Advertisement

Karnataka: ವಾಕ್ಸಮರ ಸೃಷ್ಟಿಸಿದ “ಅಯೋಧ್ಯರಾಮ”, “ಭಾರತ್‌ ಬ್ರಾಂಡ್‌”

10:47 PM Feb 14, 2024 | Team Udayavani |

ಬೆಂಗಳೂರು: ಮಾಜಿ ಸಚಿವ ಈಶ್ವರಪ್ಪ ಅವರ “ಗುಂಡಿಕ್ಕುವ” ಹೇಳಿಕೆ, ಶಾಸಕ ಗೋಪಾಲಯ್ಯಗೆ ಮಾಜಿ ಪಾಲಿಕೆ ಸದಸ್ಯರೊಬ್ಬರ ಧಮ್ಕಿ, ಅಯೋಧ್ಯೆ ರಾಮ ಮಂದಿರ, ವಚನಭ್ರಷ್ಟರು ಈಗ ವಚನ ಪಾಲಕರಾಗಿದ್ದು (ಬಿಜೆಪಿ-ಜೆಡಿಸ್‌ ಮೈತ್ರಿ), “ಭಾರತ್‌ ಬ್ರಾಂಡ್‌ ಅಕ್ಕಿ” ಸೇರಿ ಹಲವು ವಿಚಾರಗಳು ಬುಧವಾರ ಪರಿಷತ್‌ ಕಲಾಪದಲ್ಲಿ ಪ್ರತಿಧ್ವನಿಸಿ ಕೆಲಕಾಲ ಆಡಳಿತ ಮತ್ತು ವಿಪಕ್ಷಗಳ ವಾಕ್ಸಮರಕ್ಕೆ ಕಾರಣವಾಯಿತು.

Advertisement

ಭೋಜನ ವಿರಾಮದ ಅನಂತರ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಕೋಟ ಶ್ರೀನಿವಾಸ್‌ ಪೂಜಾರಿ ಅವರು ಶಾಸಕ ಗೋಪಾಲಯ್ಯಗೆ ವ್ಯಕ್ತಿಯೊಬ್ಬ ಕೊಲೆಬೆದರಿಕೆ ಹಾಕಿದ್ದಾನೆ. ಈ ಹಿಂದೆ ಆರ್‌. ಅಶೋಕ್‌ ಮತ್ತು ಸುರೇಶ್‌ ಕುಮಾರ್‌ ಅವರಿಗೂ ಈ ವ್ಯಕ್ತಿ ಧಮ್ಕಿ ಹಾಕಿದ್ದ. ಚುನಾಯಿತ ಪ್ರತಿನಿಧಿಗಳಿಗೆ ಬೆದರಿಕೆ ಹಾಕುವುದು ಎಷ್ಟು ಸರಿ, ಈ ಬಗ್ಗೆ ಗೃಹಸಚಿವರು ಸದನಕ್ಕೆ ಬಂದು ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಪ್ರಿಯಾಂಕ್‌ ಖರ್ಗೆ, ಸಂತೋಷ್‌ ಲಾಡ್‌, ಈಗಾಗಲೇ ವಿಧಾನಸಭೆಯಲ್ಲಿ ಸಚಿವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ವಿಚಾರ ಇಲ್ಲಿಗೆ ಬಿಟ್ಟು ಬಿಡಿ ಎಂದರು. ಗದ್ದಲದ ನಡುವೆ ಮಾತನಾಡಿದ ಸಚಿವ ಸಂತೋಷ್‌ ಲಾಡ್‌, ಈಶ್ವರಪ್ಪ ಅವರು ಗುಂಡಿಕ್ಕುವ ಹೇಳಿಕೆ ನೀಡಿದ್ದಾರೆ. ಅವರ ಬಗ್ಗೆ ಏಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದರು.

ಇದಕ್ಕೆ ದನಿಗೂಡಿಸಿದ ಪ್ರಿಯಾಂಕ್‌ ಖರ್ಗೆ, ಈ ಹಿಂದೆ ನನಗೂ ವ್ಯಕ್ತಿಯೊಬ್ಬರು ಕೊಲೆಬೆದರಿಕೆ ಹಾಕಿದ್ದರು. ಈಗ ಜನಪ್ರತಿನಿಧಿಗಳ ಬಗ್ಗೆ ಕಾಳಜಿ ತೋರುವವರು ಆಗ ನಿಮಗೆ ನನ್ನ ಬಗ್ಗೆ ಕಾಳಜಿ ತೋರಲಿಲ್ಲ ಏಕೆ ಎಂದು ಕಾಲೆಳೆದರು. ಅಷ್ಟೂ ಸಾಲದೆ ಆ ವ್ಯಕ್ತಿಗೆ ಕಲಬುರಗಿಯಲ್ಲಿ ಟಿಕೆಟ್‌ ನೀಡಿದ್ದೀರಿ ಎಂದು ಬಿಜೆಪಿ ಸದಸ್ಯರನ್ನು ಕೆಣಕಿಸಿದರು.

