Advertisement

ಮಳೆಗಾಲಕ್ಕೆ ಬಿಬಿಎಂಪಿ ಸರ್ವ ಸನ್ನದ್ಧ

01:19 AM Aug 12, 2019 | Lakshmi GovindaRaj |

ಬೆಂಗಳೂರು: ನಗರದಲ್ಲಿ ಮಳೆಯಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ತಪ್ಪಿಸುವ ಉದ್ದೇಶದಿಂದ ಮಳೆಗಾಲ ಮಗಿಯವವರೆಗೆ ಬಿಬಿಎಂಪಿಯ ಅಧಿಕಾರಿಗಳಿಗೆ ರಜೆ ನೀಡದಿರಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಹೇಳಿದರು.  ಭಾನುವಾರ ಮಲ್ಲೇಶ್ವರದ ಐಪಿಪಿ ತರಬೇತಿ ಕೇಂದ್ರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಯಿಂದ ಆಗಬಹುದಾದ ಅನಾಹುತಗಳನ್ನು ತಡೆಯುವ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

“ಎರಡನೇ ಶನಿವಾರ ಮತ್ತು ಭಾನುವಾರವೂ ಅಧಿಕಾರಿಗಳು ಕೆಲಸ ಮಾಡಲಿದ್ದಾರೆ. ಬಿಬಿಎಂಪಿ ಮಳೆಯಿಂದ ಉಂಟಾಗಬಹುದಾದ ಅನಾಹುತಗಳನ್ನು ತಪ್ಪಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಎಂಟು ವಲಯದ ಎಂಜಿನಿಯರ್‌ ಮತ್ತು ಸಹಾಯಕ ಎಂಜಿಯರ್‌ಗಳ ರಜೆ ರದ್ದು ಮಾಡುವುದರ ಜತೆಗೆ ರಾಜೆ ನೀಡುವ ಅವಕಾಶವನ್ನು ರದ್ದು ಮಾಡಲಾಗಿದೆ. ಯಾವುದೇ ಅಧಿಕಾರಿಗಳು ತುರ್ತು ರಜೆ ತೆಗೆದುಕೊಳ್ಳಬೇಕಾದರೂ ನನ್ನ ಗಮನಕ್ಕೆ ತರಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆದೇಶದ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ 842 ಕಿ.ಮೀ ಉದ್ದದ ರಾಜಕಾಲುವೆ ಪ್ರದೇಶವಿದೆ. ಈಗಾಗಲೇ 184ಕಿ.ಮೀ ಉದ್ದದ ರಾಜಕಾಲುವೆಯನ್ನು ಸಂರ್ಪೂಣವಾಗಿ ಸ್ವಚ್ಛ ಮಾಡಲಾಗಿದೆ. ಮೇ.1ರಿಂದ 440 ಕಿ.ಮೀ ಕಾಂಕ್ರೀಟ್‌ ಒಳಚರಂಡಿಗಳನ್ನು ನಿರ್ಮಾಣ ಮಾಡಿದ್ದು, ಇದೇ ಮೊದಲ ಬಾರಿಗೆ ರಾಜಕಾಲುವೆ ನಿರ್ವಹಣೆಯನ್ನು ಖಾಸಗಿ ಕಂಪನಿಯೊಂದಕ್ಕೆ ವಾರ್ಷಿಕ ನಿರ್ವಹಣೆಗೆ ನೀಡಲಾಗಿದೆ. ಇದರಲ್ಲಿ 880 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದು, 15 ಟ್ರಕ್ಸ್‌ ಮತ್ತು 8 ಜೆಸಿಬಿಗಳನ್ನು ಸ್ವಚ್ಛತೆ ಕಾರ್ಯಕ್ಕೆ ನೀಡಲಾಗಿದೆ.

