Advertisement

ಮಾತಾ ಮಂಜಮ್ಮ ಜೋಗತಿಗೆ ಪದ್ಮಶ್ರೀ ಗೌರವ

04:59 PM Jan 26, 2021 | |

ಮರಿಯಮ್ಮನಹಳ್ಳಿ: ಬಳ್ಳಾರಿ ಜಿಲ್ಲೆಯ ಈಗಿನ ಕುರುಗೋಡು ತಾಲೂಕಿನ ಕಲ್ಲುಕಂಬ ಗ್ರಾಮ ಮಂಜಮ್ಮ ಜೋಗತಿ ಅವರ ಹುಟ್ಟೂರು.
ಆರ್ಯವೈಶ್ಯ ಸಮಾಜದಲ್ಲಿ ತಂದೆ ಬಿ. ಹನುಮಂತಶೆಟ್ಟಿ ತಾಯಿ ಬಿ.ಜೈಲಕ್ಷ್ಮೀ ದಂಪತಿಗಳಿಗೆ 21 ಜನ ಮಕ್ಕಳಲ್ಲಿ 4 ಜನಮಾತ್ರ ಉಳಿದವರು ಇಬ್ಬರು ತಂಗಿಯರು ಒಬ್ಬ ಅಣ್ಣ. ಇವರ ಪೈಕಿ 2 ನೇ ಮಗನೇ ಮಂಜುನಾಥಶೆಟ್ಟಿಯಾಗಿದ್ದು ಮುಂದೆ ಮಂಜಮ್ಮ ಜೋಗತಿಯಾಗಿ ಬೆಳೆದದ್ದು ರೋಚಕ ಕತೆ.

Advertisement

ಮಂಜುನಾಥ ಶೆಟ್ಟಿ ವಿದ್ಯಾಭ್ಯಾಸ ಮಾಡಿದ್ದು ದಾವಣಗೆರೆ ಜಿಲ್ಲೆ ಕುಕ್ಕವಾಡದಲ್ಲಿ 7ನೇ ತರಗತಿಯಲ್ಲಿ ಇದ್ದಾಗಲೇ ಹೆಣ್ಣಿನ ವರ್ತನೆಗಳು ಬೆಳೆದು ಅತ್ತಕಡೆ ಹೆಚ್ಚುವಾಲತೊಡಗಿದ್ದು ಮನೆಯವರಿಗೆ ಇರಿಸುಮುರಿಸು ಮಾಡಿದ್ದು, ಎಸ್‌ಎಸ್‌ಎಲ್‌ಸಿಯಲ್ಲಿ ವಿಜ್ಞಾನ ಮತ್ತು ಇಂಗ್ಲಿಷ್‌ ವಿಷಯದಲ್ಲಿ ಫೇಲ್‌ ಆಗಿ, ಮನೆಯವರ ನಿರ್ಲಕ್ಷ್ಯ, ಅವಮಾನಕ್ಕೆ ಮನೆಬಿಟ್ಟು ಹೊರಟು ಖನ್ನತೆಗೊಳಗಾಗಿ ವಿಷಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದು ಅಲ್ಲಿಂದ ಮಟ್ಟಿಕಲ್‌ ಬಸಪ್ಪ ಎಂಬ ಜೋಗತಿಯವರ ಬಳಿ ಇದ್ದು ಹಾಡುವುದು ಕುಣಿಯುವುದು ರೂಢಿಮಾಡಿಕೊಂಡು, ನಂತರ 1986ರಲ್ಲಿ ಹೊಸಪೇಟೆ ತಾಲೂಕು ಚಿಲಕನಹಟ್ಟಿ ಗ್ರಾಮದಲ್ಲಿ ಶ್ರೇಷ್ಠ ಜೋಗತಿ ಕಲಾವಿದೆ ಕಾಳಮ್ಮಜೋಗತಿ ಪರಿಚಯವಾಗಿ ಅವರಿಂದ ಜೋಗತಿ ದೀಕ್ಷೆಪಡೆದು ಜೋಗತಿ ಹಾಡು ನೃತ್ಯ ಕಲಿತು ರಾಜ್ಯಾದ್ಯಾಂತ ಹೆಸರುವಾಸಿಯಾಗಿ ಬೆಳೆದು ಇಂದು ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿಯ ಅಧ್ಯಕ್ಷೆಯಾಗಿರುವುದು.

