Advertisement

ಕೋವಿಡ್ ಲಸಿಕೆ; ಬಾಬಾ ರಾಮ್ ದೇವ್ ಯೂಟರ್ನ್…ವೈದ್ಯರು ಭೂಮಿಯ ಮೇಲಿನ ದೇವರ ದೂತರಾಗಿದ್ದಾರೆ

09:00 AM Jun 11, 2021 | Team Udayavani |

ನವದೆಹಲಿ: ತನಗೆ ಯೋಗ ಮತ್ತು ಆಯುರ್ವೇದದ ರಕ್ಷಣೆ ಇರುವುದರಿಂದ ಕೋವಿಡ್ 19 ಲಸಿಕೆ ಅಗತ್ಯವಿಲ್ಲ ಎಂದು ವೈದ್ಯರು ಹಾಗೂ ಅಲೋಪತಿ ವೈದ್ಯ ಪದ್ಧತಿ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದ ಬಾಬಾ ರಾಮ್ ದೇವ್ ಇದೀಗ ಉಲ್ಟಾ ಹೊಡೆದಿದ್ದು, ತಾನು ಶೀಘ್ರವೇ ಕೋವಿಡ್ ಲಸಿಕೆ ತೆಗೆದುಕೊಳ್ಳುವೆ, ಅಲ್ಲದೇ ವೈದ್ಯರು ಭೂಮಿಯ ಮೇಲಿನ ದೇವರ ದೂತರು ಎಂದು ಬಣ್ಣಿಸಿದ್ದಾರೆ.

Advertisement

ಇದನ್ನೂ ಓದಿ:ಭಾಸ್ಕರ ಶೆಟ್ಟಿ ಕೊಲೆ: ಪತ್ನಿ, ಮಗ ಜೈಲುಪಾಲು  ಕೋಟ್ಯಂತರ ರೂ. ಆಸ್ತಿಯದ್ದೇ ಪ್ರಶ್ನೆ

ಬಾಬಾ ರಾಮ್ ದೇವ್ ಇತ್ತೀಚೆಗಷ್ಟೇ ಕೋವಿಡ್ 19 ಹಾಗೂ ಅಲೋಪತಿ ಔಷಧಿಗಳ ಪರಿಣಾಮದ ಕುರಿತು ವಿರೋಧ ವ್ಯಕ್ತಪಡಿಸಿ ಹೇಳಿಕೆ ನೀಡಿ ವಿವಾದ ಹುಟ್ಟು ಹಾಕಿದ್ದರು. ಇದರಿಂದ ಐಎಂಎ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಕೋಟ್ಯಂತರ ರೂಪಾಯಿ ಮಾನನಷ್ಟ ಮೊಕದ್ದಮೆಯ ನೋಟಿಸ್ ಜಾರಿಗೊಳಿಸಿತ್ತು. ಆದರೂ ಕ್ಷಮೆಯಾಚಿಸದ ಬಾಬಾರಾಮ್ ದೇವ್ ತನ್ನನ್ನು ಬಂಧಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದರು.

ಏತನ್ಮಧ್ಯೆ ಜೂನ್ 21ರಿಂದ ದೇಶದಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯನ್ನು ಸ್ವಾಗತಿಸಿರುವ ಬಾಬಾ ರಾಮ್ ದೇವ್, ಇದನ್ನು ಐತಿಹಾಸಿಕ ಹೆಜ್ಜೆ ಎಂದು ಕೊಂಡಾಡಿದ್ದು, ಎಲ್ಲರೂ ಲಸಿಕೆ ಪಡೆಯುವಂತೆ ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.

ಲಸಿಕೆಯ ಎರಡು ಡೋಸ್ ಗಳನ್ನು ಪಡೆಯಿರಿ ಮತ್ತು ಯೋಗ ಮತ್ತು ಆಯುರ್ವೇದದಿಂದ ದುಪ್ಪಟ್ಟು ರಕ್ಷಣೆ ದೊರೆಯಲಿದೆ. ಹೀಗೆ ಲಸಿಕೆ, ಯೋಗ ಮತ್ತು ಆಯುರ್ವೇದ ಚಿಕಿತ್ಸೆಯಿಂದ ಹೆಚ್ಚಿನ ರಕ್ಷಣೆ ಪಡೆಯುವ ಮೂಲಕ ಕೋವಿಡ್ ನಿಂದ ಒಬ್ಬ ವ್ಯಕ್ತಿಯೂ ಸಾಯುವುದಿಲ್ಲ ಎಂದು ಹರಿದ್ವಾರದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ರಾಮ್ ದೇವ್ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next