Advertisement

ಬ್ರ್ಯಾಂಡ್‌ ಬೆಂಗಳೂರಿಗೆ ಅನುದಾನ ಕಡಿಮೆ

12:29 PM Mar 14, 2017 | |

ಬೆಂಗಳೂರು: ಬಜೆಟ್‌ನಲ್ಲಿ “ಬ್ರ್ಯಾಂಡ್‌ ಬೆಂಗಳೂರು’ ಉತ್ತೇಜನಕ್ಕೆ ಸಂಕಲ್ಪ ತೊಟ್ಟಿದ್ದ ಸರ್ಕಾರ, ಈ ನಿಟ್ಟಿನಲ್ಲಿ ನಗರದ ಅಭಿವೃದ್ಧಿಗೆ ಹತ್ತು ಹಲವಾರು ಯೋಜನೆ ಪ್ರಕಟಿಸಿತಾದರೂ ಮೆಟ್ರೋ ಮೊದಲ ಹಂತ ಹೊರತುಪಡಿಸಿದರೆ, ರಸ್ತೆ ಅಭಿವೃದ್ಧಿ, ಬಿಬಿಎಂಪಿಗೆ ಸೇರ್ಪಡೆಗೊಂಡ 100 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆ, ಉಪನಗರ ರೈಲು ಸೇರಿ ಬಹುತೇಕ ಯೋಜನೆಗಳು ಸಮಗ್ರ ಯೋಜನಾ ವರದಿ ತಯಾರಿಕೆ, ಟೆಂಡರ್‌ ಆಹ್ವಾನ ಹಂತದಲ್ಲೇ ಇವೆ.

Advertisement

 2016-17 ನೇ ಸಾಲಿನ ಬಜೆಟ್‌ನಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ವಿಶೇಷ ಪ್ಯಾಕೇಜ್‌ನಡಿ ಎರಡು ವರ್ಷಗಳಿಗೆ 7300 ಕೋಟಿ ರೂ. ಯೋಜನೆಗಳನ್ನು ಅನುಷ್ಟಾನಗೊಳಿಸುವುದಾಗಿ ಘೋಷಿಸಿ ಮೊದಲ ವರ್ಷ ನಗರೋತ್ಥಾನ ಸೇರಿ ಒಟ್ಟು 3,208 ಕೋಟಿ ರೂ. ನೀಡಲು ನಿರ್ಧರಿಸಲಾಗಿತ್ತು. ಆದರೆ,  ಬಿಡುಗಡೆಯಾಗಿದ್ದು 2,125 ಕೋಟಿ ರೂ. ಮಾತ್ರ. 

ಜಲಮಂಡಳಿಯಲ್ಲಿ ಟೆಂಡರ್‌ ಹಂತದಲ್ಲಿ ಯೋಜನೆ­ಗಳು: ಜಲಮಂಡಳಿ ವಿಚಾರಕ್ಕೆ ಬಂದರೆ, ಬಜೆಟ್‌ನಲ್ಲಿ  350 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದು,  ಆ ಪೈಕಿ 302 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.  ಹೆಬ್ಟಾಳ, ಕೋರಮಂಗಲ, ಚಲ್ಲಘಟ್ಟ, ದೊಡ್ಡಬೆಲೆಯಲ್ಲಿ ತ್ಯಾಜ್ಯನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. 

 ಅಮೃತ್‌ ಯೋಜನೆ ಅಡಿ ಪ್ರಸ್ತಾಪಿಸಲಾದ ಯೋಜನೆಗಳ ಪೈಕಿ 22 ಕೊಳಗೇರಿಗಳಿಗೆ ನೀರು ಸರಬರಾಜು ಸೌಲಭ್ಯ ಒದಗಿ­­ಸುವ ಯೋಜನೆ ಸಮೀಕ್ಷೆ ನಡೆದಿದ್ದು, 4 ಕೋಟಿ ರೂ. ಖರ್ಚಾಗಿದೆ. ಜಿಕೆ ವಿಕೆ ಜಲಸಂಗ್ರಹಗಾರದಿಂದ ಎಚ್‌ಬಿಆರ್‌ ಜಲಸಂಗ್ರಹಗಾರದವರೆಗೆ ಕೊಳವೆ ಮಾರ್ಗ ಒದಗಿಸುವ 46 ಕೋಟಿ ವೆಚ್ಚದ ಯೋಜನೆ ಅನುಮೋದನೆಗೊಂಡು, ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 

