Advertisement

ಹೊಟ್ಟೆಪಾಡಿಗಾಗಿ ಕಲಿತ ಕಲೆ ಬದುಕಿಗೆ ನೆರವು

01:46 PM Jan 16, 2020 | Team Udayavani |

ಬಂಕಾಪುರ: ಉತ್ತಮ ಮನೆತನದಲ್ಲಿ ಮಂಗಳಮುಖೀಯಾಗಿ ಜನಿಸಿದ ತಪ್ಪಿಗೆ ಮನೆಯಿಂದ ಹೊರನೂಕಲ್ಪಟ್ಟು, ಹೊಟ್ಟೆಪಾಡಿಗಾಗಿ ಕಲಿತ ಕಲೆ ನನ್ನ ಜೀವನದ ದಿಕ್ಕನ್ನೇ ಬದಲಿಸಿತು ಎಂದು ಕರ್ನಾಟಕ ಜಾನಪದ ಅಕಾಡೆಮಿ ರಾಜ್ಯಾಧ್ಯಕ್ಷೆ ಮಾತಾ ಬಿ. ಜೋಗತಿ ಹೇಳಿದರು.

Advertisement

ಬಾಡ ಗ್ರಾಮದ ಕನಕದಾಸರ ಅರಮನೆ ಆವರಣದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಕಾಗಿನೆಲೆ-ಬಾಡ, ಬೆಂಗಳೂರಿನ ಕರ್ನಾಟಕ ಅಕಾಡೆಮಿ ಆಶ್ರಯದಲ್ಲಿ ನಡೆದ ಕನಕ ಜಾನಪದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಹೊಟ್ಟೆ ಪಾಡಿಗಾಗಿ ಕಲಿತ ಜೋಗತಿ ನೃತ್ಯದಿಂದ ಸಮಾಜಕ್ಕೆ ಚಿರಪರಿಚಿತನಾದೆ. ಮಂಗಳಮುಖೀಯಾಗಿ ಹುಟ್ಟಿದ ತಪ್ಪಿಗೆ ತಲೆ ತಗ್ಗಿ ನಡೆಯುತ್ತಿದ್ದೆ, ಆದರೆ, ನಾನು ಕಲೆತ ಕಲೆ ನನ್ನನ್ನು ತಲೆ ಎತ್ತಿ ನಡೆಯುವಂತೆ ಮಾಡಿದೆ.

ಮಂಗಳಮುಖೀಯರಲ್ಲಿಯೂ ಹಲವು ಪ್ರತಿಭೆಗಳಿದ್ದು, ಅವರಿಗೆ ಸೂಕ್ತ ವೇದಿಕೆ ಇಲ್ಲದಂತಾಗಿದೆ. ಅಂತವರನ್ನು ಗುರುತಿಸಿ ಉಚಿತ ತರಬೇತಿ ನೀಡಿ ಸಮಾಜಕ್ಕೆ ಅವರನ್ನು ಪರಿಚಯಿಸುವ ಕಾರ್ಯ ಮಾಡುತ್ತಿದ್ದೇನೆ. ನಿಜವಾದ ಜಾನಪದ ಪ್ರತಿಭೆಗಳನ್ನು ಗುರುತಿಸಿ ಸರಕಾರದಿಂದ ಮಾಸಾಶನ ಕೋಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಕಲೆ ಎಂಬುದು ಬೇಲೆ ಕಟ್ಟಲಾಗದ ವಸ್ತುವಾಗಿದ್ದು, ಕಲಾವಿದರೂ ಹಣದ ವ್ಯಾಮೋಹಕ್ಕೆ ಒಳಗಾಗದೆ ತಮ್ಮ ಕಲೆಯನ್ನು ಸಮಾಜಕ್ಕಾಗಿ ಸಮರ್ಪಿಸಿಕೊಂಡಾಗ ಹಾರ, ತುರಾಯಿ, ಪ್ರಶಸ್ತಿ ಜತೆಗೆ ಹಣವೂ ನಿಮ್ಮನ್ನರಸಿ ಬರಲಿದೆ ಎಂದು ಹೇಳಿದರು.

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟೆ ಮಾತನಾಡಿ, ಮಂಗಳಮುಖೀಯೊಬ್ಬರೂ ಜಾನಪದ ಅಕಾಡೆಮಿಯ ರಾಜ್ಯಾಧ್ಯಕ್ಷೆಯಾಗಿದ್ದು, ಭಾರತದ ಇತಿಹಾಸದಲ್ಲಿಯೇ ಪ್ರಥಮ. ಪ್ರತಿ ತಿಂಗಳು ಈ ಬಾಡ ಗ್ರಾಮದ ಕನಕದಾಸರ ಅರಮನೆ ತೆರೆದ ಆವರಣದಲ್ಲಿ ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಜ್ಯಾದ್ಯಂತವಿರುವ ಜಾನಪದ ಕಲಾವಿದರ ಕಲೆಯನ್ನು ಪ್ರದರ್ಶಿಸುವ ಉದ್ಧೇಶ ಹೊಂದಲಾಗಿದೆ. ಭಾರತೀಯ ಜನಪದ ಕಲೆಗೆ ಅದರದೇಯಾದ ಮಹತ್ವವಿದ್ದು, ಕಲೆ, ಕಲಾವಿದರನ್ನು ಸರಕಾರ ಗುರುತಿಸಿ ಆರ್ಥಿಕವಾಗಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತ ಬಂದಿದೆ ಎಂದು ಹೇಳಿದರು. ಹಾವೇರಿ ಜಾನಪದ ಅಕಾಡೆಮಿ ಸಂಚಾಲಕ ಶಂಕರ ಅರ್ಕಸಾಲಿ ಮಾತನಾಡಿದರು.

ಸಭಾ ಕಾರ್ಯಕ್ರಮದ ನಂತರ ರಾಜ್ಯದ ಮೂಲೆ ಮೂಲೆಗಳಿಂದ ಬಂದ ಜಾನಪದ ಕಲಾ ತಂಡದವರಿಂದ ವಿವಿಧ ಜನಪದ ಕಾರ್ಯಕ್ರಮಗಳು ಜನಮನ ರಂಜಿಸಿದವು. ರಾಜ್ಯ ಅಕಾಡೆಮಿ ಸಹಾಯಕ ಎಚ್‌.ಪ್ರಕಾಶ, ತಾಪ ಅಧ್ಯಕ್ಷೆ ಪಾರವ್ವ ಆರೇರ, ಜಿಪ ಸದಸ್ಯ ಶೋಭಾ ಗಂಜಿಗಟ್ಟಿ, ಗ್ರಾಪಂ ಸದಸ್ಯ ನಿಂಗಪ್ಪ, ಕೃಷ್ಣಮೂರ್ತಿ ತಾಳಿಕೋಟಿ, ಬಸವರಾಜ ಶಿಗ್ಗಾವಿ, ಬಸವರಾಜ ಗೊಬ್ಬಿ, ಶರೀಫ್‌ ಮಾಕಪ್ಪನವರ, ರಾಮಕೃಷ್ಣ ಆಲದಕಟ್ಟಿ ಹಾಗೂ ಕಲಾವಿದರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next