Advertisement

ಡಬಲ್‌ ದಂಡ ವಿಧಿಸಲು ಪಾಲಿಕೆಯೆಷ್ಟು ಸಿದ್ಧ?

10:30 AM Jan 28, 2020 | Suhan S |

ಬೆಂಗಳೂರು: ಹಸಿ, ಒಣ ಹಾಗೂ ಪ್ಲಾಸ್ಟಿಕ್‌ ತ್ಯಾಜ ವಿಂಗಡಣೆ ಮಾಡದವರಿಗೆ ಮತ್ತು ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದುಪ್ಟಟ್ಟು ದಂಡ ವಿಧಿಸುವ ಪಾಲಿಕೆಯ ಚಿಂತನೆಗೆ ಸಾರ್ವಜನಿಕರಿಂದ ಪರ -ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಕಳೆದ ಆಗಸ್ಟ್‌ನಲ್ಲಿ “ಬಿಬಿಎಂಪಿ ಕಸ ನಿರ್ವಹಣೆ ಬೈಲಾ-2019′ ಸಿದ್ಧಪಡಿಸಿ ಅದರಲ್ಲಿ ಕಸ ವಿಲೇವಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ದಂಡ ಪ್ರಮಾಣ ನಿಗದಿಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಸರ್ಕಾರ ಸೆಪ್ಟೆಂಬರ್‌ನಲ್ಲಿ ಅನುಮೋದನೆ ನೀಡಿ ಸಾರ್ವಜನಿಕರ ಆಕ್ಷೇಪಣೆ ಪಡೆದು ಅಗತ್ಯ ತಿದ್ದುಪಡಿ ತಂದು ಜಾರಿಗೊಳಿಸುವಂತೆ ಸೂಚನೆ ನೀಡಿತ್ತು.

ಈಗ ಪಾಲಿಕೆ ದುಪಟ್ಟು ದಂಡ ವಿಧಿಸಲು ಪ್ರಸ್ತಾವನೆಗೆ ಅನುಮೋದನೆ ಪಡೆದುಕೊಳ್ಳಲು ಮುಂದಾಗಿದೆ. ಇದೇ ವೇಳೆ 100 ಕೆ.ಜಿ.ವರೆಗೆ ಉತ್ಪತ್ತಿಯಾಗುವ ಕಸವನ್ನೂ ಸ್ವತಃ ಸಂಗ್ರಹಿಸಲು ತೀರ್ಮಾನಿಸಿದೆ. ಜನ ಕಸ ವಿಂಗಡಣೆ ಮಾಡಿದರೂ ಅದನ್ನು ಮಿಶ್ರ ಮಾಡುವ ಗುತ್ತಿಗೆದಾರರ ಮೇಲೆ ಪಾಲಿಕೆ ಯಾವ ಕ್ರಮ ತೆಗೆದುಕೊಳ್ಳಲಿದೆ. ಇಲ್ಲಿಯವರೆಗೆ ಎಷ್ಟು ದಂಡ ವಿಧಿಸಿದೆ ಎನ್ನುವುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಇನ್ನು ನಗರದಲ್ಲಿ ಹಸಿ ಮತ್ತು ಒಣ ಕಸ ವಿಂಗಡಣೆ ಪ್ರಮಾಣ ಶೇ20ಕ್ಕೆ ಕುಸಿದಿದೆ. ಆದರೆ, ಹಸಿತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಶೇ.36ರಷ್ಟು ಹಸಿ ಕಸ ಸಾಗಣೆಯಾಗುತ್ತಿದೆ!

ವಾಣಿಜ್ಯ ಉದ್ಯಮ ಹೊರತುಪಡಿಸಿ ನಗರದಲ್ಲಿ ನಿತ್ಯ ಅಂದಾಜು 4,200 ಮೆಟ್ರಿಕ್‌ಟನ್‌ ಕಸ ಉತ್ಪತ್ತಿ ಯಾಗುತ್ತಿದೆ. ಆರು ಹಸಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ನಿತ್ಯ ಅಂದಾಜು 500ರಿಂದ 600 ಮೆಟ್ರಿಕ್‌ ಟನ್‌ ಹಸಿ ತ್ಯಾಜ್ಯ ಮಾತ್ರ ಸಂಸ್ಕರಣೆ ಆಗುತ್ತಿದೆ. ಈಗ ನೂರು ಕೆ.ಜಿ.ವರೆಗೆ ಕಸ ಸಂಗ್ರಹಿಸಿದರೆ, 500ರಿಂದ 700 ಮೆಟ್ರಿಕ್‌ಟನ್‌ ತ್ಯಾಜ್ಯ ಹೆಚ್ಚುವರಿಯಾಗಿ ಸಂಗ್ರಹವಾಗುವ ಸಾಧ್ಯತೆ ಇದೆ. ಆದರೆ, ಪಾಲಿಕೆ ಈ ತ್ಯಾಜ್ಯ ಎಲ್ಲಿ ಸಂಸ್ಕರಣೆ ಮಾಡುತ್ತದೆ ಎನ್ನುವ ಬಗ್ಗೆ ತಿಳಿಸಿಲ್ಲ.

