Advertisement

Ayodhya ರಾಮ ಮಂದಿರ ಸಾಕಾರ; ಕರಾವಳಿ ರಾಮಮಯ

11:20 PM Jan 22, 2024 | Team Udayavani |

ಮಂಗಳೂರು: ದೇವಾಲಯದಲ್ಲಿ ರಾಮ ನಾಮ ಸ್ಮರಣೆ, ಭಜನ ಮಂದಿರಗಳಲ್ಲಿ ರಾಮ ನಾಮ ಭಜನೆ, ಸಂಘ-ಸಂಸ್ಥೆಗಳ ವ್ಯಾಪ್ತಿಯಲ್ಲಿ ರಾಮ ನಾಮ ಧ್ಯಾನ, ಮನೆ-ಮನಗಳಲ್ಲಿ ರಾಮ ರಾಮ ಜಯ ಜಯ ರಾಮ ಉದ್ಘೋಷ!

Advertisement

ಅಯೋಧ್ಯೆಯಲ್ಲಿ ಶ್ರೀರಾಮ ದೇವರಿಗೆ ಸೋಮವಾರ ಪ್ರಾಣ ಪ್ರತಿಷ್ಠೆಯಾಗುತ್ತಿದ್ದಂತೆ ಕರಾವಳಿ ಭಾಗದ ವಿವಿಧ ಸ್ಥಳಗಳು ಸಂಪೂರ್ಣ ರಾಮಮಯವಾಗಿ ಕಂಗೊಳಿಸಿತು. ಅಯೋಧ್ಯಾಧಿಪತಿಯ ಪುರಪ್ರವೇಶದ ಸಂಭ್ರಮ ಅಲ್ಲಿ ಮನೆ ಮಾಡಿದ್ದರೆ ಅದನ್ನು ನೇರ ಪ್ರಸಾರದಲ್ಲಿ ಕಂಡ ಕರಾವಳಿ ಮಂದಿ ಭಕ್ತಿ ಭಾವದಿಂದ ಸಂಭ್ರಮಿಸಿದರು.

ಸೋಮವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ವಿವಿಧ ದೇವಾಲಯ/ಭಜನ ಮಂದಿರಗಳಿಗೆ ತೆರಳಿದ ರಾಮ ಭಕ್ತರು ಅಯೋಧ್ಯೆಯ ಶ್ರೀರಾಮನ ಪರಮಪುಣ್ಯ ಕ್ಷಣವನ್ನು ಕಣ್ತುಂಬಿಕೊಂಡರು. ಸಂಜೆಯಾಗುತ್ತಲೇ ಧಾರ್ಮಿಕ ಸ್ಥಳ, ಮನೆ, ಅಂಗಡಿಗಳಲ್ಲಿ ದೀಪೋತ್ಸವದಲ್ಲಿ ಭಾಗವಹಿಸಿದರು. ಈ ಮೂಲಕ ಭಕ್ತರು ದಿನಪೂರ್ತಿ ರಾಮೋತ್ಸವದ ಸ್ವರೂಪದಲ್ಲಿಯೇ ಭಾಗವಹಿಸಿ ಸಂಭ್ರಮಿಸಿದರು.

