Advertisement

ರಾಷ್ಟ್ರವೇ ಸರ್ವಸ್ವವೆಂದ ಸರಳತೆಯ ಬಹದ್ದೂರ್‌ ಶಾಸ್ತ್ರೀಜಿ

11:09 PM Oct 01, 2020 | Karthik A |

ಸವಾಲುಗಳಿಗೆ ಸವಾಲ್‌ ಹಾಕಿ, ತೊಡೆತಟ್ಟಿ ನಿಲ್ಲುವ ಪ್ರತಿಯೊಬ್ಬರದ್ದೂ ಪ್ರೇರಣೆಯಾಗಬಲ್ಲ ವ್ಯಕ್ತಿತ್ವವೇ. ಸರ್ವಕಾಲಕ್ಕೂ ನಮಗೆಲ್ಲ ಆದರ್ಶರಾಗಬಲ್ಲಂತಹ ವ್ಯಕ್ತಿತ್ವಗಳು ಭಾರತಾಂಬೆಯ ಗರ್ಭದಲ್ಲಿ ಜನ್ಮತಾಳಿ, ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ರಾರಾಜಿಸುತ್ತಿದ್ದಾರೆ.

Advertisement

ಅಂತಹವರಲ್ಲಿ ಈ ದೇಶ ಕಂಡ ಶ್ರೇಷ್ಠ ಪ್ರಧಾನಿ ಧೀಮಂತ ವ್ಯಕ್ತಿತ್ವದ ಲಾಲ್‌ ಬಹದ್ದೂರ್‌ ಶಾಸ್ತ್ರೀಜಿ ಒಬ್ಬರು. ಅಕ್ಟೋಬರ್‌ 2 ಶಾಸ್ತ್ರೀಜಿ ಅವರ 117ನೇ ಜಯಂತಿ. ಈ ಕುರಿತಂತೆ ಅವರ ಜೀವನ ಅಕ್ಷರ ರೂಪ ಇಲ್ಲಿದೆ.

ಲಾಲ್‌ ಬಹದ್ದೂರ್‌ ಶಾಸ್ತ್ರೀಯವರು ಸ್ವತಂತ್ರ ಭಾರತದ ಎರಡನೆಯ ಪ್ರಧಾನಮಂತ್ರಿಗಳಾಗಿದ್ದವರು. ದೇಶದ ಪ್ರಥಮ ಪ್ರಧಾನ ಮಂತ್ರಿ ಜವಹರಲಾಲ್‌ ನೆಹರೂ ಅವರ ಹಠಾತ್‌ ನಿಧನದ ಬಳಿಕ ಲಾಲ್‌ ಬಹದ್ದೂರ್‌ ಅವರು ಪ್ರಮಾಣವಚನ ಸ್ವೀಕರಿಸಿದರು. ಇತರರಿಗೆ ಹೋಲಿಸಿದರೆ, ರಾಷ್ಟ್ರದ ಅತ್ಯುನ್ನತ ಹುದ್ದೆಗೆ ಹೊಸಬರಾಗಿದ್ದರೂ ಸಹ, 1965ರಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವೆ ಜರುಗಿದ ಯುದ್ಧದಂತಹ ವಿಷಮ ಪರಿಸ್ಥಿತಿಯಲ್ಲಿಯೂ ಶಾಸ್ತ್ರೀಯವರು ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದವರು.

ದೇಶದ ಪ್ರಧಾನಿಯಾಗಿದ್ದರೂ ಕೂಡ ಜನಸಾಮಾನ್ಯನಂತೆ ಇರುತ್ತಿದ್ದರು. ಜೀವನುದುದ್ದಕ್ಕೂ ಗಾಂಧೀ ಅನುಯಾಯಿಯಾಗಿ ಸತ್ಯ, ಅಹಿಂಸೆಯನ್ನು ಪ್ರತಿಪಾದಿಸಿ “ಶಾಂತಿದೂತ’ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಇಂದಿನ ಯುವಕರಿಗೆ ಐಕಾನ್‌ ಆಗಬಲ್ಲ ಬದುಕು ಶಾಸ್ತ್ರೀಜಿ ಅವರದು. ಸರಳತೆ, ನೇರ ನಡೆನುಡಿ, ಶಿಸ್ತು, ಕರ್ತವ್ಯ ನಿಷ್ಠೆ ಹೀಗೆ ಮುಂತಾದ ಅವರ ಸನ್ಮಾರ್ಗಗಳು ನಮ್ಮ ಜೀವನಕ್ಕೆ ದಾರಿದೀಪವಾಗುತ್ತವೆ.
ಒಂದು ಸದೃಢ ರಾಷ್ಟ್ರ ನಿರ್ಮಾಣದ ದಿಶೆಯಲ್ಲಿ, ಸ್ವಪೋಷಣೆ ಮತ್ತು ಸ್ವಾವಲಂಬನೆಗಳನ್ನು ಆಧಾರಸ್ತಂಭಗಳೆಂದು ಭಾವಿಸುವ ಆವಶ್ಯಕತೆಯನ್ನು ಮನಗಂಡು ಶಾಸ್ತ್ರೀಯವರು ಜೈ ಜವಾನ್‌ ಜೈ ಕಿಸಾನ್‌ಎಂಬ ಘೋಷವಾಕ್ಯವನ್ನು ಜನಪ್ರಿಯಗೊಳಿಸಿದರು.