ತ್ಯಾಜ್ಯ ಸಂಗ್ರಹದಿಂದ ಹಿನ್ನಡೆ: ಬಾರ್‌ ಮತ್ತು ರೆಸ್ಟೋರೆಂಟ್‌, ಮಾಲ್‌, ಪಬ್‌ಗಳು, ವಾಣಿಜ್ಯ ಉದ್ದಿಮೆ ಹಾಗೂ ಅರ್ಪಾಟ್‌ಮೆಂಟ್‌ಗಳಲ್ಲಿ 10 ಕೆ.ಜಿ. ಗಿಂತ ಹೆಚ್ಚಿನ ತ್ಯಾಜ್ಯ ಉತ್ಪಾದನೆಯಾದರೆ ಅದನ್ನು ಅವರೇ ಸಂಸ್ಕರಣೆ ಮಾಡಿಕೊಳ್ಳಬೇಕು ಎನ್ನುವ ನಿಯಮವಿತ್ತು. ಆದರೆ, ಸಗಟು ಉತ್ಪಾದಕರು ಸರ್ಮ ಪಕ ವಾಗಿ ಕಸ ಸಂಸ್ಕರಣೆ ಮಾಡದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನಿರ್ದಿಷ್ಟ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆಯೇ ಕಸ ಸಂಗ್ರ ಹಿಸಲು ಮುಂದಾಗಿದೆ. “ಈ ನಿರ್ಧಾರದಿಂದ ಹೆಚ್ಚು ಹಸಿ ತ್ಯಾಜ್ಯ ಉತ್ಪಾದನೆ ಮಾಡಿ ಸಂಸ್ಕರಣೆ ಮಾಡುತ್ತಿದ್ದವರೂ ಹಿಂದೇಟು ಹಾಕಲಿದ್ದಾರೆ. ಇದುವರೆಗೆ ತಮ್ಮ ಕಸವನ್ನು ತಾವೇ ಸಂಸ್ಕರಣೆ ಮಾಡುತ್ತಿದ್ದವರೂ ಬಿಬಿಎಂಪಿಗೇ ಕಸ ನೀಡಲಿದ್ದಾರೆ ಎಂದು ವೇಸ್ಟ್‌ ಮ್ಯಾನೇಜ್‌ಮೆಂಟ್‌ ರೌಂಡ್‌ ಟೇಬಲ್‌ ಸದಸ್ಯೆ ಸವಿತಾ ಹಿರೇಮಠ ಅಭಿಪ್ರಾಯಪಡುತ್ತಾರೆ.

Advertisement

ಕಸ ಸಂಗ್ರಹ ಅಕ್ರಮದಿಂದ ಸಕ್ರಮ: ಸಗಟು ಉತ್ಪಾದಕರಿಂದ (ಹೆಚ್ಚು ಕಸ ಉತ್ಪಾದನೆ ಮಾಡುವವರು) ಕಸ ಸಂಗ್ರಹ ಮಾಡುವುದು ಅಕ್ರಮದಿಂದ ಸಕ್ರಮ ಮಾಡಿದಂತೆ ಅಷ್ಟೇ. ಪಾಲಿಕೆಯ ವಾಹನಗಳಿಗೇ ಕಸ ನೀಡುತ್ತಿದ್ದಾರೆ. ಈಗ ಅದನ್ನು ಅಧಿಕೃತವಾಗಿ ಸಂಗ್ರಹ ಮಾಡಲಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

ಇನ್ನು ಗುತ್ತಿಗೆದಾರರು ಕಸವನ್ನು ಹಸಿತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ನೀಡದೆ ಭೂಭರ್ತಿಗೆ ಸಾಗಿಸುವುದರ ಹಿಂದೆ ಲಾಭದ ಲೆಕ್ಕಾಚಾರವೇ ಇದೆ. ಹಸಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗಿಂತ ಭೂಭರ್ತಿ ದೂರವಿರುವುದರಿಂದ ಗುತ್ತಿಗೆದಾರರಿಗೆ ಹೆಚ್ಚಿನ ಹಣ ಸಿಗಲಿದೆ. ಇದೇ ಕಾರಣಕ್ಕೆ ಗುತ್ತಿಗೆದಾರರೂ ಭೂಭರ್ತಿ ಮೇಲೆ ಹೆಚ್ಚು ಆಸಕ್ತರಾಗಿದ್ದಾರೆ ಎನ್ನಲಾಗುತ್ತಿದೆ.

