Advertisement

Bantakal ವಾರ್ಡ್‌ ಸಭೆ; ಕ್ರಿಯಾಶೀಲ ವಾರ್ಡ್‌ ಸಭೆ ಎಲ್ಲ ಗ್ರಾಮಗಳಿಗೂ ಮಾದರಿಯಾಗಲಿ

06:56 PM Aug 20, 2024 | Team Udayavani |

ಶಿರ್ವ: ಜನರ ಚಿಂತನೆ ಬದಲಾಗಿ ಆರೋಗ್ಯ, ಆಹಾರ ಮತ್ತು ಶಿಕ್ಷಣ ಕ್ರಮದಲ್ಲಿ ಸುಧಾರಣೆಯಾಗಿ ವ್ಯಾಜ್ಯಮುಕ್ತ, ತ್ಯಾಜ್ಯಮುಕ್ತ ಮತ್ತು ವ್ಯಸನಮುಕ್ತ ಗ್ರಾಮಗಳಾಗಬೇಕು. ಕೇವಲ ರಸ್ತೆ, ಸೇತುವೆ, ಚರಂಡಿಗಳು ಮಾತ್ರ ಗ್ರಾಮದ ಸಮಸ್ಯೆಯಾಗಿರದೆ ಸರಕಾರದ ಸೌಲಭ್ಯಗಳು ಜನರಿಗೆ ಮುಟ್ಟುವಂತಾಗಬೇಕು. ಗ್ರಾಮಸಭೆಗಿಂತ ಹೆಚ್ಚು ಜನ ಸೇರಿಸಿ ಉತ್ತಮ ಚಿಂತನೆಯೊಂದಿಗೆ ನಡೆಯುವ ಕ್ರಿಯಾಶೀಲ ವಾರ್ಡ್‌ ಸಭೆ ಎಲ್ಲ ಗ್ರಾಮಗಳಿಗೂ ಮಾದರಿಯಾಗಲಿ ಎಂದು ಕಾಪು ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್‌ ಡಿಸಿಲ್ವಾ ಹೇಳಿದರು.

Advertisement

ಅವರು ಆ. 20ರ ಮಂಗಳವಾರ ಬಂಟಕಲ್ಲು ರೋಟರಿ ಸಭಾ ಭವನದಲ್ಲಿ ನಡೆದ ಶಿರ್ವ ಗ್ರಾ.ಪಂ.ನ ಬಂಟಕಲ್ಲು ವಾರ್ಡ್‌ನ 2024-25ನೇ ಸಾಲಿನ ಪ್ರಥಮ ವಾರ್ಡ್‌ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಶಿರ್ವ ಗ್ರಾ.ಪಂ. ಪಿಡಿಒ ಅನಂತಪದ್ಮನಾಭ ನಾಯಕ್‌ ಗ್ರಾ.ಪಂ.ನಿಂದ ಗ್ರಾಮಸ್ಥರಿಗೆ ಸಿಗುವ ಸೌಲಭ್ಯಗಳು, ಅನುದಾನ, ನರೇಗಾ ಯೋಜನೆ, ನೂತನ ತೆರಿಗೆ ಪಾವತಿ ವಿಧಾನಗಳ ಬಗ್ಗೆ, ಶಿರ್ವ ಸಮುದಾಯ ಆರೊಗ್ಯ ಕೇಂದ್ರದ ಆರೋಗ್ಯ ಕ್ಷೇಮಾಧಿಕಾರಿ ವೈಷ್ಣವಿ ಚುಚ್ಚುಮದ್ದು ಮತ್ತು ಚಿಕಿತ್ಸೆ ಬಗ್ಗೆ ಹಾಗೂ ಶಿರ್ವ ಗ್ರಾಮ ಆಡಳಿತಾಧಿಕಾರಿ ಶ್ವೇತಾ ಕೃಷಿ ಭೂಮಿಯ ಆರ್‌ಟಿಸಿ ಯೊಂದಿಗೆ ಆಧಾರ್‌ ಜೋಡಣೆ ಬಗ್ಗೆ ಮಾಹಿತಿ ನೀಡಿದರು.

