Advertisement

ಬಲಕ್‌ ಕಪಾಟ್‌ ಐತಿ; ಎಡಕ್ಕ ಅಡಗಿ ಮನಿ ಐತಿ!

12:18 PM Nov 26, 2018 | |

ಚಿಕ್ಕಗಲಗಲಿ (ವಿಜಯಪುರ): ನಿಮ್ಮ ಮನಿ ಕೆಳಾಕ್‌ (ಪೂರ್ವ) ಮುಖ ಮಾಡಿ ಐತಿ. ಬಲಕ್ಕೆ ಬೆಡ್‌ರೂಂ ಐತಿ. ಎಡಕ್ಕ ಅಡಗಿ ಮನಿ ಐತಿ. ಬೆಡ್‌ರೂಂ ಒಳಗ್‌ ಮತ್ತ ಬಲಕ್ಕ ಕಪಾಟ ಐತಿ. ಅದರೊಳಗ್‌ ಮ್ಯಾಲಿನ ಖಾನ್ಯಾದಾಗ (ಮೊದಲ ಖಾನೆ)ಸೀರಿ-ಫೈಲ್‌ ಅದಾವು. ನಡುವಿನ ಖಾನ್ಯಾದಾಗ್‌ ಹೊಸ ಹೊಸ ಬಟ್ಟೆ ಅದಾವು. ಅದರೊಳಗ 2 ಸಾವಿರ ನೋಟಿನ ಎರಡು ಬಂಡಲ್‌ ಅದಾವು…
ಇದು ಯಾರೋ ಭವಿಷ್ಯ ಹೇಳಿದ ಮಾತುಗಳಲ್ಲ. ಯಾರದೋ ಮನೆ ನೋಡಿ ವಿವರ ಹೇಳುತ್ತಿರುವುದೂ ಅಲ್ಲ. ಕೊಲ್ಹಾಪುರ-ಕನೇರಿ ಸಿದ್ಧಗಿರಿ ಮಠದ ಗುರುಕುಲದ ಕನ್ಯಾಶ್ರೀಗಳು (10 ವರ್ಷ ಮೇಲ್ಪಟ್ಟ ಕಿರಿಯ ಶ್ರೀಗಳು) ತ್ರಿನೇತ್ರ ವಿದ್ಯೆಯ ಮೂಲಕ ನಾವು-ನೀವು ನೋಡಿರದ ಮನೆಯ ಸಂಪೂರ್ಣ ಚಿತ್ರಣವನ್ನು ಹೇಳಿ ನೆರೆದಿದ್ದ ಸಾವಿರಾರು ಭಕ್ತರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿದರು. ಜಿಲ್ಲೆಯ ಕೃಷ್ಣಾ ತೀರದ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿಯ ಶ್ರದ್ಧಾನಂದ ಮಠದಲ್ಲಿ ಸಹೃದಯಿ ಮಠಾಧೀಶರ
ಒಕ್ಕೂಟದಿಂದ ರವಿವಾರ ಹಮ್ಮಿಕೊಂಡಿದ್ದ ಭಕ್ತ ಸಮಾವೇಶದಲ್ಲಿ ಕೊಲ್ಲಾಪುರ-ಕನೇರಿ ಸಿದ್ಧಗಿರಿ ಗುರುಕುಲದ ಕನ್ಯಾಶ್ರೀಗಳು ತ್ರಿನೇತ್ರ ವಿದ್ಯೆ ಮೂಲಕ ಅಪರಿಚಿತ ವ್ಯಕ್ತಿಗಳ ಮನೆ, ಮನಸ್ಸಿನ ಒಳಲಾಟ, ಎಲ್ಲಿಂದ, ಹೇಗೆ ಬಂದರು ಎಂಬುದರ ವಿವರ ನೀಡಲಾಯಿತು.