182 ತಗ್ಗು ಪ್ರದೇಶಗಳ ಗುರುತು: ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಉಪಗ್ರಹ ಆಧಾರಿತ ಮಾಹಿತಿ, ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸ ಇಲಾಖೆಯ ಮಾಹಿತಿಯನ್ನು ಕಲೆಹಾಕಿ,ಅನಾಹುತ ಸಂಭವಿಸಬಹುದಾದ 182 ತಗ್ಗು ಪ್ರದೇಶಗಳನ್ನು ಗುರುತಿಸಲಾಗಿತ್ತು ಮತ್ತು ಈ ಪ್ರದೇಶದಲ್ಲಿ ಉಂಟಾಗಬಹುದಾದ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಇದೇ ಮೊದಲ ಬಾರಿಗೆ 28 ಕಡೆಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಾಯದೊಂದಿಗೆ ರಾಜಕಾಲುವೆಗಳಲ್ಲಿ ಸೆನ್ಸಾರ್‌ ಅಳವಡಿಸಲಾಗಿದೆ. ಇದು ನಾಲ್ಕು ಹಂತದಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರವಾಹದ ಮುನ್ಸೂಚನೆ ನೀಡುತ್ತದೆ. ಇದರ ಮೂಲಕ ಅಧಿಕಾರಿಗಳಿಗೆ ಅಪಾಯದ ಮಾಹಿತಿ ಸಿಗಲಿದೆ ಎಂದು ವಿವರಿಸಿದರು.

ರಸ್ತೆಗಳಲ್ಲಿ ಸ್ವಚ್ಛತೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಮುಖ್ಯ ರಸ್ತೆಗಳು ಮತ್ತು ವಾರ್ಡ್‌ ಮಟ್ಟದ ರಸ್ತೆಗಳು ಎಂದು ಎರಡು ರೀತಿಯಲ್ಲಿ ವಿಂಗಡಿಸಲಾಗಿದೆ. ನಗರದಲ್ಲಿ 1,200 ಕಿ.ಮೀ ಪ್ರಮುಖ ರಸ್ತೆ ಇದ್ದು, ಇದರ ನಿರ್ವಹಣೆಗೆ ಮೂರು ತಿಂಗಳ ಹಿಂದೆಯೇ 26 ತಂಡಗಳನ್ನು ರಚನೆ ಮಾಡಲಾಗಿದೆ. ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ನಗರದ ಸಣ್ಣ ಮತ್ತು ಅತಿ ಸಣ್ಣ ಚರಂಡಿಗಳಲ್ಲಿನ ಹೂಳೆತ್ತುವ ಹಾಗೂ ಪ್ರತಿ 50 ಕಿ.ಮೀ ಸ್ವಚ್ಛತೆಯ ಜವಾಬ್ದಾರಿಯನ್ನು ಈ ತಂಡಕ್ಕೆ ನೀಡಲಾಗಿದೆ. ಸ್ವಚ್ಛತೆಗೆ ಬೇಕಾದ ಸಲಕರಣೆ ಮತ್ತು ಸ್ವೀಪಿಂಗ್‌ಯಂತ್ರಗಳನ್ನು ನೀಡಲಾಗಿದೆ. ಇದೇ ರೀತಿ ಮಳೆಗಾಲದಲ್ಲಿ ಬಿಬಿಎಂಪಿ ವ್ಯಾಪ್ತಿಯ ವಾರ್ಡ್‌ ಮಟ್ಟದ 12 ಸಾವಿರ ಕಿ.ಮೀನ ಉದ್ದದ ರಸ್ತೆಗಳ ನಿರ್ವಹಣೆ ಮಾಡಲು 63ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡಗಳು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕಂಟ್ರೋಲ್‌ ರೂಂ.ನಲ್ಲಿ ಕಾರ್ಯನಿರ್ವಹಿಸುತ್ತಿವೆ. ರಸ್ತೆಗಳಲ್ಲಿ ಮಳೆ ನೀರು ನಿಂತರೆ ಅದನ್ನು ತೆಗೆಯುವುದಕ್ಕೆ ಈ ತಂಡಗಳು ಕಾರ್ಯಾಚರಣೆ ಮಾಡಲಿವೆ ಎಂದರು.