ಕರ ಸೇವೆಯಲ್ಲಿ ಭಾಗವಹಿಸಿದ್ದ ಕರ ಸೇವಕರನ್ನು ಮಂಗಳೂರು ಸಹಿತ ವಿವಿಧ ಕಡೆಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು. ಹಿಂದೂ ಸಂಘಟನೆಯಿಂದ ಕೆಲವೆಡೆ ರಕ್ತದಾನ ಶಿಬಿರ, ಹಣ್ಣು ಹಂಪಲು ವಿತರಣೆ ನಡೆಯಿತು. ಬಹುತೇಕ ಭಾಗದ ಸಂಘಟನೆ, ಅಂಗಡಿ, ಪ್ರಮುಖರಿಂದ ಸಾರ್ವಜನಿಕರಿಗೆ ಸಿಹಿತಿಂಡಿ/ಪಾನೀಯ ಉಚಿತವಾಗಿ ವಿತರಿಸಲಾಯಿತು. ಕೆಲವು ಅಂಗಡಿ/ವ್ಯಾಪಾರಸ್ಥರು ಉಚಿತವಾಗಿ ಜ್ಯೂಸ್‌ ವಿತರಿಸಿದರು. ಪೆಟ್ರೋಲ್‌ ಬಂಕ್‌, ಅಂಗಡಿ ಸಹಿತ ವಿವಿಧ ಪ್ರದೇಶದಲ್ಲಿ ಅಯೋಧ್ಯೆಯ ಪ್ರಾಣಪ್ರತಿಷ್ಠೆಯ ನೇರ ಪ್ರಸಾರವನ್ನು ಕಣ್ತುಂಬಿಕೊಂಡರು. ಮನೆ, ಅಂಗಡಿ, ಕಟ್ಟಡಗಳಲ್ಲಿ ಕೇಸರಿ ಧ್ವಜ ಹಾಗೂ ಕೆಲವು ರಸ್ತೆಗಳು ಕೇಸರಿಮಯವಾಗಿ ಕಂಗೊಳಿಸಿತು. ರಿಕ್ಷಾ, ಬಸ್‌, ಬೈಕ್‌ ಸಹಿತ ವಿವಿಧ ವಾಹನಗಳಲ್ಲಿ ಕೇಸರಿ ಬಾವುಟ ರಾರಾಜಿಸುತ್ತಿದ್ದವು. ಸಂಜೆ ದೀಪಾವಳಿಯ ಸ್ವರೂಪದಲ್ಲಿ ಬೆಳಕಿನ ಚಿತ್ತಾರ ಕಂಗೊಳಿಸಿತು.
ಅಯೋಧ್ಯೆ ಪ್ರಾಣ ಪ್ರತಿಷ್ಠೆಯ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯಾದ್ಯಂತ ಪೊಲೀಸ್‌ ಬಂದೋಬಸ್ತ್ ವಹಿಸಲಾಗಿತ್ತು. ಯಾವುದೇ ಅಹಿತಕರ ಘಟನೆಯೂ ವರದಿಯಾಗಿಲ್ಲ.

ನೇರ ಪ್ರಸಾರ
ಎಲ್ಲ ದೇವಾಲಗಳಲ್ಲಿ ಬೃಹತ್‌ ಎಲ್‌ಸಿಡಿ ಪರದೆಗಳಲ್ಲಿ, ಟಿ.ವಿ.ಗಳಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಸಣ್ಣ ದೊಡ್ಡ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ಅನ್ನ ಪ್ರಸಾದದ ವಿತರಣೆ ನಡೆಯಿತು. ಸಂಜೆ ಕೆಲವು ದೇವಾಲಯಗಳಲ್ಲಿ ದೀಪೋತ್ಸವ ನಡೆಯಿತು.

Advertisement

ವಿಹಿಂಪ ವತಿಯಿಂದ ಕದ್ರಿ ದೇಗುಲದಲ್ಲಿ ನೇರ ಪ್ರಸಾರದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಅವರಿಂದ ಬೌದ್ಧಿಕ್‌ ನೆರವೇರಿತು. ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ವಿಎಚ್‌ಪಿ ಜಿಲ್ಲಾಧ್ಯಕ್ಷ ಎಚ್‌.ಕೆ. ಪುರುಷೋತ್ತಮ ಮೊದಲಾದವರು ಭಾಗವಹಿಸಿದ್ದರು.

ರಾಮ ಮಂದಿರದ ಪವಿತ್ರ ಕ್ಷಣಗಳನ್ನು ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಶ್ರೀ ಕ್ಷೇತ್ರ ಕಟೀಲಿನಲ್ಲಿ ಕಣ್ತುಂಬಿಕೊಂಡರು. ಅಯೋಧ್ಯೆಯಿಂದ ನೇರ ಪ್ರಸಾರವನ್ನು ವೀಕ್ಷಿಸಿದ ನಳಿನ್‌ ಅವರು ಕಟೀಲಿನಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಪ್ರಮುಖರು, ಹಿಂದೂ ಸಂಘಟನೆಯ ನೇತಾರರು ಈ ವೇಳೆ ಉಪಸ್ಥಿತರಿದ್ದರು. ಶಾಸಕರಾದ ಡಿ.ವೇದವ್ಯಾಸ ಕಾಮತ್‌, ಡಾ| ವೈ. ಭರತ್‌ ಶೆಟ್ಟಿ ಅವರು ಮಂಗಳೂರಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next