ಪಾಲಿಕೆಗೆ ಸೇರಿದ 110 ಹಳ್ಳಿಗಳಲ್ಲಿ ಒಳ­ಚರಂಡಿ ಯೋಜನೆ, ಹುಳಿಮಾವು, ಬೇಗೂರು, ಸಾರಕ್ಕಿ, ಅಗರ ಮತ್ತು ಕೆ.ಆರ್‌. ಪುರ ಕೆರೆಗಳಲ್ಲಿ ತ್ಯಾಜ್ಯನೀರು ಸಂಸ್ಕರಣಾ ಘಟಕ ಸ್ಥಾಪನೆ, ಕೋರ­ಮಂಗಲ ಕ್ರೀಡಾ ಸಂಕೀರ್ಣದ ಬಳಿ ಪಂಪ್‌ಹೌಸ್‌ ನಿರ್ಮಾಣ ಮತ್ತು ಪ್ರಸ್ತುತ ಇರುವ ಮುಖ್ಯ ಕೊಳವೆಯನ್ನು ಕ್ರೀಡಾ ಸಂಕೀರ್ಣದಿಂದ ಕೆ ಆಂಡ್‌ ಸಿ ವ್ಯಾಲಿ ಸಂಸ್ಕರಣಾ ಘಟಕದವರೆಗೆ ಅಳವಡಿಸುವ ಯೋಜನೆಗಳು ಟೆಂಡರ್‌ ಹಂತದಲ್ಲೇ ಇವೆ.

Advertisement

110ಹಳ್ಳಿಗಳಿಗೆ ಇನ್ನೂ ಸಿಕ್ಕಿಲ್ಲ ನೀರು: ಪಾಲಿಕೆಗೆ ಸೇರಿದ 110 ಹಳ್ಳಿಗಳಿಗೆ ನೀರು ಪೂರೈಸಲು ಕಳೆದ ವರ್ಷ ನಿರ್ಧರಿಸಲಾಗಿತ್ತು. 5,018 ಕೋಟಿ ಅಂದಾಜು ವೆಚ್ಚದ ಈ ಯೋಜನೆಗೆ ಜೈಕಾದಿಂದ ಸಾಲ ಪಡೆಯಲು ನಿರ್ಧರಿಸಲಾಗಿದೆ. ಈ ಸಂಬಂ­ಧದ ಯೋಜನೆ ಅನುಮೋದನೆಗೆ ಕೇಂದ್ರದ ನಗರಾಭಿವೃದ್ಧಿ ಸಚಿವಾಲಯಕ್ಕೆ ಕಳುಹಿಸಲಾಗಿದ್ದು ಯೋಜನೆಗೆ ಇನ್ನೂ ಚಾಲನೆ ಸಿಕ್ಕಿಲ್ಲ.

ಮೆಟ್ರೋ ವಿಚಾರದಲ್ಲಿ ಸಮಾಧಾನ 
2016ರ ಜೂನ್‌ ತಿಂಗಳಲ್ಲೇ 42 ಕಿ.ಮೀ. ಮೊದಲ ಹಂತದ ನಮ್ಮ ಮೆಟ್ರೋ ಸಂಚಾರ ಆರಂಭಿಸಲಿದೆ ಎಂದು ಕಳೆದ ಬಜೆಟ್‌ನಲ್ಲಿ ತಿಳಿಸಲಾಗಿತ್ತು. ಆದರೆ, 2017ರ ಮಾರ್ಚ್‌ ಬಂದರೂ ಕಾಮಗಾರಿ ಇನ್ನೂ ಮುಗಿದಿಲ್ಲ. ಇದೀಗ ಏಪ್ರಿಲ್‌ 15 ಕ್ಕೆ ಗಡುವು ನೀಡಲಾಗಿದ್ದು ಅಷ್ಟರಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾದರೆ, ಅದೇ ಸಮಾಧಾನ. ಆದರೆ, ಎರಡನೇ ಹಂತದ 72 ಕಿ.ಮೀ. ಮೆಟ್ರೋ ಯೋಜನೆ ಕಾಮಗಾರಿ ಚುರುಕಾಗಿ ಸಾಗಿದ್ದು,

ಬಜೆಟ್‌ನಲ್ಲಿ ಘೋಷಿಸಿದಂತೆ ಮೈಸೂರು ರಸ್ತೆಯಿಂದ ಕೆಂಗೇರಿ ಹಾಗೂ ಯಲಚೇನಹಳ್ಳಿಯಿಂದ ಅಂಜನಾಪುರದವರೆಗಿನ ವಿಸ್ತರಿಸಿದ ಮಾರ್ಗದ ಕಾಮಗಾರಿ ಭರದಿಂದ ಸಾಗಿದೆ.  ಅದೇ ರೀತಿ, ಸಿಲ್ಕ್ಬೋರ್ಡ್‌ನಿಂದ ಕೆ.ಆರ್‌. ಪುರ ಜಂಕ್ಷನ್‌ ನಡುವೆ 17 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಗೊಂಡು ಸಂಪುಟದಲ್ಲಿ ಅನುಮೋದನೆಯೂಗೊಂಡಿದೆ. ಹೀಗಾಗಿ, ಮೆಟ್ರೋ ವಿಚಾರದಲ್ಲಿ ಸಾಧನೆ ಸಮಾಧಾನ.