ಈಗ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ತೃತೀ ಯ ಲಿಂಗಿಗಳ ಸಮುದಾಯಕ್ಕೆ ಒಂದು ಆತ್ಮಸ್ಥೈರ್ಯದ ಸಂಕೇತವಾಗಿದೆ. ಮಂಜಮ್ಮ ಜೋಗತಿ ಈಗ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಮಾಧ್ಯಮಗಳ ಸುದ್ದಿ ಕೇಂದ್ರವಾಗಿದ್ದಾರೆ. ಆಕೆ ತೃತೀಯಲಿಂಗಿ ಅನ್ನುವ ಕಾರಣಕ್ಕೆ ಒಂದಾದರೆ ಜೋಗತಿ ಕಲೆಯನ್ನು ಬೆಳೆಸಿ ಕಾರ್ಪೊರೇಟ್‌ ಜಗತ್ತಿಗೆ ಕಲಿಸಿ ರೇಣುಕ ಎಲ್ಲಮ್ಮನ ಕಥೆಯನ್ನು ಇಂಗ್ಲಿಷಿನಲ್ಲಿಯೂ
ಪ್ರದರ್ಶನಗೊಳಿಸುತ್ತಿರುವ ಹೊಸತಲೆಮಾರಿನ ಕಲಾವಿದರಿಗೂ ಸ್ಫೂರ್ತಿ ಸೆಲೆಯಾಗಿದ್ದಾರೆ. ಇಂದಿಗೂ ಸಾಮಾಜಿಕವಾಗಿ ತುಂಬಾ ನಿಕೃಷ್ಟವಾಗಿ ಕಾಣುವ ತನ್ನವರೇ ದೂರ ಮಾಡುವ

ತ್ರತೀಯ ಲಿಂಗಿಗಳೆಲ್ಲರಿಗೂ ಒಂದು ಭರವಸೆಯ ಬೆಳಕಾಗಿದ್ದಾರೆ. ಇಷ್ಟೆಲ್ಲದರ ನಡುವೆಯೂ ಕೆಲವು ಪಟ್ಟಭದ್ರಹಿತಾಸಕ್ತಿಯ ಪೋಷಕರ ಬಾಯಲ್ಲಿ, ಕಿಚಾಯಿಸಿ ಆಡಿಕೊಳ್ಳುವವರ ಬಾಯಲ್ಲಿಯೂ ಪರೋಕ್ಷವಾಗಿ ಹೆಚ್ಚು ಪ್ರಚಾರಕ್ಕೊಳಗಾಗಿದ್ದಾರೆ. ಬಯಲಾಟಗಳಲ್ಲಿ ಮಧ್ಯೆ ಮಧ್ಯೆ ನೃತ್ಯಗಳನ್ನು ಮಾಡುತ್ತ ಅಷ್ಟೊಇಷ್ಟೋ ಕಾಸು ಗಳಿಸುತ್ತಾ ಈಗ ರಂಗಭೂಮಿಯಲ್ಲಿ ತೃತೀಯ ಲಿಂಗಿಯಾಗಿದ್ದು ಕೊಂಡು ಅದರಲ್ಲೂ ಪುರುಷ ಪಾತ್ರಗಳನ್ನು ಅಭಿನಯಿಸಿದ ಮೊದಲ ಕಲಾವಿದರಲ್ಲಿ ಮೊದಲಿಗರು ಮಂಜಮ್ಮ ಜೋಗತಿ.
( ಕಾಳಮ್ಮಜೋಗತಿ ಅವರು ಜೋಗತಿ ಸಣ್ಣಾಟಕ್ಕೆ ಸೀಮಿತವಾದರು. ಮಂಜಮ್ಮಜೋಗತಿ ಜೋಗತಿ ಆಟ, ಪೌರಾಣಿಕ, ಸಾಮಾಜಿಕ ಹವ್ಯಾಸಿರಂಗಭೂಮಿ ಬಯಲಾಟ, ಸಿನೆಮಾ ರಂಗದಲ್ಲೂ ಪ್ರವೇಶ ಪಡೆದವರು. )

