Advertisement

Bajpe ಭಯೋತ್ಪಾದಕರೊಂದಿಗಿನ ಹೋರಾಟದಲ್ಲಿ ವೀರ ಮರಣ

12:48 AM Aug 17, 2023 | Team Udayavani |

“ಮೇರಿ ಮಾಟಿ ಮೇರಾ ದೇಶ್‌’ (ನನ್ನ ಮಣ್ಣು ನನ್ನ ದೇಶ) ಅಭಿಯಾನ ಆರಂಭಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 7, ಉಡುಪಿ ಜಿಲ್ಲೆಯಲ್ಲಿ ಓರ್ವ ಸೇರಿ ಕರಾವಳಿಯ 8 ಮಂದಿ ಹುತಾತ್ಮ ಯೋಧರ ವಿಶೇಷ ಸ್ಮಾರಕ ಅವರ ಊರಿನ ಗ್ರಾಮಗಳಲ್ಲಿ ಸ್ಥಾಪನೆಗೊಳ್ಳಲಿದೆ. ಇಂದಿನ ಸರಣಿಯಲ್ಲಿ ಬಜಪೆಯ ಓಸ್ವಾಲ್ಡ್‌ ನೊರೊನ್ಹಾ ಅವರ ವೀರಗಾಥೆ.

Advertisement

ಬಜಪೆ: ತಂದೆ ಹಾಗೂ ದೊಡ್ಡಪ್ಪಂದಿರಂತೆ ತಾನೂ ಸೇನಾನಿಯಾಗಬೇಕು ಎಂಬ ಅದಮ್ಯ ಹಂಬಲ ಹಾಗೂ ಛಲದಿಂದ ಭೂಸೇನೆ ಸೇರಿದ್ದ ಬಜಪೆಯ ಹವಾಲ್ದಾರ ಓಸ್ವಾಲ್ಡ್‌ ನೊರೊನ್ಹಾ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಯೋತ್ಪಾದಕರೊಂದಿಗಿನ ಹೋರಾಟದ ವೇಳೆ ವೀರಮರಣನ್ನಪ್ಪಿದ್ದರು.

ವಿಮಾನ ನಿಲ್ದಾಣ ರಸ್ತೆಯ ಜೇಮ್ಸ್‌ ನೊರೊನ್ಹಾ ಮತ್ತು ಲೂಸಿ ನೊರೊನ್ಹಾ ದಂಪತಿಯ ಮೂವರು ಪುತ್ರರಲ್ಲಿ ಓಸ್ವಾಲ್ಡ್‌ ಹಿರಿಯರು. ತಂದೆ ಜೇಮ್ಸ್‌ ಭಾರತೀಯ ಭೂಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಜೇಮ್ಸ್‌ ಅವರ ಮೂವರು ಅಣ್ಣಂದಿರು ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.

ತಂದೆ ಸೇನೆಯ ಕರ್ತವ್ಯದಲ್ಲಿ ಇರುವಾಗ 1962ರ ಆ. 16ರಂದು ಭೂಸೇನೆಯ ವಸತಿಗೃಹದಲ್ಲಿ ಓಸ್ವಾಲ್ಡ್‌ ಜನಿಸಿದ್ದರು. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಬಜಪೆಯ ಶಾಲೆಗಳಲ್ಲಿ ಪಡೆದಿದ್ದರು. 1979ರಲ್ಲಿ ಮಂಗಳೂರಿನಲ್ಲಿ ಸೇನೆಯ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಭೂಸೇನೆಗೆ ಸೇರ್ಪಡೆಗೊಂಡಿದ್ದರು. ನಾಸಿಕ್‌ ಹಾಗೂ ಝಾನ್ಸಿಯಲ್ಲಿ ಸೇವೆ ಸಲ್ಲಿಸಿ 1992ರಲ್ಲಿ ಅರುಣಾಚಲ ಪ್ರದೇಶದಲ್ಲಿರುವ ಚೀನದ ಗಡಿಪ್ರದೇಶ ತವಾಂಗ್‌ನಲ್ಲಿ ಫಿರಂಗಿದಳದಲ್ಲಿ ಹವಾಲ್ದಾರ್‌ ಆಗಿ ಕರ್ತವ್ಯದಲ್ಲಿದ್ದರು. ಅದೇ ವರ್ಷದ ಜುಲೈ 30ರಂದು ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಸಂದರ್ಭ ಸೇನೆಯ ಸಾಮಗ್ರಿಗಳನ್ನು ರಕ್ಷಿಸುವ ಯತ್ನದಲ್ಲಿ ವೀರ ಮರಣವನ್ನೈದಿದರು.
ಮರಣಾನಂತರ “ನೈಬ್‌ ಸುಬೇದಾರ್‌’ ಆಗಿ ಪದೋನ್ನತಿ ನೀಡಿದ್ದು, ಕೊಚ್ಚಿಯಲ್ಲಿ ತಾಯಿ ಲೂಸಿ ಅವರಿಗೆ ಪ್ರದಾನ ಮಾಡಲಾಯಿತು.

