Advertisement

“ಬಂದ್‌’ಆಗಬೇಕಿರುವುದು ಸರ್ವಾಧಿಕಾರಿ ಗುಣ

07:57 AM Jan 29, 2018 | |

ಜಾತಿ-ಮತ-ಭಾಷೆಯನ್ನಾಧರಿಸಿ ಜನರನ್ನು ಒಡೆದಾಳುವುದು, ಖಾದಿ ಧರಿಸುವುದು ಆದರೆ ಗಾಂಧಿ ತತ್ವಗಳಿಗೆ ತದ್ವಿರುದ್ಧದ ನಡವಳಿಕೆ…ಈ ಕಾಂಗ್ರೆಸ್ಸಿನ ರಾಜಕೀಯ ಸಂಸ್ಕೃತಿಯನ್ನು, ನಂತರ ಹುಟ್ಟಿಕೊಂಡ ಪ್ರಾಂತೀಯ ಪಕ್ಷಗಳು ಮತ್ತವುಗಳ ರಾಜಕಾರಣಿಗಳೂ ಅನುಸರಿಸಲಾರಂಭಿಸಿದ್ದು ಭಾರತದಲ್ಲಿ, ರಾಜಕಾರಣಿಗಳ ಪ್ರತಿ ಭೀಭತ್ಸವನ್ನು ಉಂಟುಮಾಡಿದೆ.

Advertisement

“ಇಪ್ಪತ್ತೇಳಕ್ಕೆ (ಜನವರಿ 2018) ಬೇಡ, ಇಪ್ಪತ್ತೈದಕ್ಕೆ ಮಾಡ್ರೀಂತ ನಾನೆ ಹೇಳೆ’ ಎಂದಿದ್ದರು ಈ ರಾಜ್ಯದ ಮುಖ್ಯಮಂತ್ರಿಗಳು. ಯಾವುದನ್ನ? ಬಂದ್‌ ಆಚರಣೆಯನ್ನ! ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮತ್ತು ಸತ್ಯಾಗ್ರಹಕ್ಕೆ ಮಹತ್ತರವಾದ ಸ್ಥಾನವನ್ನು ಕಲ್ಪಿಸಿಕೊಟ್ಟವರು ಮಹಾತ್ಮಾ ಗಾಂಧಿಯವರು. ಬ್ರಿಟೀಷರ ವಿರುದ್ಧದ ಕಾಂಗ್ರೆಸ್ಸಿನ ಹೋರಾಟವನ್ನು ಅವರು ತಮ್ಮ ಅಹಿಂಸೆ ಮತ್ತು ಸತ್ಯಾಗ್ರಹದ ಪಥದಲ್ಲಿ ನಡೆಸಿದವರು. ಹಾಗಾಗಿ, ಪ್ರತಿಭಟನೆ ರಚನಾತ್ಮಕ ಪ್ರಜಾತಾಂತ್ರಿಕ ವಿರೋಧದ ರೂಢಿಯಾದರೆ, ಬಂದ್‌ ಎನ್ನುವಂಥದ್ದು ಅದಕ್ಕೆ ತದ್ವಿರುದ್ಧವಾದ್ದು! ಯಾವುದೇ ಒಂದು ಪ್ರತ್ಯೇಕವಾದ ಸಂಘಟನೆಗೆ ಜನಸಾಮಾನ್ಯರ ದೈನಂದಿನ ಬದುಕನ್ನು ಅಡ್ಡಿಪಡಿಸಿ, ಅವರ ಅಂದಿನ ಆದಾಯವನ್ನು ತಮ್ಮ ರಾಜಕೀಯ ಕ್ಕಾಗಿ ತಪ್ಪಿಸುವುದಕ್ಕೆ ಅಧಿಕಾರ ಕೊಟ್ಟವರು ಯಾರು? 

