Advertisement

Bantwal ಕೆಎಫ್‌ಸಿಎಸ್‌ಸಿ ಗೋದಾಮು: 1.32 ಕೋ.ರೂ. ಮಿಕ್ಕಿದ ಅವ್ಯವಹಾರ ಬೆಳಕಿಗೆ

11:18 PM Aug 18, 2023 | Team Udayavani |

ಬಂಟ್ವಾಳ: ಬಿ.ಸಿ.ರೋಡಿನ ಕೆಎಸ್ಸಾರ್ಟಿಸಿ ಡಿಪೋದ ಮುಂಭಾಗದಲ್ಲಿರುವ ಬಂಟ್ವಾಳ ತಾಲೂಕು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (ಕೆಎಫ್‌ಸಿಎಸ್‌ಸಿ)ದ ಗೋದಾಮಿನಲ್ಲಿದ್ದ ಪಡಿತರ ವಿತರಣೆಯ ಅಕ್ಕಿ ದಾಸ್ತಾನಿನಲ್ಲಿ 1.32 ಕೋ.ರೂ.ಗಳಿಗೂ ಮಿಕ್ಕಿದ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದು, ಶುಕ್ರವಾರ ದ.ಕ.ಜಿಲ್ಲಾಧಿಕಾರಿ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.

Advertisement

ಘಟನೆಯ ಕುರಿತು ಕೆಎಫ್‌ಸಿಎಸ್‌ಸಿ ಯ ಮಂಗಳೂರು ಕಚೇರಿ ವ್ಯವಸ್ಥಾಪಕ ಶರತ್‌ಕುಮಾರ್‌ ಹಾಂಡಾ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೂಡ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಗೋದಾನಿನ ಮೇಲುಸ್ತುವಾರಿ ವಹಿಸಿಕೊಂಡಿರುವ ಕಿರಿಯ ಸಹಾಯಕ ವಿಜಯ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಈ ಅವ್ಯವಹಾರದ ಹಿಂದೆ ಯಾರಿದ್ದಾರೆ ಎಂದು ತನಿಖೆ ನಡೆಸಲಾಗುತ್ತಿದೆ.

ಬಡವರಿಗಾಗಿ ಸರಕಾರ ಉಚಿತವಾಗಿ ನೀಡುವ ಅಕ್ಕಿಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಅವ್ಯವಹಾರ ನಡೆದಿರುವುದಕ್ಕೆ ಆಕ್ರೋಶ ಸೃಷ್ಟಿಯಾಗಿದ್ದು, ಕೆಎಫ್‌ಸಿಎಸ್‌ಸಿಯ ಅಧಿಕಾರಿಗಳು ಪೊಲೀಸರಿಗೆ ನೀಡಿರುವ ದೂರಿನಲ್ಲಿ ನಾಪತ್ತೆಯಾಗಿರುವ ಅಕ್ಕಿಯ ಪ್ರಮಾಣವನ್ನು ಗಮನಿಸಿದರೆ ಎಂಥವರಿಗೂ ಆಶ್ವರ್ಯವಾಗಬಹುದು. ನಿಗಮದ ಮಾಹಿತಿಯಂತೆ ಫಿಸ್ಟ್‌ ತಂತ್ರಾಂಶದ ಪ್ರಕಾರ ಸಗಟು ಮಳಿಗೆಯಲ್ಲಿ 4,888.95 ಕ್ವಿಂಟಾಲ್‌ ಅಕ್ಕಿ ಹಾಗೂ 16.55 ಕ್ವಿಂ. ಗೋಧಿ ದಾಸ್ತಾನು ಇರಬೇಕಿದ್ದು, ಆದರೆ ಪರಿಶೀಲನೆಯ ವೇಳೆ ಕೇವಲ 996 (1,992 ಚೀಲಗಳು) ಕ್ವಿಂ. ಅಕ್ಕಿ ಸಂಗ್ರಹ ಕಂಡುಬಂದಿದೆ. ಆದರೆ ಗೋಧಿ ಮಾತ್ರ ನಿಗದಿಗಿಂತಲೂ ಹೆಚ್ಚಿದ್ದು, 17.5 ಕ್ವಿಂ.(35 ಚೀಲಗಳು) ಪತ್ತೆಯಾಗಿದೆ. ಪ್ರಸ್ತುತ ಅಕ್ಕಿಯ ಸಂಗ್ರಹದಲ್ಲೇ ದೊಡ್ಡ ಮಟ್ಟದ ಅವ್ಯವಹಾರ ಕಂಡಿದ್ದು, 1,32,36,030 ರೂ.ಗಳ ಬರೋಬ್ಬರಿ 3,892.95 ಕ್ವಿಂ. ಅಕ್ಕಿ ದಾಸ್ತಾನು ಕೊರತೆ ಕಂಡುಬಂದಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಕೊರತೆ ಕಂಡು ಬಂದಿರುವ ಸತ್ಯಾಸತ್ಯತೆ ಏನು ಎಂಬುದು ತನಿಖೆಯ ಬಳಿಕಷ್ಟೇ ತಿಳಿದುಬರಬೇಕಿದೆ. ಪ್ರತಿ ಕ್ವಿಂಟಾಲ್‌ಗೆ ಎಫ್‌ಸಿಐ ನಿಗದಿ ಪಡಿಸಿರುವ 3,400 ರೂ.ನಂತೆ ಕೊರತೆಯಾಗಿರುವ ಅಕ್ಕಿಯ ಮೌಲ್ಯವನ್ನು ಗುರುತಿಸಲಾಗಿದೆ.

