ಉಡುಪಿ: ಕೋವಿಡ್-19 ಹಾವಳಿಯಿಂದ ದೇಶವಿಡೀ ಲಾಕ್ಡೌನ್ ಆಗಿದ್ದರೂ ಆರೋಗ್ಯ, ಪೊಲೀಸ್, ಅಗ್ನಿ ಶಾಮಕ, ಗೃಹರಕ್ಷಕದಳದವರಂತೆ ಒಂದಿ ನಿತೂ ನಿಲುಗಡೆ ಇಲ್ಲದೆ ನಡೆಯುತ್ತಿರುವ ಕ್ಷೇತ್ರದಲ್ಲಿ ಬ್ಯಾಂಕಿಂಗ್ ಕೂಡ ಒಂದಾಗಿದೆ ಭಾರತೀಯ ರಿಸರ್ವ್ ಬ್ಯಾಂಕ್, ಹಣಕಾಸು ಸಚಿವಾಲಯದ ಸೂಚನೆ ಮೇರೆಗೆ ಠೇವಣಿ, ಹಣ ತೆಗೆಯುವುದು, ಚೆಕ್ ಕ್ಲಿಯರೆನ್ಸ್, ಸರಕಾರಿ ವ್ಯವಹಾರಗಳು ಇತ್ಯಾದಿಗಳು ನಡೆಯುತ್ತಿವೆ.
ಕನಿಷ್ಠ ಸಿಬಂದಿ ನಿಯೋಜಿಸಿ ಕೊಂಡು, ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರದ ಪಾಲನೆ ಇತ್ಯಾದಿ ಅಗತ್ಯಗಳೊಂದಿಗೆ ಕಾರ್ಯನಿರ್ವಹಿಸಿ ಎಂಬ ಸೂಚನೆ ಮೇರೆಗೆ ಬ್ಯಾಂಕ್ಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ನಿವೃತ್ತಿ ಅಂಚಿನಲ್ಲಿರುವವರು, ಆರೋಗ್ಯದ ಅಗತ್ಯವುಳ್ಳವರಿಗೆ ರಜೆ ನೀಡಿ ಉಳಿದವರಿಂದ ಕೆಲಸ ನಡೆಸ ಲಾಗುತ್ತಿದೆ. ಸಮೀಪದ ಶಾಖೆಗಳಲ್ಲಿ ಕಾರ್ಯ ನಿರ್ವಹಿಸುವಂತೆಯೂ ನೋಡಿ
ಕೊಳ್ಳಲಾಗುತ್ತಿದೆ.
ಪಾಸ್ಬುಕ್ ಎಂಟ್ರಿಗಳು ನಡೆಯುತ್ತಿಲ್ಲ. ಹಿಂದಿನ ದಾಖಲೆಗಳ ಆಧಾರದಲ್ಲಿ ಸಣ್ಣಪುಟ್ಟ ಸಾಲ ನೀಡಲಾಗುತ್ತಿದೆ. ಜನಧನ್ ಖಾತೆಗೆ ಇತ್ತೀಚೆಗೆ 500 ರೂ. ಜಮೆಯಾದ ಕಾರಣ ಒಮ್ಮೆಲೆ ಬ್ಯಾಂಕುಗಳಿಗೆ ಗ್ರಾಹಕರು ಬಂದಾಗ ಸಾಮಾಜಿಕ ಅಂತರ ಕಾಪಾಡುವುದೂ ದುಸ್ತರವಾಯಿತು. ಪ್ರಧಾನಿ ಕಿಸಾನ್ ನಿಧಿ, ಉಜ್ವಲ್ ಯೋಜನೆ, ಕಟ್ಟಡ ಕಾರ್ಮಿಕರ ಹಣ ಹೀಗೆ ಡಿಬಿಟಿ (ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್ಫರ್) ಯೋಜನೆಗಳ ಹಣ ಬ್ಯಾಂಕ್ ಮೂಲಕ ನಿರ್ವಹಣೆಯಾಗುತ್ತಿರುವ ಕಾರಣ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಅಂತರ ಕಾಪಾಡಲು ಕಷ್ಟವಾಗುತ್ತಿದೆ ಎನ್ನುವ ಅಳಲು ಬ್ಯಾಂಕ್ ಸಿಬಂದಿಯದ್ದು.
ಸಾವಿರಾರು ಸಿಬಂದಿ ನಿರ್ವಹಣೆ
ಉಡುಪಿ ಜಿಲ್ಲೆಯಲ್ಲಿ 420 ಶಾಖೆಗಳು, 450 ಎಟಿಎಂಗಳು, 65 ಬಿಸಿನೆಸ್ ಕರೆಸ್ಪಾಂಡೆಂಟ್ಸ್, ದ.ಕ. ಜಿಲ್ಲೆಯಲ್ಲಿ 642 ಶಾಖೆಗಳು, 841 ಎಟಿಎಂಗಳು, 98 ಬಿಸಿನೆಸ್ ಕರೆಸ್ಪಾಂಡೆಂಟ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಬಂಟ್ವಾಳದಲ್ಲಿ ಆರು, ತೊಕ್ಕೊಟ್ಟಿನಲ್ಲಿ ಒಂದು ಶಾಖೆ ಹೀಗೆ ಕಂಟೈನ್ಮೆಂಟ್ ಪ್ರದೇಶದಲ್ಲಿ ಏಳು ಶಾಖೆಗಳು ಕಾರ್ಯನಿರ್ವಹಿಸುತ್ತಿಲ್ಲ. ಉಡುಪಿ ಜಿಲ್ಲೆಯಲ್ಲಿ 2,500-3000, ದ.ಕ. ಜಿಲ್ಲೆಯಲ್ಲಿ 3,500-4,000 ಸಿಬಂದಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ.
ಲಾಕ್ಡೌನ್ ಅವಧಿಯಲ್ಲೂ ನಿರಂತರ ಸೇವೆ
ಆರ್ಬಿಐ ಮಾರ್ಗಸೂಚಿ ಪ್ರಕಾರ ಅಗತ್ಯ ಸೇವೆಗಳ ರಂಗದಲ್ಲಿ ಬರುವ ಬ್ಯಾಂಕಿಂಗ್ ಕ್ಷೇತ್ರವನ್ನು ಲಾಕ್ಡೌನ್ ಅವಧಿಯಲ್ಲಿಯೂ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ.
-ರುದ್ರೇಶ್, ಪ್ರವೀಣ್, ಜಿಲ್ಲಾ ಅಗ್ರಣಿ ಬ್ಯಾಂಕ್ ಪ್ರಬಂಧಕರು, ಉಡುಪಿ ಮತ್ತು ದ.ಕ. ಜಿಲ್ಲೆ.