Advertisement

ಕೋವಿಡ್ ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜು

04:09 PM Apr 08, 2021 | Team Udayavani |

ಬಾಗಲಕೋಟೆ : ಸುಮಾರು ನಾಲ್ಕೈದು ತಿಂಗಳು ಕಾಲ ಶಾಂತವಾಗಿದ್ದ ಕೊರೊನಾ ಅಲೆ, ಕಳೆದ ಒಂದು ತಿಂಗಳಿಂದ ಮತ್ತೆ 2ನೇ ಅಲೆಯ ರೂಪದಲ್ಲಿ ಒಕ್ಕರಿಸುತ್ತಿದೆ. ಹೀಗಾಗಿ ಜಿಲ್ಲಾಡಳಿತ 2ನೇ ಅಲೆ ನಿರ್ವಹಣೆಗೆ ಹಲವು ರೀತಿಯ ಸಿದ್ಧತೆ ಮಾಡಿಕೊಂಡಿದೆ.

Advertisement

ಜಿಲ್ಲೆಯಲ್ಲಿ ಈ ವರೆಗೆ 14,025 ಜನರಿಗೆ ಸೋಂಕು ತಗುಲಿದ್ದು, ಅದರಲ್ಲಿ 13,760 ಜನ ಕೊರೊನಾ ಮುಕ್ತರಾಗಿ ಬಿಡುಗಡೆಯಾಗಿದ್ದಾರೆ. ಕಳೆದ ಒಂದು ತಿಂಗಳಿಂದ 2ನೇ ಅಲೆ ಕಾಣಿಸಿಕೊಂಡಿದ್ದು, 125ಕ್ಕೂ ಹೆಚ್ಚು ಜನರಿಗೆ ಸೋಂಕು ಕಾಣಿಸಿಕೊಂಡಿದೆ. 2ನೇ ಅಲೆಯ ಭೀತಿ ಅಷ್ಟೊಂದು ಇಲ್ಲದಿದ್ದರೂ, ಜಿಲ್ಲಾಡಳಿತ ಚಿಕಿತ್ಸೆಗಾಗಿ ಎಲ್ಲ ತಯಾರಿ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ ತಿಳಿಸಿದ್ದಾರೆ.

ರೋಗ ಲಕ್ಷಣಗಳೇ ಇಲ್ಲ: ಬುಧವಾರ ಜಿಲ್ಲೆಯಲ್ಲಿ 13 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಸದ್ಯ ಒಟ್ಟು 129 ಜನ ಸೋಂಕಿತರು ಸಕ್ರಿಯ ಪ್ರಕರಣಗಳಲ್ಲಿದ್ದಾರೆ. ಕೇವಲ 10 ಜನರಿಗೆ ಸ್ವಲ್ಪ ಮಟ್ಟಿನ ಆನಾರೋಗ್ಯ ಕಾಣಿಸಿಕೊಂಡಿದ್ದು, ಅವರಿಗೆ ಜಿಲ್ಲಾಸ್ಪತ್ರೆಯ ಕೊರೊನಾ ಚಿಕಿತ್ಸೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 119 ಜನರೂ ಹೋಂ ಐಶ್ಯೂಲೇಶನ್‌ನಲ್ಲಿದ್ದಾರೆ. ಹೈಟೆಕ್‌ ಆಗಿದೆ ಜಿಲ್ಲಾ ಆಸ್ಪತ್ರೆ: ಕಳೆದ ವರ್ಷ ಮಾ.31ರಂದು ಮೊದಲ ಬಾರಿಗೆ ಕೊರೊನಾ ಜಿಲ್ಲೆಗೆ ಕಾಲಿಟ್ಟಿತ್ತು. ಆಗ ಇಡೀ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದರು. ಬಾಗಲಕೋಟೆ ನಗರದ 82 ವರ್ಷದ ವೃದ್ಧನಿಗೆ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಂದಿನಿಂದಲೇ ಜಿಲ್ಲಾಸ್ಪತ್ರೆಯನ್ನು ಕೊರೊನಾ ಚಿಕಿತ್ಸೆ ಕೇಂದ್ರವನ್ನಾಗಿ ಮಾರ್ಪಡಿಸಿ, ಉಳಿದ ಬೇರೆ ಬೇರೆ ರೋಗಗಳ ವಿಭಾಗವನ್ನು ಕುಮಾರೇಶ್ವರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಕೊರೊನಾ ಚಿಕಿತ್ಸೆಗೆ ಆರಂಭದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಹಲವು ಸಮಸ್ಯೆಗಳೂ ಎದುರಾಗಿದ್ದವು. ಆಗ ಕೇವಲ 9 ವೆಂಟಿಲೇಟರ್‌ಗಳಿದ್ದವು. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ 31 ವೆಂಟಿಲೇಟರ್‌, 40ಕ್ಕೂ ಹೆಚ್ಚು ಆಕ್ಸಿಜನ್‌ ಯಂತ್ರ ಪೂರೈಸಿದ್ದು, ಆರ್‌ ಟಿಪಿಆರ್‌ ಯಂತ್ರ ಕೂಡ ಇದೆ. ಹೀಗಾಗಿ ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆಗೆ ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|ಪ್ರಕಾಶ ಬಿರಾದಾರ “ಉದಯವಾಣಿ’ಗೆ ತಿಳಿಸಿದರು.

