Advertisement

BBMP ಇನ್ನು 5 ಪಾಲಿಕೆ; ಗ್ರೇಟರ್‌ ಬೆಂಗಳೂರು ಮಸೂದೆಗೆ ಸಂಪುಟ ಸಭೆ ಅಸ್ತು

11:54 PM Jul 22, 2024 | Team Udayavani |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತವನ್ನು 5 ಭಾಗಗಳಾಗಿ ವಿಭಜಿಸಿ, ಪ್ರತೀ ಪಾಲಿಕೆಯ ಮೇಯರ್‌ ಅಧಿಕಾರಾವಧಿಯನ್ನು 5 ವರ್ಷಗಳಿಗೆ ಹೆಚ್ಚಿಸುವ ಅವಕಾಶವುಳ್ಳ ಗ್ರೇಟರ್‌ ಬೆಂಗಳೂರು ಮಸೂದೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು, ಮಂಗಳವಾರ ಅಧಿವೇಶನದಲ್ಲಿ ಮಂಡಿಸಲು ಸರಕಾರ ತಯಾರಿ ನಡೆಸಿದೆ.

Advertisement

ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಕೂಡ ಅರ್ಜಿ ವಿಚಾರಣೆಗೆ ಬರಲಿದ್ದು, ಅಷ್ಟರಲ್ಲಾಗಲೇ ಸೋಮವಾರ ರಾತ್ರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವೊಂದನ್ನು ರಾಜ್ಯ ಸರಕಾರ ಕೈಗೊಂ ಡಿದೆ. ಅಧಿವೇಶನದಲ್ಲಿ ಈ ಮಸೂದೆಗೆ ಅಂಗೀ ಕಾರ ಪಡೆದ ಬಳಿಕ ಅದನ್ನೇ ಪ್ರಮಾಣ ಪತ್ರವಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲು ನಿರ್ಧರಿಸಲಾಗಿದೆ.

ಅಧಿಕಾರ ವಿಕೇಂದ್ರೀಕರಣದ ಸಲುವಾಗಿ ಬಿಬಿಎಂಪಿಯನ್ನು 10ರ ವರೆಗೆ ಎಷ್ಟು ಭಾಗಗಳಾಗಿ ಬೇಕಿದ್ದರೂ ವಿಂಗಡಿಸುವ ಕುರಿತು ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್‌. ಪಾಟೀಲ್‌ ನೇತೃತ್ವದ ಸಮಿತಿ ಶಿಫಾರಸು ಮಾಡಿತ್ತು. ಈ ಬಗ್ಗೆ ನಿರ್ಣಯ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ಕೊಟ್ಟಿದೆ. ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಮೂಲಸೌಕರ್ಯ ಒದಗಿಸಲು ಈಗಿರುವ ಒಂದೇ ಪಾಲಿಕೆಯ ಆಡಳಿತದಿಂದ ಕಷ್ಟ. ಆಡಳಿತ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಇದನ್ನು ವಿಂಗಡಣೆ ಮಾಡಲೇಬೇಕು ಎಂಬ ಅಭಿಪ್ರಾಯಗಳು ಕೇಳಿಬಂದವು. ಹೀಗಾಗಿ ಬಹುತೇಕ 5 ಭಾಗವಾಗಿ ಪಾಲಿಕೆಯನ್ನು ವಿಂಗಡಿಸುವ ಕುರಿತು ಸಲಹೆಗಳು ವ್ಯಕ್ತವಾದವು. ಅಧಿವೇಶನ ಮುಗಿಯುವುದರಲ್ಲೇ ಮಸೂದೆ ಮಂಡಿಸಿ, ಅಂಗೀಕಾರ ಪಡೆದುಕೊಳ್ಳಲು ಸಹಮತ ವ್ಯಕ್ತವಾಗಿದೆ.

NEET: ತಮಿಳುನಾಡು ಮಾದರಿ ಅನುಸರಿಸಲು ರಾಜ್ಯ ಸಚಿವ ಸಂಪುಟ ನಿರ್ಧಾರ
ಕೇಂದ್ರ ಸರಕಾರದ ವಿರುದ್ಧ ಮತ್ತೂಂದು ಸುತ್ತಿನ ಸಮರಕ್ಕೆ ಸಜ್ಜಾದಂತಿರುವ ರಾಜ್ಯ ಸರಕಾರವು, “ಒಂದು ದೇಶ ಒಂದು ಚುನಾವಣೆ’, ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಹಾಗೂ ನೀಟ್‌ ವಿರುದ್ಧ ನಿರ್ಣಯಗಳನ್ನು ಮಂಡಿಸಲು ಮುಂದಾಗಿದೆ. ಸಚಿವ ಸಂಪುಟ ಸಭೆಯ ವಿಷಯಪಟ್ಟಿಯಲ್ಲಿ ಈ ಬಗ್ಗೆ ಪ್ರಸ್ತಾವವಿಲ್ಲದಿದ್ದರೂ ನೀಟ್‌ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ್‌ ಪಾಟೀಲ್‌ ಅವರು ಅನೌಪಚಾರಿಕವಾಗಿ ವಿಷಯ ಪ್ರಸ್ತಾವಿಸಿದ್ದಾರೆ. ಸುಮಾರು 15 ನಿಮಿಗಳ ಕಾಲ ನೀಟ್‌ ಗೊಂದಲಗಳ ಬಗ್ಗೆ ಸಚಿವ ಸಂಪುಟ ಸಭೆಗೆ ಅವರು ವಿವರಣೆ ನೀಡಿದ್ದಾರೆ.

