Advertisement

ಬಾಂಗ್ಲಾ: ಹಿಂದೂಗಳ ಮೇಲೆ ದಾಳಿ; ಇತಿಹಾಸದ ಕಹಿನೆನಪು

05:25 PM Oct 20, 2021 | Team Udayavani |

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಗೆ ಕರಾಳ ಇತಿಹಾಸವೇ ಇದೆ. ಅಂದರೆ, ಸ್ವಾತಂತ್ರ್ಯೋತ್ಸವದ ಹಿಂದಿನಿಂದಲೂ ಬಾಂಗ್ಲಾದೇಶದ ಕೆಲವು ಕಡೆಗಳಲ್ಲಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಲೇ ಇದೆ. ವಿಚಿತ್ರವೆಂದರೆ, ಜಲಿಯನ್‌ವಾಲಾ ಬಾಗ್‌ನಲ್ಲಿ ಬ್ರಿಟಿಷರು ನಡೆಸಿದ ನರಮೇಧಕ್ಕಿಂತಲೂ ದೊಡ್ಡ ನರಮೇಧಗಳು ಬಾಂಗ್ಲಾದಲ್ಲಿ ನಡೆಯುತ್ತಲೇ ಇವೆ.

Advertisement

ಇತಿಹಾಸಕ್ಕೆ ಹೋಗುವುದಾದರೆ, ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಈ ಭಾಗದಲ್ಲಿ ಹಿಂದೂಗಳ ಸಂಖ್ಯೆ ಒಟ್ಟಾರೆ ಜನಸಂಖ್ಯೆಯ ಶೇ.30ರಷ್ಟಿತ್ತು. ಆದರೆ ಈಗ ಹಿಂದೂ, ಕ್ರೈಸ್ತರು ಮತ್ತು ಬೌದ್ಧರನ್ನು ಸೇರಿಸಿ ಶೇ.8ರಷ್ಟಿದೆ. ಈ 75 ವರ್ಷಗಳಲ್ಲಿ ಇವರೆಲ್ಲ ಎಲ್ಲಿ ಹೋದರು ಎಂಬ ಪ್ರಶ್ನೆಗೆ ಸಿಗುವ ಉತ್ತರ, ಆಗಾಗ್ಗೆ ನಡೆಯುತ್ತಿರುವ ನರಮೇಧಗಳು ಮತ್ತು ಹೆಚ್ಚಿನವರು ಭಾರತಕ್ಕೆ ಪಲಾಯನ ಮಾಡಿರುವುದು.

1941ರ ಜನಗಣತಿ ಪ್ರಕಾರ, ಈಗಿನ ಬಾಂಗ್ಲಾದೇಶವಿರುವ ಭಾಗದಲ್ಲಿ ಇದ್ದ ಹಿಂದೂಗಳು ಸ್ಥಿತಿವಂತರು ಮತ್ತು ಶೈಕ್ಷಣಿಕವಾಗಿ ಬುದ್ಧಿವಂತರೂ ಆಗಿದ್ದರು. ನಗರಗಳಲ್ಲಿ ಪುಟ್ಟ ಸಂಖ್ಯೆಯಲ್ಲಿದ್ದ ಇವರು, ವೈದ್ಯ ವೃತ್ತಿ, ವಕೀಲಿಕೆ ಮಾಡುತ್ತಿದ್ದರೆ, ಹಳ್ಳಿಗಳಲ್ಲಿದ್ದ ಹಿಂದೂಗಳು ಕಲಾವಿದರು, ಮೀನುಗಾರಿಕೆ ಮಾಡುತ್ತಿದ್ದರು.

