ಹೊಸದಿಲ್ಲಿ: ಲೋಕಸಭೆ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆದ ಬೆನ್ನಲ್ಲೇ ಈಗ ಉಪ ಸ್ಪೀಕರ್ ಹುದ್ದೆಯ ಚುನಾವಣೆಗೂ ವೇದಿಕೆ ಸಿದ್ದಗೊಳ್ಳುತ್ತಿದೆ. ಅಯೋಧ್ಯೆ ಇರುವ ಫೈಜಾಬಾದ್ ಕ್ಷೇತ್ರದ ಸಂಸದ ಅವಧೇಶ್ ಕುಮಾರ್ ಅವರನ್ನು ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು ಸೇರಿ ಉಪಸ್ಪೀಕರ್ ಹುದ್ದೆಗೆ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲು ನಿರ್ಧರಿಸಿವೆ ಎನ್ನಲಾಗಿದೆ.
ಅವಧೇಶ್ ಕುಮಾರ್ ಅವರ ಆಯ್ಕೆಯ ಬಗ್ಗೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್ ಯಾದವ್ ಹಾಗೂ ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ ಈ ವಿಷಯದ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದು, ಮಿತ್ರಪಕ್ಷಗಳ ಜತೆಗೆ ಈ ಬಗ್ಗೆ ಚರ್ಚೆ ನಡೆಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎನ್ಡಿಎ ವತಿಯಿಂದ ಟಿಡಿಪಿ ಸಂಸದ ಮತ್ತು ಮಾಜಿ ಸ್ಪೀಕರ್ ದಿ| ಜಿ.ಎಂ.ಸಿ. ಬಾಲಯೋಗಿ ಪುತ್ರ ಹರೀಶ್ ಬಾಲಯೋಗಿ ಉಪಸ್ಪೀಕರ್ ಅಭ್ಯರ್ಥಿಯಾಗುವ ಸಾಧ್ಯತೆ ಗಳು ಇವೆ ಎಂದು ಹೇಳಲಾಗಿದೆ.
ಇದೇ ಮೊದಲ ಬಾರಿಗೆ ಲೋಕಸಭೆಯ ಸ್ಪೀಕರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗಿತ್ತು. ಓಂ ಬಿರ್ಲಾ ಅವರು ಸತತ 2ನೇ ಬಾರಿಗೆ ಸ್ಪೀಕರ್ ಆಗಿ ಧ್ವನಿಮತದ ಮೂಲಕ ಆಯ್ಕೆಯಾಗಿದ್ದರು.