Advertisement

ಮುಷ್ತಾಕ್‌ ಅಲಿ: ಸೋಲಂಕಿ ಸಾಹಸ; ಬರೋಡ ಸೆಮಿ ಪ್ರವೇಶ

11:18 PM Jan 27, 2021 | Team Udayavani |

ಅಹ್ಮದಾಬಾದ್‌: ಅತ್ಯಂತ ರೋಚಕ ಹಣಾಹಣಿಯಲ್ಲಿ ಹರ್ಯಾಣವನ್ನು 8 ವಿಕೆಟ್‌ಗಳಿಂದ ಮಣಿಸಿದ ಆತಿಥೇಯ ಬರೋಡ “ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ’ ಟಿ20 ಪಂದ್ಯಾವಳಿಯ ಸೆಮಿಫೈನಲ್‌ಗೆ ಲಗ್ಗೆ ಇರಿಸಿದೆ.

Advertisement

ಬುಧವಾರ ನಡೆದ 3ನೇ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಹರ್ಯಾಣ 7 ವಿಕೆಟಿಗೆ 148 ರನ್‌ ಗಳಿಸಿತು. ಜವಾಬಿತ್ತ ಬರೋಡ ಭರ್ತಿ 20 ಓವರ್‌ಗಳಲ್ಲಿ 2 ವಿಕೆಟಿಗೆ 150 ರನ್‌ ಬಾರಿಸಿ ಅಮೋಘ ಗೆಲುವು ಒಲಿಸಿಕೊಂಡಿತು.

ವಿಕೆಟ್‌ ಉಳಿಸಿಕೊಂಡರೂ ಬರೋಡದ ರನ್‌ಗತಿ ತೀರಾ ಕಳಪೆಯಾಗಿತ್ತು. ಅಂತಿಮ ಓವರಿನಲ್ಲಿ 18 ರನ್‌, ಕೊನೆಯ 3 ಎಸೆತಗಳಲ್ಲಿ 15 ರನ್‌ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತು. ಆದರೂ ಇದನ್ನು ಮೆಟ್ಟಿ ನಿಂತಿತು. ವಿಷ್ಣು ಸೋಲಂಕಿ ಗೆಲುವಿನ ಹೀರೋ ಆಗಿ ಮೂಡಿಬಂದರು.

ಸೋಲನ್ನು ಮೆಟ್ಟಿ ನಿಂತ ಸೋಲಂಕಿ :

ಸುಮಿತ್‌ ಕುಮಾರ್‌ ಅಂತಿಮ ಓವರ್‌ ಎಸೆಯಲು ಬಂದಾಗ ಬರೋಡ ಗೆಲುವಿಗೆ ಬರೋಬ್ಬರಿ 18 ರನ್‌ ಅಗತ್ಯವಿತ್ತು. ಮೊದಲ 3 ಎಸೆತಗಳಲ್ಲಿ ಬಂದದ್ದು 3 ಸಿಂಗಲ್ಸ್‌ ಮಾತ್ರ. ಹರ್ಯಾಣ ಗೆಲುವಿನ ಲೋಕದಲ್ಲಿ ವಿಹರಿಸುತ್ತಿತ್ತು. ಆದರೆ ವನ್‌ಡೌನ್‌ ಬ್ಯಾಟ್ಸ್‌ಮನ್‌ ವಿಷ್ಣು ಸೋಲಂಕಿ ಮಾತ್ರ ಸೋಲನ್ನು ಸಹಿಸಲು ಸಿದ್ಧರಿರಲಿಲ್ಲ. ಅಂತಿಮ 3 ಎಸೆತಗಳನ್ನು ಕ್ರಮವಾಗಿ ಸಿಕ್ಸರ್‌, ಫೋರ್‌, ಸಿಕ್ಸರ್‌ಗೆ ಬಡಿದಟ್ಟಿ ಟಿ20 ಇತಿಹಾಸದ ಅಮೋಘ ಗೆಲುವಿಗೆ ಕಾರಣರಾದರು. ಸೋಲಂಕಿ ಕೊಡುಗೆ ಅಜೇಯ 71 ರನ್‌ (46 ಎಸೆತ, 4 ಬೌಂಡರಿ, 5 ಸಿಕ್ಸರ್‌).

Advertisement

ತಮಿಳುನಾಡಿಗೆ ಸುಲಭ ಜಯ :

ಮಂಗಳವಾರ ರಾತ್ರಿ ನಡೆದ ದ್ವಿತೀಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ತಮಿಳುನಾಡು ತಂಡ ಹಿಮಾಚಲ ಪ್ರದೇಶವನ್ನು 5 ವಿಕೆಟ್‌ಗಳಿಂದ ಸುಲಭದಲ್ಲಿ ಮಣಿಸಿತು. ಹಿಮಾಚಲ ಪ್ರದೇಶ 9ಕ್ಕೆ 135 ರನ್‌ ಗಳಿಸಿದರೆ, ತಮಿಳುನಾಡು 17.5 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 141 ರನ್‌ ಬಾರಿಸಿ ಸೆಮಿಫೈನಲ್‌ ತಲುಪಿತು.

Advertisement

Udayavani is now on Telegram. Click here to join our channel and stay updated with the latest news.

Next