ಜನರ ಬದ್ಧತೆಗೆ ತಣ್ಣೀರು ಎರಚ್ಚಿದ್ದು ಯಾರು? : ಕೆಲವೇ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕಸ ವಿಂಗಡಣೆಯ ಪ್ರಮಾಣ ಶೇ.45ರಿಂದ 50 ಇತ್ತು. ಈಗ ಅದರ ಪ್ರಮಾಣ ಶೇ.20ಕ್ಕೆ ಕುಸಿದಿದೆ. ನಗರದಲ್ಲಿ ಈಗ ಶೇ.20 ಕಸ ಮಾತ್ರ ವಿಂಗಡಣೆಯಾಗುತ್ತಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತರಾದ (ಘನತ್ಯಾಜ್ಯ ನಿರ್ವಹಣೆ) ರಂದೀಪ್‌ ತಿಳಿಸಿದ್ದಾರೆ. ನಗರದ ಜನ ಕಸ ವಿಂಗಡಣೆ ಮಾಡಿಕೊಂಡು ಬಂದು ಪಾಲಿಕೆಯ ವಾಹನಗಳಿಗೆ ನೀಡಿದ ನಂತರ, ಭೂಭರ್ತಿಗೆ ಎಲ್ಲವನ್ನೂ ಬೆರೆಸಿ ಕಸ ಸಾಗಣೆ ಮಾಡುವ ಮೂಲಕ ಜನರ ಬದ್ಧತೆಗೆ ಪಾಲಿಕೆ ತಣ್ಣೀರು ಎರಚಿದೆ. ಇದೇ ಕಾರಣಕ್ಕೆ ನಗರದಲ್ಲಿ ಕಸ ವಿಂಗಡಣೆ ಪ್ರಮಾಣ ಕುಸಿತ ಕಂಡಿದೆ ಎಂಬ ಆರೋಪವಿದೆ.

ಕಸ ಸಂಗ್ರಹ ಲೋಪ ಸರಿಪಡಿಸಿಕೆ ಒತ್ತು :  ನಗರದಲ್ಲಿ ನಾಲ್ಕು ಸಾವಿರ ಕಸ ಸಂಗ್ರಹ ಆಟೋಗಳಿವೆ. ಆದರೆ, ಹಾಜರಾತಿ ಗಮನಿಸಿದಾಗ ಪ್ರತಿ ದಿನ ಒಂದು ಸಾವಿರ ವಾಹನಗಳು ಕಡಿಮೆ ಬರುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಎಷ್ಟು ವಾಹನಗಳಿವೆಯೋ ಅಷ್ಟಕ್ಕೆ ಮಾತ್ರ ಹಣ ನೀಡಲು ಸೂಚನೆ ನೀಡಲಾಗಿದೆ ಎಂದು ರಂದೀಪ್‌ ತಿಳಿಸಿದ್ದಾರೆ. ಕೆಲವು ವಾರ್ಡ್‌ಗಳಲ್ಲಿ ವಾಣಿಜ್ಯ ಉದ್ದಿಮೆಗಳಿಂದ ಕಸ ಸಂಗ್ರಹ ಮಾಡುತ್ತಿದ್ದು, ಮನೆಗಳಿಗೆ ಒತ್ತು ನೀಡಲಾಗುತ್ತಿಲ್ಲ. ಇನ್ನು ಕೆಲವೆಡೆ ವಾಣಿಜ್ಯ ಉದ್ದಿಮೆಗಳಿಂದ ಮಿಶ್ರ ಕಸ ಬರುತ್ತಿದೆ ಈ ಲೋಪಗಳನ್ನು ಸರಿಪಡಿಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ದೊಡ್ಡ  ವಾರ್ಡ್‌ಗೆ ಹೆಚ್ಚುವರಿ ಮಾರ್ಷಲ್‌ಗ‌ಳು :  ಈಗ ವಾರ್ಡ್‌ಗೊಬ್ಬ ಮಾರ್ಷಲ್‌ಗ‌ಳಿದ್ದು, ಕೆಲ ವಾರ್ಡ್‌ಗಳ ವಿಸ್ತೀರ್ಣ ಹೆಚ್ಚಾಗಿರುವುದರಿಂದ ಕನಿಷ್ಠ ಮೂವರು ಮಾರ್ಷಲ್‌ಗ‌ಳನ್ನು ನೀಡುವಂತೆ ಪಾಲಿಕೆ ಸದಸ್ಯರು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದೊಡ್ಡ ವಾರ್ಡ್‌ಗಳನ್ನು ಗುರುತಿಸಿ ಹೆಚ್ಚುವರಿಯಾಗಿ ಮಾರ್ಷಲ್‌ಗ‌ಳ ನೇಮಕ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಂದೀಪ್‌ ತಿಳಿಸಿದರು.