ಜಪಾನಿನಲ್ಲಿ ಕೆಲಸ ನಿಲ್ಲಿಸಿ ಪ್ರತಿಭಟನೆ ಮಾಡುವುದಿಲ್ಲವಂತೆ, ನಮ್ಮಂತೆ ದೇಶದ ಅರ್ಥ ವ್ಯವಸ್ಥೆಗೆ ಕುಂದು ತರುವುದಿಲ್ಲವಂತೆ…ಬದಲಾಗಿ, ಉದಾಹರಣೆಗೆ: ಒಂದು ಶೂ ಫ್ಯಾಕ್ಟರಿಯಲ್ಲಿ ಪ್ರತಿಭಟನೆಯಾದರೆ, ಜೊತೆಯನ್ನು ತಯಾರಿಸದೆ ಕೇವಲ ಒಂದು ಕಾಲಿನ ಶೂವನ್ನು ಮಾತ್ರ ತಯಾರಿಸುತ್ತಾರಂತೆ! 

ಬಂದ್‌ ವಿಚಾರದಲ್ಲಿ ಕೇರಳದ ಉಚ್ಚ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯುತ್ತಾ, The Communist Party of India Vs Bharat Kumar ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ, ಒಬ್ಬರ ಅಥವಾ ಒಂದು ಸಂಘಟನೆಯ ಮೂಲಭೂತ ಹಕ್ಕುಗಳು, ಉಳಿದೆಲ್ಲಾ ನಾಗರೀಕರ ಮೂಲಭೂತ ಹಕ್ಕುಗಳಿಗಿಂತ ಮಿಗಿಲಾಗಿರುವುದಿಲ್ಲವೆಂದು ಅಭಿಪ್ರಾಯಪಟ್ಟಿತ್ತು. ಜತೆಗೆ ರಾಷ್ಟ್ರಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡುವ ಹಕ್ಕು ಯಾವ ಸಂಘಟನೆಗೂ ಇರುವುದಿಲ್ಲವೆಂದು ಸ್ಪಷ್ಟಪಡಿಸಿತ್ತು. ಭಾವನಾತ್ಮಕವಾಗಿ ಸ್ವಯಂಪ್ರೇರಿತ ಬಂದ್‌ ನಡೆಯುವುದಕ್ಕೂ, ಬಂದ್‌ಗೆ ಕರೆಕೊಟ್ಟು ಬಲವಂತವಾಗಿ ಜನರ ದೈನಂದಿನ ಬದುಕಿನಲ್ಲಿ ಹಸ್ತಕ್ಷೇಪ ಮಾಡುವುದರಲ್ಲಿ ವ್ಯತ್ಯಾಸವಿದ್ದು, ಬಂದ್‌ ಹೇರಿಕೆಯ ಹಕ್ಕು ಯಾರಿಗೂ ಇರುವುದಿಲ್ಲ. ಹೀಗಿರುವಾಗ ಸ್ವತಃ ವಕೀಲರಾಗಿದ್ದ ನಮ್ಮ ಮುಖ್ಯಮಂತ್ರಿಗಳ ಬೇಜವಾಬ್ದಾರಿತನ ಮತ್ತು ಹೇಳಿಕೆ, ರಾಜ್ಯದಲ್ಲಿ ರಾಜಕೀಯ ಸಂಸ್ಕೃತಿಯ ಪತನದ ಮತ್ತೂಂದು ರಾಚುವ ಉದಾಹರಣೆಯಾಗಿದೆ. 