ಮದುವೆಯಾಗಿ 2 ವರ್ಷ
ಓಸ್ವಾಲ್ಡ್‌ಗೆ 1990ರ ಮೇ 8ರಂದು ಪುತ್ತೂರಿನ ಸಿಸಿಲಿಯಾ ಅಪೋಲಿನ್‌ ಲೋಬೋ ಅವರೊಂದಿಗೆ ವಿವಾಹವಾಗಿತ್ತು. ಹುತಾತ್ಮರಾಗುವ ಕೆಲವೇ ದಿನಗಳ ಹಿಂದೆ ಅಂದರೆ 1992ರ ಜುಲೈ ಆರಂಭದಲ್ಲಿ ಓಸ್ವಾಲ್ಡ್‌ ಊರಿಗೆ ಬಂದು ಸಂಬಂಧಿಕರು, ಗೆಳೆಯರನ್ನೆಲ್ಲ ಭೇಟಿಯಾಗಿ ಸೇವೆಗೆ ಮರಳಿದ್ದರು. ಎಲ್ಲರೊಂದಿಗೆ ಸ್ನೇಹದಿಂದ ಇದ್ದ ಅವರನ್ನು ಊರ ಮಂದಿ ಪ್ರೀತಿಯಿಂದ “ಓಜಿ’ ಎಂದು ಕರೆಯುತ್ತಿದ್ದರು.

Advertisement

ಶಿಸ್ತಿನ ಸಿಪಾಯಿ
ಓಸ್ವಾಲ್ಡ್‌ ಶಿಸ್ತಿನ ಸಿಪಾಯಿ. ತ‌ಮ್ಮಂದಿರಿಗೂ ಶಿಸ್ತಿನ ಪಾಠ ಮಾಡುತ್ತ ಹಾಗೆಯೇ ನಡೆದುಕೊಳ್ಳುವಂತೆ ನೋಡಿಕೊಳ್ಳುತ್ತಿದ್ದರು. ರಜೆಯ ಬಳಿಕ ತವಾಂಗ್‌ಗೆ ತೆರಳಲು ಮಂಗಳೂರಿನ ರೈಲು ನಿಲ್ದಾಣಕ್ಕೆ ಬಂದರೂ ಎರಡು ಬಾರಿ ಮಳೆಯಿಂದಾಗಿ ರೈಲು ಇಲ್ಲದ ಕಾರಣ ಮನೆಗೆ ಮರಳಿದ್ದರು. ಜುಲಾೖ 24ರಂದು ರೈಲಿನ ಮೂಲಕ ಸೇವಾ ಕ್ಷೇತ್ರಕ್ಕೆ ಹೊರಟಿದ್ದರು. ಜುಲೈ 30ರಂದು ಅವರ ವೀರ ಮರಣ ಸಂಭವಿಸಿತ್ತು.

ತಾಯಿಗೆ ಬರೆದ ಕೊನೆಯ ಪತ್ರ
ಓಸ್ವಾಲ್ಡ್‌ ಜು. 28ರಂದು ನನಗೆ ಕೊನೆಯ ಪತ್ರ ಬರೆದಿದ್ದು, ಅದು ಆ. 3ರಂದು ಸಿಕ್ಕಿತ್ತು ಎಂದು ತಾಯಿ ಲೂಸಿ ನೆನಪಿಸಿಕೊಳ್ಳುತ್ತಾರೆ. ಕೊಂಕಣಿ ಭಾಷೆಯ ಪತ್ರದಲ್ಲಿ ಜು. 29ರಿಂದ ತನ್ನ ವಿಳಾಸ ಬದಲಾವಣೆ ಆಗಲಿರುವ ಕುರಿತು ಉಲ್ಲೇಖೀಸಿದ್ದು, ಕಾರ್ಯಾಚರಣೆಗಾಗಿ ಬೆಟ್ಟದ ಮೇಲಕ್ಕೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದ. ಅದರೆ ಜು. 30ರಂದು ವೀರ ಮರಣವನ್ನಪ್ಪಿದ ಎಂದು ತಾಯಿ ಮಗನ ಪತ್ರವನ್ನು ತೋರಿಸುತ್ತ ಹೇಳಿದರು.

