ಕಾರ್‌ ಮೂಲಕ ಆ್ಯಂಬುಲೆನ್ಸ್‌ ಹಿಂಬದಿಯಲ್ಲಿ ಸಾಗಿದರು. ಸುಮಾರು ಒಂದು ಕಿ.ಮೀ. ವರೆಗೂ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಾಹನಗಳ ರಾಶಿಯೇ ಕಂಡಿತ್ತು. 

ಎ.ಜೆ. ಆಸ್ಪತ್ರೆಯಿಂದ ಹೊರಟ ಶವಯಾತ್ರೆ, ನಂತೂರು, ಮರೋಳಿ ರಸ್ತೆ ಮೂಲಕ ಪಡೀಲ್‌ನಿಂದ ರಾಷ್ಟ್ರೀಯ ರಸ್ತೆಗೆ ಸೇರಿ ಬಳಿಕ ಕಣ್ಣೂರು, ಅಡ್ಯಾರ್‌, ಫರಂಗಿಪೇಟೆ, ಮಾರಿಪಳ್ಳ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲೇ ಮುಂದುವರಿದಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಜಮಾಯಿಸಿದ್ದ ಜನರು ತಾವು ನಿಂತಲ್ಲಿಂದಲೇ ಅಂತಿಮ ನಮನ ಸಲ್ಲಿಸಿದ್ದರು. ಇನ್ನು ಕೆಲವರು ಕಟ್ಟಡಗಳ ಮೇಲೆ ನಿಂತು ಮೆರವಣಿಗೆಯನ್ನು ವೀಕ್ಷಿಸಿದರು. ಮೃತ ಶರತ್‌ ಅವರ ಹುಟ್ಟೂರಿನವರೆಗೆ ಮೆರವಣಿಗೆ ಸಾಗಿ, ಬಳಿಕ ಧಾರ್ಮಿಕ ವಿಧಿ-ವಿಧಾನಗಳ ಅನುಸಾರವಾಗಿ ಅಂತ್ಯಕ್ರಿಯೆ ನೆರವೇರಿತು.

ಕಪ್ಪು ಬಾವುಟ, ಘೋಷಣೆ: ಆ್ಯಂಬುಲೆನ್ಸ್‌ನ ಹಿಂಬದಿಯಲ್ಲಿ ಸಾಗಿದ ಬೈಕ್‌ ಹಾಗೂ ಕಾರು ಸವಾರರು ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಸಾವನ್ನು ಖಂಡಿಸಿ ದಾರಿಯುದ್ದಕ್ಕೂ ಕಪ್ಪು ಬಾವುಟ ಪ್ರದರ್ಶಿಸಿದರು. ಬೈಕ್‌ ಹಾಗೂ ಕಾರುಗಳ ಹಾರ್ನ್ಗಳ ನಡುವೆಯೂ “ಭಾರತ್‌ ಮಾತಾ ಕೀ ಜೈ’ ಎಂಬ ಘೋಷಣೆಯೂ ಕೇಳಿಬರುತ್ತಿತ್ತು. ಸಣ್ಣ ಪ್ರಾಯದ ಯುವಕರಿಂದ ಹಿಡಿದು ಹಿರಿಯವರೆಗೂ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 

ಟೋಲ್‌ ಸಂಗ್ರಹವೂ ನಡೆದಿಲ್ಲ: 
ಶರತ್‌ ಮೃತದೇಹವನ್ನು ಕೊಂಡೊಯ್ಯುತ್ತಿದ್ದ ವಾಹನ ದೊಂದಿಗೆ ಇತರ ನೂರಾರು ಕಾರುಗಳು ಕೂಡ ಸಾಗಿದ್ದರೂ ಬ್ರಹ್ಮರ ಕೂಟ್ಲು ಟೋಲ್‌ಗೇಟ್‌ನಲ್ಲಿ ಯಾವುದೇ ಕಾರುಗಳ ಟೋಲ್‌ ಸಂಗ್ರಹ ನಡೆದಿಲ್ಲ.

