Advertisement

Ayodhya Ram Mandir; ಜ. 22ಕ್ಕೆ 500ಕ್ಕೂ ಅಧಿಕ ದೇವಸ್ಥಾನಗಳಲ್ಲಿ ಪೂಜೆ, ಅನ್ನಪ್ರಸಾದ

01:05 AM Jan 09, 2024 | Team Udayavani |

ಉಡುಪಿ/ಮಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠಾಪನೆಗೆ ದಿನಗಣನೆ ಆರಂಭಗೊಂಡಿದ್ದು, ಕರಾವಳಿ ಉಭಯ ಜಿಲ್ಲೆಯಾದ್ಯಂತ ಸಂಭ್ರಮ ಇಮ್ಮಡಿ ಗೊಂಡಿದೆ. ಒಂದೆಡೆ ಪರ್ಯಾಯೋತ್ಸವ ಮತ್ತೊಂದೆಡೆ ಅಯೋಧ್ಯೆ ಉತ್ಸವದ ಸಂಭ್ರಮ ಜಿಲ್ಲೆಗೆ ಮತ್ತಷ್ಟು ಮೆರುಗು ನೀಡಲಿದೆ.

Advertisement

ಹಿಂದೂ ಸಂಘಟನೆಯ ಕಾರ್ಯಕರ್ತರು ಜಿಲ್ಲೆಯ ಮನೆಮನೆಗಳಿಗೆ ಭೇಟಿ ನೀಡಿ ಮಂತ್ರಾಕ್ಷತೆ ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಜ. 16ರ ವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಈಗಾಗಲೇ ಶೇ. 80ರಷ್ಟು ಮನೆಗಳಿಗೆ ಮಂತ್ರಾಕ್ಷತೆ ತಲುಪಿದೆ.

ಎಲ್ಲ ದೇವಸ್ಥಾನಗಳಲ್ಲಿಯೂ ಅನ್ನಪ್ರಸಾದ
ಜ. 22ರಂದು ಆಯಾ ಊರಿನ ಎಲ್ಲ ಪ್ರಮುಖ ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.

ರಾಮ ಮಂದಿರ ಪ್ರತಿಷ್ಠಾಪನೆಯ ನೇರವೀಕ್ಷಣೆಗಾಗಿ ಬೃಹತ್‌ ಎಲ್‌ಇಡಿ ಪರದೆ ಅಳವಡಿಸಲಾಗುತ್ತದೆ. ರಾಮನಾಪ ಜಪ, ಭಜನೆ ಸಂಕೀರ್ತನೆ, ಪಾನಕ, ಉಪಾಹಾರ, ಮಧ್ಯಾಹ್ನ ಪ್ರಮುಖ ದೇವಸ್ಥಾನಗಳಲ್ಲಿ ಅನ್ನಪ್ರಸಾದ ಸೇವೆ, ಸಂಜೆ ದೀಪೋತ್ಸವ ಸಹಿತ ಎಲ್ಲ ಮನೆಗಳಲ್ಲಿ ದೀಪ ಬೆಳಗಲಿದೆ ಎನ್ನುತ್ತಾರೆ ರಾಮಮಂದಿರದ ಉಡುಪಿ ನಗರ ಸಂಯೋಜಕ ಶಶಾಂಕ್‌ ಶಿವತ್ತಾಯ.

ಮಂತ್ರಾಕ್ಷತೆ ರಕ್ಷಣೆ
ಕಾರ್ಯಕರ್ತರು ಮನೆಮನೆಗೆ ತಂದು ನೀಡಿರುವ ಮಂತ್ರಾಕ್ಷತೆಗೆ ತುಪ್ಪ ಹಾಕಿರುವ ಕಾರಣ ವರ್ಷಗಟ್ಟಲೆ ಕಾಲ ಶೇಖರಿಸಿಟ್ಟುಕೊಳ್ಳಬಹುದು. ದೇವರ ಕೋಣೆ, ಅಕ್ಕಿಗೆ ಮಿಶ್ರಣ ಮಾಡಿ ಅಥವಾ ತಲೆಗೆ ಕೂಡ ಹಾಕಿಕೊಳ್ಳಬಹುದು. ನೈವೇದ್ಯ ರೂಪದಲ್ಲಿಯೂ ಸೇವನೆ ಮಾಡಬಹುದು. ಅಯೋಧ್ಯೆಯ ರಾಮ ಮಂದಿರದಿಂದ ಆಗಮಿಸಿರುವ ರಾಮ ಮಂತ್ರಾಕ್ಷತೆ ಪ್ರತೀ ಹಿಂದೂಗಳ ಮನೆಗೆ ತಲುಪಲಿದೆ.

Advertisement

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾರ್ಗದರ್ಶನದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಈಗಾಗಲೇ ಶೇ. 80ರಷ್ಟು ಮನೆಗಳಿಗೆ ಮಂತ್ರಾಕ್ಷತೆ ತಲುಪಿದ್ದು, ಶೀಘ್ರದಲ್ಲಿ ಎಲ್ಲ ಮನೆಗಳಿಗೆ ತಲುಪಿಸಲಾಗುವುದು.
-ಸುರೇಂದ್ರ ಮಾರ್ಕೋಡು ಕೋಟೇಶ್ವರ,
ಜಿಲ್ಲಾ ಸಂಯೋಜಕರು, ರಾಮಮಂದಿರ ಅಕ್ಷತೆ ಅಭಿಯಾನ

ಮಂಗಳೂರು ನಗರ ವ್ಯಾಪ್ತಿಯಲ್ಲಿ ಶೇ. 80ರಷ್ಟು ಅಕ್ಷತೆ ವಿತರಣೆಯಾಗಿದೆ. ಉಳಿದದ್ದನ್ನು ಎರಡು ಮೂರು ದಿನಗಳಲ್ಲಿ ಮುಗಿಸಲಾಗುವುದು. ಜ. 22ರಂದು ನಗರದ ಸುಮಾರು 70 ದೇವಳಗಳಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಎಲ್‌ಇಡಿ ಪರದೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ ನೇರಪ್ರಸಾರದ ವೀಕ್ಷಣೆಗೆ ವ್ಯವಸ್ಥೆಯಾಗಿದೆ. ದೇವಳಗಳಲ್ಲಿ ಅನ್ನಪ್ರಸಾದ ಸೇವೆ, ರಾಮತಾರಕ ಹವನ, ಭಜನೆ, ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ ಪ್ರತಿ ಮನೆಯಲ್ಲಿ ಕನಿಷ್ಠ ಐದು ರಾಮಜ್ಯೋತಿ ಬೆಳಗಿ, ಉತ್ತರ ದಿಕ್ಕಿಗೆ ಆರತಿ ಬೆಳಗಿಸುವ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿದೆ.
– ಶಿವಾನಂದ ಮೆಂಡನ್‌, ಮಂತ್ರಾಕ್ಷತೆ ವಿತರಣೆ ಅಭಿಯಾನ ಮಹಾನಗರ ಸಂಚಾಲಕರು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next