ಒಂದು ತಿಂಗಳ ಅಂತರದ ಕೃತ್ಯ
ಕೆಎಫ್‌ಸಿಎಸ್‌ಸಿಯ ಅಧಿಕಾರಿ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ ಇದು ಒಂದು ತಿಂಗಳ ಅಂತರದಲ್ಲಿ ನಡೆದಿರುವ ಕೃತ್ಯವಾಗಿದ್ದು, ಬರೀ ಒಂದು ತಿಂಗಳಲ್ಲಿ ಕೇವಲ ನಿಗಮದ ಕಿರಿಯ ಸಹಾಯಕನಿಂದ ಇಷ್ಟೊಂದು ದೊಡ್ಡ ಪ್ರಮಾಣದ ಅವ್ಯವಹಾರ ಹೇಗೆ ಸಾಧ್ಯವಾಯಿತು, ಇದರ ಹಿಂದೆ ಯಾರಿದ್ದಾರೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ದೂರಿನಲ್ಲಿ ಹೇಳುವಂತೆ ಜುಲೈ 4ರಂದು ತಂತ್ರಾಂಶದ ಪ್ರಕಾರ ಅಕ್ಕಿಯ ದಾಸ್ತಾನನ್ನು ಪರಿಶೀಲಿಸಿದಾಗ ಸರಿಯಾಗಿಯೇ ಇದ್ದು, ಆದರೆ ದೂರುಗಳು ಕೇಳಿ ಬಂದ ಬಳಿಕ ಅಧಿಕಾರಿಗಳು ಆ. 17ರಂದು ಗೋದಾಮಿಗೆ ಬಂದು ಪರಿಶೀಲಿಸಿದಾಗ ಅಕ್ಕಿಯ ದಾಸ್ತಾನಿನಲ್ಲಿ ಕೊರತೆ ಮತ್ತು ಅವ್ಯವಹಾರದ ನಿಜಾಂಶ ಬೆಳಕಿಗೆ ಬಂದಿದೆ.

Advertisement

ಜತೆಗೆ ಈ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ಕೂಡ ದ.ಕ.ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದರು. ದಾಸ್ತಾನು ಕಡಿಮೆ ಇರುವ ಕುರಿತು ಕಿರಿಯ ಸಹಾಯಕ ವಿಜಯ್‌ನನ್ನು ವಿಚಾರಿಸಿದಾಗ ಆತ ಸಮರ್ಪಕ ಉತ್ತರ ನೀಡಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ವೇಳೆ ದ.ಕ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌, ತಹಶೀಲ್ದಾರ್‌ ಎಸ್‌.ಬಿ.ಕೂಡಲಗಿ, ಉಪತಹಶೀಲ್ದಾರ್‌ ನವೀನ್‌ ಬೆಂಜನಪದವು, ಪಿಎಸ್‌ಐಗಳಾದ ರಾಮಕೃಷ್ಣ, ಕಲೈಮಾರ್‌, ಕೆಎಫ್‌ಸಿಎಸ್‌ಸಿ ಅಧಿ ಕಾರಿಗಳು ಉಪಸ್ಥಿತರಿದ್ದರು.

ಕೆಎಫ್‌ಸಿಎಸ್‌ಸಿ ರಾಜ್ಯ ಅಧಿಕಾರಿಗಳಿಂದ ತನಿಖೆ: ಡಿಸಿ
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ದ.ಕ.ಜಿಲ್ಲಾಧಿಕಾರಿ ಮುಲ್ಲೆ$ç ಮುಗಿಲನ್‌ ಅವರು ಮಾತನಾಡಿ, ಅಕ್ಕಿ ವಿತರಣೆ ವಿಳಂಬವು ಗಮನಕ್ಕೆ ಬಂದಾಗ ಪರಿಶೀಲನೆ ನಡೆಸಿದ್ದು, ಅಕ್ಕಿಯ ಸಂಗ್ರಹದಲ್ಲಿ ಕೊರತೆ ಕಂಡುಬಂದಿದೆ. ಹೀಗಾಗಿ ಕೆಎಫ್‌ಸಿಎಸ್‌ಸಿಯ ಜಿಲ್ಲಾ ವ್ಯವಸ್ಥಾಪಕರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪೊಲೀಸರಿಗೆ ದೂರು ನೀಡಿ ಪ್ರಕರಣವನ್ನು ದಾಖಲಿಸಲಾಗಿದೆ. ಅಕ್ಕಿಯ ಕೊರತೆ ಪ್ರಮಾಣವು ದೊಡ್ಡ ಮಟ್ಟದಲ್ಲಿರುವುದರಿಂದ ಖುದ್ದು ತಾನು ಹಾಗೂ ಎಸ್‌ಪಿಯವರು ಸ್ಥಳಕ್ಕೆ ಬಂದು ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದೇವೆ. ಯಾವ ಕಾರಣದಿಂದ ಹೀಗಾಗಿದೆ ಎಂಬುದನ್ನು ತಿಳಿಯುವುದಕ್ಕೆ ಕೆಎಫ್‌ಸಿಎಸ್‌ಸಿಯ ರಾಜ್ಯಮಟ್ಟದ ಅಧಿಕಾರಿಗಳೇ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next