ಸಾವಿರಾರು ಪೊಲೀಸರು: ಮಂಗಳೂರಿನಿಂದ ಮೆಲ್ಕಾರ್‌ವರೆಗೆ ರಾಷೀrÅಯ ಹೆದ್ದಾರಿಯ ಎರಡೂ ಕಡೆಗಳಲ್ಲಿ ಅಲ್ಲಲ್ಲಿ ಪೊಲೀಸರು ಜಮಾಯಿಸಿದ್ದು, ಕೈಕಂಬ ತಲುಪುತ್ತಿದ್ದಂತೆ ಚೈನ್‌ ಮಾದರಿಯಲ್ಲಿ ಪೊಲೀಸರು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ರಕ್ಷಣೆ ನೀಡಲು ನಿಂತಿದ್ದರು. ಪೊಲೀಸ್‌ ವ್ಯಾನ್‌ ಮಾತ್ರವಲ್ಲದೇ, ಗಲಾಟೆಗಳಾದಲ್ಲಿ ಚದುರಿಸಲು ಎರಡು ತೆರೆದ ವಾಹನಗಳಲ್ಲೂ ಪೊಲೀಸರು ಸಿದ್ಧವಾಗಿಯೇ ಮೆರವಣಿಗೆಯೊಂದಿಗೆ ಸಾಗಿದ್ದರು. ಶವಯಾತ್ರೆಯ ಮುಂಭಾಗದಲ್ಲೂ ಪೊಲೀಸ್‌ ವಾಹನ ಸಾಗುತ್ತಾ ಯಾವುದೇ ಅಹಿಕರ ಘಟನೆ ನಡೆಯದಂತೆ ರಕ್ಷಣೆ ಒದಗಿಸುತ್ತಿತ್ತು.

ಕಲ್ಲು ತೂರಾಟ- ರಿಕ್ಷಾ ಗಾಜುಗಳಿಗೆ ಹಾನಿ: 
ಶವಯಾತ್ರೆ ಕೈಕಂಬದಿಂದ ರೋಡ್‌ನ‌ತ್ತ ಸಾಗುತ್ತಿದ್ದಂತೆ ಹಿಂದಿನಿಂದ ಬರುತ್ತಿದ್ದ ಬೈಕ್‌ ಸವಾರರ ಮೇಲೆ ಪಕ್ಕದ ಕಟ್ಟಡದ ಭಾಗದಿಂದ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದರು. ಆಗ ಹಲವು ಬೈಕ್‌ ಸವಾರರು ರಸ್ತೆ ಮಧ್ಯೆ ತಮ್ಮ ವಾಹನಗಳನ್ನು ನಿಲ್ಲಿಸಿ ಘಟನಾ ಸ್ಥಳಕ್ಕೆ ದೌಡಾಯಿಸಿದರು. ಘಟನೆಯ ಬಗ್ಗೆ ಮಾಹಿತಿ ತಿಳಿದಿದ್ದರೂ ಮೌನವಾಗಿ ನಿಂತಿದ್ದ ಕೆಲವು ಪೊಲೀಸ್‌ ಪೇದೆಗಳನ್ನು ಕಾರ್ಯಕರ್ತರೇ ಸ್ಥಳಕ್ಕೆ ತೆರಳುವಂತೆ ಸೂಚಿಸಿ ಗಲಾಟೆ ನಡೆಯದಂತೆ ನೋಡಿಕೊಳ್ಳುವಂತೆ ವಿನಂತಿಸಿದರು. ಈ ವೇಳೆ ಬಿ.ಸಿ. ರೋಡ್‌ ಪೆಟ್ರೋಲ್‌ ಪಂಪ್‌ ಬಳಿಯಿರುವ ರಂಗೋಲಿ ಸಭಾಂಗಣದ ಹತ್ತಿರವೂ ಒಂದು ಬಾರಿ ಕಲ್ಲು ತೂರಾಟ ನಡೆದಿದ್ದು, ಬಳಿಕ ಉಳಿದ ದ್ವಿಚಕ್ರ ವಾಹನ ಸವಾರರು ಯಾರಿಗೂ ತೊಂದರೆ ಮಾಡಬಾರದು ಎಂದು ತಿಳಿಸಿದ ಮೇಲೆ ಅಕ್ರೋಶಭರಿತರಾಗಿದ್ದ ಕೆಲವು ಮಂದಿ ಯುವಕರು ತಣ್ಣಗಾದರು. 

