ಶಿವಮೊಗ್ಗ: ಲಂಡನ್ನಿಂದ ಬೆಂಗಳೂರು ಮೂಲಕ ಶಿವಮೊಗಕ್ಕೆ ಗುರುವಾರ ಆಗಮಿಸಿದ ಬಸವೇಶ್ವರರ ಪುತ್ಥಳಿಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಮಧ್ಯಾಹ್ನ 3 ಗಂಟೆಗೆ ಬೆಕ್ಕಿನ ಕಲ್ಮಠಕ್ಕೆ ಆಗಮಿಸಿದ ಮೂರ್ತಿಗೆ ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಶ್ರೀಗಳು, ಬಸವಕೇಂದ್ರದ ಬಸವ ಮರುಳಸಿದ್ಧ ಶ್ರೀಗಳು ಪುಷ್ಪ ನಮನ ಸಲ್ಲಿಸಿದರು. ನಂತರ ಅಲಂಕೃತ ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಪಾಲಿಕೆಯ ಹಾಲಿ, ಮಾಜಿ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಪುತ್ಥಳಿ ದಾನ ಮಾಡಿರುವ ಲಂಡನ್ನ ಡಾ| ನೀರಜ್ ಪಾಟೀಲ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಬಸವ ಧ್ವಜ ಕಟ್ಟಲಾಗಿದ್ದ ಬೈಕ್, ಕಾರುಗಳು ವಾಹನದ ಮುಂದೆ ಸಾಗಿದವು. ಬಿಎಚ್ ರಸ್ತೆ, ಗೋಪಿ ಸರ್ಕಲ್ ಮೂಲಕ ಸಾಗಿದ ಮೆರವಣಿಗೆ ಕಮಲಾ ನೆಹರು ಕಾಲೇಜು ಮೂಲಕ ಸಾಗಿ ವೀರಶೈವ ಕಲ್ಯಾಣ ಮಂಟಪದ ಮುಖಾಂತರ ಪಾಲಿಕೆ ಆವರಣ ತಲುಪಿತು. ದಾರಿಯುದ್ದಕ್ಕೂ ಭಕ್ತರು ಪುಷ್ಪನಮನ ಸಲ್ಲಿಸಿದರು. ಸೆಕ್ರೇಡ್ ಹಾರ್ಟ್ ಚರ್ಚ್ನ ಫಾದರ್ ಜೇಕಬ್ ಕೂಡ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಅಕ್ಕಮಹಾದೇವಿ ಸೇರಿದಂತೆ ಹಲವು ಶರಣರು ಶಿವಮೊಗ್ಗದಲ್ಲಿದ್ದರು. ಹಾಗಾಗಿ ಶರಣರ ನಾಡಿನಲ್ಲಿ ಬಸವಣ್ಣನವರ ಪ್ರತಿಮೆ ಇರಬೇಕು ಎಂಬ ಉದ್ದೇಶದಿಂದ ಶಿವಮೊಗ್ಗಕ್ಕೆ ಪ್ರತಿಮೆ ನೀಡಿದ್ದೇನೆ. ಇಂಗ್ಲೆಂಡ್ನ ಪ್ರತಿಷ್ಠಿತ ಸಂಸ್ಥೆಯವರು ಪ್ರತಿಮೆಯ ಕೆತ್ತನೆ ಮಾಡಿದ್ದಾರೆ.
ನೀರಜ್ ಪಾಟೀಲ್, ಪ್ರತಿಮೆ ದಾನ ಮಾಡಿದವರು