ವೈಚಾರಿಕ ಮತ್ತು ರಾಜಕೀಯ ವಿರೋಧವೆನ್ನುವುದು ಪ್ರಜಾ ಪ್ರಭುತ್ವದ ಅವಿಭಾಜ್ಯ ಅಂಗ. ಒಂದೊಮ್ಮೆ ಮುಖ್ಯಮಂತ್ರಿಗಳು “ಬಿಜೆಪಿಯವರು ಭಯೋತ್ಪಾದಕರು’ ಎನ್ನುವುದು. ಅವರ ಪಕ್ಷದ ಕಾರ್ಯಕಾರಿ ಅಧ್ಯಕ್ಷರಾದ ದಿನೇಶ್‌ ಗುಂಡೂರಾವ್‌ “ಬಿಜೆಪಿ ಯನ್ನು ನಿಷೇಧಿಸಬೇಕು’ ಎನ್ನುವುದು. ನವೆಂಬರ್‌ 2, 2017ರಂದು ನಡೆದ ಸಭೆಗೆ ಟ್ರಾಫಿಕ್ಕನ್ನು ನೆಪ ಮಾಡಿ ಜನ ಬರುವುದರಲ್ಲಿ ಅಧಿಕಾರ ದುಷ್ಪ್ರಯೋಗದಿಂದ ತಡೆದದ್ದು. ಪರಿವರ್ತನಾ ಯಾತ್ರೆಯನ್ನು ಕೊಡಗಿನಲ್ಲಿ ನಡೆಸಲು ಟಿಪೂ ಜಯಂತಿಯನ್ನು ನೆಪವಾಗಿಸಿ ತಡೆದದ್ದು. ಇದೀಗ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಮೈಸೂರಿನ ಬಹಿರಂಗ ಸಭೆಯನ್ನು ಅಡ್ಡಿಪಡಿಸುವುದಕ್ಕಾಗಿ ಸಂಘಟನೆಗಳಿಗೆ ಅದೇ ದಿನ ರಾಜ್ಯ ಬಂದ್‌ ಮಾಡುವಂತೆ ಪ್ರೇರೇಪಿಸುವುದು. ಮತ್ತೂಂದು ಹೆಜ್ಜೆ ಮುಂದಕ್ಕೆ ಹೋಗಿ, ಪ್ರಧಾನಿಗಳ ಫೆಬ್ರವರಿ 4ರ ಬೆಂಗಳೂರಿನ ಸಭೆಯಂದು, ಸಂಘಟನೆಗಳನ್ನು ಬೆಂಗಳೂರು ಬಂದ್‌ ಮಾಡುವಂತೆ ಪ್ರೇರೇಪಿ ಸುವುದು. ಒಂದೆಡೆ ಕಾಂಗ್ರೆಸ್‌ ಪಕ್ಷಕ್ಕೆ ತನ್ನ ಸಂಧ್ಯಾಕಾಲದಲ್ಲಿ ಉಂಟಾಗಿರುವ (ಅಧಿಕಾರ ಕಳೆದುಕೊಳ್ಳುವ) ಭೀತಿಯ ಅಭಿವ್ಯಕ್ತ ವಾಗಿದ್ದರೆ ಮತ್ತೂಂದೆಡೆ, ಒಟ್ಟೂ ದೇಶದಲ್ಲಿ ಅಧಿಕಾರವನ್ನು 90% ಭಾಗ ಕಳೆದುಕೊಂಡಿದ್ದರೂ ಇಂದಿರಾಗಾಂಧಿಯವರ ಅಂದಿನ ಸರ್ವಾಧಿಕಾರಿ ಮನೋಭಾವವನ್ನು ಹಾಗೆಯೇ ಉಳಿಸಿಕೊಂಡಿ ರುವುದನ್ನು ಸೂಚಿಸುತ್ತದೆ. 