ಏನೇ ಆಗಲೀ ಮಂಜಮ್ಮ ಜೋಗತಿ ತೃತೀಯ ಲಿಂಗಿಯಾಗಿದ್ದುಕೊಂಡು ರಂಗಭೂಮಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಇದು ಆಕೆಯ ಉದ್ದೇಶವೂ ಸದಾಶಯವೂ ಆಗಿರದೇ ಹುಡುಕಿಕೊಂಡು ಬಂದ ಅವಕಾಶಗಳನ್ನೆ ಬಳಸಿಕೊಂಡು ರಂಗಭೂಮಿಯಲ್ಲಿ ಒಂದಿಷ್ಟು
ಹೆಸರನ್ನು ಮಾಡಿದ್ದಾರೆ.

Advertisement

1999-90ರಲ್ಲಿ ಕಲ್ಲುಕಂಬದಲ್ಲಿ ಹೇಮರೆಡ್ಡಿ ಮಲ್ಲಮ್ಮ ನಾಟಕ ಇತ್ತು ಆ ನಾಟಕಕ್ಕೆ ಮಹಾದೇವಿ ಪಾತ್ರಕ್ಕೆ ಒಪ್ಪಿಕೊಂಡಿದ್ದ ಕಲಾವಿದರು ಕೈಕೊಟ್ಟಿದ್ದರು. ಆಗ ಮಂಜಮ್ಮನ ಪರಿಚಿತರ್ಯಾರೋ ನಾಟಕದವರಿಗೆ ಹಳಿದ್ದಾರೆ ಮಂಜಮ್ಮ ಜೋಗತಿ ಇದ್ದಾರೆ ಥೇಟ್‌ ಹೆಣ್ಣಿನಂಗೇ ಇದ್ದಾರೆ ಅವರಿಗೆ ಮಹಾದೇವಿ ಪಾತ್ರ ಕೊಟ್ರೆ ಮಾಡ್ತಾರೆ ಅಂತ ಹೇಳಿದಾಗ ನಾಟಕ ಪ್ರದರ್ಶನಕ್ಕೆ ಒಂದೇ ದಿನ ಮುಂಚಿತವಾಗಿ ನಾಟಕದ
ಪುಸ್ತಕ ಕೊಟ್ಟಿದ್ದಾರೆ. ಒಂದೇ ದಿನದಲ್ಲಿಯೇ ಮಾತುಗಳನ್ನು ಕಲಿತು ಅಭಿನಯಿಸಿ ಸೈ ಎನಿಸಿಕೊಂಡೆ ಎಂದು ಮಂಜಮ್ಮ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ.

ಮರಿಯಮ್ಮನಹಳ್ಳಿಯ ಮಹಿಳಾ ವೃತ್ತಿ ರಂಗಕಲಾವಿದರ ಸಂಘದ ವತಿಯಿಂದ ಡಾ| ಕೆ.ನಾಗರತ್ನಮ್ಮ ಮತ್ತು ಇಳಕಲ್‌ ಉಮಾರಾಣಿಅವರು ನಿರ್ದೇಶನ ಮಾಡಿ ಸಿದ್ಧಗೊಳಿಸಬೇಕಾಗಿದ್ದ ಪಂಚಗಲ್‌ ಬಸವರಾಜ ಬರೆದಿರುವ “ಮೋಹಿನಿಭಸ್ಮಾಸುರ’ ಪೌರಾಣಿಕ ನಾಟಕಕ್ಕೆ ಭಸ್ಮಾಸುರನ ಪಾತ್ರಕ್ಕೆ ಮಹಿಳಾ ಕಲಾವಿದರ ಹುಡುಕಾಟದಲ್ಲಿದ್ದಾಗ ನಾವೊಲ್ಲೆ ನೀವೊಲ್ಲೆ ಎನ್ನುವವರ ಮಧ್ಯೆ ನಾ ಅಭಿನಯಿಸುವೆ ಎಂದು
ಮುಂದೆ ಬಂದವರೇ ಮಂಜಮ್ಮ ಜೋಗತಿ.

