Advertisement

ಮಾತೃ ಭಾಷೆಯೇ ಪ್ರಧಾನ: ಹರಿಕೃಷ್ಣ ಪುನರೂರು

07:55 PM Jan 09, 2019 | Karthik A |

ಬ್ರಹ್ಮಾವರ: ಕನ್ನಡ ಭಾಷೆ ಉಳಿಸಲು ಭಾಷಣದಿಂದ ಮಾತ್ರ ಸಾಧ್ಯವಿಲ್ಲ. ಗಂಭೀರ ಚಿಂತನೆ, ಅನುಕರಣೆ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು. ಅವರು ಬುಧವಾರ ಇಲ್ಲಿನ ಬಂಟರ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ತಾಲೂಕು ಘಟಕದ ಆಶ್ರಯದಲ್ಲಿ ಹಾರ್ಯಾಡಿ ಚಂದ್ರಶೇಖರ ಕೆದ್ಲಾಯರ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಯಾವುದೇ ಮಾಧ್ಯಮದಲ್ಲಿ ಕಲಿತರೂ ತಾಯಿ ಭಾಷೆ ಪ್ರಧಾನ ಎಂದರು. ಕನ್ನಡಿಗರೆಲ್ಲ ಒಂದಾಗಬೇಕು ಎನ್ನುವುದು ಹೇಳುವುದು ಮಾತ್ರ, ಆದರೆ ಕನ್ನಡಿಗರು ಒಗ್ಗೂಡುತ್ತಿಲ್ಲ, ಸರಕಾರಕ್ಕೂ ಈ ಕುರಿತು ಆಸಕ್ತಿ ಇಲ್ಲ ಎಂದರು.

Advertisement

ಭಾಷಾಭಿಮಾನ
ಬೆಂಗಳೂರಿನಂತಹ ಮಹಾನಗರದಲ್ಲೇ ಕನ್ನಡ ಮಾತನಾಡುವವರ ಸಂಖ್ಯೆ ಶೇ.37 ಮಾತ್ರ. ಇಲ್ಲಿ ಕನ್ನಡಿಗರೇ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಬೇರೆ ರಾಜ್ಯಗಳಲ್ಲಿ ಅವರವರ ಭಾಷೆ ಬಿಟ್ಟು ಬೇರೆ ಭಾಷೆಯನ್ನೇ ಮಾತನಾಡುವುದಿಲ್ಲ ಎಂದು ಪುನರೂರು ಹೇಳಿದರು.

ಸರಕಾರದ ಪ್ರೋತ್ಸಾಹ
ಸರಕಾರಿ, ಅನುದಾನಿತ ಶಾಲೆಗಳಿಗೆ ಸರಕಾರದ ಪ್ರೋತ್ಸಾಹ ಅತ್ಯಗತ್ಯ. 7 ತರಗತಿಗೆ ಓರ್ವ ಅಧ್ಯಾಪಕ, ಅವರೇ ಎಲ್ಲಾ ಕಾರ್ಯ ನಿರ್ವಹಿಸಬೇಕು ಎಂದಾದರೆ ಶಾಲೆಯ ಉಳಿವು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಮಲಯಾಳೀಕರಣ
ಕೇರಳ ಗಡಿ ಮಲಯಾಳೀಕರಣಗೊಳ್ಳುತ್ತಿದೆ. ಅಲ್ಲಿನ ಕನ್ನಡ ಶಾಲೆಗಳನ್ನು ಮಲಯಾಳೀಕರಣಗೊಳಿಸಲಾಗುತ್ತಿದೆ. ಈ ಕುರಿತು ಅಲ್ಲಿನ ಕನ್ನಡಿಗರು ಹೋರಾಟ ಮಾಡಿದರೆ ಕರ್ನಾಟಕ ಸರಕಾರ ಪ್ರೋತ್ಸಾಹ ನೀಡಲೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಹೆತ್ತವರು ಮಕ್ಕಳಿಗೆ ಕನ್ನಡ ಉತ್ತಮ ಓದು ಬರಹ ಸಾಮರ್ಥ್ಯವನ್ನು ನೀಡಬೇಕು, ಕನ್ನಡದಲ್ಲೇ ಮಾತನಾಡಬೇಕು, ಕನ್ನಡ ಪುಸ್ತಕಗಳನ್ನು ಖರೀದಿಸಿ ಓದಬೇಕು. ಆಗ ಮಾತ್ರ ಭಾಷೆಯ ಉಳಿವು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ನಾಡು, ನುಡಿ
ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಅವರು ಪುಸ್ತಕ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ, ನಾಡು ನುಡಿ ಎಲ್ಲದಕ್ಕೂ ಮಿಗಿಲಾದುದು. ಬದುಕು ಕಟ್ಟಿಕೊಳ್ಳಲು ಆಂಗ್ಲ ಭಾಷೆ ಅನಿವಾರ್ಯವಾದರೂ ಪೋಷಿಸುವ ಭಾಷೆ ಕನ್ನಡವನ್ನು ಮರೆಯಬಾರದು. ಆಂಗ್ಲ ಭಾಷೆಯಲ್ಲಿ ಕಲಿತವರು ದೊಡ್ಡ ವ್ಯಕ್ತಿಗಳಾಗುತ್ತಾರೆ ಎನ್ನುವ ಭ್ರಮೆ ಹೆತ್ತವರಲ್ಲಿದೆ ಎಂದು ವಿಷಾದಿಸಿದರು. ಕನ್ನಡ ಶಾಲೆಗಳಲ್ಲಿ ಆಂಗ್ಲ ಭಾಷೆ ಕಲಿಸಬೇಕು ಆದರೆ ಕನ್ನಡ ಶಾಲೆಯನ್ನು ಆಂಗ್ಲ ಭಾಷಾ ಶಾಲೆಯನ್ನಾಗಿ ಮಾಡುವುದಲ್ಲ ಸರಿಯಲ್ಲ. ಆಂಗ್ಲ ಭಾಷಾ ಶಿಕ್ಷಕರನ್ನು ಬಲಪಡಿಸಿ ಕನ್ನಡ ಶಾಲೆಗಳನ್ನು ಬಲಪಡಿಸಬೇಕು ಎಂದು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು.  