Advertisement

ನೋಡುಗರಿಗೆ ಅವರು ಭವಿಷ್ಯ ಹೇಳುವಂತೆ ಇತ್ತಾದರೂ, ಇದೊಂದು ತ್ರಿನೇತ್ರ ವಿದ್ಯೆ. ಜ್ಞಾನದಿಂದ ಬರುವ ಈ ವಿದ್ಯೆಯನ್ನು ಯಾರು ಬೇಕಾದರೂ ಕಲಿಯಬಹುದು. ಕಲಿಯಲು ಶ್ರದ್ಧೆ, ಜ್ಞಾನ ಬೇಕು ಎಂದು ಕೊಲ್ಲಾಪುರ-ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ
ಸ್ವಾಮೀಜಿ, ತಿಳಿಸಿದರು.

 ಚಿಕದಾನಿ ಮನೆಯ ಚಿತ್ರಣ: 10ರಿಂದ 15 ವರ್ಷಗೊಳಗಿನ ಕಿರಿಯ ಶ್ರೀಗಳು, ಭಕ್ತ ಸಮಾವೇಶದಲ್ಲಿ ವಿವಿಧ ವಿದ್ಯೆಗಳ ಪ್ರದರ್ಶನ ಮಾಡಿದರು. ಈ ವೇಳೆ ತ್ರಿನೇತ್ರ ವಿದ್ಯೆಯೂ ಪ್ರದರ್ಶನ ಮಾಡಿ, ವಿಜಯಪುರ ನಗರದಲ್ಲಿ ಕಾರ್‌ ಶೋರೂಂ ಮಾಡಿಕೊಂಡಿರುವ ಚಿಕ್ಕಗಲಗಲಿ ಗ್ರಾಮದ ಚಂದ್ರಕಾಂತ ಚಿಕದಾನಿ ಅವರ ಸಂಪೂರ್ಣ ವಿವರ ಬಿಚ್ಚಿಟ್ಟರು.

ಕಿರಿಯ ಶ್ರೀಗಳ (5ರಿಂದ 6 ಜನ) ತ್ರಿನೇತ್ರ ವಿದ್ಯೆ ಪರೀಕ್ಷೆಗೆ ಯಾರಾದರೂ, ವೇದಿಕೆಯತ್ತ ಬನ್ನಿ ಎಂದು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಆಹ್ವಾನಿಸಿದರು. ಆಗ ಚಿಕ್ಕಗಲಗಲಿಯ ಚಂದ್ರಕಾಂತ ಚಿಕದಾನಿ ಎದ್ದು ವೇದಿಕೆಯತ್ತ ಬಂದರು. ಜ್ಞಾನದಲ್ಲಿ ತಲ್ಲೀನರಾದ 5ರಿಂದ 6 ಜನ ಕನ್ಯಾ ಶ್ರೀಗಳು ಕೆಲ ಸಮಯ ಬಳಿಕ, ಚಿಕದಾನಿ ಅವರ ಮನೆ ಯಾವ ದಿಕ್ಕಿಗೆ ಮುಖ ಮಾಡಿದೆ. ಅಡುಗೆ ಕೋಣೆ
ಯಾವ ದಿಕ್ಕಿಗಿದೆ, ಯಾವ ದಿಕ್ಕಿನಲ್ಲಿ ಪಾತ್ರೆ ಇಟ್ಟಿದ್ದಾರೆ, ಗೋಡೆಯ ಮೇಲೆ ಯಾವ ಬಣ್ಣದ ಗಡಿಯಾರ ಹಾಕಿದ್ದಾರೆ, ಬೆಡ್‌ರೂಂ ಯಾವ ದಿಕ್ಕಿಗಿದೆ. ಅದರಲ್ಲಿ ಎಷ್ಟು ಕಪಾಟುಗಳಿವೆ. ಯಾವ ಕಪಾಟಿನ ಯಾವ ಖಾನೆಯಲ್ಲಿ ಏನೇನು ಇಟ್ಟಿದ್ದಾರೆ ಎಂದೆಲ್ಲ ಹೇಳಿದರು. ಕನ್ಯಾಶ್ರೀಗಳು ಹೇಳುತ್ತಿರುವ ಸರಿಯೋ, ತಪ್ಪೋ ಎಂದು ಚಂದ್ರಕಾಂತ ಚಿಕದಾನಿ ಅವರಿಗೆ ಕೇಳಲಾಗುತ್ತಿತ್ತು. ಗೋಡೆ ಮೇಲೆ
ಹಾಕಿದ ಕುಟುಂಬದವರ ಫೋಟೋ ವಿವರವೊಂದನ್ನು ಬಿಟ್ಟು, ಉಳಿದೆಲ್ಲ ವಿವರೂ ಸತ್ಯ ಎಂದು ಚಂದ್ರಕಾಂತ ಸ್ವತಃ ಒಪ್ಪಿಕೊಂಡರು.