ಫ್ಲ್ಯಾಟ್‌ ಕಟ್ಟಿ ಕೈ ಸುಟ್ಟುಕೊಂಡ ಬಿಡಿಎ
ನಗರದ ಸಂಚಾರದಟ್ಟಣೆ ತಗ್ಗಿಸಲು ನಾಲ್ಕೂ ಕಡೆ 18 ಸಾವಿರ ಕೋಟಿ ರೂ.ಗಳಲ್ಲಿ ನೂರು ಕಿ.ಮೀ. ಉದ್ದದ ಎತ್ತರಿಸಿದ ರಸ್ತೆ ನಿರ್ಮಿಸುವ ಯೋಜನೆ ಕುರಿತು ಈಗಷ್ಟೇ ಸಮಗ್ರ ಕ್ರಿಯಾ ಯೋಜನೆ ಸಿದ್ಧಗೊಂಡಿದೆ. 2013-14ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಬಸವೇಶ್ವರ ವೃತ್ತದಿಂದ ಹೆಬ್ಟಾಳದವರೆಗಿನ ಉಕ್ಕಿನ ಸೇತುವೆ ಯೋಜನೆಯನ್ನು ವಿವಾದಗಳಿಂದಾಗ ಈಚೆಗೆ ಕೈಬಿಡಲಾಗಿದೆ.   2016-17ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ಬಿಡಿಎ ವತಿಯಿಂದ ಮೂರು ಸಾವಿರ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗಿದೆ.

ಆದರೆ, ಅವುಗಳ ಖರೀದಿಗೆ ಸಾರ್ವಜನಿಕರು ಮುಂದೆಬರುತ್ತಿಲ್ಲ. ಮೂಲಸೌಕರ್ಯಗಳ ಕೊರತೆ, ದುಬಾರಿ ಹಾಗೂ  ಬೇಡಿಕೆ ಇದ್ದಲ್ಲಿ ನಿರ್ಮಿಸಿಲ್ಲ ಎಂಬ ಅಂಶಗ‌ು ಕಾರಣವಾಗಿವೆ.  ಇನ್ನು ಹತ್ತು ವರ್ಷಗಳ ನಂತರ ಬಿಡಿಎಯಿಂದ ನಿವೇಶನ ಹಂಚಿಕೆ ಈ ವರ್ಷ ಆಗಿದ್ದು, ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 5000 ನಿವೇಶನ ಹಂಚಿಕೆ ಮಾಡಲಾಗಿದೆ. 2017ರ ಒಳಗೆ  ಇನ್ನೂ ಐದು ಸಾವಿರ ನಿವೇಶನ ಹಂಚಿಕೆ ಮಾಡುವ ಯೋಜನೆ ಹೊಂದಲಾಗಿದೆ. 

ಬೆಳ್ಳಂದೂರು, ವರ್ತೂರು ಕೆರೆ ಸಮಸ್ಯೆ ನೀಗಿಲ್ಲ
ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಪುನಶ್ಚೇತನ ಕಾರ್ಯ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಈ ಎರಡೂ ಕೆರೆಗಳ ನಿರ್ವಹಣೆಯನ್ನು ಯಾರು ವಹಿಸಿಕೊಳ್ಳಬೇಕು ಎನ್ನುವುದು ಬಿಡಿಎ ಮತ್ತು ಬಿಬಿಎಂಪಿ ನಡುವೆ ಹಗ್ಗಜಗ್ಗಾಟಕ್ಕೆ ಎಡೆಮಾಡಿಕೊಟ್ಟಿತ್ತು. ಈಚೆಗಷ್ಟೇ ಸರ್ಕಾರ ಈ ಕೆರೆಗಳನ್ನು ಬಿಡಿಎಗೆ ವಹಿಸಿದ್ದು, ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಬಿಡಿಎ ಟೆಂಡರ್‌ ಆಹ್ವಾನಿಸಿದೆ.

* ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next