ದಂಡಕ್ಕೆ ರಸೀದಿ ನೀಡುವುದು ಕಡ್ಡಾಯ :   ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ಹಾಗೂ ನಿಷೇಧಿತ ಪ್ಲಾಸ್ಟಿಕ್‌ ಬಳಸುವವರಿಗೆ ಫೆಬ್ರವರಿಯಿಂದ ಕಡ್ಡಾಯವಾಗಿ ಎಲೆಕ್ಟ್ರಾನಿಕ್‌ ಯಂತ್ರದ ಮೂಲಕವೇ ದಂಡ ವಿಧಿಸಿ, ರಸೀದಿ ನೀಡುವುದಾಗಿ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್‌ ತಿಳಿಸಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರತಿ ವಾರ್ಡ್‌ನ ಹಿರಿಯ ಆರೋಗ್ಯಾಧಿಕಾರಿಗಳಿಗೆ ಯಂತ್ರ ವಿತರಿಸಲಾಗಿದೆ. ಕಿರಿಯ ಅಧಿಕಾರಿಗಳಿಗೆ ಹಾಗೂ ಮಾರ್ಷಲ್‌ಗ‌ಳಿಗೆ ಒಟ್ಟು 400 ಯಂತ್ರಗಳ ಅವಶ್ಯಕತೆ ಇದೆ. ಅದರಲ್ಲಿ 200 ಯಂತ್ರಗಳನ್ನು ಎಚ್‌ಡಿಎಫ್ಸಿ ಬ್ಯಾಂಕ್‌ ಉಚಿತವಾಗಿ ನೀಡಲಿದೆ. ಅದಕ್ಕೆ ಪ್ರತಿಯಾಗಿ ಬಿಬಿಎಂಪಿ ಎಚ್‌ಡಿಎಫ್ಸಿ ಬ್ಯಾಂಕ್‌ನಲ್ಲಿ ಐದು ಕೋಟಿ ರೂ. ಠೇವಣಿ ಇರಿಸುವುದಕ್ಕೆ ಪಾಲಿಕೆ ಒಪ್ಪಂದ ಮಾಡಿಕೊಂಡಿದೆ ಎಂದು ಮಾಹಿತಿ ನೀಡಿದರು. ಎಲೆಕ್ಟ್ರಾನಿಕ್‌ ಮುದ್ರಿತ ದಂಡ ರಸೀದಿ ನೀಡುವುದರಿಂದ ದಂಡ ಮಾಹಿತಿ ಸುಲಭವಾಗಿ ಸಿಗಲಿದೆ. ನಿಗದಿತ ಪ್ರಮಾಣದಲ್ಲಿ ದಂಡ ವಿಧಿಸುವುದಕ್ಕೆ ಸಾಧ್ಯವಾಗಲಿದೆ. ಆನ್‌ಲೈನ್‌ ಮೂಲಕ ಸಹ ದಂಡ ಸಂಗ್ರಹಿಸಬಹುದು. ನೇರವಾಗಿ ಬ್ಯಾಂಕ್‌ ಖಾತೆಗೆ ದಂಡದ ಮೊತ್ತ ಜಮಾ ಆಗಲಿದೆ ಎಂದು ವಿವರಿಸಿದರು.

ಶೇ.5 ಪ್ರೋತ್ಸಾಹ ಭತ್ಯೆ: ಆರೋಗ್ಯಾಧಿಕಾರಿಗಳು ಹಾಗೂ ಮಾರ್ಷಲ್‌ ಗಳು ದಂಡ ವಿಧಿಸುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ದಂಡ ಪ್ರಮಾಣದಲ್ಲಿ ಶೇ.5 ರಷ್ಟು ಪ್ರೋತ್ಸಾಹ ಭತ್ಯೆ ನೀಡುವುದಕ್ಕೆ ತೀರ್ಮಾನಿಸಲಾಗಿದೆ. ಈಗಾಗಲೇ ಮಾರ್ಷಲ್‌ ಗಳಿಗೆ ನೀಡಲಾಗುತ್ತಿದೆ. ಆರೋಗ್ಯಾಧಿಕಾರಿಗಳಿಗೂ ನೀಡಲಾಗುವುದು ಎಂದು ಹೇಳಿದರು.

 

-ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next