Advertisement

ಮದುವೆಯಲ್ಲಿ ಜನರ ಕೈಗೆ ಬ್ಯಾಂಡ್‌ : ಮಾರ್ಗಸೂಚಿ ಪಾಲನೆಗೆ ಜಿಲ್ಲಾಡಳಿತದಿಂದ ವಿನೂತನ ಕ್ರಮ

05:30 PM Apr 24, 2021 | Team Udayavani |

ಧಾರವಾಡ: ರಾಜ್ಯ ಸರ್ಕಾರ ಏ.21ರಿಂದ ಜಾರಿಗೊಳಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ ಮದುವೆಗಳಲ್ಲಿ 50 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದ್ದು, ಜಿಲ್ಲಾಡಳಿತವು ಈ ನಿಯಮ ಪಾಲನೆ ಹಾಗೂ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿಶೇಷ ಕ್ರಮಕ್ಕೆ ಮುಂದಾಗಿದೆ.

Advertisement

ಜಿಲ್ಲೆಯಲ್ಲಿ ನಡೆಯುವ ಮದುವೆಗಳಲ್ಲಿ ಭಾಗವಹಿಸುವ 50 ಜನರಿಗೆ ತಮ್ಮ ಕೈಗಳಿಗೆ ಧರಿಸಲು ವಿಶೇಷವಾದ ಬ್ಯಾಂಡ್‌ಗಳನ್ನು ಮದುವೆ ಆಯೋಜಕರಿಗೆ ಅನುಮತಿಯೊಂದಿಗೆ ನೀಡಲು ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಪ್ರಕಟಣೆ ನೀಡಿರುವ ಡಿಸಿ ನಿತೇಶ್‌ ಪಾಟೀಲ, ಮಹಾನಗರ-ಗ್ರಾಮೀಣ ಪ್ರದೇಶಗಳಲ್ಲಿ ಮೇ 4ರ ವರೆಗೆ ಜರುಗುವ ಮದುವೆಗಳಿಗೆ ಅನುಮತಿ ಪಡೆಯುವುದನ್ನು ಜಿಲ್ಲೆಯಲ್ಲಿ ಕಡ್ಡಾಯಗೊಳಿಸಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಲಯ ಸಹಾಯಕ ಆಯುಕ್ತರು ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಉಳಿದ ಎಲ್ಲ ತಾಲೂಕು ವ್ಯಾಪ್ತಿಯಲ್ಲಿ ತಹಶೀಲ್ದಾರರು ಮದುವೆಗಳ ಆಯೋಜನೆಗೆ ಅನುಮತಿ ನೀಡಲು ಆದೇಶಿಸಲಾಗಿದೆ ಎಂದಿದ್ದಾರೆ.

ಮದುವೆಗಳಲ್ಲಿ ನಿಯಮ ಮೀರಿ 50ಕ್ಕಿಂತ ಹೆಚ್ಚು ಜನ ಪಾಲ್ಗೊಳ್ಳದಂತೆ ಜಾಗೃತಿ ವಹಿಸಲು ಹಾಗೂ ಆಯೋಜಕರಿಗೆ ಸಂಖ್ಯಾ ನೀತಿಯನ್ನು ಖಾತರಿಪಡಿಸಿಕೊಳ್ಳಲು ಅನುಕೂಲವಾಗುವಂತೆ ಅನುಮತಿ ಪಡೆಯಲು ಬರುವ ಆಯೋಜಕರಿಗೆ ಅನುಮತಿಯೊಂದಿಗೆ ಅನುಕ್ರಮ ಸಂಖ್ಯೆ ಇರುವ 50 ವಿಶೇಷವಾದ ಬ್ಯಾಂಡ್‌ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಮಾರ್ಗಸೂಚಿಯಲ್ಲಿ ತಿಳಿಸಿರುವ ಸಂಖ್ಯೆಗಿಂತ ಹೆಚ್ಚು ಜನ ಭಾಗವಹಿಸಿರುವುದು ಕಂಡುಬಂದಲ್ಲಿ ಮದುವೆ ಆಯೋಜಕರ ಹಾಗೂ ಮದುವೆ ಮಂಟಪದ ಮಾಲೀಕರ ಮೇಲೆ ಎಫ್‌ಐಆರ್‌ ದಾಖಲಿಸಿ, ತಕ್ಷಣ ಕಲ್ಯಾಣ ಮಂಟಪ ಸೀಜ್‌ ಮಾಡಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next