Advertisement

ರಾಮ ಮಂದಿರಕ್ಕೆ ಹರಿದುಬಂತು 3,000 ಕೋ.ರೂ. : ಅಭಿಯಾನ ಪೂರ್ಣಗೊಂಡರೂ ದೇಣಿಗೆಯ ಮಹಾಪೂರ

02:17 AM Apr 17, 2021 | Team Udayavani |

ಉಡುಪಿ :ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ‌ ನಿರ್ಮಾಣಕ್ಕೆ ರಾಮನವಮಿ ದಿನ ಸಮೀಪಿಸುತ್ತಿ ರುವಾಗ ಸಾರ್ವಜನಿಕರಿಂದ ಸಂಗ್ರಹ ಗೊಂಡ ದೇಣಿಗೆ ಮೊತ್ತ ಮೂರು ಸಾವಿರ ಕೋ.ರೂ. ದಾಟಿದೆ.

Advertisement

ಜ. 15ರಿಂದ ಫೆ. 27ರ ವರೆಗೆ ಒಟ್ಟು 44 ದಿನ ನಡೆದ ನಿಧಿ ಸಂಗ್ರಹ ಅಭಿಯಾನದಲ್ಲಿ 2,100 ಕೋ.ರೂ. ಸಂಗ್ರಹವಾಗಿತ್ತು. ಆದರೆ ಅಭಿಯಾನ ದಿಂದ ಪ್ರೇರಣೆಗೊಂಡವರು ನೇರವಾಗಿ ತೀರ್ಥಕ್ಷೇತ್ರ ಟ್ರಸ್ಟ್‌ನ ಬ್ಯಾಂಕ್‌ ಖಾತೆಗೆ ಹಣ ಕಳುಹಿಸುತ್ತಿದ್ದಾರೆ. ಈ ದೇಣಿಗೆ ಮೊತ್ತ 3 ಸಾವಿರ ಕೋ.ರೂ. ಮೀರಿದೆ.

ಅತೀ ದೊಡ್ಡ ಅಭಿಯಾನ
ಒಟ್ಟು ದೇಣಿಗೆಯಲ್ಲಿ ಕರ್ನಾಟಕದ ಪಾಲು 195.33 ಕೋಟಿ. ರೂ. ಆಗಿತ್ತು. ವಿವಿಧ ರಾಜ್ಯಗಳ ಪೈಕಿ 350 ಕೋಟಿ ರೂ. ಸಂಗ್ರಹಿಸಿರುವ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ಗುಜರಾತ್‌ ಇದೆ. ದೇಶದ 4 ಲಕ್ಷ ಗ್ರಾಮಗಳಲ್ಲಿ 9 ಲಕ್ಷ ಕಾರ್ಯಕರ್ತರು 1.75 ಲಕ್ಷ ತಂಡಗಳ ಮೂಲಕ ನಿಧಿ ಸಂಗ್ರಹ ನಡೆಸಿದ್ದರು. ಇದು ಜಗತ್ತಿನ ಅತೀ ದೊಡ್ಡ ಅಭಿಯಾನ ಎಂದು ಪರಿಗಣಿತವಾಗಿದೆ.

ಟ್ರಸ್ಟ್‌ ಈಗ ರಾಮಜನ್ಮಭೂಮಿ ಸ್ವಾಧೀನದ 70 ಎಕ್ರೆ ಜಾಗದ ಪಕ್ಕದ 7,285 ಚದರಡಿ ಭೂಮಿಯನ್ನು 1 ಕೋ.ರೂ.ಗೆ ಖರೀದಿಸಿದ್ದು ಮಂದಿರ ಸಂಕೀರ್ಣದ ಒಟ್ಟು ಪ್ರದೇಶ 107 ಎಕ್ರೆಗೆ ಏರಿದೆ.

