Advertisement

ಭಾರಿ ಮಳೆಗೆ ಬೆದರಿದ ಬೆಂಗಳೂರು

11:12 AM Sep 03, 2017 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಶುಕ್ರವಾರದಿಂದ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದ ನಗರದ ಹಲವು ಭಾಗಗಳು ಜಲಾವೃತವಾಗಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

Advertisement

ಶುಕ್ರವಾರ ತಡ ರಾತ್ರಿ ಆರಂಭವಾಗಿ ಶನಿವಾರವಿಡೀ ಸುರಿದ ಮಳೆಯಿಂದಾಗಿ ನಗರದ ಜನಜೀವನ
ಅಸ್ತವ್ಯಸ್ಥವಾಗಿದೆ. ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನಗರದ ಕೆಲವು ಕೆರೆಗಳು ತುಂಬಿ ಹರಿಯುತ್ತಿದ್ದು, ಇನ್ನು ಕೆಲವು ಕೆರೆಗಳ ಕಟ್ಟೆ ಒಡೆದಿವೆ. ಪರಿಣಾಮ ಕೆರೆಯ ಸುತ್ತಮುತ್ತಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಮಸ್ಯೆ ಸೃಷ್ಟಿಯಾಗಿದೆ.

ನಗರದ ಪ್ರಮುಖ ರಸ್ತೆಗಳು ಹಾಗೂ ಅಂಡರ್‌ ಪಾಸ್‌ ಗಳಲ್ಲಿ ನೀರು ತುಂಬಿರುವುದರಿಂದ ವಾಹನಗಳು ನೀರಿನಲ್ಲಿ ಮುಳುಗಡೆಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ 40ಕ್ಕೂ ಹೆಚ್ಚು ಕಡೆಗಳಲ್ಲಿ ಮರ ಹಾಗೂ ಮರದ ಕೊಂಬೆಗಳು ಉರುಳಿದರಿಂದ ಸಂಚಾರ ದಟ್ಟಣೆ
ಉಂಟಾಗಿತ್ತು.

ತಡರಾತ್ರಿ ಗುಡುಗು – ಮಿಂಚು ಸಹಿತವಾಗಿ ಆರಂಭವಾದ ಮಳೆ ಬೆಳಗ್ಗೆ 8 ಗಂಟೆಯವರೆಗೆ ಸುರಿಯಿತು. ಜತೆಗೆ ಮೋಡ ಕವಿದ ವಾತಾವರಣ ಮುಂದುವರಿದ ಹಿನ್ನೆಲೆಯಲ್ಲಿ ಜನರು ಮನೆಗಳಿಂದ ಹೊರ ಬರಲು ಯೋಚಿಸಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಬೃಹತ್‌ ಅಪಾರ್ಟ್‌ಮೆಂಟ್‌ಗಳ ತಳಮಹಡಿಗಳು ಸಂಪೂರ್ಣ ಜಲಾವೃತವಾಗಿ ನಿಲುಗಡೆ ಮಾಡಿದ್ದ ವಾಹನಗಳು ನೀರಿನಲ್ಲಿ
ಮುಳುಗಿದ್ದು, ನಿವಾಸಿಗಳು ಬಿಲ್ಡರ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಕೆಟ್‌ ಹಿಡಿದ ನಿವಾಸಿಗಳು: ಶನಿವಾರ ಬೆಳಗ್ಗೆ 9ರ ವೇಳೆಗೆ ಕೆಲವು ಕಡೆಗಳಲ್ಲಿ ಮಳೆ ನಿಂತು ನೀರಿನ ಪ್ರಮಾಣ ಕಡಿಮೆ ಯಾಗುತ್ತಿದ್ದಂತೆ ಬಕೆಟ್‌, ಪೊರಕೆ ಹಿಡಿದ ನಿವಾಸಿಗಳು ಮನೆಗಳಲ್ಲಿನ ನೀರು ಹೊರಹಾಕುವ ಕಾರ್ಯದಲ್ಲಿ ತೊಡಗಿದರು. ಇನ್ನು ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್‌ ಸೆಲ್ಲರ್‌
ಗಳಲ್ಲಿ ತುಂಬಿದ್ದ ನೀರನ್ನು ಯಂತ್ರಗಳನ್ನು ಬಳಸಿ ಹೊರಹಾ ಕುವಲ್ಲಿ ಅಪಾರ್ಟ್‌ಮೆಂಟ್‌ ಮಾಲೀಕರು ನಿರತರಾಗಿದ್ದರು.

Advertisement

ಮನೆ ಖಾಲಿ ಖಾಲಿ: ಕೆಲ ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ನೀರು ಮನೆಗಳಿಗೆ ನುಗ್ಗುತ್ತಿದೆ. ಪರಿಣಾಮ ಬೊಮ್ಮನಹಳ್ಳಿ ವಲಯದ ಹಲವಾರು ಭಾಗಗಳು ಜಲಾವೃತಗೊಂಡಿವೆ. ಕಳೆದ ಎರಡು ಮೂರು ದಿನಗಳಿಂದ ಮನೆಗಳಿಗೆ ನೀರು ನುಗ್ಗುತ್ತಿರುವುದರಿಂದ ನಿವಾಸಿಗಳು ಮನೆಗಳಲ್ಲಿ ಎಲ್ಲ ವಸ್ತುಗಳನ್ನು ಮನೆಯ ಎತ್ತರದ ಪ್ರದೇಶಗಳಿಗೆ ವರ್ಗಾಹಿಸಿದ್ದಾರೆ.

ಸಾಂಕ್ರಾಮಿಕ ರೋಗದ ಭೀತಿ: ಕೋರಮಂಗಲ ಸೇರಿದಂತೆ ಹಲವಾರು ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿವೆ. ಇದರೊಂದಿಗೆ ಚರಂಡಿ ಹಾಗೂ ಕಾಲುವೆಗಳಲ್ಲಿನ ನೀರು ವಸತಿ ಪ್ರದೇಶಗಳಿಗೆ
ಬಂದಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಆತಂಕಕ್ಕೆ ಸಾರ್ವಜನಿಕರು ಒಳಗಾಗಿದ್ದಾರೆ.

ಕೂಡಲೇ ಬಿಬಿಎಂಪಿ ವತಿಯಿಂದ ಸೊಳ್ಳೆಗಳ ನಿಯಂತ್ರಣ ಸೇರಿದಂತೆ ಇನ್ನಿತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಪರಿಹಾರ ಕಾರ್ಯಕ್ಕೆ ಐದು ತಂಡಗಳ ರಚನೆ: ನಗರದಲ್ಲಿ ಮಳೆಯಿಂದಾಗಿ ಆಗುತ್ತಿರುವ ಅನಾಹುತಗಳ ತಡೆಗೆ ಬಿಬಿಎಂಪಿ ವತಿಯಿಂದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಲಾಗಿದ. ಸಾರ್ವಜನಿಕರ ಸಹಾಯಕ್ಕೆ ಧಾವಿಸಲಿರುವಅನಾಹುತ ಸ್ಥಳಗಳಿಗೆ ಭೇಟಿ ನೀಡಲಿರುವ ತಂಡಗಳು ಪರಿಹಾರ ಕಾರ್ಯಕ್ಕೆ ಮುಂದಾಗಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next