ಶಾಸ್ತ್ರೀಜಿ ಅವರ ಇಡೀ ಜೀವನವೇ ನಮಗೆ ಪ್ರೇರಣೆ. ಬಾಲ್ಯದಿಂದಲೇ ಸ್ವಾಭಿಮಾನ ಮತ್ತು ಅಚಲ ವ್ಯಕ್ತಿತ್ವದ ಶಿಖರವೆನಿಸಿದ ಶಾಸ್ತ್ರೀಜಿ, ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಹಿಡಿದು, ರಾಷ್ಟ್ರ ರಾಜಕೀಯದಲ್ಲಿ ವಿವಿಧ ಸ್ತರದ ಜವಾಬ್ದಾರಿಗಳನ್ನು ನಿರ್ವಹಿಸುವವರೆಗೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ನಿರಾಡಂಬರವಾದ ಅವರ ನಿಲುವುಗಳ ಮೂಲಕ ಜನರ ಹೃದಯ ಸಿಂಹಾಸನದಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ.

Advertisement

ಶಾಸ್ತ್ರೀಜಿ ಅವರು ಕೇಂದ್ರ ರೈಲ್ವೇ ಸಚಿವರಾದ ಸಂದರ್ಭ ತೋರಿದ ನೈತಿಕ ಜವಾಬ್ದಾರಿ ಪ್ರಸ್ತುತದ ವರೆಗೂ ರಾಜಕಾರಣಿಗಳಿಗೆ ಆದರ್ಶವಾಗುವಂತದ್ದು. 1956ರಲ್ಲಿ ಆಗಿನ ಆಂಧ್ರ ಪ್ರದೇಶದ ಅರಿಯಳೂರಲ್ಲಿ ಜರುಗಿದ ರೈಲ್ವೆ ಅಪಘಾತದಿಂದಾಗಿ 144 ಜನ ಸಾವನ್ನಪ್ಪಿದರು. ಇದರಿಂದ ಹತಾಶರಾದ ಶಾಸ್ತ್ರೀಜಿ ನೈತಿಕ ಜವಾಬ್ದಾರಿಯ ಕಾರಣ ನೀಡಿ ರಾಜೀನಾಮೆ ನೀಡಿದರು. ಇಂತಹ ಆದರ್ಶವನ್ನು ಮೆರೆದ ಅಪರೂಪದ ವ್ಯಕ್ತಿತ್ವ ಅವರದು. ಆದರೆ ಈಗಿನವರಲ್ಲಿ ಇಂತಹ ನಿರ್ಧಾರಗಳನ್ನು ನಾವು ಎದುರು ನೋಡಬಹುದೆ?

