Advertisement

Assembly Session ಮೊದಲ ದಿನ ವಾಲ್ಮೀಕಿ ಕದನ: ಅಧಿವೇಶನಾರಂಭದಲ್ಲೇ ಬಿಜೆಪಿ ಚಾಟಿ

01:01 AM Jul 16, 2024 | Team Udayavani |

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣವು ವಿಧಾನಮಂಡಲದ ಉಭಯ ಸದನಗಳಲ್ಲಿ ಜಟಾಪಟಿಗೆ ಕಾರಣವಾಗಿದೆ. ಮೊದಲ ದಿನವೇ ಈ ವಿಷಯದಲ್ಲಿ ಸರಕಾರದ ವಿರುದ್ಧ ವಿಪಕ್ಷಗಳು ಚಾಟಿ ಬೀಸಿವೆ.

Advertisement

ಇದೇ ವಿಷಯವಾಗಿ ಶಾಸಕರ ಭವನದಿಂದ ವಿಧಾನಸೌಧಕ್ಕೆ ಪ್ರತಿಭಟನ ಮೆರವಣಿಗೆ ನಡೆಸಿದ ಬಿಜೆಪಿಯು ಮೊದಲ ದಿನದ ಉಭಯ ಸದನಗಳ ಕಲಾಪದಲ್ಲೂ ಇದನ್ನು ಪ್ರಸ್ತಾವಿಸುವ ಮೂಲಕ ಸರಕಾರವನ್ನು ಕಟ್ಟಿ ಹಾಕಲು ಮುಂದಾಯಿತು. ನಿಲುವಳಿ ಸೂಚನೆ ಮಂಡನೆಗೆ ಕೋರಿದ್ದ ಪ್ರಸ್ತಾವನೆಯನ್ನು ಸ್ಪೀಕರ್‌ ಯು.ಟಿ. ಖಾದರ್‌ ಅವರು ಪರಿವರ್ತಿಸಿ ಚರ್ಚೆಗೆ ಅವಕಾಶ ಕೊಟ್ಟರು. ಮಂಗಳವಾರ ಕೂಡ ಪ್ರಕರಣದ ಮೇಲೆ ಚರ್ಚೆ ಮುಂದುವರಿಯಲಿದೆ.

ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್‌. ಅಶೋಕ್‌ ಸುಮಾರು ಒಂದೂವರೆ ತಾಸು ಕಾಲ ಹಗರಣದ ಮೇಲೆ ಬೆಳಕು ಚೆಲ್ಲಿದರು. ಅಂತಾರಾಜ್ಯ ಮಟ್ಟದ ಹಗರಣವಾಗಿದ್ದರಿಂದ ಇ.ಡಿ. ದಾಳಿ ನಡೆಸಿದ್ದು, 100 ಕೋಟಿ ರೂ. ಮೀರಿದ ಅಕ್ರಮವಾದ್ದರಿಂದ ಸಿಬಿಐ ಪ್ರವೇಶಿಸಿದೆ. ಎಸ್‌ಐಟಿ ತನಿಖೆ ಮೂಲಕ ಪ್ರಕರಣವನ್ನು ಹಳ್ಳ ಹಿಡಿಸುವುದು ಬೇಡ ಎಂದು ಆಗ್ರಹಿಸಿದರು.

ದಲಿತರ 187 ಕೋಟಿ ರೂ.ಗಳನ್ನು ಲೂಟಿ ಹೊಡೆದು ಚುನಾವಣೆಗೆ ಖರ್ಚು ಮಾಡಿದ್ದನ್ನು ಇತಿಹಾಸದಲ್ಲೇ ಕಂಡಿಲ್ಲ, ಕೇಳಿಲ್ಲ. ನೂರಕ್ಕೆ ನೂರರಷ್ಟು ಹಣ ಟಕಾಟಕ್‌ ಎಂದು ಲೂಟಿ ಮಾಡಿದ ಹಗರಣವಿದು ಎಂದು ಗುಡುಗಿದರು.ವಿಪಕ್ಷಗಳ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೂಡ ಮಾಜಿ ಸಚಿವ ನಾಗೇಂದ್ರ ಏನೂ ತಪ್ಪು ಮಾಡಿಲ್ಲ ಎಂದು ಪ್ರತಿಪಾದಿಸಿದರು.

ಪರಿಷತ್ತಿನಲ್ಲೂ ಭಾರೀ ವಾಕ್ಸಮರ
ವಿಧಾನ ಪರಿಷತ್‌ನಲ್ಲಿ ಕೂಡ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಾಲ್ಮೀಕಿ ಅಭಿವೃದ್ಧಿ ನಿಗಮ ಭ್ರಷ್ಟಾಚಾರ ಕುರಿತು ನಿಯಮ 59ರಡಿ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿಯ ಸಿ.ಟಿ. ರವಿ ಪ್ರಸ್ತಾವಿಸಿದರು. ಆದರೆ ಸಭಾಪತಿಗಳು ಒಪ್ಪಿಗೆ ನೀಡಲಿಲ್ಲ. ಈಗ ಏಕೆ ಪ್ರಸ್ತಾವಿಸುತ್ತೀರಿ ಎಂದು ಆಡಳಿತ ಪಕ್ಷದ ಸದಸ್ಯರು ಪ್ರಶ್ನಿಸುತ್ತಿದ್ದಂತೆ ವಿಪಕ್ಷದವರು ಎದ್ದುನಿಂತು ಆಕ್ಷೇಪಿಸಿದರು. ಸ್ವಲ್ಪಕಾಲ ಆಡಳಿತ ಹಾಗೂ ವಿಪಕ್ಷಗಳು ಆರೋಪ- ಪ್ರತ್ಯಾರೋಪದ ಸುರಿಮಳೆ ಸುರಿಸಿದವು.