ಘಟನೆಯ ವೇಳೆ ಮುಂಭಾಗದಲ್ಲಿದ್ದ ಆ್ಯಂಬುಲೆನ್ಸ್‌ ಹಾಗೂ ಇತರ ವಾಹನಗಳು ಮುಂದಕ್ಕೆ ಸಾಗಿದ್ದು, ಬಳಿಕವೂ ಕೈಕಂಬದ ಬಳಿ ಗಲಾಟೆ ಮುಂದುವರಿದ ಪರಿಣಾಮ ಎರಡು ರಿಕ್ಷಾಗಳ ಗಾಜುಗಳು ತೀವ್ರ ಹಾನಿಗೊಳಗಾಗಿವೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಹೆಚ್ಚುವರಿ ಪೊಲೀಸರು ಗಲಾಟೆಯಲ್ಲಿ ಭಾಗಿಯಾಗಿದ್ದ ಸುಮಾರು 10 ಮಂದಿಯನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. 

ಬಸ್‌ಗಳ ಕೊರತೆ- ವಿದ್ಯಾರ್ಥಿ,ಸಾರ್ವಜನಿಕರಿಗೆ ಸಮಸ್ಯೆ: 
ಮೆರವಣಿಗೆಯ ಹಿನ್ನೆಲೆ ಯಲ್ಲಿ ಯಾವುದೇ ಖಾಸಗಿ ಬಸ್‌ಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವುದನ್ನು ಸ್ಥಗಿತ
ಗೊಳಿಸಲಾಗಿತ್ತು. ಕೇವಲ ಕೆಲವು ಸರಕಾರಿ ಬಸ್‌ಗಳು ಮಾತ್ರ ಸಂಚಾರ ನಡೆಸಿದ್ದು, ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತಮ್ಮ ಮನೆಗಳಿಗೆ ಸೇರಿಕೊಳ್ಳಲು ಅನನುಕೂಲ ಉಂಟಾಯಿತು. 

ಎರಡು ತಾಸು ವಾಹನ ಸಂಚಾರ ಬಂದ್‌
ಶವಯಾತ್ರೆ ಆರಂಭಗೊಂಡ ಬಳಿಕ ಗಲಾಟೆ ನಡೆದುದರಿಂದ ಸುಮಾರು ಎರಡು ತಾಸು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತು. ಬೆಳಗ್ಗೆ ಎಂದಿನಂತೆ ತೆರೆದಿದ್ದ ಅಂಗಡಿಗಳು 10.30ರ ಬಳಿಕ ಬಂದ್‌ ಆದವು. ಅನಂತರ ರಾತ್ರಿಯವರೆಗೂ ತೆರೆಯಲೇ ಇಲ್ಲ. ಶವಯಾತ್ರೆ ಬಂಟ್ವಾಳ ತಲುಪುತ್ತಿದ್ದಂತೆ ವಾಹನ ಸಂಚಾರವೂ ಸ್ಥಗಿತಗೊಂಡಿತು. 12.30ರಿಂದ 3 ಗಂಟೆವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತು. ಪೊಲೀಸರು ಪೇಟೆಯಲ್ಲಿ ಜನ ಸಂಚಾರವನ್ನು ಪೂರ್ತಿ ಯಾಗಿ ನಿರ್ಬಂಧಿಸಿದ ಬಳಿಕ ವಾಹನ ಸಂಚಾರ ಯಥಾಸ್ಥಿತಿಗೆ ಮರಳಿತು.

Advertisement

Udayavani is now on Telegram. Click here to join our channel and stay updated with the latest news.

Next