ರಕ್ಷಣಾ ನಿಧಿಗೆ ವೈಯಕ್ತಿಕ ವ್ಯಕ್ತಿಯೋರ್ವನ ಅತ್ಯಧಿಕ ಕೊಡುಗೆ ಸಾಕ್ಷಿ
ಪ್ರಧಾನಿಯಾದ ಅನಂತರ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸುವ, ಭಾರತೀಯ ಸೇನೆಯನ್ನು ಸಶಕ್ತಗೊಳಿಸುವ ಮತ್ತು ಕೃಷಿ ಕ್ಷೇತ್ರವನ್ನು ಸ್ವಾವಬಂಭಿಯನ್ನಾಗಿಸುವ ಕಾರ್ಯದಲ್ಲಿ ನಿರತರಾದರು. ಕ್ಷೀರ ಕ್ರಾಂತಿ ಮತ್ತು ಹಸುರು ಕ್ರಾಂತಿಗೆ ಮುನ್ನುಡಿ ಬರೆದರು. ಸೇನಾ ಅಭಿವೃದ್ಧಿಗಾಗಿ ಹಗಲಿರುಳು ದುಡಿದರಲ್ಲದೆ ಹೈದರಾಬಾದ್‌ನ ನಿಜಾಮನ ಬಳಿ ಸಹಾಯ ಕೇಳಿದಾಗ ಆತ 5 ಸಾವಿರ ಕೆ.ಜಿ. ಚಿನ್ನವನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ನೀಡುತ್ತಾನೆ. ಇಲ್ಲಿಯವರೆಗೂ ಇದು ರಾಷ್ಟ್ರೀಯ ರಕ್ಷಣಾ ನಿಧಿಗೆ ವ್ಯಕ್ತಿಯೋರ್ವನ ಅತ್ಯಧಿಕ ಕೊಡುಗೆಯಾಗಿದೆ ಎನ್ನುವುದು ವಿಶೇಷ. ಇದು ರಾಷ್ಟ್ರದ ಹಿತಕ್ಕಾಗಿ ನೀಡಿದ ದೇಣಿಗೆ ಮಾತ್ರವಲ್ಲದೆ ಪ್ರಧಾನಿಯ ಮಾತಿಗೆ ಕೊಟ್ಟ ಗೌರವವಲ್ಲದೆ ಮತ್ತೇನು.

ಶಾಂತ ಸ್ವರೂಪಿ ಶಾಸ್ತ್ರೀಜಿ ಜನತೆಗೆ ಹೆಚ್ಚು ಆಪ್ತವಾದದ್ದು ತಮ್ಮ ಕಾರ್ಯವೈಖರಿಯ ಮೂಲಕ ಮಾತನಾಡಿದಾಗ! ಜಗತ್ತು ನಿಬ್ಬೆರಗಾಗುವಂತಹ ನಿರ್ಣಯಗಳನ್ನು ಕೈಗೊಂಡಾಗ! 1962ರಲ್ಲಿ ಚೀನ ವಿರುದ್ಧದ ಯುದ್ಧದಲ್ಲಿ ಭಾರತ ಸೋಲಬೇಕಾಯಿತು. 1947-48ರ ಯುದ್ಧದಲ್ಲಾದ ಮುಖಭಂಗಕ್ಕೆ ಪರಿಹಾರವನ್ನು ಪಡೆದುಕೊಳ್ಳಲೋ ಅಥವಾ ಶಾಂತ ಮತ್ತು ವಾಮನಾಕಾರನಾದ ಪ್ರಧಾನಿ ಇರುವುದನ್ನು ಕಂಡೋ ಪಾಕಿಸ್ಥಾನ ಭಾರತದ ಮೇಲೆ 1965ರಲ್ಲಿ ಯುದ್ಧ ಸಾರಿತು.

ಜಮ್ಮು-ಕಾಶ್ಮೀರಕ್ಕೆ ಮುತ್ತಿಗೆ ಹಾಕಿದ ಪಾಕಿಸ್ಥಾನಕ್ಕೆ ಅಚ್ಚರಿಯ ರೀತಿಯಲ್ಲಿ ಲಾಹೋರ್‌ ಅತಿಕ್ರಮಣದ ಮೂಲಕ ಉತ್ತರಿಸಿದರು. ಅಷ್ಟೇ ಅಲ್ಲದೆ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರವನ್ನು ನೀಡಿ, ಗಡಿ ದಾಟುವ ಆವಶ್ಯಕತೆ ಬಿದ್ದರೆ ಹಿಂಜರಿಯದೆ ಒಳನುಗ್ಗಿ, ಅಂತಾರಾಷ್ಟ್ರೀಯ ಸಂಬಂಧದ ಕುರಿತು ಚಿಂತಿಸಬೇಡಿ ಎಂದು ಧೈರ್ಯ ತುಂಬಿದರು. ಅದರ ಪರಿಣಾಮವಾಗಿ ಲಾಹೋರ್‌, ಹಾಜಿ ಪಿರ್‌ ಪಾಸ್‌ ಮತ್ತು ಸಿಯಾಲ್‌ ಕೋಟ್‌ನಲ್ಲಿ ನಮ್ಮ ಸೇನೆ ಪಾಕಿಸ್ಥಾನವನ್ನು ಹಿಮ್ಮೆಟ್ಟಿಸಿತ್ತು.

