Advertisement
ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡುವಂತೆ ರಾಜ್ಯದ ವಿವಿಧ ಮಠಾಧೀಶರು, ಗಣ್ಯರು, ಚಿಂತಕರು, ರೈತ, ದಲಿತ ಮತ್ತು ಕಾರ್ಮಿಕ ಹೋರಾಟಗಾರರು, ಸಾಹಿತಿಗಳು ಮುಖ್ಯಮಂತ್ರಿಗಳಿಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದರು. ಬಸವಣ್ಣನವರು ವೈಶ್ವಿಕ ಶ್ರೇಷ್ಠ ಮೌಲ್ಯಗಳನ್ನು ಪ್ರತಿಪಾದಿಸಿದ ಮಹನೀಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ನಿರ್ಧರಿಸಲಾಗಿದೆ. ಸರಕಾರದ ಈ ಕ್ರಮದ ಬಗ್ಗೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಧನ್ಯವಾದ ಸಮರ್ಪಿಸಿದ್ದು, 2025ರಲ್ಲಿ ಅನುಭವ ಮಂಟಪ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಬ್ರಿಟೀಷರ ವಿರುದ್ಧ ಹೋರಾಟ ನಡೆಸಿ ಅಮರರಾದ ಕಿತ್ತೂರು ರಾಣಿ ಚೆನ್ನಮ್ಮ ಹೆಸರಿನಲ್ಲಿರುವ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿಗೆ “ಚನ್ನಮ್ಮನ ಕಿತ್ತೂರು’ ಎಂದು ಮರು ನಾಮಕರಣ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಂದಾಯ ಇಲಾಖೆಯಿಂದ ಮಂಡನೆಯಾದ ಪ್ರಸ್ತಾಪಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.