ಸಿಮೆಂಟ್‌ ರಹಿತ ಪಂಚಾಂಗ
ಮಂದಿರ ಸಾವಿರ ವರ್ಷವಾದರೂ ಬಾಳಬೇಕೆಂಬ ಗುರಿ ಹೊಂದಲಾಗಿದೆ. ಭೂಮಿಯನ್ನು ಹದಗೊಳಿಸಲಾಗುತ್ತಿದೆ. ಭೂಕಂಪ, ಭೂಕುಸಿತ, ಸ್ಥಿರತೆ, ನದಿ ಪ್ರಭಾವ ಇತ್ಯಾದಿಗಳನ್ನು ಪರೀಕ್ಷಿಸಿ ಎಲ್‌ ಆ್ಯಂಡ್‌ ಟಿ ಸಂಸ್ಥೆ 2.7 ಎಕ್ರೆ ನಿವೇಶನದ 13,000 ಚದರಡಿ ಪ್ರದೇಶದ 25-30 ಅಡಿ ಆಳದ ಮಣ್ಣನ್ನು ಹೊರತೆಗೆದು ಅದಕ್ಕೆ ಜಲ್ಲಿ, ಮರಳು, ಕ್ಯಾಲ್ಸಿಯಂ ಅಂಶವಿರುವ ಸಾಮಗ್ರಿಗಳ ಮಿಶ್ರಣವನ್ನು 50ಕ್ಕೂ ಹೆಚ್ಚು ಪದರಗಳಲ್ಲಿ ತುಂಬಿಸು ತ್ತಿದೆ. ವಿಶೇಷವೆಂದರೆ ಬಾಳಿಕೆ ಕಾರಣಕ್ಕೆ ಸಿಮೆಂಟ್‌ ಹಾಕುತ್ತಿಲ್ಲ.

Advertisement

ಆಗಸ್ಟ್‌ ವೇಳೆಗೆ ಕಾಮಗಾರಿ ಆರಂಭಗೊಂಡು 2023ರಲ್ಲಿ ಮಂದಿರ ನಿರ್ಮಾಣ ಆಗಲಿದೆ ಎಂದು ನಿರ್ಮಾಣ ಕಾರ್ಯದ ಹೊಣೆ ಹೊತ್ತಿರುವ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ರಾಯ್‌ ಹೇಳುತ್ತಾರೆ. ವಿಶ್ವ ಹಿಂದೂ ಪರಿಷತ್‌ ದಕ್ಷಿಣ ಭಾರತದ ಮುಂದಾಳು ಗೋಪಾಲ್‌ ಅಯೋಧ್ಯೆಯ ಕಾಮಗಾರಿಗಳ ಉಸ್ತುವಾರಿ ನೋಡುತ್ತಿದ್ದಾರೆ.

ಅಭಿಯಾನದ ಬಳಿಕವೂ ಭಕ್ತರಿಂದ ಆನ್‌ಲೈನ್‌ ಮೂಲಕ ದೇಣಿಗೆ ಬರುತ್ತಿದ್ದು, ಸುಮಾರು 3,000 ಕೋ.ರೂ. ತಲುಪಿದೆ.
– ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪೇಜಾವರ ಮಠ, ವಿಶ್ವಸ್ತರು, ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌

ತಮಿಳುನಾಡು ದೇವಸ್ಥಾನಗಳ ಸ್ಥಿರತೆ ಕಣ್ಮುಂದೆ
ಮಂದಿರದ ಮೇಲೆ ಲಕ್ಷಾಂತರ ಟನ್‌ ಭಾರ ಬೀಳಲಿದೆ. ರಾಮೇಶ್ವರ, ತಂಜಾವೂರು, ಮಧುರೆಯಂತಹ ದೇವಸ್ಥಾನಗಳ ಭಾರ ಎಷ್ಟಿರಬಹುದು? ಎಷ್ಟು ವರ್ಷವಾದರೂ ಏನೂ ಆಗದೆ ಸ್ಥಿರವಾಗಿದೆ. ಇದರ ತಂತ್ರಜ್ಞಾನ ಏನಿರಬಹುದು ಎಂದು ಇಂದಿಗೂ ತಜ್ಞರಿಗೆ ತಿಳಿಯುತ್ತಿಲ್ಲ. ನಾವೂ ಅದೇ ರೀತಿಯ ಗಟ್ಟಿಮುಟ್ಟಾದ ಮಂದಿರ ನಿರ್ಮಿಸಬೇಕೆಂದಿದ್ದೇವೆ.
– ಕೇಶವ ಹೆಗಡೆ, ವಿಹಿಂಪ ಕರ್ನಾಟಕದ ಮುಖಂಡರು

Advertisement

Udayavani is now on Telegram. Click here to join our channel and stay updated with the latest news.

Next