ತಾಲೂಕಿಗೊಂದು ಸಿಸಿಸಿ ಕೇಂದ್ರ: ಕೊರೊನಾ 2ನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ತಪಾಸಣೆ ಹೆಚ್ಚಳ ಮಾಡಲಾಗಿದೆ. ಬುಧವಾರದ ವರೆಗೆ ತಪಾಸಣೆ ಮಾಡಲಾದ 4215 ಜನರ ಸ್ಯಾಂಪಲ್‌ಗ‌ಳ ವರದಿ ಇನ್ನೂ ಬರಬೇಕಿದೆ. ಸ್ಯಾಂಪಲ್‌ ನೀಡಿದವರೆಲ್ಲ ಸದ್ಯ ಮನೆಯಲ್ಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಪಾಜಿಟಿವ್‌ ಬಂದ ವ್ಯಕ್ತಿಗಳಲ್ಲಿ ರೋಗ ಲಕ್ಷಣ ಕಂಡು ಬಂದಲ್ಲಿ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಲಕ್ಷಣ ಇಲ್ಲದ ವ್ಯಕ್ತಿಗಳಿಗೆ ಹೋಂ ಐಶ್ಯೂಲೇಶನ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಜಿಲ್ಲೆಯ 9 ತಾಲೂಕು ಕೇಂದ್ರಗಳಲ್ಲೂ ತಾಲೂಕು ಆಸ್ಪತ್ರೆ ಹಾಗೂ ವಿವಿಧ ವಸತಿ ನಿಲಯಗಳನ್ನು ಕೊರೊನಾ ಕೇರ್‌ ಸೆಂಟರ್‌ (ಸಿಸಿಸಿ ಕೇಂದ್ರ)ಗಳನ್ನಾಗಿ ಪರಿವರ್ತಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ಅಲ್ಲದೇ ಸೋಂಕಿತರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು 78 ಬೆಡ್‌ಗಳ (ಮೊದಲ ಮಹಡಿ) ಪ್ರತ್ಯೇಕ ವಿಭಾಗ ಕೂಡ ಇದೆ. ಇನ್ನೂ ಸೋಂಕಿತರ ಸಂಖ್ಯೆ ಹೆಚ್ಚಾದರೆ, ಜಿಲ್ಲಾಸ್ಪತ್ರೆಯ ಇತರೆ ವಿಭಾಗಗಳನ್ನು ಬೇರೆಡೆ ಸ್ಥಳಾಂತರಿಸಿ, ಇಡೀ ಆಸ್ಪತ್ರೆಯನ್ನು ಮತ್ತೆ ಕೊರೊನಾ ಚಿಕಿತ್ಸೆ ಕೇಂದ್ರವನ್ನಾಗಿ ಮಾರ್ಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

12 ಖಾಸಗಿ ಆಸ್ಪತ್ರೆಗಳಲ್ಲಿ ಸಿದ್ಧತೆ: ಜಿಲ್ಲಾಸ್ಪತ್ರೆಯ 78 ಬೆಡ್‌ಗಳ ಕೊರೊನಾ ಕೇಂದ್ರದಲ್ಲಿ ಸದ್ಯ 10 ಜನ ಸೋಂಕಿತರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ 250 ಜನರಿಗೆ ಚಿಕಿತ್ಸೆ ಕೊಡಲು ಬೆಡ್‌ಗಳ ಲಭ್ಯತೆ ಇದೆ. ಜತೆಗೆ ಜಿಲ್ಲಾ ಕೇಂದ್ರದಲ್ಲಿ ಎರಡು ಸಿಸಿಸಿ ಕೇಂದ್ರ ಸ್ಥಾಪನೆಗೆ ವಸತಿ ನಿಲಯ ಗುರುತಿಸಲಾಗಿದೆ. ಇವುಗಳ ಜತೆಗೆ ಸೋಂಕಿತರು ಹೆಚ್ಚಾದರೆ, ವಿವಿಧ 12 ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಆರಂಭಿಸಲು ಸಿದ್ಧತೆಯಲ್ಲಿರಲು ಖಾಸಗಿ ಆಸ್ಪತ್ರೆಯ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.

 ಬುಧವಾರ 13 ಜನರಿಗೆ ಸೋಂಕು: ಜಿಲ್ಲೆಯಲ್ಲಿ ಬುಧವಾರ 5 ಜನ ಕೊರೊನಾ ಸೋಂಕಿನಿಂದ ಗುಣಮುಖರಾದರೆ, ಮತ್ತೆ 13 ಜನರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 14025 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 13760 ಜನ ಗುಣಮುಖರಾಗಿದ್ದಾರೆ. ಹೊಸದಾಗಿ ದೃಢಪಟ್ಟವರಲ್ಲಿ ಬಾಗಲಕೋಟೆ 4, ಜಮಖಂಡಿ 3, ಬೀಳಗಿ, ಮುಧೋಳ, ಹುನಗುಂದ ತಲಾ 2 ಹಾಗೂ ಬೇರೆ ಜಿಲ್ಲೆಯ ಇಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಅವರನ್ನು ಸರಕಾರಿ, ಖಾಸಗಿ ಹಾಗೂ ಹೋಮ್‌ ಐಸೋಲೇಷನ್‌ದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಈ ವರೆಗೆ 4,76,947 ಸ್ಯಾಂಪಲ್‌ ಪರೀಕ್ಷೆ ಮಾಡಿದ್ದು, ಅದರಲ್ಲಿ ಪೈಕಿ 4,58,143 ನೆಗಟಿವ್‌ ಬಂದಿದ್ದು, 14,025 ಜನರಿಗೆ ಪಾಜಿಟಿವ್‌ ಬಂದಿದೆ. ಸಧ್ಯ 129 ಜನ ಸಕ್ರಿಯ ಪ್ರಕರಣಗಳಿದ್ದು, 10 ಜನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದವರು ಮನೆಯಲ್ಲೇ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

-­ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next