Advertisement

ಖಾತೆ ಬದಲಾವಣೆಯಲ್ಲಿ ಮತ್ತೆ ಅಪಸ್ವರ

12:52 AM Feb 13, 2020 | Lakshmi GovindaRaj |

ಬೆಂಗಳೂರು: ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ರಾತ್ರೋರಾತ್ರಿ ಖಾತೆ ಅದಲು- ಬದಲಾಗಿದ್ದಕ್ಕೆ ಪಕ್ಷದಲ್ಲೇ ವಿರೋಧದ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ನೂತನ ಸಚಿವರು ಸದ್ಯಕ್ಕೆ ಇತರೆ ವಿಚಾರಗಳ ಬಗ್ಗೆ ಒತ್ತಡ ಹೇರಲು ಹಿಂದೇಟು ಹಾಕುವಂತಾಗಿದೆ.

Advertisement

ಈ ಮಧ್ಯೆ, ಅರಣ್ಯ ನಿಯಮ ಉಲ್ಲಂಘನೆ ಆರೋಪಗಳಿವೆ ಎನ್ನಲಾದ ಆನಂದ್‌ ಸಿಂಗ್‌ ಅವರಿಗೆ ಅರಣ್ಯ ಖಾತೆ ನೀಡಿರುವ ಬಗ್ಗೆಯೂ ಅಪಸ್ವರ ಕೇಳಿಬರಲಾರಂಭಿಸಿರುವುದು ಹಿರಿಯ ನಾಯಕರಿಗೆ ಇರುಸು ಮುರುಸು ಉಂಟು ಮಾಡಿದೆ. ಅನರ್ಹ ಶಾಸಕರಾದ ಎಚ್‌.ವಿಶ್ವನಾಥ್‌, ಆರ್‌. ಶಂಕರ್‌ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸ್ಥಾನಮಾನಕ್ಕೆ ಒತ್ತಾಯ ಮುಂದುವರಿಸಿದ್ದಾರೆ.

ನೂತನ ಸಚಿವರಿಗೆ ಖಾತೆ ಹಂಚಿಕೆಯಾದ 24 ಗಂಟೆಯಲ್ಲಿ ಬದಲಾವಣೆ ಮಾಡಿದ ಬಗ್ಗೆ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರು ಎಂಬ ಕಾರಣಕ್ಕೆ ಅವರ ಒತ್ತಡಗಳಿಗೆಲ್ಲಾ ಮಣಿಯುತ್ತಾ ಹೋದರೆ ಸರ್ಕಾರ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ಅಪಾಯವಿದೆ ಎಂಬ ಆತಂಕವೂ ವ್ಯಕ್ತವಾಗಿದೆ. ಸಚಿವ ಸ್ಥಾನ, ಬಳಿಕ ಖಾತೆ ಆನಂತರ ವಿಧಾನಸೌಧದಲ್ಲೇ ಕೊಠಡಿ ಬೇಕೆಂದು ಕೆಲವರು ಬೇಡಿಕೆ ಇಟ್ಟಿದ್ದಾರೆ ಎಂಬ ಮಾತುಗಳಿದ್ದು, ಈ ಬಗ್ಗೆಯೂ ಪ್ರತಿರೋಧ ಕೇಳಿಬಂದಿದೆ.

ನಗರದಲ್ಲಿ ಬುಧವಾರ ಮಾತನಾಡಿದ ಸಚಿವ ಆನಂದ್‌ ಸಿಂಗ್‌, ಯಾವ ಶಾಸಕರು ಯಾವ ಖಾತೆಯನ್ನು ನಿಭಾಯಿಸಬಲ್ಲರು ಎಂಬುದು ಮುಖ್ಯಮಂತ್ರಿಗಳಿಗೆ ಗೊತ್ತಿದೆ. ಖಾತೆ ಬದಲಾವಣೆಗಾಗಿ ಮುಖ್ಯಮಂತ್ರಿಗಳ ಬಳಿ ಬೇಡಿಕೆ ಇಟ್ಟಿಲ್ಲ. ಇಂತದ್ದೇ ಖಾತೆ ಬೇಕು ಎಂದೂ ಕೇಳಿಲ್ಲ. ಮೊದಲು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ನೀಡಿದ್ದರು. ಬಳಿಕ ಅರಣ್ಯ ಖಾತೆ ಕೊಟ್ಟಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.

ನೂತನ ಸಚಿವರು ನಿರ್ದಿಷ್ಟ ಖಾತೆ, ಕೊಠಡಿಗಾಗಿ ಒತ್ತಡ ಹೇರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ನನಗೆ ಸಾರಿಗೆ ಖಾತೆಯಿದ್ದು, ಹೆಚ್ಚುವರಿಯಾಗಿ ನೀಡಿದ್ದ ಕೃಷಿ ಖಾತೆ ಹಿಂಪಡೆದಿದ್ದಾರೆ. ಎಲ್ಲ ಸಚಿವರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಿದರು.