Advertisement

ನಮ್ಮ ದೇಶದಲ್ಲಿ ಎದುರಾಳಿಗಳನ್ನು, ವಿರೋಧ ಪಕ್ಷವನ್ನು ಪ್ರಜಾತಾಂತ್ರಕವಾಗಿ ದಮನಿಸಬಹುದೇ ವಿನಃ ಇಂತಹ ಹೇಳಿಕೆ, ಅಧಿಕಾರ ದುಷ್ಪ್ರಯೋಗ, ಚೇಷ್ಟೆಗಳಿಂದಲ್ಲ! 2017ರ ಭಾರತದಲ್ಲಿ 1975ರ ಮರು ಅವತರಣಿಕೆ ಸಾಧ್ಯವಿಲ್ಲ. ತುರ್ತು ಪರಿಸ್ಥಿತಿ, ನ್ಯಾಯವ್ಯವಸ್ಥೆಯ ಮೇಲೆ ದಬ್ಟಾಳಿಕೆ, ರಾಷ್ಟ್ರಪತಿಗಳ ಮೇಲೆ ಪ್ರಭಾವ ಬೀರಿ ರಾಜಕೀಯ ಲಾಭ ಪಡೆಯುವಂಥದ್ದು, ಮಾಧ್ಯಮಗಳ ಮೇಲೆ ನಿಷೇಧ ಹೇರುವುದು, ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವುದು, ಇದೆಲ್ಲವೂ ಅಂದಿನ ಆಡಳಿತಾ ರೂಢ ಕಾಂಗ್ರೆಸ್ಸಿನ ಮನಸ್ಥಿತಿಯ ಕುರುಹುಗಳಾಗಿದ್ದು, ಸ್ವಾತಂತ್ರ್ಯದ ನಂತರದಲ್ಲಿ ಅವರು ಹುಟ್ಟುಹಾಕಿದ ಒಂದು ರಾಜಕೀಯ ಸಂಸ್ಕೃತಿಯನ್ನು ಬಿಂಬಿಸುತ್ತದೆ. 

Power corrupts, absolute power corrupts absolutely. ತಮಗೆ ಪರ್ಯಾಯವಿಲ್ಲವೆಂಬ ಅಧಿಕಾರದ ಮದವು ಜನ್ಮಕೊಟ್ಟ ರಾಜಕೀಯ ಸಂಸ್ಕೃತಿ ಕಾಂಗ್ರೆಸ್ಸಿನದ್ದು. ಲಕ್ಷಾಂತರ ಕೋಟಿಗಳ ಭ್ರಷ್ಟಾಚಾರ-ಹಗರಣಗಳು, ವೋಟ್‌ ಧ್ರುವೀಕರಣಕ್ಕಾಗಿ ಅಲ್ಪಸಂಖ್ಯಾತರ ಓಲೈಕೆ, 1986ರ ಮುಸಲ್ಮಾನ ಮಹಿಳಾ ವಿರೋಧಿ ಕಾನೂನು ಮತ್ತು 2017ರಲ್ಲಿ ತ್ರಿವಳಿ ತಲಾಕ್‌ ಕಾನೂನಿಗೆ ವಿರೋಧ, ಕಪ್ಪುಹಣದ ಕ್ರೋಡೀಕರಣಕ್ಕೆ ದಶಕಗಳ ಕಾಲ ಅನುವು ಮಾಡಿಕೊಟ್ಟದ್ದು, ವಂಶವಾದದ ರಾಜಕಾರಣ, ಕೆಲವೇ ಕುಟುಂಬಗಳು/ರಾಜಕಾರಣಿಗಳ ಅಧಿಕಾರದ ಮೇಲೆ ಏಕಸ್ವಾಮ್ಯತೆ, ಬಹುಸಂಖ್ಯಾತರ ಪ್ರತಿ ಅಸಡ್ಡೆ, ಜನಪ್ರಿಯ/ ಪಾಪ್ಯುಲಿಸ್ಟ್‌ ಯೋಜನೆಗಳು, ಚುನಾವಣೆಗೆ ಅಗತ್ಯಕ್ಕೆ ಮೀರಿ ಖರ್ಚು ಮಾಡಿ ಬಿಟ್ಟಿ ವಸ್ತು/ದುಡ್ಡುಗಳನ್ನು ಕೊಡುವುದು- ಕಳೆದದ್ದನ್ನು ಚುನಾಯಿತರಾದ ನಂತರ ವಾಮಮಾರ್ಗ ಹಿಡಿದು ಗಳಿಸುವ ಪ್ರಯತ್ನ ಮಾಡುವುದು, ಚುನಾವಣಾ ಸಂಭಾಷಣೆಯ ಸ್ತರವನ್ನು ವೈಯಕ್ತಿಕ ಟೀಕೆಗಳು/ಅಸಭ್ಯ ಭಾಷಾ ಪ್ರಯೋಗಕ್ಕೆ ಇಳಿಸುವುದು, ಜಾತಿ-ಮತ-ಭಾಷೆಯನ್ನಾಧರಿಸಿ ಜನರನ್ನು ಒಡೆದಾಳುವುದು, ಖಾದಿ ಧರಿಸುವುದು ಆದರೆ ಗಾಂಧಿ ತತ್ವಗಳಿಗೆ ತದ್ವಿರುದ್ಧದ ನಡವಳಿಕೆ… ಈ ಕಾಂಗ್ರೆಸ್ಸಿನ ರಾಜಕೀಯ ಸಂಸ್ಕೃತಿ ಯನ್ನು, ನಂತರ ಹುಟ್ಟಿಕೊಂಡ ಪ್ರಾಂತೀಯ ಪಕ್ಷಗಳು ಮತ್ತವುಗಳ ರಾಜಕಾರಣಿಗಳೂ ಅನುಸರಿಸಲಾರಂಭಿಸಿದ್ದು ಭಾರತದಲ್ಲಿ, ರಾಜಕಾರಣಿಗಳ ಪ್ರತಿ ಭೀಭತ್ಸವನ್ನು ಉಂಟುಮಾಡಿದೆ. ರಾಜ ಕಾರಣಿ ಗಳೆಲ್ಲರೂ ಕಳ್ಳರು, ವೋಟ್‌ ಪಡೆಯುವುದಕ್ಕಾಗಿ ಸುಳ್ಳು ಭರವಸೆಗಳನ್ನು ಕೊಟ್ಟು, ಅಧಿಕಾರಕ್ಕೆ ಬಂದ ನಂತರ ಸ್ವಹಿತಾ ಸಕ್ತಿಯನ್ನಷ್ಟೆ ಕಾಪಾಡಿಕೊಳ್ಳುವಂತಹವರು. ಹೀಗೆ ರಾಜಕಾರಣ ಮತ್ತು ರಾಜಕಾರಣಿಗಳ ಕುರಿತು ಅಸಹ್ಯ ಸಮಾಜದಲ್ಲಿ ಮೂಡಿರುವುದು ಅಲ್ಲಗಳೆಯಲಾಗದ ಸತ್ಯ. 

