Advertisement

ನೋಟಕ್ಕುಂಟು ಓಟಕ್ಕಿಲ್ಲ ಬೆಳ್ತಂಗಡಿ ತಾಲೂಕು ಕ್ರೀಡಾಂಗಣ

08:50 AM Apr 20, 2018 | Team Udayavani |

ಬೆಳ್ತಂಗಡಿ : ಪಕ್ಕದಲ್ಲೇ ಹರಿಯುತ್ತಿರುವ ಹೊಳೆ, ಬದಿಯಲ್ಲಿದೆ ಹಿಂದೂ ರುದ್ರಭೂಮಿ, ಇರುವ ಅಂಗಣ ಅಂಕುಡೊಂಕು, ಗಲ್ಲಿ ಕ್ರಿಕೆಟ್‌ ಆಡಲಷ್ಟೇ ಬಳಕೆ. ಇದು ಯಾವುದೋ ಗ್ರಾಮೀಣ ಹೊಲ, ಗದ್ದೆಗಳ ಕಥೆಯಲ್ಲ. ತಾಲೂಕಿನಲ್ಲಿ ನೂರಾರು ಕ್ರೀಡಾಪಟುಗಳಿಗೆ ಪ್ರೇರಣೆಯಾಗಬೇಕಿದ್ದ ಬೆಳ್ತಂಗಡಿ ತಾ| ಕ್ರೀಡಾಂಗಣದ ಕಥೆ, ವ್ಯಥೆ. ಕ್ರೀಡಾಂಗಣದಲ್ಲಿ 200 ಮೀ. ಟ್ರ್ಯಾಕ್‌ ನ ಕ್ರೀಡಾಂಗಣವಿದೆ. ವಿಶಾಲವಾಗಿದ್ದರೂ ನೋಟಕ್ಕಷ್ಟೇ ಇದೆ. ನಿಜವಾದ ಕ್ರೀಡಾ ಚಟುವಟಿಕೆಗಳಿಗೆ, ಕ್ರೀಡಾಪಟುಗಳನ್ನು ರೂಪಿಸುವ ಕಾರ್ಯಕ್ಕೆ ಬಳಕೆಯಾಗುತ್ತಿಲ್ಲ. 400 ಮೀ.ನ ಕ್ರೀಡಾಂಗಣವಾಗಿ ಪರಿವರ್ತಿಸಲು ಸ್ಥಳಾವಕಾಶ ಕೊರತೆ ಕಾಡುತ್ತಿದೆ.

Advertisement

ನಡೆಯಲೂ ಕಷ್ಟ
ಕ್ರೀಡಾಂಗಣ ಸಂಪೂರ್ಣ ಹದಗೆಟ್ಟಿದ್ದು, ನಡೆದಾಡಲೂ ಕಷ್ಟ ಎಂಬಂತಿದೆ. ಕನಿಷ್ಠ ಕಬಡ್ಡಿ ಆಡಲು ಬೇಕಾದಷ್ಟು ಜಾಗವೂ ಸಮರ್ಪಕವಾಗಿಲ್ಲ. ಸಂಜೆ ವೇಳೆಗೆ ಸ್ಥಳೀಯರು ಆಟವಾಡಲು ಬಳಸುತ್ತಿದ್ದಾರೆ. ಆದರೆ ಸುವ್ಯವಸ್ಥಿತ ಕ್ರೀಡೆಗೆ ಕ್ರೀಡಾಂಗಣದ ಯಾವುದೇ ಭಾಗವೂ ಸಮರ್ಪಕವಾಗಿಲ್ಲ. 200 ಮೀ. ಟ್ರ್ಯಾಕ್‌ ಮಾಡಲಾಗಿದ್ದು, ಇದೂ ಸಮರ್ಪಕವಾಗಿಲ್ಲ. ಮಣ್ಣು ಹಾಕಿ, ಅಭಿವೃದ್ಧಿಗೊಳಿಸಲು ಪ್ರಯತ್ನಿಸಿದ್ದರೂ ತಾಲೂಕು ಕ್ರೀಡಾಂಗಣಕ್ಕಿರುವ ಕಳೆ ಇಲ್ಲಿಲ್ಲ.

