Advertisement

ಕೋವಿಡ್-19 ನಿಯಂತ್ರಣ ಬಳಿಕ ಆಯುಷ್‌ ಸೇವೆ ಲಭ್ಯ

12:40 AM Jun 23, 2020 | Sriram |

ಮಹಾನಗರ: ಉದ್ಘಾಟನೆಗೆ ಸಿದ್ಧವಾಗಿ ನಿಂತರೂ ಕೋವಿಡ್-19 ರೋಗಿಗಳ ಚಿಕಿತ್ಸೆ ಕಾರಣದಿಂದ ಸದ್ಯ ವೆನ್ಲಾಕ್ ಆಯುಷ್‌ ಆಸ್ಪತ್ರೆ ಆಯುರ್ವೇದ ಚಿಕಿತ್ಸೆಗೆ ಮುಕ್ತಗೊಳ್ಳುವುದು ಅನುಮಾನ. ಕೋವಿಡ್-19 ಸಂಪೂರ್ಣ ನಿಯಂತ್ರಣಕ್ಕೆ ಬಂದ ಬಳಿಕವಷ್ಟೇ ಈ ಆಸ್ಪತ್ರೆಯಲ್ಲಿ ಆಯುಷ್‌ ಸೇವೆ ಆರಂಭವಾಗಲಿದೆ.

Advertisement

ಕೋವಿಡ್-19 ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಏರಿಕೆಯಾಗುತ್ತಿರುವುದರಿಂದ ವೆನ್ಲಾಕ್ ಜಿಲ್ಲಾಸ್ಪತ್ರೆಯ ಸನಿಹ ನೂತನವಾಗಿ ನಿರ್ಮಾಣ ಗೊಂಡಿರುವ ಆಯುಷ್‌ ಆಸ್ಪತ್ರೆಯನ್ನೂ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಆ ಮೂಲಕ, ಉದ್ಘಾಟನೆಗೂ ಮುನ್ನವೇ ಕೋವಿಡ್-19 ರೋಗಿಗಳ ಸೇವೆಗೆ ಆಯುಷ್‌ ಆಸ್ಪತ್ರೆ ಉಪಯೋಗವಾಗುತ್ತಿದೆ.

ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ 50 ಹಾಸಿಗೆ ಸಾಮರ್ಥ್ಯದ ಆಯುಷ್‌ ಆಸ್ಪತ್ರೆ ನಿರ್ಮಾಣ ಗೊಂಡಿದೆ. ಎಲ್ಲವೂ ಅಂದುಕೊಂಡಂತಾಗಿದ್ದರೆ, ಕಳೆದ ಫೆಬ್ರವರಿಯಲ್ಲೇ ಆಸ್ಪತ್ರೆ ಉದ್ಘಾಟನೆಯಾಗಬೇಕಿತ್ತು. ಆದರೆ, ಆಸ್ಪತ್ರೆ ರೋಗಿಗಳಿಗೆ ಮುಕ್ತವಾಗುವ ದಿನ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿತ್ತು. ಆ ಬಳಿಕ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನೇದಿನೇ ಏರಿಕೆಯಾಗತೊಡಗಿದ ಹಿನ್ನೆಲೆಯಲ್ಲಿ ವೆನ್ಲಾಕ್ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಆಯುಷ್‌ ಆಸ್ಪತ್ರೆಯನ್ನು ಉದ್ಘಾಟನೆ ಮಾಡುವುದಕ್ಕೆ ಮೊದಲೇ ಕೋವಿಡ್-19 ಸೋಂಕಿತರ ಸೇವೆಗೆ ಬಳಸಿಕೊಳ್ಳಲಾಗಿದ್ದು, ಪ್ರಸ್ತುತ ಈ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಂಟುತ್ತಲೇ ಸಾಗಿದ್ದ ಕಾಮಗಾರಿ
ಯು. ಟಿ. ಖಾದರ್‌ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಾಗಿದ್ದಾಗ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಆಯುಷ್‌ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿದ್ದರು. 2018ರ ಮಾರ್ಚ್‌ನಲ್ಲಿ ಕಟ್ಟಡ ಕಾಮಗಾರಿ ಆರಂಭಗೊಂಡಿತ್ತು. ಆದರೆ, ಕುಂಟುತ್ತಾ ಸಾಗಿದ್ದ ಕಾಮಗಾರಿಯಿಂದಾಗಿ ಆಸ್ಪತ್ರೆ ರೋಗಿಗಳ ಸೇವೆಗೆ ತೆರೆದುಕೊಳ್ಳುವುದು ವಿಳಂಬವಾಗಿತ್ತು. ಇದೀಗ ಉದ್ಘಾಟನೆಗೆ ಸಿದ್ಧ ಗೊಂಡರೂ ಕೋವಿಡ್-19 ಸಂಪೂರ್ಣ ನಿಯಂತ್ರಣಕ್ಕೆ ಬರುವ ತನಕ ಉದ್ಘಾಟನೆಯಾಗುವುದು ಸಂಶಯ. ಹಾಗಾಗಿ ಆಯುರ್ವೇದ ಚಿಕಿತ್ಸೆಗಳು ಲಭ್ಯವಾಗಲು ಇನ್ನೆಷ್ಟು ದಿನಗಳು ತಗಲುತ್ತವೆ ಎಂಬುದೂ ಅನಿಶ್ಚಿತ.

