Advertisement

karnataka election; ಶೆಟ್ಟರ, ಸವದಿಗೆ ಶೀಘ್ರ ಪಶ್ಚಾತ್ತಾಪ: CM Bommai

09:59 PM Apr 18, 2023 | Team Udayavani |

ಮುಧೋಳ: ಕಾಂಗ್ರೆಸ್‌ ಮುಳುಗುತ್ತಿರುವ ಹಡಗು. ದೇಶದ ಬಹುತೇಕ ಕಡೆಯಲ್ಲಿ ಮುಳುಗಿದೆ. ಮೇ 13ರಂದು ರಾಜ್ಯದಲ್ಲಿಯೂ ಸಂಪೂರ್ಣ ಮುಳುಗುತ್ತದೆ. ಅಂತಹ ಮುಳುಗುತ್ತಿರುವ ಹಡಗನ್ನು ಕೆಲವರು ನಿನ್ನೆ ಮೊನ್ನೆ ಹತ್ತಿದ್ದಾರೆ. ಅವರಿಗೆ ಶೀಘ್ರದಲ್ಲೇ ಪಶ್ಚಾತ್ತಾಪವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ನಗರದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ನಾಮಪತ್ರ ಸಲ್ಲಿಕೆ ರೋಡ್‌ ಶೋನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಎಲ್ಲ ಕಡೆಗಳಲ್ಲೂ ಬಿಜೆಪಿಗೆ ಅಪಾರ ಬೆಂಬಲ ದೊರೆಯುತ್ತಿದೆ. ಮುಂದಿನ ಬಾರಿಯೂ ನಮ್ಮದೇ ಸರ್ಕಾರ ಆಡಳಿತಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿವರ್ಷ 10 ಸಾವಿರ ಕೋಟಿ ರೂ. ಖರ್ಚು ಮಾಡುತ್ತೇವೆ ಎಂದು ಕೃಷ್ಣೆಯ ಮೇಲೆ ಆಣೆ ಮಾಡಿ ಸುಳ್ಳು ಭರವಸೆ ಕೊಟ್ಟ ಸಿದ್ದರಾಮಯ್ಯ ಉತ್ತರ ಕರ್ನಾಟಕದ ಜನರಿಗೆ ಮೋಸ ಮಾಡಿದ್ದಾರೆ ಎಂದರು.

ನಟ ಸುದೀಪ ಗೈರು; ಜನರಿಗೆ ನಿರಾಸೆ
ಕಾರಜೋಳ ನಾಮಪತ್ರ ಸಲ್ಲಿಕೆಗೆ ನಟ ಸುದೀಪ ಆಗಮಿಸುತ್ತಾರೆಂಬ ಸುದ್ದಿ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ತಾಲೂಕಿನ ವಿವಿಧ ಭಾಗದಿಂದ ನಗರಕ್ಕೆ ಆಗಮಿಸಿದ್ದರು. ಆದರೆ ಸುದೀಪ ಬರಲ್ಲ ಎಂದು ಗೊತ್ತಾದ ತಕ್ಷಣ ಅಭಿಮಾನಿಗಳಲ್ಲಿ ನಿರಾಸೆ ಮನೆ ಮಾಡಿತ್ತು. ಈ ಬಗ್ಗೆ ಮಾಧ್ಯಮದವರಿಗೆ ಸ್ಪಷ್ಟನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಸುದೀಪ ಪ್ರಚಾರ ಕಾರ್ಯದ ರೂಪುರೇಷೆ ಇನ್ನೂ ತಯಾರಾಗಿಲ್ಲ ಶೀಘ್ರದಲ್ಲೇ ಅವರು ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ ಎಂದರು.

ಶೆಟ್ಟರ ನಡೆಗೆ ನಿರಾಣಿ ಬೇಸರ
ಜಗದೀಶ ಶೆಟ್ಟರ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಯಡಿಯೂರಪ್ಪ ಹಾಗೂ ಅನಂತಕುಮಾರ ಅವರೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಸಂಘಟನೆಯೊಂದಿಗೆ ಪಕ್ಷದಲ್ಲಿ ಎಲ್ಲ ರೀತಿಯ ಅಧಿ ಕಾರ ಅನುಭವಿಸಿದ್ದಾರೆ. ಆದರೆ ಈ ಬಾರಿ ಚುನಾವಣೆಯಲ್ಲಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿಸಿ ಕೇಂದ್ರ ಸಚಿವರನ್ನಾಗಿಸುವುದು ಹಾಗೂ ಅವರು ಸೂಚಿಸಿರುವವರಿಗೆ ಟಿಕೆಟ್‌ ಕೊಡುವುದಾಗಿ ನಮ್ಮ ಪಕ್ಷದ ಮುಖಂಡರು ಹೇಳಿದ್ದರು. ಅದಕ್ಕೂ ಶೆಟ್ಟರ ಸಮ್ಮತಿ ಸೂಚಿಸದೆ ಹಠಮಾರಿ ಧೋರಣೆಯಿಂದ ಪಕ್ಷ ತೊರೆದಿದ್ದಾರೆಂದು ಶೆಟ್ಟರ ನಡೆಗೆ ಮುರುಗೇಶ ನಿರಾಣಿ ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಲ್ಲಿ ಶೆಟ್ಟರ್‌ ಸ್ಥಾನಮಾನ ಏನು?
ಬೆಂಗಳೂರು: ಶೆಟ್ಟರ್‌ ಪಕ್ಷದ ಧ್ವಜ ಬದಲಿಸಿದ ಮಾತ್ರಕ್ಕೆ ಅವರ ವಿಚಾರವೂ ಬದಲಾಗುತ್ತದೆಯೇ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿಗರು ಲಿಂಗಾಯತರನ್ನು ಒಡೆಯಲು ಮುಂದಾಗಿದ್ದರು. ಆದರೆ ಶೆಟ್ಟರ್‌ ಈಗ ಅದೇ ಪಕ್ಷ ಸೇರಿದ್ದಾರೆ. ಶೆಟ್ಟರ್‌ ಕಾಂಗ್ರೆಸ್‌ನಲ್ಲಿ ಸಿಎಂ ಅಭ್ಯರ್ಥಿಯೇ? ಅಥವಾ ಅವರ ಸ್ಥಾನಮಾನ ಏನು ? ಕಾಂಗ್ರೆಸ್‌ನಲ್ಲಿ ಈಗಾಗಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಸೇರಿ ಹಲವು ಮುಖ್ಯಮಂತ್ರಿ ಅಭ್ಯರ್ಥಿಗಳಿದ್ದಾರೆ. ಹಾಗಾದರೆ ಶೆಟ್ಟರ್‌ ಅವರ ಸ್ಥಾನ ಏನೆಂದು ಪ್ರಶ್ನಿಸಿದರು.