ತಡವಾಗಿ ತಿಳಿದ ಸುದ್ದಿ
ಓಸ್ವಾಲ್ಡ್‌ ಹುತಾತ್ಮರಾದ ವಿಚಾರವನ್ನು ಹೊತ್ತ ಟೆಲಿಗ್ರಾಂ ಅವರ ಪತ್ನಿಯ ಹೆಸರಿಗೆ ಸೇನೆಯಿಂದ ಬಂದಿತ್ತಾದರೂ ಹೆಸರು ತಪ್ಪಾಗಿದ್ದ ಕಾರಣ ಅಂಚೆಯಣ್ಣ ಊರೆಲ್ಲ ಸುತ್ತಿ ಇವರ ಮನೆಗೆ ತಲುಪಿಸುವಾಗ ಹಲವು ದಿನಗಳೇ ಕಳೆದಿದ್ದವು. ನಿಗದಿತ ಅವಧಿಯೊಳಗೆ ಟೆಲಿಗ್ರಾಂ ವಿಲೇವಾರಿಯಾಗದಿದ್ದರೆ ಮೂಲ ವಿಳಾಸಕ್ಕೆ ಮರಳಿ ಕಳಿಸಬೇಕೆಂಬ ನಿಯಮವಿತ್ತು. ಕೊನೆಯ ದಿನ ಓಸ್ವಾಲ್ಡ್‌ ಅವರ ಮನೆತಲುಪಿದ ಅಂಚೆಯಣ್ಣ ವಿಳಾಸ ಸರಿಯಾಗಿಲ್ಲದ ಕಾರಣ ಹಿಂದೆ ಕಳಿಸಲೇ ಎಂದು ಪ್ರಶ್ನಿಸಿದ್ದರು. ಏನೇ ಆಗಲಿ ತೆರೆದು ನೋಡೋಣ ಎಂದುಕೊಂಡು ಲೂಸಿ ಅವರು ಪತ್ರವನ್ನು ತೆರೆದಾಗ ಕಂಡದ್ದು ಮಗನ ನಿಧನದ ಸುದ್ದಿಯಾಗಿತ್ತು. ಯಾವುದಕ್ಕೂ ಈ ವಿಚಾರವಾಗಿ ಸೇನೆಯಲ್ಲಿ ಕ್ಯಾಪ್ಟನ್‌ ಆಗಿದ್ದ ಸಂಬಂಧಿಯೊಬ್ಬರಲ್ಲಿ ಮಾತನಾಡಿ ದೃಢಪಡಿಸಿಕೊಳ್ಳೋಣ ಎಂದು ತಾಯಿ ಟೆಲಿಗ್ರಾಂಅನ್ನು ಹಿಡಿದುಕೊಂಡು ಕಿನ್ನಿಗೋಳಿಯಲ್ಲಿದ್ದ ಸಂಬಂಧಿಯ ಮನೆಗೆ ತೆರಳುತ್ತಿದ್ದಾಗ ದಾರಿಯಲ್ಲಿ ಇಬ್ಬರು ಸೇನಾ ಜವಾನರು ಸಿಕ್ಕಿದರು. ಅವರನ್ನುವಿಚಾರಿಸಿದಾಗ ಓಸ್ವಾಲ್ಡ್‌ ನೊರೊನ್ಹಾ ಅವರ ಮನೆಯನ್ನು ಹುಡುಕುತ್ತಿರುವುದಾಗಿ ಹೇಳಿದರು. “ನಾನೇ ಆತನ ತಾಯಿ’ ಎಂದು ಪರಿಚಯಿಸಿ ಕೊಂಡು ಸೇನಾ ಸಿಬಂದಿಯನ್ನು ಮನೆಗೆ ಕರೆತಂದರು. ಅವರು ಓಸ್ವಾಲ್ಡ್‌ ಅವರ ಉಡುಪುಗಳನ್ನು ಹಸ್ತಾಂತರಿಸಿದರು. ಓಸ್ವಾಲ್ಡ್‌ ಅವರ ಪತ್ನಿ ಸಿಸಿಲಿಯಾ ಅಪೋಲಿನ್‌ ಆಗ ಮೈಸೂರಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಬಳಿಕ ಅವರಿಗೆ ಪತಿ ಹುತಾತ್ಮರಾಗಿರುವ ವಿಚಾರ ತಿಳಿಸಲಾಗಿತ್ತು.

ತವಾಂಗ್‌ನಲ್ಲಿ ವೀರ ಸ್ಮಾರಕ
ಭೂಸೇನೆಯ ವತಿಯಿಂದ ಓಸ್ವಾಲ್ಡ್‌ ನೊರೊನ್ಹಾ ಅವರ ವೀರ ಮರಣದ ಹಿನ್ನೆಲೆಯಲ್ಲಿ ತವಾಂಗ್‌ನಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದೆ.

-ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next