ಅಮೆರಿಕದಿಂದ ಗೋಧಿಯ ಸರಬರಾಜು ನಿಂತಿತು
ಈ ಯುದ್ಧದ ಸಂದರ್ಭ ಶಾಸ್ತ್ರೀಜಿಗೆ ಎದುರಾದ ಸವಾಲುಗಳು ಒಂದೆರಡಲ್ಲ. ಪಾಕಿಸ್ಥಾನದ ವಿರುದ್ಧ ತಿರುಗಿಬಿದ್ದ ಕಾರಣಕ್ಕಾಗಿ ಅಮೆರಿಕದಿಂದ ಬರಬೇಕಾದ ಗೋಧಿಯ ಸರಬರಾಜು ನಿಂತಿತು. ಶಾಸ್ತ್ರೀಜಿ ಹಸುರು ಕ್ರಾಂತಿಗೆ ಕರೆಕೊಟ್ಟಿದ್ದು ಆಗಲೇ. ಅಲ್ಲಿಯವರೆಗೂ ಆಹಾರದ ಕೊರತೆಯನ್ನು ನೀಗಿಸುವುದಕ್ಕಾಗಿ ರಾಷ್ಟ್ರದ ಜನತೆಗೆ ಸೋಮವಾರದ ಉಪವಾಸವನ್ನು ಆಚರಿಸುವಂತೆ ಭಿನ್ನಹ ಮಾಡಿದರು. ಅದಕ್ಕೆ ಇಡೀ ರಾಷ್ಟ್ರ ಸ್ಪಂದಿಸುವುದರ ಹಿಂದಿದ್ದ ಆ ವ್ಯಕ್ತಿಯ ನೈತಿಕ ಮೌಲ್ಯ ಎಂಥಹದು ಯೋಚಿಸಿ. ಕೇವಲ ನುಡಿದ್ದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಬದಲಾಗಿ ಹೇಳಿದ್ದನ್ನು ಪಾಲಿಸಿದ್ದರಿಂದ ರಾಷ್ಟ್ರವ್ಯಾಪಿ ಬೆಂಬಲ ವ್ಯಕ್ತವಾಯಿತು.

ಶಾಸ್ತ್ರೀಜಿ ಎಲ್ಲರಿಗೂ ಹತ್ತಿರವಾಗುವುದು ಏಕೆ?
ಈ ಪ್ರಶ್ನೆಗೆ ಉತ್ತರ ಅವರ ಸರಳತೆ ಎನ್ನುವ ಪ್ರಭಾವಲಯ ಎಲ್ಲರನ್ನು ಸರಳವಾಗಿಯೇ ಆಕರ್ಷಿಸುತ್ತದೆ ಎನ್ನುವುದು. ಭಾರತದ ಅತ್ಯಂತ ಹೆಚ್ಚು ಜನಸಂಖ್ಯೆವುಳ್ಳ ರಾಜ್ಯದ ಗೃಹಮಂತ್ರಿಯಾಗಿದ್ದರೂ ಅವರಿಗೆ ಸ್ವಂತ ಮನೆ ಇರಲಿಲ್ಲ! ಆದ್ದರಿಂದಲೇ ಅವರನ್ನು Homeless Home Minister ಎಂದೂ ಇತರೆ ನಾಯಕರು ಕರೆಯುತ್ತಿದ್ದರು. ರಾಷ್ಟ್ರದ ಪ್ರಧಾನಿಯಾದಾಗಲೂ ಸ್ವಂತದೊಂದು ವಾಹನ ಇರಲಿಲ್ಲ! ಸರಕಾರಿ ವಾಹನವನ್ನು ಮನೆಯ ಕೆಲಸಕ್ಕಾಗಿ ಬಳಸುತ್ತಿರಲಿಲ್ಲ! ಮನೆಯವರೆಲ್ಲರ ಒತ್ತಾಯದಿಂದಾಗಿ ಕಾರು ಖರೀದಿಸಲು ನಿರ್ಧರಿಸಿದ ಶಾಸ್ತ್ರೀಜಿ ಪಿ.ಎನ್‌.ಬಿ. ಬ್ಯಾಂಕ್‌ನಲ್ಲಿ 5,000 ರೂ. ಲೋನ್‌ ಮಾಡಬೇಕಾಯಿತು! ಆದರೆ ದುರ್ದೈವದ ಸಂಗತಿ ಎಂದರೆ ಆ ಲೋನ್‌ ತೀರಿಸುವ ಮುಂಚೆಯೇ ಶಾಸ್ತ್ರೀಜಿ ಸಾವನ್ನಪ್ಪಿ ರಾಷ್ಟ್ರವನ್ನು ಅಗಲಿದರು.