ಎತ್ತರ ಬಲಿಷ್ಟವಾದ ದೇಹದಾಡ್ಯìತೆ ಭಸ್ಮಾಸುರನ ಪಾತ್ರಕ್ಕೆ ಹೇಳಿ ಮಾಡಿಸಿದಂತಿತ್ತು. ಜೋಗತಿ ಆಟದ ಕಲೆಯಲ್ಲಿ ಅಭಿನಯದಲ್ಲಿ ಕರಗತವಾಗಿದ್ದ ಮಂಜಮ್ಮ ಈ ನಾಟಕದ ಪುರುಷ ಅದರಲ್ಲೂ ಭೀಕರತೆಯ ರಾಕ್ಷಸ ಪಾತ್ರಕ್ಕೆ ಆಕೆ ದೇಹವೇನೋ ಹೊಂದಾಣಿಕೆಯಾಗುತ್ತಿತು ಆಕೆಯ ಧ್ವನಿ ಒಂದು ಸವಾಲಾಗಿತ್ತು.

ಆಂಗಿಕ ಅಭಿನಯಕ್ಕೆ ಕಲಾವಿದೆ ಇಳಕಲ್‌ ಉಮಾರಾಣಿ ಅವರು ತರಬೇತು ಮಾಡಿದರೆ, ಡಾ| ಕೆ.ನಾಗರತ್ನಮ್ಮ ಅವರು ಸಂಭಾಷಣೆ ಅದರ ಏರಿಳಿತ, ಧ್ವನಿಯ ಭೀಕರತೆ ಉಚ್ಛಾರ ಇತ್ಯಾದಿ ತರಬೇತು ಮಾಡಿದರು. ಅಷ್ಟಕ್ಕೂ ಮಂಜಮ್ಮ ಪಾತ್ರಕ್ಕೆ ಅಗತ್ಯವಾದ ಧ್ವನಿಯನ್ನು ವಿಶೇಷವಾಗಿ ಅಭ್ಯಾಸ ಮಾಡಿಕೊಳ್ಳಲು ಬೆಳಗಿನ ಜಾವ 5 ಗಂಟೆಗೆ ಊರ ಹೊರಗಡೆ ಹೋಗಿ ಮಾತುಗಳನ್ನು ಗಟ್ಟಿಯಾಗಿ ಹೇಳುತ್ತಾ ಕಂಠಪಾಠ ಮಾಡಿಕೊಳ್ಳುತ್ತಿದ್ದರಂತೆ. ಜೋಗತಿಯಂತೆ ಮಾತಾಡಿಬಿಟ್ಟರೆ ಮರ್ಯಾದೆ ಮಣ್ಣುಪಾಲಾಗುತ್ತೆ ಎಂಬ ಅಳುಕಿನಲ್ಲಿಯೇ ಈ
ಸವಾಲಿನಲ್ಲಿ ಗೆದ್ದರು.

ಇಂದು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಮಾತಾ ಮಂಜಮ್ಮ ಜೋಗತಿ ತಾನು ಬೆಳೆದು ಬಂದ ಕಷ್ಟದ ದಿನಗಳನ್ನು, ಅನುಭವಸಿದ ನೋವು ಅವಮಾನ, ಕಷ್ಟ ಕಾರ್ಪಣ್ಯಗಳನ್ನು ಇಂದಿಗೂ ಮರೆತಿಲ್ಲ. ತನ್ನಂತೆ ನೊಂದವರ ಬಾಳಿನಲ್ಲಿ ಸಂತೋಷದ ಬೆಳಕುಹರಿಸುವ ಉದ್ದೇಶವೂ ಆಕೆಯ
ಮಾತೃ ಹೃದಯದಲ್ಲಿ ಮನೆಮಾಡಿದೆ.

*ಎಂ. ಸೋಮೇಶ ಉಪ್ಪಾರ

Advertisement

Udayavani is now on Telegram. Click here to join our channel and stay updated with the latest news.

Next