ಆಯುಷ್‌ ಮೆಡಿಸಿನಲ್‌ ಪ್ಲ್ರಾಂಟ್‌ ಗಾರ್ಡನ್‌
ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಕಾರ್ಯಾಚರಿಸುತ್ತಿರುವ ಆಯುಷ್‌ ವಿಭಾಗದ ಮುಂಭಾಗದಲ್ಲಿ ಆಯುಷ್‌ ಮೆಡಿಸಿನಲ್‌ ಪ್ಲ್ರಾಂಟ್‌ ಗಾರ್ಡನ್‌ ನಿರ್ಮಿಸಲಾಗಿದೆ. ಸ್ವಚ್ಛ ಪರಿಸರ, ಗಾಳಿ, ಆಹ್ಲಾದಕರ ವಾತಾವರಣ ರೋಗಿಗಳಿಗೆ ಸಿಗುವಂತಾಗಲು ಈ ಯೋಜನೆ ಕಾರ್ಯಗತಗೊಳಿಸಲಾಗಿದೆ. ಮುಂದೆ ಯೋಗ ಮತ್ತು ರೀಹ್ಯಾಬಿಲಿಟೇಶನ್‌ ಒದಗಿಸಿಕೊಡುವ ಚಿಂತನೆಯೂ ಇದೆ ಎನ್ನುತ್ತಾರೆ ಜಿಲ್ಲಾ ಆಯುಷ್‌ ಅಧಿಕಾರಿಯವರು.

Advertisement

ಲಭ್ಯ ಸೌಲಭ್ಯಗಳೇನು?
ಆಯುಷ್‌ ಆಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸೆಯೊಂದಿಗೆ ಯೋಗ, ನ್ಯಾಚುರೋಪಥಿ, ಯುನಾನಿ, ಹೋಮಿಯೋಪಥಿ ಸಹಿತ ಎಲ್ಲ ಚಿಕಿತ್ಸೆಗಳು ಲಭ್ಯವಿವೆ. ಈಗಾಗಲೇ ಆಸ್ಪತ್ರೆಯ ಲಭ್ಯ ಸ್ಥಳದಲ್ಲಿ ಹೊರರೋಗಿ ವಿಭಾಗವನ್ನು ಆರಂಭಿಸಲಾಗಿದ್ದು, ಕಳೆದ ಮೂರು ತಿಂಗಳಿನಿಂದ ವಿಭಾಗ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಇರುವ ಆಯುಷ್‌ ವೈದ್ಯರು ಮತ್ತು ಕಾಲೇಜುಗಳ ಸಹಕಾರದೊಂದಿಗೆ ವಿಭಾಗದಲ್ಲಿ ಚಿಕಿತ್ಸೆಗಳು ನಡೆಯುತ್ತಿವೆ.

 ಕಾಮಗಾರಿ ಮುಗಿದಿದೆ
ಆಯುಷ್‌ ಆಸ್ಪತ್ರೆ ಕಾಮಗಾರಿ ಮುಗಿದಿದೆ. ಸದ್ಯ ಕೋವಿಡ್-19 ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿರುವುದರಿಂದ ಆಯುಷ್‌ ಸೇವೆ ಅಲಭ್ಯವಾಗಿದೆ. ಕೋವಿಡ್-19 ಸಂಪೂರ್ಣ ನಿಯಂತ್ರಣಕ್ಕೆ ಬಂದ ಬಳಿಕವಷ್ಟೇ ಆಸ್ಪತ್ರೆ ಉದ್ಘಾಟನೆಗೊಂಡು ಆಯುಷ್‌ ಸೇವೆಗಳನ್ನು ನೀಡಲಾಗುತ್ತದೆ.
-ಡಾ| ಇಕ್ಬಾಲ್‌, ಜಿಲ್ಲಾ ಆಯುಷ್‌ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next