Advertisement

Karanataka Election ಕೋಮುಗಲಭೆ ಮುಕ್ತ ಬಂಟ್ವಾಳ ಬಿಜೆಪಿ ಬದ್ಧತೆ: ಹರಿಕೃಷ್ಣ ಬಂಟ್ವಾಳ್‌

11:49 AM Apr 28, 2023 | Team Udayavani |

ಮಂಗಳೂರು: ಕಳೆದ ಐದು ವರ್ಷಗಳಲ್ಲಿ ಬಂಟ್ವಾಳ ಕೋಮುಗಲಭೆ ಮುಕ್ತ, ಅಭಿವೃದ್ಧಿ ಹಾಗೂ ಪ್ರಗತಿಶೀಲ ಕ್ಷೇತ್ರವಾಗಿ ಹೊರಹೊಮ್ಮಿದ್ದು, ಮುಂದೆಯೂ ರಾಜೇಶ್‌ ನಾಯ್ಕ ಅವರ ನೇತೃತ್ವದಲ್ಲಿ ಸಾಮರಸ್ಯ, ಭಾವೈಕ್ಯದ ಕ್ಷೇತ್ರವಾಗಿ ಕಂಗೊಳಿಸಲಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಬಿಜೆಪಿ ಮಾಧ್ಯಮ ವಿಭಾಗದ ಕೇಂದ್ರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜೇಶ್‌ ನಾಯ್ಕ್ ಅವರು 2108.53 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳೊಂದಿಗೆ ಕ್ಷೇತ್ರದ ರಾಜಕೀಯ, ಸಾಮಾಜಿಕ ಚಿತ್ರಣವನ್ನೇ ಬದಲಾಯಿಸಿದ್ದಾರೆ ಎಂದರು.

ಕೋಮುಗಲಭೆ, ಘರ್ಷಣೆ ಮೂಲಕ ಬಹಳಷ್ಟು ಹಿಂದೂಗಳು, ಮುಸ್ಲಿಮರ ಹತ್ಯೆ, ನಿರಂತರ ಪ್ರತಿಭಟನೆ, ಗೋಹತ್ಯೆ , ಲವ್‌ಜಿಹಾದ್‌ನಂತಹ ಪ್ರಕರಣಗಳಿಗೆ ಕಳೆದ ಐದು ವರ್ಷಗಳಿಂದ ಬ್ರೇಕ್‌ ಬಿದ್ದಿದೆ. ಇದರಿಂದ ರಾಜೇಶ್‌ ನಾಯ್ಕ್ ಅವರ ಗೆಲುವು ನಿಶ್ಚಿತ ಎಂದು ಅರಿತಿರುವ ಕಾಂಗ್ರೆಸ್‌ನವರು ಕೇರಳದಿಂದ ಮುಸ್ಲಿಂ ಲೀಗ್‌ನ ನಾಯಕರನ್ನು ಕರೆಸಿ ಹೇಳಿಕೆ ಕೊಡಿಸಿದ್ದಾರೆ. ರಾಷ್ಟ್ರವನ್ನು ಧರ್ಮದ ಆಧಾರದಲ್ಲಿ ವಿಭಜನೆಗೆ ಕಾರಣವಾದ ಮುಹಮ್ಮದ್‌ ಅಲಿ ಜಿನ್ನಾ ಅವರ ಪಕ್ಷದ ನಾಯಕನನ್ನು ಇಲ್ಲಿಗೆ ಕರೆಸಿದ ಉದ್ದೇಶ ಏನು ಎಂಬುದನ್ನು ರಮಾನಾಥ ರೈ ಅವರು ತಿಳಿಸಬೇಕು ಎಂದು ಅವರು ಆಗ್ರಹಿಸಿದರು.

ನಿಷೇಧಿತ ಪಿಎಫ್ಐ, ಸಿಎಫ್ಐನ ಸ್ಲೀಪರ್ ಸೆಲ್‌ಗ‌ಳು ಬಂಟ್ವಾಳದಲ್ಲಿ ಸಕ್ರಿಯವಾಗಿವೆ ಎಂದು ಆರೋಪಿಸಿದ ಹರಿಕೃಷ್ಣ ಬಂಟ್ವಾಳ, ಬಂಟ್ವಾಳದ ಪುರಸಭೆ ಅಧಿಕಾರ ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ನಡೆಸುತ್ತಿದ್ದು, ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದರು.

ಮಾಜಿ ಶಾಸಕ, ಸಚಿವರಾಗಿ ಬಂಟ್ವಾಳ ಕ್ಷೇತ್ರವನ್ನು ಕಾಂಗ್ರೆಸ್‌ನ ಪವರ್‌ ಸೆಂಟರ್‌ ಆಗಿ ಮಾಡಿದ್ದ ರಮಾನಾಥ ರೈ ಅವರನ್ನು 15971 ಮತಗಳ ಅಂತರದಿಂದ ಸೋಲಿಸಿದ್ದ ರಾಜೇಶ್‌ ನಾಯ್ಕ್ ಅವರು ಈ ಬಾರಿ 25000 ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ ವಿಶ್ವಾಸ ವ್ಯಕ್ತಪಡಿಸಿದರು.

Advertisement

ರಾಜೇಶ್‌ ನಾಯ್ಕ್ ಅವರ ಮುತುವರ್ಜಿಯಿಂದ ಪುಂಜಾಲಕಟ್ಟೆಯಲ್ಲಿ ನಾರಾಯಣಗುರು ವಸತಿ ಶಾಲೆ ಆರಂಭವಾಗಿದೆ. ಜಕ್ರಿಬೆಟ್ಟುವಿನಲ್ಲಿ 135 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿದೆ. ಕ್ಷೇತ್ರದ ಜನರ ಆರೋಗ್ಯಕ್ಕಾಗಿ ಐಸಿಯು ಬಸ್‌ ಸೌಲಭ್ಯವನ್ನು ಒದಗಿಸಿದ್ದು, 1515 ರಸ್ತೆಗಳ ನಿರ್ಮಾಣ, 34 ಕಿಂಡಿ ಅಣೆಕಟ್ಟು, 318 ಧಾರ್ಮಿಕ ಕ್ಷೇತ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಹರಿಕೃಷ್ಣ ಬಂಟ್ವಾಳ ಹೇಳಿದರು.

ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯಕಾರಿಣಿ ಸದಸ್ಯ ಮಾಧವ ಮಾವೆ, ಜಿಲ್ಲಾ ಮಾಧ್ಯಮ ಪ್ರಮುಖರಾದ ಸಂದೇಶ್‌ ಶೆಟ್ಟಿ, ರಣದೀಪ್‌ ಕಾಂಚನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next