ಅಂಗಣ ಕೆಲವು ಖಾಸಗಿ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿದೆ. ಅದು ನಡೆಯುವುದೂ ಅಪರೂಪ ಎಂಬಂತಾಗಿದೆ. ತಿಂಗಳುಗಳ ಹಿಂದೆ ರಾಜ್ಯಮಟ್ಟದ ಕಬಡ್ಡಿ ನಡೆದಿದ್ದರೂ ಸ್ಥಳಾವಕಾಶಕ್ಕಾಗಿ ಅಷ್ಟೇ ಕ್ರೀಡಾಂಗಣ ಬಳಸಲಾಗಿದೆ. ಉಳಿದಂತೆ ಒಳಾಂಗಣ ಕ್ರೀಡಾಂಗಣದಂತೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಮ್ಯಾಟ್‌ ಕಬಡ್ಡಿ ಆಯೋಜಿಸಿದ್ದರಿಂದ ನೆಲವನ್ನೂ ಬಳಸಿಲ್ಲ. ಉಳಿದಂತೆ ಸಂಘ- ಸಂಸ್ಥೆಗಳು ಸಣ್ಣ ಮಟ್ಟದ ಕ್ರೀಡಾಕೂಟಕ್ಕೆ ಕ್ರೀಡಾಂಗಣ ಬಳಸಿಕೊಂಡಿವೆ ಬಿಟ್ಟರೆ ದೊಡ್ಡ ಮಟ್ಟದಲ್ಲಿ ಕೂಟ ನಡೆದಿಲ್ಲ. ದಸರಾ ಕ್ರೀಡಾಕೂಟಕ್ಕೆ ಇತರ ಕ್ರೀಡಾಂಗಣಗಳನ್ನು ಅವಲಂಬಿಸಬೇಕಾಗಿದೆ. ಕನಿಷ್ಠ ಗ್ರಾಮೀಣ ಕ್ರೀಡಾಕೂಟಗಳಿಗಾದರೂ ಕ್ರೀಡಾಂಗಣ ಲಭ್ಯವಾಗುವಂತೆ ಮಾಡಬೇಕು ಎನ್ನುವುದು ಸ್ಥಳೀಯರ ಒತ್ತಾಯ. ಇಲ್ಲವಾದಲ್ಲಿ ತಾಲೂಕಿನಲ್ಲೇ ಕ್ರೀಡಾಂಗಣವಿದ್ದರೂ ಯುವಕರು ಕ್ರೀಡಾಕೂಟಕ್ಕಾಗಿ ಹಾಗೂ ತರಬೇತಿಗಾಗಿ ಇತರೆಡೆಗಳಿಗೆ ತೆರಳಬೇಕಾದ ಪರಿಸ್ಥಿತಿ ಉಂಟಾಗಿದೆ.

ಪ್ರಸ್ತಾವನೆ ಸಲ್ಲಿಸಿದರೂ ಪರಿಹಾರವಿಲ್ಲ
ಕ್ರೀಡಾಂಗಣವನ್ನು ಜಿಲ್ಲಾ ಯುವ ಸಬಲೀಕರಣ ಇಲಾಖೆ ನಿರ್ವಹಣೆ ಮಾಡುತ್ತಿದೆ. ಸಮರ್ಪಕವಾಗಿ ಕ್ರೀಡಾಂಗಣ ಸಜ್ಜುಗೊಳಿಸಲು 7-8 ಬಾರಿ ಪ್ರಸ್ತಾವನೆ ಸಲ್ಲಿಸಿದ್ದರೂ  ಫಲ ನೀಡಿಲ್ಲ. 2007ರಲ್ಲಿ ಗ್ಯಾಲರಿ ನಿರ್ಮಾಣವಾಗಿದ್ದರೂ ಉಪಯೋಗಕ್ಕಿಲ್ಲ ಎಂಬಂತಾಗಿದೆ. 2018-2019ನೇ ಸಾಲಿಗೂ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸೌಲಭ್ಯ ಲಭಿಸುವ ನಿರೀಕ್ಷೆಯಲ್ಲಿದ್ದಾರೆ.

ಅಧಿಕಾರಿಗಳಿಲ್ಲ
2001ರಿಂದ  ತಾಲೂಕಿನಲ್ಲಿ ಯುವ ಸಬಲೀಕರಣ ಪೂರ್ಣಕಾಲಿಕ ಅಧಿಕಾರಿ ಇಲ್ಲದಿರುವುದು ಕ್ರೀಡಾಂಗಣದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂಬ ಮಾತುಗಳಿವೆ. ಪೂರ್ಣಕಾಲಿಕ ಅಧಿಕಾರಿಗಳು ಆಗಮಿಸಿ ಇಚ್ಛಾಶಕ್ತಿ ಪ್ರದರ್ಶಿಸಿದರೆ ಕ್ರೀಡಾಂಗಣ ಸಜ್ಜಾಗಬಹುದೆಂಬ ನಿರೀಕ್ಷೆಯಿದೆ.

