Advertisement

Karnataka: ಬಾರದ ಸಚಿವರು: ಕಳೆಗುಂದಲಾರಂಭಿಸಿದೆ ಶಕ್ತಿಸೌಧ

10:44 PM Sep 06, 2023 | Team Udayavani |

ಬೆಂಗಳೂರು: ಸರಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಸಾರ್ವಜನಿಕರು ಹಾಗೂ ಕಾರ್ಯಕರ್ತರಿಂದ ವಿಧಾನಸೌಧ ಗಿಜಿಗುಡುತ್ತಿತ್ತು. ಶಕ್ತಿಕೇಂದ್ರದಲ್ಲಿ ತಮ್ಮ ಸಂಕಷ್ಟಗಳಿಗೆ ಪರಿಹಾರ ಸಿಗಬಹುದೆಂಬ ಆಶಾವಾದದೊಂದಿಗೆ ಸಾವಿರಾರು ಜನರು ವಿಧಾನಸೌಧಕ್ಕೆ ಭೇಟಿ ನೀಡುತ್ತಿದ್ದರು. ಆದರೆ ಶತದಿನೋತ್ಸವದ ಸಂಭ್ರಮ ಮುಗಿಯುವ ಹೊತ್ತಿಗೆ ಶಕ್ತಿಸೌಧದಲ್ಲಿ ಈಗ ಮೊದಲಿನ ಉತ್ಸಾಹ ಉಳಿದಿಲ್ಲ.

Advertisement

ಐದು ವರ್ಷಗಳ ಬಳಿಕ ಅಧಿಕಾರಕ್ಕೆ ಬಂದ ಸಂಭ್ರಮದಲ್ಲಿ ವಿಧಾನಸೌಧದಲ್ಲಿ ವಿಶೇಷ ಪೂಜೆ ಮಾಡಿ ಕಚೇರಿಗೆ ಆಗಮಿಸಿದ್ದ ಸಚಿವರು ಈಗ ವಿಧಾನಸೌಧಕ್ಕೆ ಆಗಮಿಸುವುದೇ ವಿರಳವಾಗಿದೆ. ಸಚಿವ ಸಂಪುಟ ಸಭೆ, ಉಪಸಮಿತಿ ಸಭೆ, ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಆಯೋಜನೆಯಾದ ಸಭೆಗಳಿಗೆ ಮಾತ್ರ ಸಂಬಂಧಪಟ್ಟ ಸಚಿವರು ಮಾತ್ರ ಆಗಮಿಸುತ್ತಿದ್ದು, ಉಳಿದಂತೆ ಸಚಿವರ ಕಚೇರಿ ಈಗ ಭಣಗುಟ್ಟುತ್ತಿದೆ. ಸಚಿವರು ಪ್ರವಾಸದಲ್ಲಿದ್ದಾಗ ಅಥವಾ ಕ್ಷೇತ್ರದಲ್ಲಿ ಇದ್ದಾಗ ಆಪ್ತ ಕಾರ್ಯದರ್ಶಿಗಳು (ಪಿಎಸ್‌) ಕಚೇರಿಯ ಮೇಲ್ವಿಚಾರಣೆಯ ಜವಾಬ್ದಾರಿ ಹೊತ್ತಿರುತ್ತಾರೆ. ಆದರೆ ಎಷ್ಟೋ ಕಚೇರಿಗಳಲ್ಲಿ ಈಗ ಆಪ್ತ ಕಾರ್ಯದರ್ಶಿಗಳೂ ಸಾರ್ವಜನಿಕರಿಗೆ ಲಭ್ಯರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅವಧಿ ಮುಕ್ತಾಯದ ಹಂತದಲ್ಲಿರುವ ಸರಕಾರ ಅಸ್ತಿತ್ವದಲ್ಲಿದೆಯೋ ಎಂಬ ಭಾವನೆ ಮೂಡುತ್ತಿದೆ.

