Advertisement

ಬಿತ್ತನೆಗೆ ಭರವಸೆ ಮೂಡಿಸಿದ ಮಳೆ

10:17 AM Jun 23, 2019 | Team Udayavani |

ವೀರಾರೆಡ್ಡಿ ಆರ್‌.ಎಸ್‌.
ಬಸವಕಲ್ಯಾಣ:
ಕಾರಹುಣ್ಣೆಮೆ ಕಳೆದರೂ ಮುಂಗಾರು ಮಳೆ ಬಾರದಿರುವುದರಿಂದ ರೈತರು ಆಕಾಶದ ಕಡೆ ನೋಡುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ತಾಲೂಕಿನ ವಿವಿಧೆಡೆ ಶುಕ್ರವಾರ ರಾತ್ರಿಯಿಂದ ಬೆಳಗಿನ ಜಾವದ ವರೆಗೆ ಮಳೆ ಸುರಿದಿರುವುದರಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Advertisement

ರಾತ್ರಿ ಸುರಿದ ಮಳೆಯಿಂದ ಹೊಲಗಳಲ್ಲಿ ನೀರು ನಿಂತಿದೆ ಹಾಗೂ ಬಂಡೆಯಂದಿದ್ದ ಮಣ್ಣಿನ ಹೆಂಟೆಗಳು ಕರಗಿ ಭೂಮಿ ಬಿತ್ತಗೆ ಹದವಾಗಿದೆ. ಇದರಿಂದ ರೈತರು ಕೃಷಿ ಚಟುವಟಿಕೆಗೆ ಬೇಕಾದ ಸಾಮಗ್ರಿಗಳನ್ನು ಶನಿವಾರ ಮಾರುಕಟ್ಟೆಯಲ್ಲಿ ಖರೀದಿ ಮಾಡುವುದು ಕಂಡುಬಂತು.

ತಾಲೂಕಿನ ಹೋಬಳಿ ಗ್ರಾಮಗಳಾದ ಮಂಠಾಳ 25 ಎಂಎಂ, ಕೋಹಿನೂರ 17 ಎಂಎಂ, ಮುಡಬಿ 36 ಎಂಎಂ, ರಾಜೇಶ್ವರ 30.2 ಎಂಎಂ, ಹುಲಸೂರು 17 ಎಂಎಂ ಹಾಗೂ ಬಸವಕಲ್ಯಾಣ 24 ಎಂಎಂ ಸೇರಿದಂತೆ ಒಟ್ಟು 24.85 ಎಂಎಂ ಮಳೆ ಸುರಿದೆ.

ರೈತರು ಬಿತ್ತನೆ ಮಾಡುವಷ್ಟು ಮಳೆ ಬಂದಿದೆ. ಆದರೆ ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಿದ್ದರಿಂದ ಭೂಮಿ ಬೇಗ ಒಣಗಿ ಹೋಗುತ್ತದೆ. ಹೀಗಾಗಿ ಇನ್ನೊಂದು ಮಳೆ ಬಂದರೆ ಭೂಮಿ ಜಾಸ್ತಿ ದಿನ ನೀರು ಹಿಡಿದಿಟ್ಟುಕೊಳ್ಳುತ್ತದೆ. ಆಗ ಬಿತ್ತನೆ ಮಾಡಿದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ ಎಂಬುದು ರೈತ ರಾಮಲಿಂಗ ಸಾಗಾವೆ ಅವರ ಅಭಿಪ್ರಾಯವಾಗಿದೆ.

ಪ್ರತಿವರ್ಷ ಅನ್ನದಾತ ಸಾಲಸೂಲ ಮಾಡಿ ಬಹಳ ನಿರೀಕ್ಷೆ ಇಟ್ಟುಕೊಂಡು ಭೂಮಿಗೆ ಬೀಜ ಬಿತ್ತುತ್ತಾನೆ. ಆದರೆ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ರೈತನ ನಿರೀಕ್ಷೆಯನ್ನು ಮಳೆ ಹುಸಿ ಮಾಡುತ್ತಿದ್ದು, ಸಂಕಷ್ಟ ಅನುಭವಿಸುವಂತೆ ಮಾಡಿದೆ. ಈ ವರ್ಷವಾದರೂ ಸಮಯಕ್ಕೆ ಸರಿಯಾಗಿ ಮಳೆ ಬಂದು ಮಂದಹಾಸ ತರುತ್ತದೆ ಎಂಬದು ರೈತರ ನಿರೀಕ್ಷೆಯಾಗಿದೆ.

Advertisement

ರೈತರು ಬಿತ್ತನೆ ಮಾಡುವಷ್ಟು ಮಳೆ ಆಗಿದೆ. ಆದರೆ ಇನ್ನೊಂದು ಸಲ ಮಳೆ ಬಂದಾಗ ಬಿತ್ತನೆ ಮಾಡಿದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ.
ವೀರಶೆಟ್ಟಿ ರಾಠೊಡ,
ಕೃಷಿ ಸಹಾಯಕ ನಿರ್ದೇಶಕ, ಬಸವಕಲ್ಯಾಣ

ಬಿತ್ತನೆಗೆ ಸಿದ್ಧತೆ ಮಾಡಿಕೊಂಡು ಮಳೆಗಾಗಿ ಕಾಯುತ್ತಾ ಇದ್ದೆವು. ಈ ಮಳೆಯಿಂದ ಸ್ವಲ್ಪ ಬಿತ್ತನೆಯ ಆಶೆ ಮೂಡಿದೆ. ಇನ್ನೂ ಹೆಚ್ಚು ಮಳೆ ಬಂದಾಗ ಮಾತ್ರ ತಾಲೂಕಿನಾದ್ಯಂತ ಬಿತ್ತನೆ ಕಾರ್ಯವನ್ನು ರೈತರು ಚುರುಕಗೊಳಿಸಬಹುದು.
ಸನ್ಮೂಖಪ್ಪಾ ಜಯಪ್ಪಾ, ರೈತ

Advertisement

Udayavani is now on Telegram. Click here to join our channel and stay updated with the latest news.

Next