ಭಕ್ತರ ಬರಹ; ಕಣ್ಣು ಕಟ್ಟಿಕೊಂಡು ವಿವರ: ಇನ್ನು ಭಕ್ತರು, ಚಿಕ್ಕದಾದ ಕಪ್ಪು ಹಲಗೆಯ ಮೇಲೆ ಇಂಗ್ಲಿಷ್‌ನ ಕೆಲ ಶಬ್ದಗಳನ್ನು ಬರೆದು, ಕನ್ಯಾಶ್ರೀಗಳಾದ ಮಕ್ಕಳ ಕೈಗೆ ನೀಡಿದರು. ಆಗ ಮಕ್ಕಳು, ಒಂದು ನಿಮಿಷ ಜ್ಞಾನಾರ್ಜನೆಯಲ್ಲಿದ್ದು, ಕಪ್ಪು ಹಲಗೆಯ ಮೇಲೆ ಯಾವ
ಯಾವ ಅಕ್ಷರ ಬರೆಯಲಾಗಿದೆ ಎಂದು ಹೇಳಿದರು.  ಭಕ್ತರೊಬ್ಬರು, ಕಪ್ಪು ಹಲಗೆಯ ಮೇಲೆ ಶ್ರೀ ಎಂಬ ಅಕ್ಷರ ಬರೆದಿದ್ದರು. 

Advertisement

ಶ್ಲೋಕಗಳ ಅಂತಾಕ್ಷರಿ: ಕೊಲ್ಹಾಪುರ-ಕನೇರಿ ಮಠದ ಗುರುಕುಲದಲ್ಲಿ ಅಧ್ಯಯನ ನಡೆಸುತ್ತಿರುವ ಮಕ್ಕಳು ಸ್ವತಃ ವಿವಿಧ ವಾದ್ಯ ನುಡಿಸುತ್ತ, ಸಂಸ್ಕೃತ ಶ್ಲೋಕಗಳ ಅಂತಾಕ್ಷರಿ ನಡೆಸಿದರು. ಬಳಿಕ ವಿವಿಧ ಸಂಗೀತ ವಾದ್ಯಗಳ ಜುಗಲ್‌ ಬಂದಿ ನಡೆಸಿ ಭಕ್ತರ ಗಮನ ಸೆಳೆದರು. ಇನ್ನು ಟಿಪಾಯಿ ಮೇಲೆ ಬಾಟಲ್‌ ಇಟ್ಟು, ಬಾಟಲ್‌ಗ‌ಳ ಮೇಲೆ ಮರದ ಹಲಗೆ ಇಟ್ಟು, ಅದರ ಮೇಲೆ ನಿಂತು ವಿವಿಧ ಯೋಗಾಸನ ಮಾಡಿದರು. ಇದು ಭಕ್ತರನ್ನು ತುದಿಗಾಲಲ್ಲಿ ನಿಂತು ನೋಡುವಂತೆ ಮಾಡಿತು.