ರಾಮಮಂದಿರಕ್ಕಾಗಿ ಹೋರಾಟ ಮಾಡಿದ್ದೀರಿ. ನೀವೂ ರಾಮಮಂದಿರಕ್ಕಾಗಿ ಇಟ್ಟಿಗೆ ಹೊತ್ತವರು. ಕಾಂಗ್ರೆಸ್‌ನವರು ರಾಮಮಂದಿರ ವಿರೋಧಿಗಳು. ಕಪಿಲ್‌ ಸಿಬಲ್‌ ರಾಮಮಂದಿರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸಿದವರು. ಅಂಥ ಪಕ್ಷಕ್ಕೆ ನೀವು ಸೇರಿದ್ದು ಹೇಗೆ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋವಿಂದ ಕಾರಜೋಳ ನೀರಾವರಿ ಸಚಿವರಾದ ಮೇಲೆ ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷದವರು ನೀಡುತ್ತಿರುವುದು ಬೋಗಸ್‌ ಗ್ಯಾರೆಂಟಿ. ಅವುಗಳಿಗೆ ವಾರೆಂಟಿ ಇಲ್ಲ. ಅವರು ನೀಡುತ್ತಿರುವ ಕಾರ್ಡ್‌ನಿಂದ ಯಾವುದೇ ಪ್ರಯೋಜನವಿಲ್ಲ. ಬಿಜೆಪಿ ಸುನಾಮಿಯಲ್ಲಿ ಎಲ್ಲವೂ ಕೊಚ್ಚಿಕೊಂಡು ಹೋಗಿ ರಾಜ್ಯದಲ್ಲಿ ಮತ್ತೂಮ್ಮೆ ಜನಪರ ಸರ್ಕಾರ ಆಡಳಿತಕ್ಕೆ ಬರುತ್ತದೆ. ಬಿಜೆಪಿ ಆಡಳಿತಾವಧಿಯಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಒಳಮೀಸಲಾತಿಗೂ ಒತ್ತು ನೀಡುವ ಮೂಲಕ ಕ್ರಾಂತಿಕಾರಕ ನಿರ್ಧಾರ ತೆಗೆದುಕೊಂಡು ಹಿಂದುಳಿದವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದೇವೆ. ನೀವೆಲ್ಲ ಇದೀಗ ನಮ್ಮ ಕೈಗಳನ್ನು ಮತ್ತಷ್ಟು ಬಲಪಡಿಸಬೇಕು ಎಂದರು.

ಬಿಜೆಪಿ ದೊಡ್ಡ ಆಲದ ಮರ. ಕಾಂಗ್ರೆಸ್‌ ಈಗ ಮುಳುಗುತ್ತಿರುವ ಹಡಗು. ಶೆಟ್ಟರ್‌ ಅವರಿಗೆ ಅದರ ಪರಿಣಾಮ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಕೇಂದ್ರದ ವರಿಷ್ಠರು ಕೆಲವು ಹಿರಿಯರಿಗೆ ಅವಕಾಶ ಕೊಟ್ಟಿಲ್ಲ ಅಂದರೆ ಅದರಲ್ಲಿ ಸದುದ್ದೇಶವಿದೆ. ಪಕ್ಷದ ಭವಿಷ್ಯದ ದೃಷ್ಟಿಯಿಂದ ಹೊಸ ನಾಯಕತ್ವ ಸೃಷ್ಟಿಯಾಗಬೇಕು. ಪಕ್ಷದಲ್ಲಿ ಹೆಚ್ಚು ಯುವಕರಿಗೆ ಅವಕಾಶ ಕೊಡಬೇಕೆಂದು ವರಿಷ್ಠರು ಆಲೋಚನೆ ಮಾಡಿದ್ದಾರೆ.
– ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next