1946ರ ಅಕ್ಟೋಬರ್‌ನಲ್ಲಿ ನೋಖಾಲಿ ಎಂಬ ಜಿಲ್ಲೆಯಲ್ಲಿ ಹಿಂದೂಗಳ ಮೇಲೆ ಅವ್ಯಾಹತವಾಗಿ ದಾಳಿ ನಡೆದಿತ್ತು. ಮುಸ್ಲಿಂ ಲೀಗ್‌ನ ಪುಂಡರು ಹಿಂದೂಗಳ ಮೇಲೆ ದಾಳಿ ಮಾಡಿ ಕೊಲೆ, ಅತ್ಯಾಚಾರ, ಹಸುಗಳ ವಧೆ ಮಾಡಿದ್ದರು. ಇದಾದ ಮೇಲೆ ಇಲ್ಲಿ ಶೇ.20ರಷ್ಟಿದ್ದ ಹಿಂದೂಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಲೇ ಬಂದಿತು. ಈಗ ಇದೇ ಜಿಲ್ಲೆಯಲ್ಲಿ ಇರುವ ಹಿಂದೂಗಳ ಸಂಖ್ಯೆ ಶೇ.2-3 ಮಾತ್ರ.  1946ರ ಗಲಭೆ ಬಳಿಕ ಸ್ವತಃ ಮಹಾತ್ಮಾ ಗಾಂಧಿ ಅವರೇ ಕೋಲ್ಕತಾಗೆ ತೆರಳಿ ಹಿಂದೂ-ಮುಸ್ಲಿಮರ ಮಧ್ಯೆ ಶಾಂತಿ ಏರ್ಪಡಿಸುವ ಪ್ರಯತ್ನ ಮಾಡಿದ್ದರು. ಹೀಗಾಗಿಯೇ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಅವರು ದಿಲ್ಲಿಯಲ್ಲಿ ಇರಲೇ ಇಲ್ಲ. ಕೋಲ್ಕತಾದಲ್ಲಿದ್ದು, ಶಾಂತಿ ಮಾತುಕತೆ ನಡೆಸಿದ್ದರು. ಆದರೆ ಇದು ಆಗ ಮಾತ್ರ ನಿಯಂತ್ರಣಕ್ಕೆ ಬಂದಿತ್ತೇ ಹೊರತು ಬಳಿಕ ಸರಿಯಾಗಲೇ ಇಲ್ಲ.

1950ರ ಜನವರಿಯಲ್ಲಿ ಭಾರತ ಸಂವಿಧಾನವನ್ನು ಅಳವಡಿಸಿಕೊಂಡ ಮೇಲೆ, ಪೂರ್ವ ಪಾಕಿಸ್ಥಾನದಲ್ಲಿ ಇನ್ನಷ್ಟು ಹಿಂಸೆ ಜಾಸ್ತಿಯಾಯಿತು. ಇದಕ್ಕೆ ಉದಾಹರಣೆ ಎಂದರೆ, ಬಾಂಗ್ಲಾದಲ್ಲಿದ್ದ ರೈಲ್ವೇ ಸೇತುವೆ ಮೇಲಿನ ನರಮೇಧ. ಅಂದರೆ 1950ರ ಫೆ.12ರಂದು ಇಲ್ಲಿನ ಆಶುಗೋಂಜ್‌ ಮತ್ತು ಭೈರಾಬ್‌ ಬಜಾರ್‌ ನಡುವಿನ ನದಿಯೊಂದರ ರೈಲ್ವೇ ಸೇತುವೆ ಮೇಲೆ ರೈಲೊಂದನ್ನು ನಿಲ್ಲಿಸಿ ಅದರಲ್ಲಿದ್ದ ಹಿಂದೂಗಳನ್ನು ಗುರುತಿಸಿ ನದಿಗೆ ಎಸೆಯಲಾಯಿತು.

Advertisement

ಇದನ್ನೂ ಓದಿ:ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಈ ಘಟನೆಗಳ ಸಂಬಂಧವಾಗಿಯೇ ನೆಹರೂ ಸಂಪುಟದಲ್ಲಿ ಕ್ಯಾಬಿನೆಟ್‌ ದರ್ಜೆಯ ಸಚಿವರಾಗಿದ್ದ ಡಾ| ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರು, ನೆಹರೂ ಅವರ ಮುಂದೆ ಪೂರ್ವ ಪಾಕಿಸ್ಥಾನ ಮತ್ತು ಭಾರತದ ನಡುವೆ ಜನರ ಪರಸ್ಪರ ಸ್ಥಳಾಂತರ ಮತ್ತು ಇಲ್ಲಿಗೆ ಬಂದ ಹಿಂದೂಗಳಿಗಾಗಿ ಭೂಮಿಯನ್ನು ಕೇಳುವಂತೆ ಸಲಹೆ ನೀಡಿದ್ದರು. ಆದರೆ ನೆಹರೂ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಆದರೆ ಪಶ್ಚಿಮ ಬಂಗಾಲದಲ್ಲಿ ಮುಸ್ಲಿಮರ ಮೇಲೆ ದಾಳಿಯಾದ ಮೇಲೆ ನೆಹರೂ ಮತ್ತು ಪಾಕ್‌ ಪ್ರಧಾನಿ ಲಿಯಾಖತ್‌ ಅಲಿ ಖಾನ್‌ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದವನ್ನು ವಿರೋಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರು ಜನಸಂಘವನ್ನು ಕಟ್ಟಿದರು.

