Advertisement

Bantwal: ಪಾಣೆಮಂಗಳೂರು ಶಾಲಾ ಶಾರದೋತ್ಸವಕ್ಕೆ ಶತಮಾನ

04:07 PM Oct 11, 2024 | Team Udayavani |

ಬಂಟ್ವಾಳ: ಜೀವನದಿ ನೇತ್ರಾವತಿಯಲ್ಲಿ ಕಂಡುಬಂದ 1923ರ ಮಾರಿ ಬೊಳ್ಳದ ಬೆನ್ನಿಗೆ ಉದಯಗೊಂಡ ಶಾಲೆಯೊಂದರ ಜತೆ ಜತೆಗೆ ಆರಂಭಗೊಂಡ ಶ್ರೀ ಶಾರದ ಪೂಜಾ ಮಹೋತ್ಸವವು ಪ್ರಸ್ತುತ ಶತಮಾನೋತ್ಸವ ಸಂಭ್ರಮದಲ್ಲಿದೆ. 1923-24ರ ಅವಧಿಯಲ್ಲಿ ಮಾರಿ ಬೊಳ್ಳ, ಶಾಲೆ ಮತ್ತು ಉತ್ಸವ ಆರಂಭದ ಮೂರು ಘಟನೆಗಳು ಕೂಡ ಒಟ್ಟೊಟ್ಟಿಗೆ ಶತಮಾನವನ್ನು ಕಾಣುತ್ತಿದೆ.

Advertisement

ಪಾಣೆಮಂಗಳೂರು ಶ್ರೀ ವಿಠಲ ಸ್ವಾಮಿ ಅನುದಾನಿತ ಶಾಲೆಯಲ್ಲಿ ನಡೆಯುವ ಈ ಉತ್ಸವವು ಪ್ರಾರಂಭದ 2-3 ವರ್ಷಗಳಲ್ಲಿ ಕೇವಲ ದೇವರ ಪೋಟೆಗೆ ಪೂಜೆಯ ಮೂಲಕ ನಡೆದಿದ್ದು, 4ನೇ ವರ್ಷದಿಂದ ದಿ| ಪಿ.ವಾಸುದೇವ ಭಟ್‌ ಅವರಿಂದ ವಿಗ್ರಹ ರೂಪಕ್ಕೆ ಪರಿವರ್ತನೆಯಾಯಿತು.

ಮಾರಿ ಬೊಳ್ಳಕ್ಕೆ ಕೊಚ್ಚಿ ಹೋದ ಸಂಸ್ಥೆ
ಬಾಸೆಲ್‌ ಮಿಶನ್‌ ಸಂಸ್ಥೆಯವರು ಪಾಣೆಮಂಗಳೂರಿನಲ್ಲಿ ಸ್ಥಳೀಯ ಮಕ್ಕಳ ವಿದ್ಯಾಭ್ಯಾಸಕ್ಕೆ ಚಿಕ್ಕ ಶಾಲೆಯನ್ನು ತೆರೆದಿದ್ದರು. 1923ರಲ್ಲಿ ಬಂದಭೀಕರ ಪ್ರವಾಹದಿಂದ ಪಾಣೆಮಂಗಳೂರೇ ಮುಳುಗಿದ್ದು. ಆಗ ಶಾಲೆಯೂ ನೆಲಸಮವಾಗಿತ್ತು. ಬಳಿಕ ಊರು ಸಹಜ ಸ್ಥಿತಿಗೆ ಬಂದರೂ ಮಕ್ಕಳಿಗೆ ಶಿಕ್ಷಣ ಇಲ್ಲವಾಯಿತು. ಆಗ ಊರಿನ ಮುಖಂಡರೆಲ್ಲ ಸೇರಿ ನಂದಾವರ ವಾಸುದೇವರಾಯರ ಸಹಕಾರದಿಂದ ಊರ ಮಧ್ಯಭಾಗದಲ್ಲಿ ಶ್ರೀ ವೀರ ವಿಠ್ಠಲ ಸ್ವಾಮಿ ಕಿರಿಯ ಪ್ರಾಥಮಿಕ ಶಾಲೆಯನ್ನು 1924ರ ಸೆ. 1ರಂದು ಪ್ರಾರಂಭಿಸಿದ್ದರು. ಪ್ರಾರಂಭದಲ್ಲಿ 55 ವಿದ್ಯಾರ್ಥಿಗಳಿಂದ ಆರಂಭಗೊಂಡ ಶಾಲೆಗೆ ರಾಜಾಶ್ರಯವೂ ದೊರೆತು ಮರ್ದೋಳಿಯ ರಾಜಮನೆತನದ ರಾಮಕೃಷ್ಣ ರಾವ್‌ ಸ್ಥಳದಾನವನ್ನೂ ಮಾಡಿದ್ದರು.