Advertisement

ಈ ವೇಳೆ ಗೃಹ ಸಚಿವ ಪರಮೇಶ್ವರ್‌ ಮಧ್ಯಪ್ರವೇಶಿಸಿ, ಕರ್ನಾಟಕ ವಿಧಾನ ಪರಿಷತ್‌ಕಾರ್ಯವಿಧಾನ ನಡವಳಿಕೆಯ ನಿಯಮ 59ರಡಿ ಚರ್ಚೆಗೆ ಅವಕಾಶ ನೀಡಕೂಡದು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರಲ್ಲಿ ಮನವಿ ಮಾಡಿಕೊಂಡರು.
ನಿಯಮ 59ರಡಿ ಚರ್ಚೆಗೆ ಅವಕಾಶ ನೀಡಬಹುದೇ ಎಂದು ಅಡ್ವೊಕೇಟ್‌ ಜನರಲ್‌ ಬಳಿ ಸಲಹೆ ಪಡೆದು ನಾಳೆ ಈ ಬಗ್ಗೆ ಸ್ಪಷ್ಪಪಡಿಸುತ್ತೇನೆ ಎಂದು ಪರಮೇಶ್ವರ್‌ ಹೇಳಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಧಿಕ್ಕಾರ ಕೂಗಿದರು. ಈ ವೇಳೆ ಸಭಾಪತಿ 10 ನಿಮಿಷಗಳ ಕಾಲ ಕಲಾಪ ಮುಂದೂಡಿದರು. ಬಳಿಕ ಅಡ್ವೊಕೇಟ್‌ ಜನರಲ್‌ ಅಭಿಪ್ರಾಯ ಪಡೆದು ನಿಯಮ 59ರಡಿ ಮಂಡಿಸಿದ್ದ ನಿಲುವಳಿ ಸೂಚನೆಯನ್ನು ನಿಯಮ 68ಕ್ಕೆ ಬದಲಿಸಿ ಷರತ್ತುಬದ್ಧವಾಗಿ ಚರ್ಚೆಗೆ ಅವಕಾಶ ಮಾಡಿಕೊಟ್ಟರು.

ನಿಗಮದ ಹಣ ಚುನಾವಣೆಗೆ ಬಳಕೆಯಾಗಿದೆ ಎಂದು ಇ.ಡಿ. ರಿಮಾಂಡ್‌ ಅರ್ಜಿಯಲ್ಲಿ ಹೇಳಿದೆಯೇ ವಿನಾ ಅದನ್ನು ನಾಗೇಂದ್ರ ಒಪ್ಪಿಕೊಂಡಿಲ್ಲ. 187 ಕೋಟಿ ರೂ.ಗಳ ಹಗರಣ ಎನ್ನುತ್ತೀರಿ. ಅದು 187 ಅಲ್ಲ, 89 ಕೋಟಿ ರೂ. ಮಾತ್ರ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ದಲಿತರ ಹಣ ಲೂಟಿ ಹೊಡೆದು ಚುನಾವಣೆಗೆ ಖರ್ಚು ಮಾಡಿದ್ದನ್ನು ಇತಿಹಾಸದಲ್ಲೇ ಕಂಡಿಲ್ಲ, ಕೇಳಿಲ್ಲ. ನಾಗೇಂದ್ರ ಒಬ್ಬರೇ ಇದರ ಹಿಂದೆ ಇಲ್ಲ. ಪಾಪ ಅವರಿಗೆ ಕಡಿಮೆ (ಶೇ.20-25) ಸಿಕ್ಕಿದೆ. ಉಳಿದದ್ದು ಎಲ್ಲಿ ಹೋಯಿತು?
-ಆರ್‌. ಅಶೋಕ್‌, ವಿಧಾನಸಭೆ ವಿಪಕ್ಷ ನಾಯಕ

ಎಸ್‌… ಐ ಆ್ಯಮ್‌ ಆನ್‌
ರೆಕಾರ್ಡ್‌. ನಾಗೇಂದ್ರ ಏನೂ ತಪ್ಪು ಮಾಡಿಲ್ಲ. ನಾನೂ ಕೇಳಿದ್ದೇನೆ. ಅವನೂ ತಪ್ಪು ಮಾಡಿಲ್ಲ ಎಂಬುದನ್ನು ಹೇಳಿದ್ದಾನೆ. ಆದರೂ ತನಿಖೆಯ ದೃಷ್ಟಿಯಿಂದ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾನಷ್ಟೇ.
– ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

“ಆಡು ಮುಟ್ಟದ ಸೊಪ್ಪಿಲ್ಲ’
ಎಂಬಂತೆ ರಾಜ್ಯ ಸರಕಾರ ಪ್ರತೀ ನಿಗಮ, ಇಲಾಖೆ ಯಲ್ಲೂ “ತಾವು ಮಾಡದ ಭ್ರಷ್ಟಾಚಾರವಿಲ್ಲ’ ಎಂದು ತೋರಿಸಿದೆ. ಹೀಗೆಯೇ ಆದರೆ ಇನ್ನೂ 4-5 ಸಚಿವರು ರಾಜೀನಾಮೆ ನೀಡುತ್ತಾರೆ, ನೋಡುತ್ತಿರಿ.
-ಸಿ.ಟಿ. ರವಿ, ಬಿಜೆಪಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next