ಮುಖರ್ಜಿ ಅವರ ರಾಜೀನಾಮೆ ಅನಂತರ ಪಶ್ಚಿಮ ಬಂಗಾಲದವರೇ ಆದ ಕೆ.ಸಿ. ನಿಯೋಗಿ ಅವರೂ ಒಪ್ಪಂದ ವಿರೋಧಿಸಿ ರಾಜೀನಾಮೆ ಸಲ್ಲಿಸಿದರು. ಈ ಒಪ್ಪಂದದಂತೆ ಪೂರ್ವ ಪಾಕಿಸ್ಥಾನದಲ್ಲಿ ಹಿಂದೂಗಳಿಗೆ ರಕ್ಷಣೆ ಸಿಗಲೇ ಇಲ್ಲ. ಅಲ್ಲಿಂದ ಭಾರತಕ್ಕೆ ಬರುವ ಹಿಂದೂಗಳ ಸಂಖ್ಯೆಯೂ ಹೆಚ್ಚಾಯಿತು. ಜತೆಗೆ ಅಲ್ಲಿ ಹಿಂದೂಗಳ ನರಮೇಧವೂ ಮುಂದುವರಿಯಿತು. ಆದರೆ ನೆಹರೂ ಅವರು ತಮ್ಮ ಒಪ್ಪಂದವನ್ನೇ ನಂಬಿಕೊಂಡು ಕುಳಿತರು.

ಆದರೆ ಇದು ಎಂದಿಗೂ ಜಾರಿಯಾಗಲೇ ಇಲ್ಲ. ಪರಸ್ಪರ ದೇಶಗಳಲ್ಲಿನ ಅಲ್ಪಸಂಖ್ಯಾಕರ ರಕ್ಷಣೆಗಾಗಿ ಈ ಒಪ್ಪಂದಕ್ಕೆ ಸಹಿ ಹಾಕಿದರೂ ಪಾಕಿಸ್ಥಾನ ಸರಕಾರವೇ ಈ ಒಪ್ಪಂದವನ್ನು ಉಲ್ಲಂಘನೆ ಮಾಡಿತು. ಇದಕ್ಕೆ ಬಹುದೊಡ್ಡ ಉದಾಹರಣೆ ಎಂದರೆ 1971ರಲ್ಲಿ ಪಾಕಿಸ್ಥಾನ ಸೇನೆಯೇ ಬಾಂಗ್ಲಾದಲ್ಲಿ ನಡೆಸಿದ ಹಿಂದೂಗಳ ನರಮೇಧ. ಈ ವೇಳೆ ಸುಮಾರು 10 ಸಾವಿರ ಹಿಂದೂಗಳನ್ನು ಹತ್ಯೆ ಮಾಡಲಾಯಿತು ಎಂಬ ವರದಿಗಳಿವೆ.

ಇದಾದ ಬಳಿಕವೂ ಕೆಲವೊಮ್ಮೆ ಹಿಂದೂಗಳ ಸ್ಥಿತಿ ಉತ್ತಮವಾಗಿರುತ್ತದೆ, ಕೆಲವೊಮ್ಮೆ ಈಗ ಉದ್ಭವಿಸಿರುವಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

-ತಥಾಗತ ರಾಯ್‌
ತ್ರಿಪುರಾದ ಮಾಜಿ ರಾಜ್ಯಪಾಲರು

Advertisement

Udayavani is now on Telegram. Click here to join our channel and stay updated with the latest news.

Next