ಇದರಿಂದ ಸಿಟ್ಟಿಗೆದ್ದ ಕೋಟ ಶ್ರೀನಿವಾಸ ಪೂಜಾರಿ, ರವಿಕುಮಾರ್‌ ಇದೆ ನಿಮ್ಮ ಉತ್ತರವೇ? ಒಂದು ಕಡೆ ಸಚಿವ ಲಾಡ್‌ ಅವರು ಈಶ್ವರಪ್ಪ ಅವರತ್ತ ಕೈತೋರಿಸುತ್ತಾರೆ. ಸರಕಾರ ಯಾರ ಪರವಾಗಿದೆ ಹೇಳಿ ಎಂದರು. ಸಭಾಧ್ಯಕ್ಷ ಪೀಠದಲ್ಲಿದ್ದ ಉಪಸಭಾಪತಿ ಪ್ರಾಣೇಶ್‌ ಮಧ್ಯಪ್ರವೇಶಿಸಿ, ಇದು ಗಂಭೀರವಾದ ವಿಚಾರ. ಸರಕಾರ ಏನು ಕ್ರಮ ಕೈಗೊಳ್ಳಲಿದೆ ಎನ್ನುವುದನ್ನು ಸದನಕ್ಕೆ ಹೇಳಿ ಎಂದರು. ಗದ್ದಲದ ಸನ್ನಿವೇಶದಲ್ಲೇ ಗೃಹಸಚಿವರ ಪ್ರವೇಶದಿಂದಾಗಿ ಪರಿಸ್ಥಿತಿ ತಣ್ಣಗಾಯಿತು. ಸಚಿವರ ಉತ್ತರಕ್ಕೆ ಸದನ ತಣ್ಣಗಾಯಿತು.

Advertisement

ವಚನ ಭ್ರಷ್ಟರು ಈಗ ವಚನಪಾಲಕರಾಗಿದ್ದಾರೆ
ರಾಜ್ಯಪಾಲರ ಭಾಷಣದ ವಂದನಾ ಪ್ರಸ್ತಾವದ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್‌ ಯು.ಬಿ. ವೆಂಕಟೇಶ್‌ ಅವರು, ಈ ಹಿಂದೆ ವಚನ ಭ್ರಷ್ಟರಾದವರು ಈಗ ವಚನ ಪಾಲಕರಾಗಿದ್ದಾರೆ ಎಂದು ಬಿಜೆಪಿ -ಜೆಡಿಎಸ್‌ ಮೈತ್ರಿ ಬಗ್ಗೆ ಲೇವಡಿ ಮಾಡಿದ್ದು, ಬಿಜೆಪಿ ಸದಸ್ಯರನ್ನು ಕೆರಳಿಸಿತು. ಇವರಿಗೆ ರಾಮಲೀಲೆ (ಅಯೋಧ್ಯೆ ರಾಮಮಂದಿರ) ಆಯ್ತು. ಈಗ ಕೃಷ್ಣ ಲೀಲೆ ( ಭಾರತ್‌ ಬ್ರಾಂಡ್‌ ಅಕ್ಕಿ) ಶುರು ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಸರಕಾರದ ಉಚಿತ ಗ್ಯಾರಂಟಿ ಯೋಜನೆಗೆ ಅಕ್ಕಿ ನೀಡದ ಇವರು ಈಗ ಅಕ್ಕಿ ಮಾರಾಟ ಶುರು ಮಾಡಿದ್ದಾರೆ. ಈಗ ಅಕ್ಕಿ ಆಕಾಶದ ಮೇಲೆ ಇಳಿದು ಬಂತಾ ಎಂದು ಟೀಕಿಸಿದರು.

