Advertisement

“ಬಜಾರ್‌’ಹೀರೋನಾ “ಬಂಪರ್‌’ಕನಸು

10:00 AM Aug 28, 2019 | Lakshmi GovindaRaj |

ಸುನಿ ನಿರ್ದೇಶನದ “ಬಜಾರ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಧನ್ವೀರ್‌, ಹೊಸ ಚಿತ್ರ ಮಾಡುತ್ತಿರುವುದಾಗಿ ಈ ಹಿಂದೆ ಘೋಷಣೆ ಮಾಡಿದ್ದು ಗೊತ್ತೇ ಇದೆ. ಆ ಚಿತ್ರವನ್ನು “ಭರಾಟೆ’ ನಿರ್ಮಾಪಕ ಸುಪ್ರೀತ್‌ ಅವರು ನಿರ್ಮಾಣ ಮಾಡುತ್ತಾರೆ ಅನ್ನೋದು ಗೊತ್ತಿತ್ತು. ಆದರೆ, ಆ ಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗಿರಲಿಲ್ಲ. ಈಗ ಧನ್ವೀರ್‌ ಅಭಿನಯದ ಎರಡನೇ ಚಿತ್ರಕ್ಕೆ ನಾಮಕರಣ ಮಾಡಲಾಗಿದೆ.

Advertisement

“ಬಂಪರ್‌’ ಎಂದು ಆ ಚಿತ್ರಕ್ಕೆ ಹೆಸರಿಡಲಾಗಿದೆ. ಆದರೆ, ಚಿತ್ರದ ನಾಯಕಿ ಮತ್ತು ನಿರ್ದೇಶಕರ ಆಯ್ಕೆ ಇನ್ನೂ ಆಗಿಲ್ಲ. ಸೆಪ್ಟೆಂಬರ್‌ 8 ರಂದು ಧನ್ವೀರ್‌ ಬರ್ತ್‌ಡೇ. ಅಂದು ನಿರ್ದೇಶಕರು ಯಾರು ಎಂಬುದು ಪಕ್ಕಾ ಆಗಲಿದೆ. ಅಂದಹಾಗೆ, “ಬಂಪರ್‌’ ಚಿತ್ರಕ್ಕೆ “ಬಹದ್ದೂರ್‌’ ಚೇತನ್‌ಕುಮಾರ್‌ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಹಾಗು ಸಾಹಿತ್ಯದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಆ ಕುರಿತು ಹೇಳುವ ಚೇತನ್‌, “ಸುನಿ ನಿರ್ದೇಶನದ “ಬಜಾರ್‌’ ಚಿತ್ರದ ಚಿತ್ರೀಕರಣ ಸಮಯದಲ್ಲೇ, ಧನ್ವೀರ್‌ ಅವರು, ನನ್ನ ಬಳಿ ಬಂದು ಒಳ್ಳೆಯ ಕಥೆ ಇದ್ದರೆ ಹೇಳಿ, ಸಿನಿಮಾ ಮಾಡೋಣ ಅಂತ ಹೇಳಿದ್ದರು. ಆಗ ನಾನು ಒನ್‌ಲೈನ್‌ ಸ್ಟೋರಿ ಹೇಳಿದ್ದೆ. ಅದು ಇಷ್ಟವಾಗಿದ್ದರಿಂದ ನೀವೇ ಅದಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಮಾಡಿಕೊಡಿ ಅಂದಿದ್ದರು. ಸುಪ್ರೀತ್‌ “ಭರಾಟೆ’ ನಿರ್ಮಾಪಕರು.

ಆ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. ಹಾಗಾಗಿ, ನಾನೇ ಬರವಣಿಗೆಯಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ವಿವರ ಕೊಡುವ ಚೇತನ್‌, ಸದ್ಯಕ್ಕೆ “ಭರಾಟೆ’ ಬಿಡುಗಡೆ ತಯಾರಿಯಲ್ಲಿದ್ದಾರೆ. ಅಕ್ಟೋಬರ್‌ನಲ್ಲಿ “ಭರಾಟೆ’ ತೆರೆಗೆ ಬರಲಿದ್ದು, ಅದಾದ ಬಳಿಕ ಪುನೀತ್‌ ರಾಜಕುಮಾರ್‌ ಅವರಿಗೆ “ಜೇಮ್ಸ್‌’ ಚಿತ್ರದ ಕೆಲಸಕ್ಕೆ ಕೈ ಹಾಕುವುದಾಗಿ’ ಹೇಳುತ್ತಾರೆ ಅವರು.

ಭರಾಟೆ ಮುಂದಕ್ಕೆ: ಶ್ರೀಮುರಳಿ ನಾಯಕರಾಗಿರುವ “ಭರಾಟೆ’ ಚಿತ್ರ ಸೆಪ್ಟೆಂಬರ್‌ 27ಕ್ಕೆ ತೆರೆಗೆ ಬರಲು ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಈಗ ತನ್ನ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದು, ಅಕ್ಟೋಬರ್‌ ಎರಡನೇ ವಾರ ತೆರೆಕಾಣುವ ಸಾಧ್ಯತೆ ಇದೆ.

Advertisement

ಅದಕ್ಕೆ ಕಾರಣ ಸೆ. 27 ರಂದು ಕನ್ನಡದ ಎರಡು ಬಹುನಿರೀಕ್ಷಿತ ಚಿತ್ರಗಳಾದ “ಕಿಸ್‌’ ಹಾಗೂ “ಗೀತಾ’ ತೆರೆಕಾಣುತ್ತಿರುವುದು ಒಂದೆಡೆಯಾದರೆ ಅಕ್ಟೋಬರ್‌ 02 ರಂದು ಮೆಗಾಸ್ಟಾರ್‌ ಚಿರಂಜೀವಿಯವರ “ಸೈರಾ ನರಸಿಂಹ ರೆಡ್ಡಿ’ ತೆರೆಕಾಣುತ್ತಿದೆ. ಎಲ್ಲಾ ಚಿತ್ರಗಳು ಒಟ್ಟೊಟ್ಟಿಗೆ ಬಂದರೆ ಥಿಯೇಟರ್‌ ಸಮಸ್ಯೆ ಎದುರಾಗುತ್ತದೆ ಎಂಬ ಕಾರಣಕ್ಕೆ “ಭರಾಟೆ’ ತನ್ನ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆ. ಅಕ್ಟೋಬರ್‌ನಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next