ದೃಷ್ಟಿ ವಿದ್ಯೆಯಿಂದ ಬಿತ್ತು ಟೆಂಗಿನಕಾಯಿ: ಒಬ್ಬ ಬಾಲಕ ಕೈಯಲ್ಲಿ ಟೆಂಗಿನ ಕಾಯಿ ಹಿಡಿದು ಕುಳಿತಿದ್ದರು. ಅವರ ಎದುರಿಗೆ ಕುಳಿತ ತ್ರಿನೇತ್ರ ವಿದ್ಯೆ ಕಲಿಯುವ ಬಾಲಕ, ತನ್ನ ದೃಷ್ಟಿ ವಿದ್ಯೆಯ ಮೂಲಕ ಎದುರಿಗೆ ಕುಳಿತ ಬಾಲಕನ ಕೈಯಲ್ಲಿದ್ದ ಟೆಂಗಿನಕಾಯಿ ಕೆಳಗೆ ಬೀಳಿಸಿದರು. ಗುರುಕುಲದ ಮಕ್ಕಳು ಸರಸ್ವತಿ ಸ್ತೋತ್ರ, ಭರತನಾಟ್ಯ, ತ್ರಿನೇತ್ರ ವಿದ್ಯೆ, ಅಷ್ಟಧ್ಯಾಯ, ವೈದಿಕ ಗಣಿತ ಪ್ರದರ್ಶಿಸಿ
ನೆರೆದವರ ಹುಬ್ಬೇರಿಸುವಂತೆ ಮಾಡಿದರು. ವೈದಿಕ ಗಣಿತದಲ್ಲಿ ತಮ್ಮದೇ ಆದ ಲೆಕ್ಕಾಚಾರದಲ್ಲಿ ಪಟ ಪಟನೆ ಕೂಡಿಸುವುದು, ಕಳೆಯುವುದು, ಗುಣಿಸುವುದು, ಭಾಗಾಕಾರ ಮಾಡುವುದು ಎಲ್ಲವನ್ನೂ ಸಲೀಸಾಗಿ ಹೇಳಿ ಗಮನ ಸೆಳೆದರು.

ಮಕ್ಕಳು ಪ್ರದರ್ಶಿಸಿರುವುದು ಯಾವುದೇ ತಂತ್ರಗಾರಿಕೆಯಲ್ಲ. ಇವು ಭಾರತೀಯ ಶಿಕ್ಷಣ ಪದ್ಧತಿಯಲ್ಲಿದ್ದ ವಿದ್ಯೆಗಳು. ಕನೇರಿ ಸಿದ್ಧಗಿರಿ ಮಠದ ಗುರುಕುಲದಲ್ಲಿ ಈ ವಿದ್ಯೆಗಳನ್ನು ಕಲಿಸಲಾಗುತ್ತಿದೆ. ನಿಶುಲ್ಕವಾಗಿ ಈ ವಿದ್ಯೆ ಕಲಿಸಲಾಗುತ್ತಿದ್ದು, ಈ ಮಕ್ಕಳು ಮುಂದೆ ಗೃಹಸ್ಥಾಶ್ರಮ ಅಥವಾ ವಟುಗಳಾಗಿ ಮುಂದುವರಿಯುವ ಅವಕಾಶವಿದೆ. ಆರು ವರ್ಷಗಳ ಬಳಿಕ ಅವರನ್ನು ವಿಂಗಡಿಸಿ, ಪ್ರತ್ಯೇಕ ಗುರುಕುಲ ಶಿಕ್ಷಣ ಕೊಡಿಸಲಾಗುತ್ತಿದೆ. ಇಂದು ಮಕ್ಕಳು ಪ್ರದರ್ಶನ ಮಾಡಿದ್ದೆಲ್ಲವೂ ಜ್ಞಾನದಿಂದ ಕಲಿತ ಗುರುಕುಲ ಶಿಕ್ಷಣ..
 ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕೊಲ್ಲಾಪುರ-ಕನೇರಿ ಸಿದ್ಧಗಿರಿ ಮಠ

„ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next