ಈ ಮಾತು ಬಿಜೆಪಿಗರನ್ನು ಮತ್ತಷ್ಟು ಕೆರಳಿಸಿತು. ನೀವು ನಮ್ಮ ಸರಕಾರವನ್ನು ದೂರಿ ಆದರೆ ರಾಮನ ವಿಚಾರಕ್ಕೆ ಬರಬೇಡಿ ಎಂದು ಎದ್ದು ನಿಂತು ಬಿಜೆಪಿ ಶಾಸಕರು ಗದ್ದಲ ಎಬ್ಬಿಸಿದರು. ಸಭಾಪತಿಗಳ ಮಧ್ಯಪ್ರವೇಶದಿಂದ ಪರಿಸ್ಥಿತಿ ತಣ್ಣಗಾಯಿತು.

ಅಕ್ಕಿ ಕಾಳು ಎಸೆದು ಮತ ಪಡೆಯಲ್ಲ: ಶಿವಲಿಂಗೇಗೌಡ
ಬೆಂಗಳೂರು: ಅಕ್ಕಿ ಕಾಳು ಎಸೆದು ಮತ ಪಡೆಯಲು ನಮಗೂ ಬರುತ್ತದೆ. ಆದರೆ, ನಾವು ಆ ಕೆಲಸ ಮಾಡುವವರಲ್ಲ ಎಂದು ವಿಪಕ್ಷ ಬಿಜೆಪಿಗೆ ಆಡಳಿತಾರೂಢ ಶಾಸಕ ಕೆ.ಎಂ. ಶಿವಲಿಂಗೇಗೌಡ ಟಾಂಗ್‌ ಹೇಳಿದರು.

ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗದೆ. ಮೋದಿ ಅವಧಿಯಲ್ಲಿ ಆಗಿದೆ ಎಂಬುದು ಕಾಕತಾಳೀಯ. ಆದರೂ ಅವರಿಗೆ ಧನ್ಯವಾದ ಹೇಳುತ್ತೇನೆ ಎನ್ನುತ್ತಿದ್ದಂತೆ ವಿಪಕ್ಷ ಬಿಜೆಪಿ ಸದಸ್ಯರು ಮುಗಿಬಿದ್ದರು. ರಾಮನನ್ನು ಬಿಜೆಪಿಗೆ ಗುತ್ತಿಗೆ ಕೊಟ್ಟಿಲ್ಲ. ನಾವೂ ಶ್ರೀರಾಮನ ಭಕ್ತರು, ನಾವೂ ಪೂಜಿಸುತ್ತೇವೆ. ನಾನೂ ಜೈ ಶ್ರೀರಾಮ್‌ ಎನ್ನುತ್ತೇನೆ. ಶ್ರೀರಾಮ ದೇವರಲ್ಲ ಎಂದು ನಾವೇನಾದರೂ ಹೇಳಿದ್ದೇವಾ ಎಂದು ಶಿವಲಿಂಗೇಗೌಡ ಪ್ರಶ್ನಿಸಿದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿಯ ಭರತ್‌ಶೆಟ್ಟಿ, ಹರೀಶ್‌ ಪೂಂಜಾ, ರಾಮ ಕಾಲ್ಪನಿಕ ಎಂದವರು ನೀವೇ ತಾನೇ? ಒಪ್ಪಿಕೊಳ್ಳಿ ಎನ್ನುತ್ತಿದ್ದಂತೆ, ಕಾಲ್ಪನಿಕ ಎಂದು ನಾನಂತೂ ಹೇಳಿಲ್ಲ ಎಂದ ಶಿವಲಿಂಗೇಗೌಡ, ಸನಾತನ ಧರ್ಮದ ಕಾಲದಿಂದಲೂ ರಾಮನ ಆರಾಧಕರು ನಾವು. ದೇವರು ನಿಮ್ಮ ಕಡೆಗಿಲ್ಲ, ನಮ್ಮ ಕಡೆಗೇ ಇರುವುದು ಎಂದರು. ಹಾಗಿದ್ದರೆ ಬನ್ನಿ ಜ್ಞಾನವಾಪಿಗಾಗಿ ಹೋರಾಟ ಮಾಡೋಣ ಎಂದು ಬಿಜೆಪಿ ಶಾಸಕರು ಆಹ್ವಾನಿಸಿದರು. ನಿಮ್ಮಂತೆ ಅಕ್ಕಿ ಕಾಳು ಎಸೆದು ಮತ ಪಡೆಯುವ ಕೆಲಸ ಮಾಡುವರಲ್ಲ ನಾವು ಎಂದು ಶಿವಲಿಂಗೇಗೌಡ ತಿರುಗೇಟು ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next