ನವೀಕರಣ ಮುಗಿದಿಲ್ಲ
ಕೆಲವು ಸಚಿವರು ವಿಧಾನಸೌಧಕ್ಕೆ ಬರುವ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದರೆ, ಇನ್ನು ಕೆಲವರ ಕಚೇರಿ ನವೀಕರಣ ಕಾರ್ಯ ಪ್ರಗತಿಯಲ್ಲಿದೆ. ಮೂರನೇ ಮಹಡಿಯಲ್ಲಿರುವ ಮೂರು ಪ್ರಮುಖ ಸಚಿವರ ಕಚೇರಿ ಇನ್ನೂ ನವೀಕರಣವಾಗುತ್ತಲೇ ಇದೆ. ಮೂರನೇ ಮಹಡಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಡಾ| ಜಿ.ಪರಮೇಶ್ವರ, ಕೆ.ಜೆ.ಜಾರ್ಜ್‌ ಹೊರತುಪಡಿಸಿದರೆ ಉಳಿದ ಸಚಿವರ ಕಚೇರಿಗಳು ಬಹುತೇಕ ಸಂದರ್ಭದಲ್ಲಿ ಭಣಗುಡುತ್ತಿವೆ. ಸಂಪುಟ ಸಭೆಯ ದಿನ ಮಾತ್ರ ವಿಧಾನಸೌಧದಲ್ಲಿ ಕೊಂಚ ಚಟುವಟಿಕೆ ಕಾಣುತ್ತಿದೆ.

ಸಚಿವರು ವಿಧಾನಸೌಧದಲ್ಲಿ ಲಭ್ಯವಾಗದಿರುವ ಬಗ್ಗೆ ಕಾಂಗ್ರೆಸ್‌ ಶಾಸಕರಿಂದಲೂ ಬೇಸರ ವ್ಯಕ್ತವಾಗುತ್ತಿದೆ. ಶಾಸಕಾಂಗ ಸಭೆ ಸಂದರ್ಭದಲ್ಲಿ ಸೃಷ್ಟಿಯಾದ ವಿವಾದದ ಬಳಿಕವೂ ಸಚಿವರು ಕೈಗೆ ಸಿಗುತ್ತಿಲ್ಲ. ಈ ಬಗ್ಗೆ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ವರ್ಗಾವಣೆ ಸಂದರ್ಭದಲ್ಲಾದರೂ ಸಚಿವರ ಕಚೇರಿಯಲ್ಲಿ ಕಾಣುತ್ತಿದ್ದ ಚಟುವಟಿಕೆ ಈಗ ಮಾಯವಾಗಿದೆ.

ಸಚಿವರಿಂದ ತಮ್ಮ ಅಹವಾಲುಗಳಿಗೆ ಬೆಲೆ ಇಲ್ಲ ಎಂಬುದನ್ನು ಮನಗಂಡಿರುವ ಶಾಸಕರು ಈಗ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಭೇಟಿ ಮಾಡುತ್ತಿದ್ದಾರೆ. ರಾಜ್ಯ ಮುಖ್ಯ ಕಾರ್ಯದರ್ಶಿ, ಪೊಲೀಸ್‌ ಮಹಾನಿರ್ದೇಶಕರು, ಗುಪ್ತದಳದ ಐಜಿಪಿ ಜತೆಗೆ ಮುಖ್ಯಮಂತ್ರಿಗಳ ಮುಂಜಾನೆಯ ಸಭೆ ಮುಕ್ತಾಯವಾಗುವ ಹೊತ್ತಿಗೆ ಶಾಸಕರು ಭೇಟಿ ಮಾಡಿ ತಮ್ಮ ಅಹವಾಲುಗಳನ್ನು ತೋಡಿಕೊಳ್ಳುತ್ತಿದ್ದಾರೆ.

Advertisement

ಹಿಂದಿನ ಆದೇಶದ ಕತೆ ಏನಾಯಿತು ?
ಈ ಹಿಂದೆ ಸಿದ್ದರಾಮಯ್ಯ ಸರಕಾರ ಅಧಿಕಾರದಲ್ಲಿದ್ದಾಗಲೂ ಸಚಿವರು ವಿಧಾನಸೌಧದಲ್ಲಿ ಲಭ್ಯರಿಲ್ಲ ಎಂಬ ಕೂಗು ಬಲವಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕರ ಭೇಟಿಗೆ ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಸಮಯ ನಿಗದಿ ಮಾಡುವಂತೆ ನಿರ್ದೇಶನ ನೀಡಲಾಗಿತ್ತು. ಈಗ ಮತ್ತೆ ಹಳೆಯ ಸನ್ನಿವೇಶ ನಿರ್ಮಾಣವಾಗಿದ್ದು, ವಿಧಾನಸೌಧ ಬಿಟ್ಟು ಬೇರೆಡೆ ಕಾರ್ಯಕ್ಷೇತ್ರ ಬದಲಾಯಿಸಿಕೊಂಡಿರುವ ಸಚಿವರಿಗೆ ಖುದ್ದು ಮುಖ್ಯಮಂತ್ರಿಯೇ ಪಾಠ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

 ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next