ನದಿ ಈಜಿದ್ದ ಶಾಸ್ತ್ರೀಜಿ
ಲಾಲ್‌ ಬಹದ್ದೂರ್‌ ಶಾಸ್ತ್ರೀಜಿ ಅವರು ಹುಟ್ಟು ಧೈರ್ಯವಂತ. ಇದೇ ಧೈರ್ಯದೊಂದಿಗೆ ಪಾಕಿಸ್ಥಾನದೊಂದಿಗೆ ಯುದ್ಧಕ್ಕಿಳಿದಿದ್ದರು. ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ತಮ್ಮ ಸ್ನೇಹಿತನ ಮನೆಗೆ ನದಿ ದಾಟಿ ಹೋಗಬೇಕಾಗಿರುತ್ತದೆ. ದೋಣಿಯಲ್ಲಿ ಹೋಗಿದ್ದ ಅವರು ವಾಪಸು ಆಗುವಾಗ ದೋಣಿಯಲ್ಲಿ ಬರಲು ಅವರಲ್ಲಿ ದುಡ್ಡು ಇರುವುದಿಲ್ಲ. ಆಗ ಅವರು ದೋಣಿಗಾಗಿ ಕಾಯದೇ, ದುಡ್ಡಿಗಾಗಿ ಇನ್ನೊಬ್ಬರನ್ನು ಕೇಳದೇ ತುಂಬಿ ಹರಿಯುತ್ತಿದ್ದ ನದಿಗೆ ಧುಮುಕುತ್ತಾರೆ. ನದಿಯನ್ನು ಈಜಿ ದಡ ಸೇರುತ್ತಾರೆ. ಸೆಳೆತ, ಸುಳಿ, ನೀರಿನ ರಭಸ ಯಾವುದನ್ನು ಲೆಕ್ಕಿಸದೇ ಧೈರ್ಯದಿಂದ ನದಿ ದಾಟಿದ್ದರು. ಪರಿಸ್ಥಿತಿಯಲ್ಲಿ ಒದಗಿಬರುವ ಸಮಸ್ಯೆಗಳಿಗೆ ನಮ್ಮ ಅಚಲ ಧೈರ್ಯವೇ ಉತ್ತರ ನೀಡುತ್ತದೆ ಎಂಬುದಕ್ಕೆ ಶಾಸ್ತ್ರೀಜಿ ಅವರ ಈ ಘಟನೆ ನಮಗೆ ಸ್ಫೂರ್ತಿಯಾಗಬಲ್ಲದು.

ನೇರ ನಡೆತೆ, ನಿಷ್ಠೆ
ಶಾಸ್ತ್ರೀಜಿ ಅವರು ಪ್ರಧಾನಿಯಾದರು ಉಡುಗೆ, ನಡೆಯಲ್ಲೂ ಸರಳವಾಗಿರುತ್ತಿದ್ದರು. ಒಮ್ಮೆ ಅವರ ಹೆಂಡತಿಗೆಂದು ಸೀರೆ ತರಲು ಅಂಗಡಿಗೆ ಹೋದಾಗ ಅಂಗಡಿಯವರು ಸೀರೆಯನ್ನು ಉಚಿತವಾಗಿ ಕೊಡಲು ಬಂದಾಗ ಅದನ್ನು ತೆಗೆದುಕೊಳ್ಳದೇ ದುಡ್ಡು ನೀಡಿ, ಹೆಂಡತಿಗೆ ಸೀರೆ ತೆಗೆದುಕೊಂಡು ಕೊಡುತ್ತಾರೆ. ಎಂದಿಗೂ ತಾನು ಪ್ರಧಾನಿ ಎಂಬ ಹಮ್ಮು-ಬಿಮ್ಮು ಇಲ್ಲದೇ, ಅಧಿಕಾರ ದುರುಪಯೋಗ ಮಾಡಿಕೊಳ್ಳದೇ ನೇರ, ನಿಷ್ಠೆಯಿಂದ ಇದ್ದವರು ಶಾಸ್ತ್ರೀಜಿ.


ಅರುಣ್‌ ಕಿರಿಮಂಜೇಶ್ವರ, ತೃತೀಯ ಬಿ.ಎ., ವಿವೇಕಾನಂದ ಕಾಲೇಜು ಪುತ್ತೂರು 

Advertisement

Udayavani is now on Telegram. Click here to join our channel and stay updated with the latest news.

Next