Advertisement

ಸಚಿವ ಸಿ.ಟಿ. ರವಿ, ನೂತನ ಸಚಿವರಿಗೆ ಖಾತೆ ಬದಲಾವಣೆ ವಿಚಾರದ ಬಗ್ಗೆ ನಾನು ಚರ್ಚಿಸುವುದಿಲ್ಲ. ಈ ಬಗ್ಗೆ ಮಾತನಾಡಿದರೆ ನನ್ನ ಬಗ್ಗೆಯೂ ತಪ್ಪು ಅಭಿಪ್ರಾಯ ಮೂಡುತ್ತದೆ. ಈ ವಿಚಾರದ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸದೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುವುದು ಎಂದಷ್ಟೇ ತಿಳಿಸಿದರು.

ಸಚಿವ ಆನಂದ್‌ ಸಿಂಗ್‌ ಅವರಿಗೆ ಅರಣ್ಯ ಖಾತೆ ನೀಡಿರುವ ಬಗ್ಗೆಯೂ ಅಪಸ್ವರ ಕೇಳಿಬಂದಿದೆ. ಅವರ ವಿರುದ್ಧ ಅರಣ್ಯ ನಿಯಮ ಉಲ್ಲಂಘನೆಯ ಆರೋಪಗಳಿದ್ದು ಅವರನ್ನೇ ಅರಣ್ಯ ಸಚಿವರನ್ನಾಗಿ ಮಾಡಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಮೂಡಲಾರಂಭಿಸಿದೆ. ಆದರೆ ಕೆಲ ಸಚಿವರು ಆನಂದ್‌ ಸಿಂಗ್‌ ಪರ ಸಮರ್ಥನೆಗೆ ನಿಂತಿದ್ದಾರೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿ, ಸಚಿವ ಆನಂದ್‌ ಸಿಂಗ್‌ ಅವರ ವಿರುದ್ಧ ಆರೋಪಗಳಿರಬಹುದು. ಆದರೆ ಯಾವ ಆರೋಪಗಳು ಸಾಬೀತಾಗಿಲ್ಲ. ಆಯಾ ರಾಜಕೀಯ ಸಂದರ್ಭಕ್ಕೆ ಅನುಗುಣವಾಗಿ ರಾಜಕೀಯ ಹೇಳಿಕೆಗಳಿರುತ್ತವೆ ಎಂದರು.

ಸಚಿವ ಸಿ.ಟಿ. ರವಿ, ಮುಖ್ಯಮಂತ್ರಿಗಳ ನಿರ್ಧಾರದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡುವುದು ಸೂಕ್ತವಲ್ಲ. ಆರೋಪ ಹೊತ್ತವರೆಲ್ಲಾ ಆರೋಪಿಗಳಲ್ಲ. ನ್ಯಾಯಾಲಯ ಅಪರಾಧಿ ಎಂದು ತೀರ್ಮಾನಿಸಿದ ಬಳಿಕ ಪಕ್ಷ ಕಠಿಣ ಕ್ರಮ ಕೈಗೊಂಡಿದೆ. ಇದು ಎಲ್ಲ ಸಚಿವರಿಗೂ ಅನ್ವಯವಾಗುತ್ತದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಭೇಟಿಯಾದ ಅನರ್ಹರು: ಅನರ್ಹ ಶಾಸಕರಾದ ಎಚ್‌.ವಿಶ್ವನಾಥ್‌, ಆರ್‌.ಶಂಕರ್‌ ಅವರು ಯಡಿಯೂರಪ್ಪ ಅವರನ್ನು ಡಾಲರ್ ಕಾಲೋನಿ ನಿವಾಸದಲ್ಲಿ ಬುಧವಾರ ಭೇಟಿಯಾಗಿ ಚರ್ಚಿಸಿದರು. ಇದೇ ವೇಳೆ ಸಚಿವ ಸ್ಥಾನ ನೀಡುವಂತೆಯೂ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಭೇಟಿ ಬಳಿಕ ಪ್ರತಿಕ್ರಿಯಿಸಿದ ಎಚ್‌. ವಿಶ್ವನಾಥ್‌, ನಂದಗಢದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ಅನುದಾನ ಬಿಡುಗಡೆ ಮಾಡಬೇಕೆಂಬ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದು, ಹಣ ಬಿಡುಗಡೆಗೆ ಒಪ್ಪಿದ್ದಾರೆ. ಸಚಿವ ಸ್ಥಾನಕ್ಕಾಗಿ ಪದೇ ಪದೆ ಮನವಿ ಮಾಡುವುದಿಲ್ಲ. ಸಚಿವ ಸ್ಥಾನ ನೀಡಿದರೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಯಾವ ಶಾಸಕರು ಯಾವ ಖಾತೆಯನ್ನು ನಿಭಾಯಿಸಬಲ್ಲರು ಎಂಬುದು ಮುಖ್ಯಮಂತ್ರಿಗಳಿಗೆ ಗೊತ್ತಿದೆ. ನನ್ನ ಮೇಲೆ ಮೊದಲಿನಿಂದಲೂ ಪ್ರಕರಣಗಳಿವೆ. ಸಣ್ಣ ಪುಟ್ಟ ನಿಯಮ ಉಲ್ಲಂಘನೆ ಸಂಬಂಧ ಪ್ರಕರಣಗಳಿವೆ. ನಮ್ಮದು ಗಣಿ ವ್ಯವಹಾರದ ಕುಟುಂಬವಾಗಿರುವುದರಿಂದ ಪ್ರಕರಣಗಳಿರುವುದು ಸಹಜ.
-ಆನಂದ್‌ ಸಿಂಗ್‌, ಅರಣ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next