ಸನ್ಮಾನ್ಯ ಪ್ರಧಾನಿಗಳು ಮೊನ್ನೆಯ ಸಂದರ್ಶನವೊಂದರಲ್ಲಿ ಹೇಳಿದ್ದರ ಸುದೀರ್ಘ‌ ವಿವರಣೆಯನ್ನಷ್ಟೆ ನಾನಿಲ್ಲಿ ಮಾಡಿದ್ದೇನೆ. ಕಾಂಗ್ರೆಸ್‌ ಮುಕ್ತ ಭಾರತದ ಘೋಷಣೆಯ ಹಿನ್ನೆಲೆಯನ್ನು ವಿವರಿ ಸುತ್ತಾ, ಕಾಂಗ್ರೆಸ್ಸು ಹುಟ್ಟುಹಾಕಿರುವ ರಾಜಕೀಯ ಸಂಸ್ಕೃತಿಯಿಂದ ಭಾರತ ಮುಕ್ತವಾಗಬೇಕಿದೆ ಎಂದರು. ಒಂದು ಹೆಜ್ಜೆ ಮುಂದೆ ಹೋಗಿ, ಕಾಂಗ್ರೆಸ್ಸೇ ಕಾಂಗ್ರೆಸ್‌ ಮುಕ್ತವಾಗಬೇಕಿದೆ ಎಂದರು. ಅರ್ಥಾತ್‌ ದೇಶದ ಜನರಲ್ಲಿ ರಾಜಕೀಯ ಮತ್ತು ರಾಜಕಾರಣಿಗಳ ಪ್ರತಿ ಹೊಸ ಭರವಸೆಗಳನ್ನು, ವಿಶ್ವಾಸವನ್ನು ಮೂಡಿಸುವಂಥಹ ಹೊಸ ರಾಜಕೀಯ ಸಂಸ್ಕೃತಿ ಮೂಡುವ ಮನ್ವಂತರವೊಂದು ಆರಂಭವಾಗಿದೆ. 