Advertisement

ಒಳಾಂಗಣ ಕ್ರೀಡಾಂಗಣ
ಕಬಡ್ಡಿಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಾಲೂಕಿನಲ್ಲೂ ಉತ್ತಮ ಕಬಡ್ಡಿ ಪಟುಗಳಿದ್ದಾರೆ. ತಾಲೂಕು ಕ್ರೀಡಾಂಗಣದಲ್ಲಿ  ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ರಚಿಸಿ, ಕಬಡ್ಡಿ ತರಬೇತಿ, ಕೂಟಗಳಿಗೆ ಅನುವು ಮಾಡಿಕೊಡಬೇಕಿದೆ. 
– ಮಹಮದ್‌ ಅಕ್ರಮ್‌, ರಾಷ್ಟ್ರಮಟ್ಟದ ಕಬಡ್ಡಿ ಪಟು

ಪೂರ್ಣಕಾಲಿಕ ಅಧಿಕಾರಿ
ದೈಹಿಕ ಶಿಕ್ಷಣ ಶಿಕ್ಷಕರನ್ನು ಯುವ ಸಬಲೀಕರಣ ಇಲಾಖೆಗೆ ನಿಯೋಜಿಸಲಾಗುತ್ತಿದೆ. ಪೂರ್ಣಕಾಲಿಕ ಅಧಿಕಾರಿಗಳು ಆಗಮಿಸಿದರೆ ಅಭಿವೃದ್ಧಿ ಸಾಧ್ಯತೆಯಿದೆ. ಗ್ರಾಮೀಣ ಕ್ರೀಡಾಕೂಟಗಳನ್ನು ನಡೆಸುವ ನಿಟ್ಟಿನಲ್ಲಾದರೂ ಕ್ರೀಡಾಂಗಣ ಸಜ್ಜುಗೊಳಿಸಲು ಆದ್ಯತೆ ನೀಡಬೇಕಿದೆ.
– ರಾಜೀವ್‌ ಸಾಲ್ಯಾನ್‌, ಜಿಲ್ಲಾ ಯುವಜನ ಒಕ್ಕೂಟದ ಗೌರವಾಧ್ಯಕ್ಷರು

ದುರುಪಯೋಗ
ಹಿಂದೆ ಸಾರ್ವಜನಿಕರಿಂದ ಕ್ರೀಡಾಂಗಣ ದುರುಪಯೋಗವಾಗುತ್ತಿದೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಕ್ರೀಡಾಂಗಣದಲ್ಲಿ ಮದ್ಯಸೇವನೆಯಂತಹ ಕೃತ್ಯಗಳು ನಡೆಯುತ್ತಿರುವ ಬಗ್ಗೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ದರೂ ಕ್ರೀಡಾಂಗಣದ ರಕ್ಷಣೆಗೂ ಶಾಶ್ವತ ಪರಿಹಾರ ರೂಪಿಸಬೇಕಾದ ಅಗತ್ಯವಿದೆ.

ಅಭಿವೃದ್ಧಿ ನಿರೀಕ್ಷೆ
ಕ್ರೀಡಾಂಗಣದಲ್ಲಿ ಗ್ಯಾಲರಿ ನಿರ್ಮಿಸುವ ವೇಳೆ ಶೌಚಾಲಯ, ನೀರಿನ ವ್ಯವಸ್ಥೆ ಮತ್ತಿತರ ಸೌಲಭ್ಯ ಕಲ್ಪಿಸಲಾಗಿದೆ. ಈ ಬಾರಿಯೂ ಪ್ರಸ್ತಾವನೆ ಸಲ್ಲಿಸಿದ್ದು, ಕ್ರೀಡಾಂಗಣದ ಅಭಿವೃದ್ಧಿ ನಡೆಯುವ ಸಾಧ್ಯತೆಯಿದೆ. ಸ್ಥಳೀಯ ಸಂಘ-ಸಂಸ್ಥೆಗಳು ಜೂನಿಯರ್‌ ಕಾಲೇಜು ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಹಮ್ಮಿಕೊಳ್ಳುತ್ತಿವೆ. ಇಲ್ಲಿಯೂ 2007ರಲ್ಲಿ ಹಾಗೂ ತಿಂಗಳ ಹಿಂದೆ ರಾಜ್ಯಮಟ್ಟದ ಕೂಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. 400 ಮೀ.ನ ಓಟದ ಟ್ರ್ಯಾಕ್‌ ಇಲ್ಲದಿರುವುದರಿಂದ ಪ್ರಮುಖ ಕ್ರೀಡಾಕೂಟ ಹಮ್ಮಿಕೊಳ್ಳಲು ಸಾಧ್ಯವಾಗುತ್ತಿಲ್ಲ.
– ಪ್ರಭಾಕರ ನಾರಾವಿ, ಯುವ ಸಬಲೀಕರಣ ಸಹಾಯಕ ಕ್ರೀಡಾಧಿಕಾರಿ, ಬೆಳ್ತಂಗಡಿ

— ಹರ್ಷಿತ್‌ ಪಿಂಡಿವನ

Advertisement

Udayavani is now on Telegram. Click here to join our channel and stay updated with the latest news.

Next