Advertisement

ರಸ್ತೆ ಗುಂಡಿ ಮುಚ್ಚಲು ಆದ್ಯತೆ: ಬಿಬಿಎಂಪಿ ವ್ಯಾಪ್ತಿಯ ಎಲ್ಲ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವುದಕ್ಕೆ ಟೆಂಡರ್‌ ಕರೆಯಲಾಗಿದ್ದು, ವರ್ಕ್‌ಆಡರ್‌ ನೀಡಲಾಗಿದೆ. ಎಲ್ಲ ರಸ್ತೆಗಳಿಗೂ ಗುತ್ತಿಗೆದಾರರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ನಗರದ ಒಳವ್ಯಾಪ್ತಿಯ ವಾರ್ಡ್‌ಗಳಲ್ಲಿನ ರಸ್ತೆ ಗುಂಡಿಬಿದ್ದರೆ ಅದರ ನಿರ್ವಹಣೆಗೆ 20 ಲಕ್ಷರೂ. ಮತ್ತು ಹೊರ ವಲಯದ ನಿರ್ವಹಣೆಗೆ 30 ಲಕ್ಷರೂ. ನೀಡಲಾಗಿದೆ. ಒಟ್ಟು 46 ಕೋಟಿ ರೂ. ಗುಂಡಿ ಮುಚ್ಚುವುದಕ್ಕೆ ಮೀಸಲಿರಿಸಿದ್ದು, ರಸ್ತೆ ಗುಂಡಿಗಳು ಬೀಳದಂತೆ ಎಚ್ಚರಿಕೆ ವಹಿಸುವುದಕ್ಕೆ ಸೂಚನೆ ನೀಡಲಾಗಿದೆ. ಒಂದೊಮ್ಮೆ ನಿರ್ವಹಣೆ ಸರಿಯಾಗಿ ಮಾಡದೆ ಇದ್ದಲ್ಲಿ ಗುತ್ತಿಗೆದಾರರನ್ನೇ ಹೊಣೆ ಮಾಡಲಾಗುವುದು. ಮರಗಳು ಬಿದ್ದು ಅಡಚಣೆಯಾದರೆ ಅದನ್ನು ತಪ್ಪಿಸಲು 21 ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು.

ತ್ಯಾಜ್ಯ ವಿಲೇವಾರಿಗೆ ಯಾವುದೇ ಸಮಸ್ಯೆ ಇಲ್ಲ: ನಗರದಲ್ಲಿನ ತ್ಯಾಜ್ಯ ವಿಲೇವಾರಿಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಬೆಳ್ಳಳ್ಳಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಇನ್ನು ಮೂರು ತಿಂಗಳು ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಅವಕಾಶವಿದ್ದು, ಯಾವುದೇ ಸಮಸ್ಯೆ ಆಗುವುದಿಲ್ಲ. ತ್ಯಾಜ್ಯ ವಿಂಗಡಣೆ ಪ್ರಮಾಣವೂ ಏರಿಕೆಯಾಗಿದೆ. ಈಗ ಹಸಿ ತ್ಯಾಜ್ಯ ಘಟಕಕ್ಕೆ ಹೋಗುವ ಪ್ರಮಾಣ ಹೆಚ್ಚಾಗಿದ್ದು, 800 ಟನ್‌ ಹಸಿ ತ್ಯಾಜ್ಯವನ್ನು ಘಟಕಗಳಿಗೆ ಕಳುಹಿಸಲಾಗುತ್ತಿದೆ ಎಂದರು.

ಪ್ರಾಣಿ ತ್ಯಾಜ್ಯ ವಿಲೇವಾರಿಗೆ ವಾಹನ: ಬಕ್ರೀದ್‌ ಹಿನ್ನೆಲೆಯಲ್ಲಿ ಪ್ರಾಣಿ ತ್ಯಾಜ್ಯವನ್ನು ವಿಲೇವಾರಿ ಮಾಡುವುದಕ್ಕೆ ಪ್ರತ್ಯೇಕ ವಾಹನಗಳನ್ನು ನಿಯೋಜನೆ ಮಾಡಲಾಗಿದೆ. ಪ್ರಾಣಿ ತ್ಯಾಜ್ಯವನ್ನು ವಿಲೇವಾರಿ ಮಾಡುವುದಕ್ಕೆ ನಿರ್ದಿಷ್ಟ ಪ್ರದೇಶವನ್ನು ಗುರುತಿಸಲಾಗಿದೆ. ಇಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು. ಹಾಗೇ ಮಳೆಗಾಲದಲ್ಲಿ ಉಂಟಾಗಬಹುದಾದ ಅಪಾಯಗಳನ್ನು ತಪ್ಪಿಸಲು ಬಿಬಿಎಂಪಿಯ ವಿಶೇಷ ಆಯುಕ್ತರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಮಂಜುನಾಥ ಪ್ರಸಾದ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next