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣಕ್ಕಾಗಿ ಕೇಂದ್ರ ಸರಕಾರದ ಅಧೀನ ಸಂಸ್ಥೆ ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಭಾರೀ ನಷ್ಟ ಉಂಟಾಗುತ್ತಿದ್ದು, ಮೆರಿಟ್‌ ಸೀಟ್‌ ಸಿಗದೆ ಅವಕಾಶ ವಂಚಿತರಾಗುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ದಕ್ಷಿಣ ಭಾರತದ ರಾಜ್ಯಗಳ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದ್ದು, ಉತ್ತರ ಭಾರತೀಯರೇ ಮೇಲುಗೈ ಸಾಧಿಸುತ್ತಿದ್ದಾರೆ. ಇದರಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು ಅಕ್ರಮಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ನೀಟ್‌ ವಿರೋಧಿಸಿ ಈಗಾಗಲೇ ತಮಿಳುನಾಡು ನಿರ್ಣಯ ಕೈಗೊಂಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮತ್ತೆ ಸಿಇಟಿ ಮಾದರಿಯಲ್ಲೇ ಪರೀಕ್ಷೆ ನಡೆಸುವ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡುವ ಬಗ್ಗೆ ಸಲಹೆ ನೀಡಿದ್ದಾರೆ. ಇದಕ್ಕೆ ಬಹುತೇಕ ಸಚಿವರು ಸಹಮತ ವ್ಯಕ್ತಪಡಿಸಿದ್ದು, ಮಂಗಳವಾರ ಅಥವಾ ಬುಧವಾರ ಈ ಕುರಿತ ನಿರ್ಣಯವನ್ನು ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ.

Advertisement

ಇದರ ಜತೆಗೆ ಒಂದು ದೇಶ ಒಂದು ಚುನಾವಣೆಯ ನೆಪದಲ್ಲಿ ದೇಶದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಮಟ್ಟ ಹಾಕುವ ಹುನ್ನಾರ ಅಡಗಿದೆ. ಇದು ಪ್ರಜಾಪ್ರಭುತ್ವಕ್ಕೂ ವಿರುದ್ಧವಾಗಿದ್ದು ಸರ್ವಾಧಿಕಾರ ಧೋರಣೆ ಎಂಬುದನ್ನು ಸಾರ್ವಜನಿಕ ಚರ್ಚೆಗೆ ಇಡಬೇಕು ಎಂಬ ವಾದವು ಸಭೆಯಲ್ಲಿ ವ್ಯಕ್ತವಾಗಿದೆ.

ವೈದ್ಯರ ಮೇಲೆ ಹಲ್ಲೆ ಮಾಡಿದರೆ 3 ವರ್ಷ ಜೈಲು, 50 ಸಾವಿರ ರೂ. ದಂಡ
ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಮಾನ್ಯತೆ ಪಡೆದ ಯಾವುದೇ ಖಾಸಗಿ ಆಸ್ಪತ್ರೆಗಳ ವೈದ್ಯರು, ಶುಶ್ರೂಷಕರು, ವೈದ್ಯಕೀಯ ವಿದ್ಯಾರ್ಥಿಗಳು, ನರ್ಸಿಂಗ್‌ ವಿದ್ಯಾರ್ಥಿಗಳು, ಅರೆ ವೈದ್ಯಕೀಯ ಸಿಬಂದಿ ಮೇಲಿನ ಹಲ್ಲೆ, ದೌರ್ಜನ್ಯ ಪ್ರಕರಣಗಳಲ್ಲಿ ಕ್ರಮ ಜರುಗಿಸಲು ಅನುಕೂಲವಾಗುವಂತೆ ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ-2024ಕ್ಕೆ ಅನುಮೋದನೆ ಕೊಟ್ಟಿದೆ. ಕರ್ನಾಟಕ ವೈದ್ಯೋಪಚಾರ ಸಿಬಂದಿ ಮೇಲೆ ಹಿಂಸಾಚಾರವನ್ನು ಮತ್ತು ವೈದ್ಯೋಪಚಾರ ಸಂಸ್ಥೆಗಳ ಆಸ್ತಿಗೆ ಹಾನಿ ಮಾಡುವುದನ್ನು ನಿಷೇಧಿಸಿದೆ. ವೈದ್ಯಕೀಯ ಸೇವೆ ನೀಡುವ ಯಾವುದೇ ಸಂಸ್ಥೆಯ ಮೇಲೆ ದಾಳಿ ನಡೆಸಿ, ಅಲ್ಲಿನ ವಸ್ತುಗಳನ್ನು ಹಾನಿಗೊಳಪಡಿಸಿದರೂ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅಪರಾಧ ಸಾಬೀತಾದರೆ ಅಂತಹವರಿಗೆ 3 ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹವಾಸ ಶಿಕ್ಷೆ ಹಾಗೂ 50 ಸಾವಿರ ರೂ.ವರೆಗೆ ವಿಸ್ತರಿಸಬಹುದಾದ ದಂಡವನ್ನು ವಿಧಿಸಬಹುದಾಗಿದೆ. ಜತೆಗೆ ದಾಳಿಕೋರನು ಹಾನಿಗೊಳಪಡಿಸಿದ ವೈದ್ಯಕೀಯ ಉಪ ಕರಣದ ಮೂಲಬೆಲೆಯ ಎರಡರಷ್ಟು ಹಣವನ್ನು ಪರಿಹಾರದ ರೂಪದಲ್ಲಿ ವಸೂಲಿ ಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next