Advertisement

ಅತಿಥಿಗಳಾಗಿ ಬಂಟರ ಭವನದ ಸಂಚಾಲಕ ಸುದರ್ಶನ ಹೆಗ್ಡೆ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ತಿಮ್ಮಪ್ಪ ಹೆಗ್ಡೆ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ಚಂದ್ರಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ ಕುಮಾರ್‌, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಹೊಬಳಿ ಕಸಾಪ ಅಧ್ಯಕ್ಷ ಅಶೋಕ್‌ ಭಟ್‌, ವಾರಂಬಳ್ಳಿ ಪಂಚಾಯತ್‌ ಅಧ್ಯಕ್ಷ ನವೀನ್‌ಚಂದ್ರ ನಾಯಕ್‌, ಉದ್ಯಮಿ ರಾಘವೇಂದ್ರ ಕುಂದರ್‌, ಚಾಂತಾರು ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ, ಪ್ರಮುಖರಾದ ನೀಲಾವರ ಸುರೇಂದ್ರ ಅಡಿಗ, ಆರೂರು ತಿಮ್ಮಪ್ಪ ಶೆಟ್ಟಿ, ನರೇಂದ್ರ ಕುಮಾರ್‌ ಕೋಟ, ಸುಬ್ರಹ್ಮಣ್ಯ ಶೆಟ್ಟಿ, ಡಾ| ಸುಬ್ರಹ್ಮಣ್ಯ ಭಟ್‌, ವಸಂತಿ ಶೆಟ್ಟಿ ಬ್ರಹ್ಮಾವರ, ಮೋಹನ ಉಡುಪ ಹಂದಾಡಿ, ಪ್ರಶಾಂತ್‌ ಶೆಟ್ಟಿ ಪಾಂಡೇಶ್ವರ, ಗಿರೀಶ್‌ ಅಡಿಗ, ಅಲ್ತಾರು ನಾಗರಾಜ್‌, ಪುಂಡಲೀಕ ಮರಾಠೆ, ವಲೇರಿಯನ್‌ ಮಿನೇಜಸ್‌, ಸತೀಶ್‌ ವಡ್ಡರ್ಸೆ, ಚಂದ್ರ ನಾಯಕ್‌, ದಿನಕರ ಶೆಟ್ಟಿ, ಶಾಂತರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸೂರಾಲು ನಾರಾಯಣ ಮಡಿ ಸ್ವಾಗತಿಸಿ, ಮನೋಹರ್‌ ಪಿ. ವಂದಿಸಿದರು.  ಪ್ರಶಾಂತ್‌ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

ಏಕತೆಯಿಂದ ಕೀರ್ತಿ ಹೆಚ್ಚಿಸೋಣ
ಭಾಷೆಯ ಮೂಲಕ ಭಾವನೆ ಅರಳುತ್ತದೆ. ಕನ್ನಡ ನಮ್ಮ ಭಾವದ ಭಾಷೆ. ಕನ್ನಡ ಭಾಷೆಯ ಮೂಲಕ ಒಗ್ಗೂಡಿ ಏಕತೆಯ ದುಡಿಮೆಯಿಂದ ನಮ್ಮ ನಾಡಿನ ಕೀರ್ತಿ ಹೆಚ್ಚಿಸೋಣ. ಸಹೋದರತೆಯಿಂದ ಬಾಳ್ಳೋಣ ಎಂದು ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕೆದ್ಲಾಯ ಹೇಳಿದರು. ಆಂಗ್ಲ ಮಾಧ್ಯಮದ ಗೀಳಿನಿಂದ ಆಧುನಿಕ ಕಲಿಕೆಯ ದಾರಿಯಲ್ಲಿ ಕನ್ನಡವನ್ನು ಕಡೆಗಣಿಸುವ ಪರಿಸ್ಥಿತಿ ಎದುರಾಗಿದೆ. ಮಾತೃಭಾಷೆಯನ್ನು ಎಂದೂ ಮರೆಯಬಾರದು. ಕನ್ನಡ, ಸಾಹಿತ್ಯದ ಸೌಂದರ್ಯವನ್ನು ಗಾಯನದ ಮೂಲಕ ಮುಟ್ಟಿಸಿದ ಸಂತೃಪ್ತಿ ಇದೆ ಎಂದು ಕೆದ್ಲಾಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next