ದುರದೃಷ್ಟವಶಾತ್‌, ಸ್ವತಃ ಸಮಾಜವಾದಿಗಳಾಗಿದ್ದ ಸಿದ್ದರಾಮಯ್ಯ ನವರು ಇಂದು ಮೂಲ ಕಾಂಗ್ರೆಸ್ಸಿನ, ಕಾಂಗ್ರೆಸ್ಸಿಗರಿ ಗಿಂತ ಹೆಚ್ಚು ವಿರೋಧ ಪಕ್ಷಗಳ ಪ್ರತಿ ಅಸಹಿಷ್ಣುತೆಯನ್ನು ಮೆರೆಸುತ್ತಿದ್ದಾರೆ, ಅಹಿಂದದ ಹೆಸರಿನಲ್ಲಿ ಅಲ್ಪಸಂಖ್ಯಾತರ ಹಿಂದೆಂದೂ ಇಲ್ಲದ ಓಲೈಕೆ-ಒಂದೆಡೆ ಶಾದಿ ಭಾಗ್ಯ ಮತ್ತೂಂದೆಡೆ ತ್ರಿವಳಿ ತಲಾಖ್‌ ಕಾನೂನಿಗೆ ವಿರೋಧ, ಪಿಎಫ್ಐನಂತಹ ರಾಷ್ಟ್ರವಿರೋಧಿ ಸಂಘಟನೆಗಳನ್ನು ನಿಷೇಧಿಸದೆ ಮೃದು ಧೋರಣೆ ತೋರುವುದು, ಹಿಂದೂಗಳ ಹತ್ಯೆಗಳನ್ನು ಕಂಡೂ ಕಾಣದಂತಿರುವುದು, ಕರ್ನಾಟ ಕದ ಇತಿಹಾಸದಲ್ಲಿ ಎಂದೂ ಕಾಣದ ಮತ/ವೈಚಾರಿಕ ವಿಚಾರಗಳಿಗೆ ಕೊಲೆಗಳು, ಎಷ್ಟೇ ವಿರೋಧವಿದ್ದರೂ ಟಿಪು ಜಯಂತಿಯ ಆಚರಣೆ, ಆದರೆ ಸೆಕ್ಯುಲರ್‌ ಸೋಷಿಯಲಿಸ್ಟ್‌ ನಾಸ್ತಿಕರು, “ನಾನೂ ಹಿಂದೂ, ನನ್ನ ಹೆಸರಿನಲ್ಲೂ ರಾಮನಿ¨ªಾನೆ’ ಎಂಬುದು, ಪಾಪ್ಯು ಲಿಸ್ಟ್‌ ಭಾಗ್ಯಗಳು, ಪ್ರಧಾನಿಗಳ ವಿರುದ್ಧದ (ನರಹಂತಕ) ಕೆಳ ಮಟ್ಟದ ಭಾಷಾಬಳಕೆ, ಆರೆಸ್ಸೆಸ್‌/ಬಿಜೆಪಿಯನ್ನು ಭಯೋತ್ಪಾದಕರೆ ನ್ನುವುದು…ಇವೆಲ್ಲವೂ ಸಿದ್ದರಾಮಯ್ಯರ ರಾಜಕೀಯದ ಗುರು ತುಗಳಾಗಿ ಹೊರಹೊಮ್ಮಿವೆ. ಇದೇ ಸಂಸ್ಕೃತಿಯನ್ನು ಕೊನೆಗಾಣಿಸುವುದು 2018ರ ಕರ್ನಾಟಕದ ಮತದಾರರ ಹಕ್ಕು. 

ಮಾಳವಿಕಾ ಅವಿನಾಶ್‌

Advertisement

Udayavani is now on Telegram. Click here to join our channel and stay updated with the latest news.

Next