ವಾರ್ಡ್‌ನ ಬೀದಿ ನಾಯಿಗಳ ಸಮಸ್ಯೆ,ಕಸತ್ಯಾಜ್ಯ ವಿಲೇವಾರಿ ವ್ಯವಸ್ಥೆ, ಕುಡಿಯುವ ನೀರು,ವಿದ್ಯುತ್‌ ಹಾಗೂ ರಸ್ತೆ ಕಾಮಗಾರಿಗಳ ಸಮಸ್ಯೆಗಳ ಬಗ್ಗೆ ಮತದಾರರಿಂದ ಅಹವಾಲುಗಳನ್ನು ಸ್ವೀಕರಿಸಿ ಅಭಿವೃದ್ಧಿ ಕುರಿತ ಸಂವಾದ ನಡೆಸಲಾಯಿತು.

Advertisement

ಈ ಸಂದರ್ಭದಲ್ಲಿ ಬಂಟಕಲ್ಲು ಅಂಗನವಾಡಿ ಸಹಾಯಕಿ ಸಂಧ್ಯಾ ಆಚಾರ್ಯ, ಬಟ್ಟೆ ಚೀಲ ಪ್ರಾಯೋಜಕಿ ಅನಿತಾ ಮೆಂಡೋನ್ಸಾ, ಕರಾಟೆ ಪಟು ಶಿಹಾನ್‌ ಕ್ಲೊಟಿಲ್ಡ ಮರಿಯಾ ಮಥಾಯಸ್‌, ನಿವೃತ್ತದೈಹಿಕ ಶಿಕ್ಷಕ ಸತ್ಯ ಸಾಯಿ ಪ್ರಸಾದ್‌, ನಿವೃತ್ತ ಮೆಸ್ಕಾಂ ಸಿಬಂದಿ ವಿಶ್ವನಾಥ, ಮೆಸ್ಕಾಂ ಲೈನ್‌ಮ್ಯಾನ್‌ಗಳಾದ ಸುನೀಲ್‌, ಮಂಜುನಾಥ, ಆಶಾ ಕಾರ್ಯಕರ್ತೆ ಕಮಲ, ಬಿಎಲ್‌ಒ ಸವಿತಾ, ಪಂಪ್‌ ಆಪರೇಟರ್‌ ರವಿ ಮತ್ತು ಎಸ್‌ಎಲ್‌ಆರ್‌ಎಂ ಘಟಕದ ಮೇಲ್ವಿಚಾರಕ ಕಿಶೋರ್‌ ಅವರನ್ನು ವಾರ್ಡ್‌ ಮತದಾರರ ವತಿಯಿಂದ ಸಮ್ಮಾನಿಸಲಾಯಿತು.

ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ  ಶ್ರೇಣಿಯಲ್ಲಿ ಉತೀ¤ರ್ಣರಾದ ಬಂಟಕಲ್ಲು ವಾರ್ಡ್‌ನ ವಿದ್ಯಾರ್ಥಿಗಳನ್ನು ಸಮ್ಮಾನಿಸಿ ಗೌರವಧನ ನೀಡಲಾಯಿತು.

