Advertisement

Crime News: 15ಕ್ಕೂ ಹೆಚ್ಚು ಬಾರಿ ಇರಿದು ಆಟೋ ಡ್ರೈವರ್‌ ಹತ್ಯೆ

10:09 AM Dec 07, 2023 | Team Udayavani |

ಬೆಂಗಳೂರು: ಸ್ನೇಹಿತರ ಜತೆ ರಸ್ತೆ ಬದಿ ನಿಂತು ಮಾತನಾಡುತ್ತಿದ್ದ ಆಟೋ ಚಾಲಕನಿಗೆ 15ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯ ಟಿಂಬರ್‌ ಯಾರ್ಡ್‌ ಲೇಔಟ್‌ ನಲ್ಲಿ ನಡೆದಿದೆ.

Advertisement

ಬ್ಯಾಟರಾಯನಪುರದ ಎಂಟಿಸಿ ಲೇಔಟ್‌ ನಿವಾಸಿ ಅರುಣ್‌ (24) ಕೊಲೆಯಾದ ಆಟೋ ಚಾಲಕ.

ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ದುರ್ಘ‌ಟನೆ ನಡೆದಿದೆ ಎಂದು ಪೊಲೀಸರು ಹೇಳಿದರು. ಆಟೋ ಚಾಲಕನಾಗಿ ಅರುಣ್‌, ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಟಿಂಬರ್‌ ಯಾರ್ಡ್‌ ಲೇಔಟ್‌ನಲ್ಲಿ ಸ್ನೇಹಿತರ ಜತೆ ರಸ್ತೆ ಬದಿ ಮಾತನಾಡುತ್ತ ನಿಂತಿದ್ದ. ಈ ವೇಳೆ 2-3 ಬೈಕ್‌ಗಳಲ್ಲಿ ಬಂದ ಆರೇಳು ಮಂದಿ ದುಷ್ಕರ್ಮಿಗಳು ಏಕಾಏಕಿ ಅರುಣ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಈ ವೇಳೆ ಆತನ ಸ್ನೇಹಿತರು ಪ್ರಾಣ ಭಯದಿಂದ ಸ್ಥಳದಿಂದ ತಪ್ಪಿಸಿಕೊಂಡು ಓಡಿದ್ದಾರೆ. ಆಗ ಕೆಳಗೆ ಬಿದ್ದ ಅರುಣ್‌ಗೆ ದುಷ್ಕರ್ಮಿಗಳು 15ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾರೆ.

ಕೃತ್ಯದ ಮಾದರಿ ಗಮನಿಸಿದರೆ ಹಳೇ ದ್ವೇಷದಿಂದಲೇ ಕೃತ್ಯ ಎಸಗಿದ್ದಾರೆ ಎಂಬುದು ಗೊತ್ತಾಗಿದೆ. ಜತೆಗೆ ಅರುಣ್‌ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರಿಂದ ಈ ಆಯಾಮದಲ್ಲೂ ತನಿಖೆ ನಡೆಸಲಾಗುತ್ತದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಜನವರಿಯಲ್ಲಿ ಮದುವೆ ಇತ್ತು

Advertisement

ಆಟೋ ಚಾಲಕ ಅರುಣ್‌ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆಯ ಪೋಷಕರಿಗೆ ತಮ್ಮ ಪ್ರೀತಿಯ ವಿಚಾರ ತಿಳಿಸಿ ಮದುವೆಗೂ ಒಪ್ಪಿಸಿದ್ದ. ಹೀಗಾಗಿ ಜನವರಿಯಲ್ಲಿ ಯುವತಿಯನ್ನು ವಿವಾಹ ಆಗಬೇಕಿತ್ತು. ಅಷ್ಟರಲ್ಲಿ ದುಷ್ಕರ್ಮಿಗಳು ಅರುಣ್‌ನನ್ನು ಭೀಕರವಾಗಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next