Advertisement

Bantwal ಅಮ್ಟಾಡಿ: ನಿರ್ಮಾಣ ಹಂತದ ಮನೆಯಿಂದ ಬಿದ್ದು ಕಾರ್ಮಿಕ ಸಾವು

08:44 PM Jun 05, 2024 | Team Udayavani |

ಬಂಟ್ವಾಳ: ಅಮ್ಟಾಡಿಯ ಬಡಾಜೆಯಲ್ಲಿ ನಿರ್ಮಾಣ ಹಂತದ ಮನೆಯೊಂದರ ಕಾಂಕ್ರೀಟ್‌ ಅಳವಡಿಕೆಗೆ ಹಾಕಿದ್ದ ಹಲಗೆಗಳು ಹಾಗೂ ಜಾಕ್‌ಗಳು ಹಠಾತ್‌ ಕೆಳಗೆ ಬಿದ್ದ ಪರಿಣಾಮ ಕಾರ್ಮಿಕನೋರ್ವ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.

Advertisement

ಅಮ್ಟಾಡಿಯ ತಡ್ಯಾಲು ನಿವಾಸಿ ಪ್ರಕಾಶ್‌ ಕುಲಾಲ್‌ (45) ಮೃತರು. ಅವರು ಅಮ್ಟಾಡಿ ಗ್ರಾ.ಪಂ.ನ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮನೆಯ 2ನೇ ಮಹಡಿಯ ಮೇಲ್ಛಾವಣಿಗೆ ಕಾಂಕ್ರೀಟ್‌ ಅಳವಡಿಕೆಯ ಹಿನ್ನೆಲೆಯಲ್ಲಿ ಜಾಕ್‌ಗಳನ್ನು ನಿಲ್ಲಿಸಿ ಹಲಗೆಗಳನ್ನು ಜೋಡಿಸಲಾಗಿತ್ತು. ಮೂರು ಮಂದಿ ಕಾರ್ಮಿಕರು ಅಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಹಲಗೆಗಳು ಹಾಗೂ ಜಾಕ್‌ಗಳು ಕೆಳಕ್ಕೆ ಬಿದ್ದಿವೆ.

ಹಲಗೆಗಳ ಮೇಲೆ ನಿಂತಿದ್ದ ಕಾರ್ಮಿಕರು ಕೆಳಗ್ಗೆ ಬಿದ್ದಿದ್ದು, ಇಬ್ಬರು ಹಾರಿದ ಪರಿಣಾಮ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಆದರೆ ಪ್ರಕಾಶ್‌ ಅವರು ಗಂಭೀರ ಗಾಯಗೊಂಡಿದ್ದು, ತತ್‌ಕ್ಷಣ ಅವರನ್ನು ತುಂಬೆ ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ ಅವರು ಅದಾಗಲೇ ಮೃತಪಟ್ಟಿದ್ದರು ಎನ್ನಲಾಗಿದೆ.

ಪ್ರಕಾಶ್‌ ಅವರು ಮೊದಲ ಬಾರಿಗೆ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದರು. ಹಿಂದೆ ಕಾಂಗ್ರೆಸ್‌ನಲ್ಲಿದ್ದ ಅವರು ಆ ಬಳಿಕ ಬಿಜೆಪಿ ಬೆಂಬಲಿತರಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಹಾಗೂ 1ನೇ, 4ನೇ ತರಗತಿಯ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಪ್ರಕಾಶ್‌ ಮನೆಯಲ್ಲಿ ಅಣ್ಣ-ತಮ್ಮಂದಿರ ಜತೆಗೆ ಜೀವನ ನಡೆಸುತ್ತಿದ್ದರು. ಘಟನೆಯ ಕುರಿತು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next