ಶಿರ್ವ ಗ್ರಾ.ಪಂ. ಅಧ್ಯಕ್ಷೆ ಸವಿತಾ ಮತ್ತು ಉಪಾಧ್ಯಕ್ಷ ವಿಲ್ಸನ್‌ ರೊಡ್ರಿಗಸ್‌ ಮಾತನಾಡಿದರು. ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಸತೀಶ್‌, ವಾರ್ಡ್‌ ಸದಸ್ಯೆ ಗ್ರೇಸಿ ಕಾಡೋìಜಾ ವೇದಿಕೆಯಲ್ಲಿದ್ದರು. ಗ್ರಾ.ಪಂ. ವಾರ್ಡ್‌ ಸದಸ್ಯೆ ವೈಲೆಟ್‌ ಕ್ಯಾಸ್ತಲಿನೋ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮಸಭೆಗೂ ಮೀರುವಂತೆ ಬಂಟಕಲ್‌ ವಾರ್ಡ್‌ನ 200 ಮತದಾರರು ವಾರ್ಡ್‌ ಸಭೆಯಲ್ಲಿ ಭಾಗವಹಿಸಿದ್ದರು. ಪ್ಲಾಸ್ಟಿಕ್‌ ಬಳಕೆ ನಿಯಂತ್ರಣ ಜಾಗೃತಿಗಾಗಿ ಬಟ್ಟೆ ಚೀಲ ಹಾಗೂ ಉತ್ತಮ ಪರಿಸರ ನಿರ್ಮಾಣದ ಸಂಕೇತವಾಗಿ ಗುಲಾಬಿ ಗಿಡಗಳನ್ನು ವಿತರಿಸಲಾಯಿತು.ವಾರ್ಡ್‌ ಸಭೆಯಲ್ಲಿ ಭಾಗವಹಿಸಿದ ನೆನಪಿಗಾಗಿ ಫೋಟೋ ತೆಗೆಸಿಕೊಳ್ಳಲು ಸೆಲ್ಫಿ ಕಾರ್ನರ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

ಗ್ರಾ.ಪಂ. ವಾರ್ಡ್‌ ಸದಸ್ಯ ಕೆ.ಆರ್‌.ಪಾಟ್ಕರ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ. ಕಾರ್ಯದರ್ಶಿ ಚಂದ್ರಮಣಿ ವಂದಿಸಿದರು. ವಾರ್ಡ್‌ ಸಭೆೆಯಲ್ಲಿ ಅದೃಷ್ಟಶಾಲಿ ಮತದಾರರ ಆಯ್ಕೆ ಮಾಡಿ ಬಹುಮಾನ ನೀಡಲಾಯಿತು. ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.

ವಾರ್ಡ್‌ ಸಭೆ ಎಲ್ಲರಿಗೂ ಪ್ರೇರಣೆಯಾಗಲಿ: ಪಂಚಾಯತ್‌ರಾಜ್‌ ಅಧಿನಿಯಮ ಪ್ರಕಾರ 6 ತಿಂಗಳಿಗೊಮ್ಮೆ ನಡೆಯುವ ಗ್ರಾಮ ಸಭೆಯ ಮುಂಚಿತವಾಗಿ ನಡೆಯುವ ವಾರ್ಡ್‌ ಸಭೆಗಳು ಕೆಲವೆಡೆ ವಾರ್ಡ್‌ನ ಮತದಾರರಿಗೆ ಮಾಹಿತಿಯೇ ಇರದೆ ಕೇವಲ ಕಾಟಾಚಾರಕ್ಕೆ ಎಂಬಂತೆ ಸಭೆ ನಡೆಯುತ್ತದೆ. ಆದರೆ ಇದಕ್ಕೆ ಅಪವಾದವೆಂಬಂತೆ ಬಂಟಕಲ್ಲು ವಾರ್ಡ್‌ ಸಭೆಯು ಪಾರದರ್ಶಕವಾಗಿ ಮಾದರಿ ವಾರ್ಡ್‌ ಸಭೆ ನಡೆಯುತ್ತಿದ್ದು, ಎಲ್ಲರಿಗೂ ಪ್ರೇರಣೆಯಾಗಲಿ.- ಕೆ.ಆರ್‌.ಪಾಟ್ಕರ್‌ , ಆಯೋಜಕರು, ಗ್ರಾ.ಪಂ.ಬಂಟಕಲ್ಲು ವಾರ್ಡ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next