Advertisement

ಬಂಟ್ವಾಳ: ಬಿಗಿ ಬಂದೋಬಸ್ತ್

04:55 PM Jun 23, 2017 | Team Udayavani |

ಬಂಟ್ವಾಳ:  ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಬುಧವಾರ ಬಂದ್‌ ಆಗಿದ್ದ ಬಂಟ್ವಾಳ ಪರಿಸರದಲ್ಲಿ ಗುರುವಾರ ಶಾಂತಿ ನೆಲೆಸಿದೆ. ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ವಾಹನ ಸಂಚಾರ ಎಂದಿನಂತಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳು ತಾಲೂಕಿನ ಶಾಂತಿ ಸುವ್ಯವಸ್ಥೆಯ ಅವಲೋಕನ ನಡೆಸಿದ್ದಾರೆ. ನಿಷೇಧಾಜ್ಞೆಯನ್ನು ಜಿಲ್ಲೆಯಾದ್ಯಂತಕ್ಕೆ ವಿಸ್ತರಿಸಲಾಗಿದೆ.

Advertisement

ಎಡಿಜಿಪಿ ಆಲೋಕ್‌ ಮೋಹನ್‌, ದ.ಕ. ಜಿಲ್ಲಾ ನೂತನ ಎಸ್‌ಪಿ ಸುಧೀರ್‌ ಕುಮಾರ್‌ ಸಿ.ಎಚ್‌., ನಿರ್ಗಮನ ಎಸ್‌ಪಿ ಭೂಷಣ್‌ ಜಿ. ಬೊರಸೆ, ಹೆಚ್ಚುವರಿ ಎಸ್‌ಪಿ ಚಿಕ್ಕಮಗಳೂರಿನ ಅಣ್ಣಾಮಲೈ, ಹೆಚ್ಚುವರಿ ಡಿವೈಎಸ್‌ಪಿ ವಿಷ್ಣುವರ್ಧನ್‌ ಸಹಿತ ಉನ್ನತ ಪೊಲೀಸ್‌ ಅಧಿಕಾರಿಗಳು ಮತ್ತು ಬಂಟ್ವಾಳದಲ್ಲಿ ಈ ಹಿಂದೆ ವೃತ್ತ ನಿರೀಕ್ಷಕ ರಾಗಿದ್ದು ಮಂಗಳೂರಿಗೆ ವರ್ಗಾವಣೆಗೊಂಡಿರುವ ಕೆ.ಯು. ಬೆಳ್ಳಿಯಪ್ಪ ಅವರು ಬಂಟ್ವಾಳದಲ್ಲಿಯೇ ಮೊಕ್ಕಾಂ ಇದ್ದು ಪರಿಸ್ಥಿತಿ ಮೇಲೆ ನಿಗಾ ಇರಿಸಿದ್ದಾರೆ.

ಆಯಕಟ್ಟಿನ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮುಂದುವರಿದಿದೆ. ಚಿಕ್ಕಮಗಳೂರಿನಿಂದ ಇನ್ನಷ್ಟು ಪೊಲೀಸರನ್ನು ಕರೆಸಲಾಗಿದೆ. ರಾ.ಹೆದ್ದಾರಿಯಲ್ಲಿ ವಾಹನ ಸಂಚಾರ ಎಂದಿನಂತಿದೆ. ಆಟೋ ರಿಕ್ಷಾಗಳು,  ಖಾಸಗಿ – ಸರಕಾರಿ ಬಸ್‌ಗಳ ಸಂಚಾರ ಸಹಜವಾಗಿತ್ತು. ಜನಸಂಚಾರ ಮಾತ್ರ ವಿರಳವಾಗಿತ್ತು. ಅಂಗಡಿಗಳಿಗೆ ಎಂದಿನ ವ್ಯಾಪರ ಇರಲಿಲ್ಲ ಎಂದು ವರ್ತಕರು ತಿಳಿಸಿದ್ದಾರೆ. 

ಹಲವು ಮಂದಿ ವಶಕ್ಕೆ
ಎಸ್‌ಡಿಪಿಐ ಮುಖಂಡ ಅಶ್ರಫ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹಲವು ಮಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ವಿಚಾರಣೆಯನ್ನು ಹಿರಿಯ ಅಧಿಕಾರಿಗಳೇ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

ಮಹಮ್ಮದ್‌ ಅಶ್ರಫ್‌ ಕೊಲೆ: ಸುಳಿವು ಲಭ್ಯ ?
ಮಂಗಳೂರು:
ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಬೆಂಜನಪದವಿನಲ್ಲಿ ಬುಧವಾರ ಬೆಳಗ್ಗೆ ಆಟೋ ಚಾಲಕ, ಎಸ್‌ಡಿಪಿಐ ಅಮ್ಮುಂಜೆ ವಲಯ ಅಧ್ಯಕ್ಷ ಮಲ್ಲೂರು ಕಲಾಯಿಯ ಮಹಮ್ಮದ್‌ ಅಶ್ರಫ್‌(35) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಸುಳಿವು, ಬಲವಾದ ಸಾಕ್ಷé ದೊರೆತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ಅಶ್ರಫ್‌ ಅವರು ಬುಧವಾರ ಮಧ್ಯಾಹ್ನ ಬಾಡಿಗೆಗೆಂದು ಬೆಂಜನಪದವಿಗೆ ತೆರಳಿದ್ದಾಗ ಮೂರು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳ ತಂಡ ತಲವಾರಿನಿಂದ ಯದ್ವಾತದ್ವ ಕಡಿದು ಬರ್ಬರವಾಗಿ ಹತ್ಯೆ ಮಾಡಿತ್ತು. ಈ ಸ್ಥಳದಲ್ಲಿ ಪೊಲೀಸರ ತಂಡ ಗುರುವಾರವೂ ಸ್ಥಳ ಪರಿಶೀಲನೆ ನಡೆಸಿದ್ದು, ಹಲವು ಮಾಹಿತಿಗಳನ್ನು ಕಲೆ ಹಾಕಿದೆ. ಅಲ್ಲದೆ ಕೆಲವು ಮೊಬೈಲ್‌ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಮಹಮ್ಮದ್‌ ಅಶ್ರಫ್‌ ಅವರನ್ನು ಬಾಡಿಗೆಗೆ ಕರೆದ ಶೀನ ಪೂಜಾರಿ ಅವರನ್ನು ಠಾಣೆಗೆ ಕರೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಸಾಕ್ಷ್ಯಾಧಾರಗಳ ಮೇಲೆ ಆರೋಪಿಗಳ ಜಾಡು ಹುಡುಕುತ್ತಿರುವ ಪೊಲೀಸರು ಒಂದೆರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next