ದಶಕಗಳ ಹಿಂದಿನ ಶಾರದೆಯ ಕಪ್ಪು-ಬಿಳುಪಿನ ಚಿತ್ರ.
ದಶಕಗಳ ಹಿಂದಿನ ಶೋಭಾಯಾತ್ರೆಯ ಟ್ಯಾಬ್ಲೋ.

ಟ್ಯಾಬ್ಲೋ ನೋಡಲು ಭಾರೀ ಜನ
ಶಾಲೆ ಆರಂಭಗೊಂಡ ಮರುವರ್ಷ 1925ರಲ್ಲಿ ಶ್ರೀ ಶಾರದಾ ಪೂಜೆ ಶುರುವಾಗಿದೆ. 1928ರಲ್ಲಿ ವಿಗ್ರಹಕ್ಕೆ ಪೂಜೆ ಆರಂಭಗೊಂಡಿತು. ಭಜನೆ, ನಾಟಕ, ನೃತ್ಯ ಇತ್ಯಾದಿ ಮನೋರಂಜನಾ ಕಾರ್ಯಕ್ರಮಗಳೂ ಇದ್ದವು. ಶಾಲೆಗೆ ಕಳೆದ ವರ್ಷ 100 ತುಂಬಿದ್ದರೆ, ಉತ್ಸವಕ್ಕೆ ಈ ವರ್ಷ ನೂರು ತುಂಬಿದೆ. ಉತ್ಸವದಲ್ಲಿ 1980-85ರ ಕಾಲ ಘಟ್ಟದಲ್ಲಿ ಮೆಲ್ಕಾರಿನ ಉದಯ ಯುವಕ ಮಂಡಲದಿಂದ ಟ್ಯಾಬ್ಲೋಗಳು ನಡೆಯುತ್ತಿದ್ದು, ಅಂದಿನ ಕಾಲದಲ್ಲಿ ಅದನ್ನು ನೋಡುವುದಕ್ಕಾಗಿಯೇ ಸಹಸ್ರಾರು ಮಂದಿ ಸೇರುತ್ತಿದ್ದರು.

Advertisement

1928ರ ಬಳಿಕ ಮಣ್ಣಿನ ಮೂರ್ತಿ
ಶಾಲೆಯ ಶ್ರೀ ಶಾರದಾ ಪೂಜಾ ಮಹೋತ್ಸವದಲ್ಲಿ ಪ್ರಾರಂಭದ ಮೂರು ವರ್ಷ ಫೋಟೊಗೆ ಪೂಜೆ ನಡೆದಿದ್ದು, 1928ರ ಬಳಿಕ ಸಣ್ಣ ಮಣ್ಣಿನ ಮೂರ್ತಿಯ ಮೂಲಕ ಪೂಜೆ ಆರಂಭಗೊಂಡಿತ್ತು. ಬಳಿಕ ಕಳೆದ ಒಂದಷ್ಟು ವರ್ಷಗಳಿಂದ ದೊಡ್ಡ ವಿಗ್ರಹವನ್ನಿಟ್ಟು ಉತ್ಸವ ನಡೆಯುತ್ತಿದೆ.
ವಿನೋದ್‌ ಎನ್‌. ಮುಖ್ಯಶಿಕ್ಷಕರು, ಶ್ರೀ ವಿಠಲ ಸ್ವಾಮಿ ಶಾಲೆ

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next